ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ): ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕಳೆದ ಒಂದು ವರ್ಷದಲ್ಲಿ ಜನಸಾಮಾನ್ಯರ ಏಳಿಗೆಗಾಗಿ ರಾಜ್ಯ ಸರ್ಕಾರ ಹಲವಾರು ಅಮೃತ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತೋಟಗಾರಿಕೆ , ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು .
ಇಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ , ಕೋಲಾರ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ಸಂಧಿರುವ ಸುಸಂದರ್ಭದಲ್ಲಿ ಅಮೃತ ಮಹೋತ್ಸವ ಸಂಭ್ರಮಾಚರಣೆಯನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು . ಸರ್ಕಾರವು ಅಮೃತ ಮಹೋತ್ಸವ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಡಿ ‘ ಕಿಸಾನ್ ಭಾಗಿದಾರಿ ಪ್ರಾಥಮಿಕ್ ತಾ ಹಮಾರಿ ‘ ಅಭಿಯಾನದಡಿ 800 ರೈತರಿಗೆ ಜಿಲ್ಲಾ ಾಗೂ ತಾಲ್ಲೂಕು ಮಟ್ಟದಲ್ಲಿ ಫಸಲ್ ಬೀಮಾ ಪಾಠಶಾಲಾ , ರೈತರಿಗೆ ವಿಚಾರ ಸಂಕಿರಣ , ಕಾರ್ಯಗಾರ , ಕ್ಷೇತ್ರ ಭೇಟಿ , ತರಬೇತಿ ಹಾಗೂ ಮೇಳಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು .
ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೋಲಾರ ಜಿಲ್ಲೆಯ 43 ಗ್ರಾಮಗಳನ್ನು ಕೈಗೆತ್ತಿಕೊಂಡು ಎನ್ಎಸ್ಎಸ್ ಸ್ವಯಂ ಸೇವಕರ ಮುಖಾಂತರ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ . ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಮತ್ತು ಕುಸ್ತಿಪಟುಗಳಿಗೆ ಆರ್ಥಿಕ ನೆರವು ಯೋಜನೆಯಲ್ಲಿ 50 ವರ್ಷ ಮೇಲ್ಪಟ್ಟ 16 ಜನರಿಗೆ ಪ್ರತಿ ಮಾಹೆ ಮಾಶಾಸನವನ್ನು ನೀಡಲಾಗಿದೆ .
ಅಮೃತ ಮಹೋತ್ಸವ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ಥಿಗಾಗಿ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂದಾಜು 20 ಲಕ್ಷದಂತೆ ವೆಚ್ಚ ಮಾಡಲು ಸೂಚಿಸಿದೆ . ಅಮೃತ್ ನಿರ್ಮಲ್ ನಗರ ಯೋಜನೆಯಡಿಯಲ್ಲಿ ಕೋಲಾರ ನಗರಸಭೆಗೆ ರೂ .1,00 ಕೋಟಿ ಹಂಚಿಕೆಯಾಗಿದ್ದು , ಅದರಲ್ಲಿ ರೂ .50.00 ಲಕ್ಷಗಳು ಬಿಡುಗಡೆಯಾಗಿದ್ದು , ಇದರಲ್ಲಿ Tractor , Loaders & Safety ಇವುಗಳನ್ನು ಖರೀದಿಸಿ ಶೇ .100 ರಷ್ಟು ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ .
ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನಗಳಾದ 15 ನೇ ಹಣಕಾಸು , ಅಮೃತ್ ಯೋಜನೆ ಮತ್ತು ಅಮೃತ್ ನಿರ್ಮಲ್ ನಗರ ಯೋಜನೆಗಳಲ್ಲಿ ರೂ .23.52 ಕೋಟಿಗಳನ್ನು ಹಂಚಿಕೆಯಾಗಿದ್ದು , ಈ ಯೋಜನೆಗಳಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ . ಇವೆಲ್ಲವೂ ಜನವರಿ -2023 ಕ್ಕೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು . ಅಮೃತ್ ಗ್ರಾಮ ಪಂಚಾಯತ್ ಯೋಜನೆ ಸ್ವಾತಂತ್ರ್ಯ ದೊರೆತ 75 ವರ್ಷಗಳ ಸವಿನೆನಪಿಗಾಗಿ ಗ್ರಾಮ ಪಂಚಾಯತ್ ಬಲವರ್ಧನೆಗಾಗಿ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 19 ಪಂಚಾಯತ್ಗಳು ಆಯ್ಕೆಯಾಗಿದ್ದು , ಈಗಾಗಲೇ ಅಮೃತ್ ಯೋಜನೆಯಲ್ಲಿ ನಿಗಧಿಪಡಿಸಿದ ಗುರಿಯನ್ನು ಈಡೇರಿಸಲಾಗಿದೆ .
