ಚಲನಚಿತ್ರಗಳಲ್ಲಿನ ಹಿಂಸೆ ಮತ್ತು ಕ್ರೌರ್ಯಗಳ ದೃಶ್ಯಗಳು ಈ ರೀತಿಯ ಭಯಾನಕ ಕೃತ್ಯಗಳಿಗೆ ಪ್ರೇರಣೆಯಾಯಿತೆ..?
(ವಿಶ್ವ ಕನ್ನಡಿಗ ನ್ಯೂಸ್) : ಕರಾವಳಿಯಲ್ಲಿ ನಡೆದಿರುವ ಸರಣಿ ಹತ್ಯೆಗಳ ಚಿತ್ರಣವನ್ನು ನೆನೆಸುವಾಗ ಮೈ ಜುಮ್ ಅನ್ನುತ್ತದೆ. ಘಟನಾ ದೃಶ್ಯಗಳನ್ನು ನೋಡುವಾಗ ಒಂದು ಕ್ಷಣ ನಮ್ಮ ಹೃದಯದ ಬಡಿತ ನಿಂತು ಹೋದ ಭಾವನೆ ಉಂಟಾಗುತ್ತದೆ. ಇಂತಹ ದೃಶ್ಯಗಳು ಚಲನಚಿತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಯುವಕರು ತಮ್ಮ ಕೈಯಲ್ಲಿ ಕತ್ತಿ, ತಲ್ವಾರ್, ಲಾಂಗು ಮತ್ತು ಮಚ್ಚುಗಳನ್ನು ಸಾರ್ವಜನಿಕವಾಗಿ ಜಳಪಿಸುತ್ತಾ, ತಮ್ಮಷ್ಟೇ ಪ್ರಾಯದ ಯುವಕರನ್ನು ಕೊಚ್ಚಿ ಕೊಚ್ಚಿ ಕೊಲೆ ಮಾಡುತ್ತಿರುವುದು, ಸಾಧಾರಣ ವಿಷಯದ ರೀತಿಯಲ್ಲಿ ನಡೆಯುತ್ತಿದೆ. ಯುವಕರ ಇಂತಹ ಹಿಂಸೆ ಹಾಗೂ ಕ್ರೌರ್ಯಗಳ ಮನಸ್ಥಿತಿಗೆ ಇಂದಿನ ಚಲನಚಿತ್ರಗಳು ಪೇರಣಿಯಾಗಿದೆ ಎಂದು ಹೇಳಿದ್ದರೆ ತಪ್ಪಾಗಲಾರದು.
ಕಾರಣವೇನೆಂದರೆ, ಇಂದಿನ ಯುವಕರು ಚಲನಚಿತ್ರದ ಪಾತ್ರಧಾರಿಗಳಾದ ನಾಯಕ ಹಾಗೂ ಖಳನಾಯಕನ ರೂಪಕಗಳನ್ನು ತಮ್ಮ ಮನಸ್ಸಿನಲ್ಲಿ ಬೇರೂರಿಸಿ, ತಾವು ಕೂಡ ಅದೇ ರೀತಿಯಾಗಿ ಇರಬೇಕೆಂದು ಬಯಸುತ್ತಾರೆ. ಚಲನಚಿತ್ರದಲ್ಲಿ ಪ್ರದರ್ಶಿಸಲ್ಪಡುವ ಹಿಂಸಾ ದೃಶ್ಯಗಳಲ್ಲಿ ನಾಯಕ ಅಥವಾ ಖಳನಾಯಕ ಎದುರಾಳಿಯನ್ನು ಹಿಂಶಿಸುವ ಅಥವಾ ಹತ್ಯೆ ಮಾಡುವ ವಿಧಾನಗಳು ಇಂದಿನ ಹತ್ಯೆಗಳಲ್ಲಿ ಕಾಣಸಿಗುತ್ತದೆ. ಹಿಂದೆ ಚಲನಚಿತ್ರಗಳಲ್ಲಿ ಕಾಣಸಿಗುತ್ತಿದ್ದ ಅತ್ಯಾಚಾರ ದೃಶ್ಯಗಳಿಗೆ ಸೆನ್ಸರ್ ಬೋರ್ಡ್ ಕಡಿವಾಣ ಹಾಕಿದ ಕಾರಣ, ಇಂದು ಈ ರೀತಿಯ ಕ್ರೌರ್ಯಗಳು ಕಡಿಮೆಯಾಗಿದೆ. ಆದರೆ ಅಮಾನವೀಯ ಭೀಕರ ಹಿಂಸಾ ದೃಶ್ಯಗಳಿಗೆ ಇನ್ನೂ ಕೂಡ ಸರಕಾರ ಕಡಿವಾಣ ಹಾಕದಿರುವುದೇ ಸಮಾಜದಲ್ಲಿ ಹಿಂಸಾ ಪ್ರವೃತ್ತಿಗಳು ಅಧಿಕಗೊಳ್ಳಲು ಕಾರಣವಾಗಿದೆ.
ಪ್ರಸ್ತುತ ಸಮಾಜದಲ್ಲಿ ಹತ್ಯೆಯಾದವನಿಗೆ ತಾನು ಯಾಕಾಗಿ ಹತ್ಯೆ ಮಾಡಲ್ಪಟ್ಟೆ ಎಂದು ತಿಳಿದುಬರುವುದಿಲ್ಲ. ಅದೇ ರೀತಿ ಹತ್ಯೆ ಮಾಡಿದವನಿಗೆ ತಾನು ಯಾಕಾಗಿ ಹತ್ಯೆ ಮಾಡಿದೆ ಎಂದು ಗೊತ್ತಿರುವುದಿಲ್ಲ. ಕಾಡಿನಲ್ಲಿ ಮೃಗಗಳು ತನ್ನ ಹಸಿವೆಯನ್ನು ನೀಗಿಸಲು ಇನ್ನೊಂದು ಪ್ರಾಣಿಯನ್ನು ಕೊಲ್ಲುವುದಾದರೆ, ನಾಡಿನಲ್ಲಿ ಮನುಷ್ಯ ಯಾರ ಹಸಿವನ್ನು ನೀಗಿಸಲು ಈ ರೀತಿ ವರ್ತಿಸುತ್ತಾನೆ ಎಂದು ತಿಳಿಯುವುದಿಲ್ಲ. ಇವೆಲ್ಲವಕ್ಕೂ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ರೀತಿಯ ಘಟನೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಇಲ್ಲದಿದ್ದಲ್ಲಿ ಇದು ವಿಕೋಪಕ್ಕೆ ತಿರುಗಿ, ನಾಡು ನಾಶವಾಗಿ ಕಾಡು ಬೆಳೆಯುವುದು ನಿಶ್ಚಿತ.
ಮುಂದುವರೆಯುವುದು..
✍️ ನೂರುದ್ದೀನ್ ಸಾಲ್ಮರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.