ಕೋಮು ಪ್ರಚೋದಕ ಭಾಷಣಗಳು, ಉದ್ರೇಕಕಾರಿ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಿರುವ ಉದ್ರೇಕಕಾರಿ ಬರಹಗಳು, ಈ ರೀತಿಯ ಕೃತ್ಯಗಳಿಗೆ ಪ್ರೇರಣೆಯಾಯಿತೆ…?
(www.vknews.in) : ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆಗಳಿಗೆ, ಕೋಮು ಪ್ರಚೋದಕ ಭಾಷಣಗಳು, ಉದ್ರೇಕಕಾರಿ ಹೇಳಿಕೆಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವ ಉದ್ರೇಕಕಾರಿ ಬರಹಗಳು ಇಂತಹ ಕೃತ್ಯಗಳಿಗೆ ಪ್ರೇರಣೆಯಾಯಿತೆ..? ಎಂಬ ವಿಷಯ, ಈಗ ಬಹಳಷ್ಟು ಚರ್ಚಿತವಾಗುತ್ತಿದೆ. ಆದರೆ ಈ ವಿಷಯವನ್ನು ತಳ್ಳಿ ಹಾಕೋದಕ್ಕೆ ಯಾವುದೇ ಕಾರಣ ಸಿಕ್ಕುತ್ತಿಲ್ಲ.
ಯಾವುದೇ ಒಂದು ಘಟನೆ ನಡೆದ ಕೂಡಲೇ, ಆ ಘಟನೆಗೆ ಕೋಮಿನ ಬಣ್ಣ ಹಚ್ಚುತ್ತಿರುವುದು, ಘಟನೆಯಲ್ಲಿ ನೊಂದ ವ್ಯಕ್ತಿಯ ಧರ್ಮವನ್ನು ನೋಡಿ, ಆ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡ ರೀತಿಯಲ್ಲಿ ವರ್ತಿಸುವ ‘ಸೋ ಕಾಲ್ಡ್’ ನಾಯಕರೆನಿಸಿಕೊಂಡವರ ಉದ್ರೇಕಕಾರಿ ಭಾಷಣಗಳು, ಆ ಭಾಷಣಗಳಿಗೆ ಮತ್ತಷ್ಟು ಮಸಾಲೆ ಬೆರೆಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವ ಬರಹಗಳು, ಹಾಗೂ ಆ ಭಾಷಣ ಮತ್ತು ಬರಹಗಳನ್ನು ನಂಬಿ ಕೋಮುವಾದವನ್ನು ತಲೆಗೆ ಮೆತ್ತಿಸಿಕೊಂಡು ರಂಗ ಪ್ರವೇಶ ಗೆಯ್ಯುವ ಯುವಕರಿಂದ ಈ ರೀತಿಯ ಕೃತ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಸರಕಾರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದರಲ್ಲಿ ಬಹಳಷ್ಟು ಎಡವಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾರಣವೇನೆಂದರೆ, ಉದ್ರೇಕಕಾರಿ ಭಾಷಣಗಳ ವಿರುದ್ಧ ಪ್ರಜ್ಞಾವಂತ ಜನರು ದೂರು ನೀಡಿದಾಗ, ಪೊಲೀಸರು ದೂರನ್ನು ದಾಖಲಿಸಿ, ಪ್ರಥಮ ವರ್ತಮಾನ ಮಾಹಿತಿ ಕೋರ್ಟಿಗೆ ಕಳುಹಿಸಿ, ಸುಮ್ಮನಾಗುತ್ತಾರೆ. ಇಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವುದರಲ್ಲಿ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಪ್ರಥಮ ವರ್ತಮಾನ ಮಾಹಿತಿ ದಾಖಲಿಸಿದ ಪ್ರಕರಣಗಳನ್ನು, ಸರಿಯಾದ ರೀತಿಯಲ್ಲಿ ತನಿಖೆ ನಡೆಸದೆ, ಸಾಕ್ಷಾಧಾರಗಳ ಕೊರತೆ ಕಾರಣ ನೀಡಿ, ಮುಚ್ಚಿ ಹಾಕುತ್ತಿರುವುದು, ಈ ರೀತಿ ಉದ್ರೇಕಕಾರಿ ಭಾಷಣ ಮಾಡುವವರಿಗೆ ಹಾಗೂ ಬರಹಗಾರರಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ.
ಸರಕಾರ ಇಂತಹ ಪ್ರಕರಣಗಳಲ್ಲಿ, ಅಸಡ್ಡೆ ವಹಿಸಬಾರದು, ಕೋಮು ಅಥವಾ ಉದ್ರೇಕಕಾರಿ ಭಾಷಣ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅವರಿಗೆ ನ್ಯಾಯಾಲಯಗಳಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಮಾತ್ರವಲ್ಲ ಪ್ರಜ್ಞಾವಂತ ಸಮಾಜ ಇಂಥವರನ್ನು ಬಹಿಷ್ಕರಿಸಬೇಕು. ಆಗ ಮಾತ್ರ ನಾಡಿನಲ್ಲಿ ಶಾಂತಿ ನೆಲೆಸಲು ಸಾಧ್ಯ..
✍️ ನೂರುದ್ದೀನ್ ಸಾಲ್ಮರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.