ಸದರಿ ಪಂಚಾಯತ್ಗಳಿಗೆ ಪ್ರೋತ್ಸಾಹ ಧನ ರೂ .25.00 ಲಕ್ಷ ನಿಗಧಿಯಾಗಿದ್ದು , ಎರಡು ಕಂತಿನ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ . ಹಾಗೇ 2022-23ನೇ ಸಾಲಿನ ಎರಡನೇ ಹಂತದ ಅಮೃತ್ ಯೋಜನೆಗಾಗಿ 19 ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಅಮೃತ ಅಂಗನವಾಡಿ ಕಟ್ಟಡ ಯೋಜನೆಯಡಿ ಕೋಲಾರ ಜಿಲ್ಲೆಗೆ ಘಟಕವೆಚ್ಚ ರೂ .1.00 ಲಕ್ಷದಂತೆ 25 ಅಂಗನವಾಡಿ ಕಟ್ಟಡಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ಅನುದಾನ ಬಿಡುಗಡೆ ಮಾಡಿದ್ದು , ಅದರಂತೆ ಎಲ್ಲಾ 25 ಅಂಗನವಾಡಿ ಕೇಂದ್ರಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ .
ಅಮೃತ ಕಿರುಉದ್ದಿಮೆ ಯೋಜನೆಯಡಿ ಕೋಲಾರ ಜಿಲ್ಲೆಗೆ 225 ಸ್ತ್ರೀಶಕ್ತಿ ಸಂಘಗಳಿಗೆ ತಲಾ ರೂ .1.00 ಲಕ್ಷದಂತೆ ಬೀಜಧನವನ್ನು ನೀಡಲು ರೂ .2.25 ಕೋಟಿ ಮಂಜೂರು ಮಾಡಲಾಗಿದ್ದು , ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಸ್ತ್ರೀಶಕ್ತಿ ಸ್ವ – ಸಹಾಯ ಗುಂಪುಗಳಿಗೆ ತಲಾ ರೂ .1.00 ಲಕ್ಷದಂತೆ 225 ಸ್ತ್ರೀಶಕ್ತಿ ಸಂಘಗಳಿಗೆ ರೂ .2.25 ಕೋಟಿ ಅನುದಾನವನ್ನು ಚೆಕ್ ಮೂಲಕ ವಿತರಿಸಲಾಗಿದೆ .
2022-23ನೇ ಸಾಲಿನಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ “ ಅಮೃತ ಸರೋವರ ಯೋಜನೆ ” ಯನ್ನು ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದು , ಸದರಿ ಯೋಜನೆಯಡಿ ಕೋಲಾರ ಜಿಲ್ಲೆಯಲ್ಲಿ ಒಟ್ಟು 75 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ . ಹಾಗೂ ಮಾನ್ಯ ಸಂಸದರು , ಕೋಲಾರ ಜಿಲ್ಲೆ ಇವರು “ ಆಜಾದಿ ಕಾ ಅಮೃತ ಸರೋವರ ಯೋಜನೆ ” ಯಡಿ ಕೋಲಾರ ಜಿಲ್ಲೆಯಲ್ಲಿ ಒಟ್ಟು 81 ಕೆರೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಹೊಂದಿದ್ದು , ಸದರಿ ಯೋಜನೆಗಳಡಿ ಈ ವಿಭಾಗದ ವತಿಯಿಂದ ಆದ್ಯತೆ ಮೇರೆಗೆ ಕೆರೆಯಂಗಳದ ಹಿನ್ನೀರಿನ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ಹಸಿರೀಕರಣ ಕೈಗೊಳ್ಳುವ ಸದುದ್ದೇಶದಿಂದ ಗುಂಡಿ ತೆಗೆಯುವ ಮತ್ತು ಗಿಡನೆಡುವ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ ಎಂದು ತಿಳಿಸಿದರು .
