ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ) : – ಪ್ರತಿ ಮನೆ , ಕಟ್ಟಡ ಮೇಲೂ ಆ .೧೩ ರಿಂದ ತ್ರಿವರ್ಣ ಧ್ವಜ ಹಾರಿಸಬೇಕೆಂಬ ಸರಕಾರದ ಆದೇಶದ ಮೇರೆಗೆ ಭಾರತ ಸೇವಾದಳವು ಶುಕ್ರವಾರ ನಗರಕ್ಕೆ ಹೊಂದಿಕೊಂಡಿರುವ ಶತಶೃಂಗ ಪರ್ವತ ಶ್ರೇಣಿಯ ಅಂತರಗಂಗೆ ಬೆಟ್ಟದಲ್ಲಿರುವ ಏಳು ಗ್ರಾಮಗಳ ಶಾಲಾ ಮಕ್ಕಳಿಗೆ ಶತ ತ್ರಿವರ್ಣ ಧ್ವಜಗಳನ್ನು ವಿತರಿಸಿ ತ್ರಿವರ್ಣ ಧ್ವಜ ಹಾರಿಸಲು ಸಹಕರಿಸಿತು.
ಇತ್ತೀಚಿಗೆ ಭಾರತ ಸೇವಾದಳ ಜಿಲ್ಲಾ ಸಮಿತಿ ಸಭೆಯಲ್ಲಿ ಪ್ರತಿ ತಾಲೂಕಿಗೂ ೧೦೦ ತ್ರಿವರ್ಣ ಧ್ವಜಗಳನ್ನು ವಿತರಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ೧೦೦ ತ್ರಿವರ್ಣ ಧ್ವಜಗಳನ್ನು ಅಂತರಗಂಗೆ ಬೆಟ್ಟದಲ್ಲಿರುವ ಏಳು ಗ್ರಾಮಗಳಲ್ಲಿ ವಿತರಿಸಲು ನಿರ್ಧರಿಸಿತು . ಶುಕ್ರವಾರ ಅಂತರಗಂಗೆ ಬೆಟ್ಟಕ್ಕೆ ತೆರಳಿದ ಭಾರತ ಸೇವಾದಳ ಪದಾಧಿಕಾರಿಗಳು ತೇರಹಳ್ಳಿ ಸರಕಾರಿ ಶಾಲೆಯ ೬೦ ಮಕ್ಕಳಿಗೆ , ಪಾಪರಾಜನಹಳ್ಳಿ ಶಾಲೆಯ ೩೦ ಮಕ್ಕಳಿಗೆ ಹಾಗೂ ಕುಪ್ಪಳ್ಳಿಯ ೧೦ ಮಂದಿ ಮಕ್ಕಳಿಗೆ ಒಟ್ಟು ೧೦೦ ತ್ರಿವರ್ಣಧ್ವಜಗಳನ್ನು ಮುಖ್ಯಶಿಕ್ಷಕರು ಮತ್ತು ಶಿಕ್ಷಕ ಸಿಬ್ಬಂದಿಯ ಸಮ್ಮುಖದಲ್ಲಿ ವಿತರಿಸಿತು .
ಮೂರು ಶಾಲೆಯ ಮುಖ್ಯ ಶಿಕ್ಷಕರಾದ ಶಂಕರೇಗೌಡ , ನಾರಾಯಣಸ್ವಾಮಿ ಮತ್ತು ನಾರಾಯಣಮ್ಮರಿಗೆ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ರಾಷ್ಟ್ರಧ್ವಜ ಸಂಹಿತೆ ಪುಸ್ತಕವನ್ನು ವಿತರಿಸಿ ಕಡ್ಡಾಯವಾಗಿ ಪಾಲಿಸಿ , ಮಕ್ಕಳಿಗೆ ಅರಿವು ಮೂಡಿಸುವಂತೆ ಕೋರಿದರು. ಅಂತರಗಂಗೆ ಬೆಟ್ಟದ ಏಳು ಗ್ರಾಮಗಳ ಕುಟುಂಬಗಳು ಸಹ ಸ್ವಾತಂತ್ರ್ಯ ಅಮೃತಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂಬ ಸದುದ್ದೇಶದಿಂದ ತ್ರಿವರ್ಣ ಧ್ವಜಗಳನ್ನು ಬೆಟ್ಟದಲ್ಲಿ ವಿತರಿಸಲು ನಿರ್ಧರಿಸಲಾಯಿತೆಂದು ಹೇಳಿದರು.
ಭಾರತಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ , ಮೂರು ದಿನಗಳ ಕಾಲ ಬೆಟ್ಟದ ಮೇಲಿನ ಪ್ರತಿ ಮನೆಯಲ್ಲಿಯೂ ಶಾಲಾ ಮಕ್ಕಳು ತ್ರಿವರ್ಣ ಧ್ವಜ ಹಾರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಧ್ವಜಕ್ಕೆ ಅಪಮಾನವಾಗದಂತೆ ಬಾವುಟ ಕಸವಾಗದಂತೆ ಎಚ್ಚರವಹಿಸಬೇಕು , ಆಗಸ್ಟ್ ೧೩ ರಂದು ಬೆಳಿಗ್ಗೆ ತ್ರಿವರ್ಣ ಧ್ವಜವನ್ನು ಹಾರಿಸಿ ಆಗಸ್ಟ್ ೧೫ ರಂದು ಸಂಜೆ ೬ ಗಂಟೆಗೆ ಧ್ವಜವನ್ನು ಅವರೋಹಣ ಮಾಡಿ ಧ್ವಜವನ್ನು ಬಿಸಾಡದೆ ಗೌರವಯುತವಾಗಿ ಭದ್ರಪಡಿಸಿಕೊಳ್ಳಬೇಕೆಂದು ಹೇಳಿದರು. ಸೇವಾದಳ ಮತ್ತು ಕೋಲಾರ ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ , ಬೆಟ್ಟದ ಮೇಲಿನ ಮೂರು ಶಾಲೆಗಳ ಮಕ್ಕಳ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ರೋಟರಿವತಿಯಿಂದ ಡೆಸ್ಕ್ಗಳನ್ನು ವಿತರಿಸಲಾಗುವುದು ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಸೇವಾದಳ ಉಪಾಧ್ಯಕ್ಷ ಜಿ.ಶ್ರೀನಿವಾಸ್ , ವಿಶೇಷ ಆಹ್ವಾನಿತ ಆರ್.ಶ್ರೀನಿವಾಸನ್ ಆಯಾ ಶಾಲಾ ಮುಖ್ಯ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.