ಕೋಲಾರ (ವಿಶ್ವಕನ್ನಡಿಗ ನ್ಯೂಸ್ ): ದೈಹಿಕ ಬೆಳವಣಿಗೆ ಕುಂಠಿತವಾಗುವುದು ಆನಾರೋಗ್ಯ , ಅಪೌಷ್ಠಿಕತೆಯಂತಹ ಸಮಸ್ಯೆಗಳು ಉಂಟಾಗಬಾರದು ಎಂದರೆ ಹುಟ್ಟಿದ ಮಗುವಿಗೆ ಹುಟ್ಟಿದಾಗಿನಿಂದ ತಾಯಿಯ ಎದೆಹಾಲು ಸಾವಿರ ದಿಗಳ ಕಾಲ ಕಡ್ಡಾಯವಾಗಿ ಕುಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸುನಿಲ ಎಸ್.ಹೊಸಮನಿ ಅವರು ತಿಳಿಸಿದರು .
ಇಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ , ಸ್ತನ್ಯಪಾನ ಸಪ್ತಾಹ , ಅತಿಸಾರ ಬೇಧಿ ತೀವ್ರತರ ನಿಯಂತ್ರಣ ಪಾಕ್ಷಿಕ -2022 , ರಾಷ್ಟ್ರೀಯ ಸಾಮೂಹಿಕ ಜಂತುಹುಳ ನಿರ್ಮೂಲನೆ ಹಾಗೂ ಮಗುವಿನ ಮೊದಲ 1000 ದಿನದ ಮಹತ್ವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಮಗುವಿಗೆ ಹುಟ್ಟಿದ ತಕ್ಷಣ ತಾಯಿಯ ಎದೆ ಹಾಲು ಬಹುಮುಖ್ಯ ಅಂಶವಾಗಿದೆ . ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಎದೆಹಾಲು ಬಿಡಿಸುತ್ತಿದ್ದರೆ . ಇದರಿಂದ ಭವಿಷ್ಯದಲ್ಲಿ ಅನೇಕ ತೊಂದರೆಗಳು ಮಗುವಿಗೆ ಮತ್ತು ತಾಯಿಗೆ ಉಂಟಾಗುತ್ತಿವೆ . ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಆಶಾಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ಅರಿವು ಮೂಡಿಸಬೇಕು . ಹಲವಾರು ಕಾರಣಗಳಿಂದ ಮಗುವಿಗೆ ಎದೆಹಾಲನ್ನು ನೀಡದೆ ಹಸುವಿನ ಹಾಲನ್ನು ನೀಡುತ್ತಿದ್ದಾರೆ .
ಇದರಿಂದ ಇಬ್ಬರಿಗೂ ಆರೋಗ್ಯದಲ್ಲಿ ಏರು – ಪೇರು ಕಂಡುಬರುತ್ತದೆ . ಸಾಮೂಹಿಕ ಜಂತುಹುಳ ನಿರ್ಮೂಲನೆಗಾಗಿ ಇದಕ್ಕೆ ಕಾರಣವಾಗುವ ಜಂಕ್ ಆಹಾರಗಳನ್ನು ಸೇವಿಸಬಾರದು . ಪೌಷ್ಠಿಕ ಆಹಾರ ಸೇವನೆ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದು ತಿಳಿಸಿದರು .
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಮುದ್ದಣ್ಣ ಅವರು ಮಾತನಾಡಿ , ತಾಯಾಂದಿರು ಮಗುವಿಗೆ ಸಾವಿರ ದಿನದ ಎದೆಹಾಲು ಕುಡಿಸುವುದರ ಮಹತ್ವ ತಿಳಿದಿರಬೇಕು . ಮಗು ಮತ್ತು ತಾಯಿ ಮಾನಸಿಕವಾಗಿ , ದೈಹಿಕವಾಗಿ ಸದೃಢರಾಗಿರಲು ಮಗುವಿಗೆ ತಾಯಿಯ ಎದೆಹಾಲು ನೀಡಬೇಕು .