ಸಚಿವರ ಸಂದೇಶದ ನಂತರ ಡಿ.ಎ.ಆರ್ ಪೊಲೀಸ್ ತಂಡ , ನಾಗರಿಕ ಪೊಲೀಸ್ ತಂಡ , ಪ್ರವಾಸಿ ಮಿತ್ರ ತಂಡ , ಗೃಹ ರಕ್ಷಕರ ಪುರುಷ ಮತ್ತು ಮಹಿಳಾ ತಂಡ , ಎನ್.ಸಿ.ಸಿ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ತಂಡ , ಭಾರತ್ ಸೇವಾ ದಳ ಬಾಲಕಿಯರ ತಂಡ , ಸುಭಾಷ್ ಶಾಲೆ ಕೋಲಾರ , ಭಾರತ್ ಸೇವಾದಳ ಆನಂದಮೂರ್ತಿ ಶಾಲೆ ಕೋಲಾರ , ಸುಭಾಷ್ ಪ್ರೌಢಶಾಲೆ ಕೋಲಾರ , ಎ.ವಿ.ಎಸ್ ಪಬ್ಲಿಕ್ ಶಾಲೆ , ಆರ್.ವಿ.ಇಂಟರ್ ನ್ಯಾಷನಲ್ ಶಾಲೆ ಬಾಲಕಿಯರು , ಮಹಿಳಾ ಸಮಾಜ ಶಾಲೆ ಬಾಲಕಿಯರು , ಮದರ್ ಥೆರೆಸಾ ಬಾಲಕಿಯರ ತಂಡ , ಬಿ.ಎಂ.ಎಸ್ ಶಾಲಾ ಬಾಕಿಯರ ತಂಡ , ಅಮರಜ್ಯೋತಿ ಪಬ್ಲಿಕ್ ಸ್ಕೂಲ್ , ಪ್ರಸಿಡೆನ್ಸಿ ಶಾಲಾ ತಂಡ , ಇಂಡಿಯನ್ ಪಬ್ಲಿಕ್ ಶಾಲಾ ಬಾಲಕಿಯರ ತಂಡ , ಹೆಚ್.ಕೆ.ಎಂ. ಶಾಲಾ ಬಾಲಕರ ತಂಡ , ಸೈನಿಕ್ ಪಬ್ಲಿಕ್ ಶಾಲಾ , ಶುಭಲಾ ವಿದ್ಯಾಲಯ ಬಾಲಕರ ತಂಡ , ಗೋಕುಲ್ ಪ್ರೌಢಶಾಲಾ ಬಾಲಕರ ತಂಡ , ಸುವರ್ಣ ಸೆಂಟ್ರಲ್ ಶಾಲಾ ಬಾಲಕಿಯರ ತಂಡಗಳಿಂದ ಆಕರ್ಷಕ ಪಥಸಂಚಲನ ನೋಡುಗರ ಕಣ್ಮನ ಸೆಳೆಯಿತು .
ಸುವರ್ಣ ಸೆಂಟ್ರಲ್ ಶಾಲಾ ಬಾಲಕಿಯರ ತಂಡ ಪ್ರಥಮ ಬಹುಮಾನ , ಮಹಿಳಾ ಸಮಾಜ ಶಾಲೆ ಬಾಲಕಿಯರ ತಂಡ ದ್ವಿತೀಯ ಬಹುಮಾನ ಹಾಗೂ ಶುಭಲಾ ವಿದ್ಯಾಲಯ ಬಾಲಕರ ತಂಡ ತೃತೀಯ ಬಹುಮಾನ ಗಳಿಸಿದವು .
ಶಾಲಾ ಮಕ್ಕಳಿಂದ ಒಟ್ಟು 4 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು . ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು , ಬಿ.ಎಂ.ಎಸ್ ಶಾಲೆ ಮಕ್ಕಳು , ಮಹಿಳಾ ಸಮಾಜ ಶಾಲೆ , ವಿವಿಧ ಶಾಲಾ ವಿದ್ಯಾರ್ಥಿಗಳು ಕರಾಟೆ ಮತ್ತು ಸಾಮೂಹಿಕ ಪಿ.ಟಿ ಪ್ರದರ್ಶಿಸಿದರು . 10 ಸಾವಿರಕ್ಕೂಮೇಲ್ಪಟ್ಟು ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು .
ಸಚಿವರು ಹಾಗೂ ಇತರ ಗಣ್ಯರು ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ವಿತರಿಸಿದರು .
ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ವೆಂಕಟಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು . ಜಿಲ್ಲೆಯ ಅತ್ಯುತ್ತಮ ಸಾಧನೆಗೈದ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು .
ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಯರಗೋಳ ಜಲಾಶಯವು ಭರ್ತಿಯಾಗಿದ್ದು , ಉಳಿದ ಪೈಪ್ಲೈನ್ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಮನೆ ಮನೆಗೆ ತಲುಪಿಸುವ ಜಲ್ ಜೀವನ್ ಮಿಷನ್ ಯೋಜನೆಗೆ ವೇಗ ನೀಡಲಾಗುವುದು ಎಂದು ತಿಳಿಸಿದರು . ಅಮೃತ್ ನಗರೋತ್ಥಾನ ಯೋಜನೆಯಡಿ ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಲಾಗುವುದು .
ಈ ವರ್ಷದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು , ಅನೇಕ ಮನೆಗಳು ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗಿದ್ದು , ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ , ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ , ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು , ನಸೀರ್ ಅಹಮದ್ , ಎಂ.ಎಲ್ ಅನಿಲ್ ಕುಮಾರ್ , ನಗರಸಭೆ ಅಧ್ಯಕ್ಷರಾದ ಶ್ವೇತಾಶಬರೀಶ್ , ಜಿಲ್ಲಾಧಿಕಾರಿ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ , ಅಪರ ಜಿಲ್ಲಾಧಿಕಾರಿ ಡಾ || ಸ್ನೇಹಾ ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.