(www.vknews.in) : ಭಾರತದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ, ಶ್ರೀಲಂಕಾದ ಹಂಬನ್ತೋಟ ಬಂದರಿಗೆ ಚೀನಾದ ಹಡಗನ್ನು ರವಾನಿಸುವ ಪ್ರಕ್ರಿಯೆಯನ್ನು ಅನಿರ್ಧಿಷ್ಟಾವಧಿ ವಿಳಂಬಿಸುವಂತೆ ಚೀನಾಕ್ಕೆ ಸೂಚಿಸಲಾಗಿದೆ ಎಂದು ಶ್ರೀಲಂಕಾದ ಅಧಿಕೃತ ಮೂಲಗಳು ಶನಿವಾರ ಹೇಳಿವೆ.
ಶ್ರೀಲಂಕಾದಲ್ಲಿ ಚೀನಾದ ನಿರ್ವಹಣೆಯಲ್ಲಿರುವ ಹಂಬನ್ತೋಟ ಬಂದರಿಗೆ ಚೀನಾದ ಜಿಯಾಂಗ್ಯಿನ್ ಬಂದರಿನಿಂದ ಯುವಾನ್ ವಾಂಗ್ 5 ಹಡಗು ಗುರುವಾರ ಆಗಮಿಸುವುದೆಂದು ವರದಿಯಾಗಿತ್ತು. ಇದೊಂದು ಸಂಶೋಧನೆ ಮತ್ತು ಸರ್ವೆ ನೌಕೆಯಾಗಿದೆ ಎಂದು ಚೀನಾ ಹೇಳಿತ್ತು. ಆದರೆ ಸಿಎನ್ಎನ್-ನ್ಯೂಸ್ 18ರ ಪ್ರಕಾರ, ಇದೊಂದು ಅವಳಿ ಬಳಕೆಯ ಪತ್ತೇದಾರಿ ಹಡಗು ಆಗಿದ್ದು ಬಾಹ್ಯಾಕಾಶ ಮತ್ತು ಉಪಗ್ರಹ ಜಾಡು ಪತ್ತೆ ಮತ್ತು ಖಂಡಾಂತರ ಕ್ಷಿಪಣಿ ಉಡಾಯಿಸಲು ಬಳಸಲಾಗುತ್ತದೆ.
ಈ ಹಡಗಿನ ಮೂಲಕ ಭಾರತದ ಪ್ರಮುಖ ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ಕಳ್ಳಗಣ್ಣು ಇಡಲು ಚೀನಾ ಬಯಸಿದೆ ಎಂದು ಭಾರತ ಆತಂಕಗೊಂಡಿದ್ದು ಈ ಬಗ್ಗೆ ಶ್ರೀಲಂಕಾಕ್ಕೆ ದೂರು ನೀಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಶ್ರೀಲಂಕಾದ ವಿದೇಶಾಂಗ ಇಲಾಖೆ, ಹಡಗಿನ ಭೇಟಿ ಕಾರ್ಯವನ್ನು ಸದ್ಯಕ್ಕೆ ವಿಳಂಬಿಸುವಂತೆ ಸೂಚಿಸಿ ಕೊಲಂಬೊದಲ್ಲಿರುವ ಚೀನಾ ರಾಯಭಾರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದಿದೆ.
ಈ ವಿಷಯದಲ್ಲಿ ಇನ್ನಷ್ಟು ಚರ್ಚೆ ಮುಗಿದ ಬಳಿಕ ಚೀನಾದ ನೌಕೆಯ ಆಗಮನದ ದಿನಾಂಕ ನಿಗದಿಗೊಳಿಸಬೇಕೆಂಬುದು ಇಲಾಖೆಯ ಆಶಯವಾಗಿದೆ ಎಂದು ಮೂಲಗಳು ಹೇಳಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.