ಇತ್ತೀಚಿನ ದಿನಗಳಲ್ಲಿ ಎದೆಹಾಲು ನೀಡುವುದು ಸೌಂದರ್ಯ ಕಾರಣಗಳಿಂದ ಕಡಿಮೆ ಮಾಡುತ್ತಿದ್ದಾರೆ . ಮಗುವಿನ ಉತ್ತಮ ಆರೋಗ್ಯಕ್ಕಾಗಿ ಸ್ತನ್ಯಪಾನ ಉತ್ತಮ ಪ್ರಕ್ರಿಯೆ , ಗರ್ಭಿಣಿ ಸ್ತ್ರೀಯರು ಮತ್ತು ಬಾಣಂತಿಯರಿಗೆ ಸರ್ಕಾರದ ಮಾತೃ ವಂದನ ಹಾಗೂ ಪೋಷಣ್ ಅಭಿಯಾನನಂತಹ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ಆರೋಗ್ಯ ಇಲಾಖೆಯವರು ಮಾಡಬೇಕು . ಕಾಲ ಕಾಲಕ್ಕೆ ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ತಾಯಂದಿರು ಪಾಲಿಸಬೇಕು .
ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ನಿರಂತರವಾಗಿ ಸ್ತನ್ಯಪಾನದ ಬಗ್ಗೆ ತಾಯಂದಿರಿಗೆ ಅರಿವು ಮೂಡಿಸಬೇಕು . ಗರ್ಭಿಣಿಯರು ಮತ್ತು ಬಾಣಂತಿಯರು ಮನೆಯಲ್ಲಿ ದೊಡ್ಡವರು ಹೇಳುವಂತಹ ಮೂಡನಂಬಿಕೆಗಳನ್ನು ಕೈ ಬಿಡಬೇಕು ಎಂದು ತಿಳಿಸಿದರು .
ಕೋಲಾರ ತಾಲ್ಲೂಕಿನ ಆರೋಗ್ಯಾಧಿಕಾರಿಗಳಾದ ಡಾ || ಎ.ವಿ.ನಾರಾಯಣಸ್ವಾಮಿ ಅವರು ಮಾತನಾಡಿ , ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸ್ತನ್ಯಪಾನ ದಿನ ಎಂದು ಹಮ್ಮಿಕೊಳ್ಳಲಾಗುತ್ತಿದೆ . ಜಂತುಹುಳ ನಿರ್ಮೂಲನೆಗಾಗಿ ಹಿಂದಿನ ಕಾಲದಿಂದಲೂ ಸಹ ಯೋಜನೆಗಳನ್ನು ರೂಪಿಸಲಾಗುತ್ತಿದೆ .
ಜಂತುಹುಳ ನಿರ್ಮೂಲನೆಗಾಗಿ ಅಲ್ಬೆಂಡೂ ಜೋಲ್ ಮಾತ್ರೆಗಳನ್ನು ನೀಡಬೇಕು . 1-2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಮಕ್ಕಳಿಗೆ ಕುಡಿಸಬೇಕು . 2-19 ವರ್ಷದ ಮಕ್ಕಳಿಗೆ ಒಂದು ಮಾತ್ರೆ ಅಗಿಯಲು , ಚಪ್ಪರಿಸಲು ಆಗದಿರುವರಿಗೂ ಸಹ ಪುಡಿ ಮಾಡಿ ನೀರಿನಲ್ಲಿ ನೀಡಬೇಕು . ಶಾಲೆ ಮತ್ತು ಅಂಗನವಾಡಿಗಳ ವ್ಯಾಪ್ತಿಗೆ ಬರುವ ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಮಾಡಿ ಅವರಿಗೂ ಸಹ ನೀಡಬೇಕು ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು . ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಂ.ರಮೇಶ್ , ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ , ಎಲ್ಲಾ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.