ಆರೋಪಿಗಳಿಗೆ ಆಶ್ರಯ ನೀಡಿದ ಬಗ್ಗೆ, ಪಿ.ಎಫ್.ಐ ಲಿಂಕ್ ಬಗ್ಗೆ ತನಿಖೆ ನಡೆಸಲಾಗುವುದು..
ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆಗೈದ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತ ಮೂವರು ಸ್ಥಳೀಯರೇ ಆಗಿದ್ದಾರೆ ಎಂದಿದ್ದಾರೆ.
ಸುಳ್ಯದ ಶಿಯಾಬ್(33), ರಿಯಾಜ್ ಅಂಕತ್ತಡ್ಕ(27), ಬಶೀರ್ ಎಲಿಮಲೆ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಅವರು, ಇವರ ಬಗ್ಗೆ ಮೊದಲೇ ಮಾಹಿತಿ ದೊರಕಿತ್ತು, ಆದರೆ ಅವರು ಬೇರೆ ಬೇರೆ ಕಡೆ ಸ್ಥಳ ಬದಲಾಯಿಸುತ್ತಿದ್ದರಿಂದ ಪತ್ತೆ ಹಚ್ಚಲು ಸ್ವಲ್ಪ ತಡವಾಯಿತು. 15 ದಿನಗಳ ನಂತರ ಇದೀಗ ಪ್ರಮುಖ ಅರೋಪಿಗಳನ್ನು ಪತ್ತೆಹಚ್ಚಿದ್ದೇವೆ ಎಂದರು.
ಒಟ್ಟು ಆರು ವಾಹನಗಳನ್ನು ಕೃತ್ಯಕ್ಕೆ ಬಳಸಿದ ಆರೋಪಿಗಳು, ಕಪ್ಪು ಬಣ್ಣದ ಸ್ಪ್ಲೆಂಡರ್ ಬೈಕ್ ನಲ್ಲಿ ಬಂದು ಪ್ರವೀಣ್ ಹತ್ಯೆ ಮಾಡಿದ್ದಾರೆ. ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬುದನ್ನು ಮುಂದಕ್ಕೆ ಪತ್ತೆಹಚ್ಚಲಿದ್ದೇವೆ. ಆರೋಪಿಗಳಿಗೆ ಯಾರೆಲ್ಲಾ ಆಶ್ರಯ, ಸಹಕಾರ ನೀಡಿದ್ದಾರೆ ಎಂಬುದನ್ನೂ ಪತ್ತೆಹಚ್ಚಲಿದ್ದೇವೆ. ತನಿಖೆಯ ಸಂಪೂರ್ಣ ವರದಿಯನ್ನು ಎನ್.ಐ.ಗೆ ನೀಡಲಿದ್ದೇವೆ ಮುಂದಕ್ಕೆ ಅವರು ತನಿಖೆ ಮುಂದುವರೆಸಲಿದ್ದಾರೆ ಎಂದರು.
ಇವರಿಗೆ ಪಿ.ಎಫ್.ಐ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುವುದು. ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು ಕಾಸರಗೋಡಿನ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದ ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ತನಿಖೆಯ ಬಳಿಕ ಖಚಿತ ಮಾಹಿತಿ ತಿಳಿಸುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.