ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್): ಬೈಲಾ ಗಾಳಿಗೆ ತೂರಿ ಡಿಸಿಸಿ ಬ್ಯಾಂಕ್ ವತಿಯಿಂದ ಶಾಸಕ ಕೆ.ಆರ್. ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಸಹಕಾರ ಸಂಘಗಳಿಗೆ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ದೂರಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಆ .೧೦ ರಂದು ಶ್ರೀನಿವಾಸಪುರದ ಮಾವಿನ ಕಾಯಿ ಮಂಡಿಯೊಂದರಲ್ಲಿ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ತಾಲ್ಲೂಕಿನ ಯಲ್ದೂರು, ಮಣಿಗಾನಹಳ್ಳಿ , ದಳಸನೂರು ಹಾಗೂ ಅಡ್ಡಗಲ್ ಸಹಕಾರ ಸಂಘಗಳ ವ್ಯಾಪ್ತಿಗೆ ಬರುವ ೩೭೬ ಸ್ತ್ರೀ ಶಕ್ತಿ ಸಂಘಗಳಿಗೆ ರೂ . ೧೮.೫೪ ಕೋಟಿ ಸಾಲ ವಿತರಣೆ ಮಾಡಲಾಗಿದೆ.
ಸಂಘಗಳ ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿ ಸದಸ್ಯರನ್ನು ಸಭೆಗೆ ಕರೆಸಿಕೊಳ್ಳಲಾಗಿದೆ ಹಾಗೂ ಸಾಲ ವಿತಣಾ ಸಮಾರಂಭಕ್ಕೆ ಸುಮಾರು ರೂ .೩.೫೦ ಲಕ್ಷ ವೆಚ್ಚ ಮಾಡಲಾಗಿದೆ ಎಂದು ಹೇಳಿದರು. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್ ನೀಡುವ ಹಣದಿಂದ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ನೀಡುತ್ತಿದೆ . ಆದರೆ ತಾಲ್ಲೂಕಿನ ಶಾಸಕರು ಸ್ವಂತ ಹಣ ನೀಡಿದಂತೆ ಬಿಂಬಿಬಿಸಿಕೊಳ್ಳುತ್ತಿದ್ದಾರೆ . ಹಾಗೇನಾದರೂ ಕೊಡುವುದಾದರೆ , ಅವರೇ ಹೇಳಿರುವಂತೆ ಮೂರು ನಾಲ್ಕು ತಲೆಮಾರಿಗೆ ಸಾಕಾಗುಷ್ಟು ಮಾಡಲಾಗಿರುವ ಸಂಪಾದನೆಯಲ್ಲಿ ನೀಡಲಿ ಎಂದು ಕುಟುಕಿದರು.
ಸಾಲ ಸಂಘಗಳ ವಿತರಣೆಯಲ್ಲಿ ಸಹಕಾರ ಬೈಲಾ ಉಲಂಘನ ಆಗುತ್ತಿರುವ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು . ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರಿಗೆ ಈ ಕುರಿತು ಪತ್ರ ಬರೆಯಲಾಗುವುದು . ಬೈಲಾ ಉಲ್ಲಂಘನೆಗೆ ಕೈಜೋಡಿಸಿರುವ ಸಹಕಾರ ಸಂಘಗಳ ಕಾರ್ಯದರ್ಶಿ ಆಮಾನತು ಗೊಳಿಸುವ೦ತೆ ಒತ್ತಾಯಿಸಲಾಗುವುದು. ಕಾನೂನು ಬಾಹಿರ ವ್ಯವಹಾರಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಅವರು ಹೇಳಿದರು.
‘ ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ನನಗೆ ಗೌರವವಿದೆ . ಸಂಘಗಳಿಗೆ ಸಾಲ ನೀಡುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ . ಮಹಿಳೆಯರ ಸಬಲೀಕರಣ ಆಗಲೇಕು . ಆದರೆ ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದನ್ನು ವಿರೋಧಿಸುತ್ತೇನೆ ಎಂದು ಹೇಳಿದರು.
ಅಡ್ಡಗಲ್ , ಕಸಬಾ ಸೊಸೈಟಿ ಸೇರಿದಂತೆ ತಾಲ್ಲೂಕಿನ ಕೆಲವು ಸೊಸೈಟಿಗಳಲ್ಲಿ ಕೆಲವು ಪ್ರಭಾವಿಗಳು ಪಡೆದುಕೊಂಡಿರುವ ಸಾಲ ಮರುಪಾವತಿಯಾಗಿಲ್ಲ . ಸ್ತ್ರೀ ಶಕ್ತಿ ಸಂಘಗಳಿಂದ ಸಂಗ್ರಹಿಸಲಾಗಿರುವ ಶೇರು ಹಣಕ್ಕೆ ಲೆಕ್ಕವಿಲ್ಲ ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಕೆ.ಆರ್.ರಮೇಶ್ ಕುಮಾರ್ ಅವರು ನೀಡಿರುವ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ . ಸಮಯ ಇದ್ದಾಗ ಸುಮ್ಮನಿದ್ದ ಅವರು , ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾರಾಟ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಚ್.ಡಿ.ಕುಮಾರಸ್ವಾಮಿ ಅವರು ಬಾಯಿಬಿಟ್ಟರೆ ಶಾಸಕರ ಬಣ್ಣ ಬಯಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ , ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ , ಮುಖಂಡರಾದ ಪೂಲ ಶಿವಾರೆಡ್ಡಿ , ಏಜಾಜ್ ಪಾಷ , ಸುಬ್ಬರೆಡ್ಡಿ , ನಾರಾಯಣಸ್ವಾಮಿ , ಏನಾಜ್ ಖಾನ್ , ಮನು ಮತ್ತಿತರರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.