(www.vknews.in) : ಪ್ರಪಂಚದಲ್ಲಿ ಸುಮಾರು ೩.೯ ಬಿಲಿಯನ್ ಜನರು ಇಮೇಲ್ ಬಳಸುತ್ತಿದ್ದಾರೆ. ಕೆಲವೊಮ್ಮೆ ಕರೋನಕಾಲ ಜನರನ್ನು ಡಿಜಿಟಲ್ ಲೋಕಕ್ಕೆ ನೂಕಲು ಬಂತೇನೋ ಎಂದೆನಿಸುತ್ತದೆ. ಹಳ್ಳಿಗಳ ಮೂಲೆ ಮೂಲೆಗಳಿಂದ ಹಿಡಿದು ಪಟ್ಟಣಗಳ ಎದೆಭಾಗದವರೆಗೂ ಒಂದಲ್ಲ ಒಂದು ರೀತಿಯಲ್ಲಿ ಜನರು ಡಿಜಿಟಲ್ ತಂತ್ರಜ್ಞಾನಕ್ಕೆ ಜೋತು ಬಿದ್ದರು. ಅವಿದ್ಯಾವಂತರೂ ಸಹ ಅಷ್ಟೋ ಇಷ್ಟೋ ಅದರ ಬಳಕೆಯನ್ನು ಕಲಿತುಕೊಂಡರು.
೧೯೭೮ ರಲ್ಲಿ, ೧೪ ವರ್ಷದ ಬಾಲಕ ಶಿವ ಅಯ್ಯದೊರೈ ಇಮೇಲ್ ಬಳಕೆಯನ್ನು ಪರಿಚಯಿಸಿದನು. ಈಗ ಅದು “ಸಂಪರ್ಕದ” ಮೂಲ ಸಾಧನಗಳಲ್ಲಿ ಒಂದಾಗಿದೆ. ಇಮೇಲ್ ಅನ್ನು ೩ ವಿಧಗಳಲ್ಲಿ ವಿಂಗಡಿಸಬಹುದಾಗಿದೆ. ವೈಯಕ್ತಿಕ ಇಮೇಲ್, ಬಿಸಿನೆಸ್ ಇಮೇಲ್ ಮತ್ತು ಕಾರ್ಪೊರೇಟ್ ಇಮೇಲ್. ಕಾರ್ಪೊರೇಟ್ ಇಮೇಲ್ ಅನ್ನು ನಿಮ್ಮ ಇಷ್ಟದ ಅನುಗುಣವಾಗಿ ನಾಮಕರಣ ಮಾಡಿಕೊಳ್ಳಬಹುದು. ಏಕೆಂದರೆ ಕಂಪನಿಗಳು ತಮ್ಮದೇ ಆದ ಸರ್ವರ್ಗಳನ್ನು ಹೊಂದಿರುತ್ತವೆ. ಆದರೆ ವೈಯಕ್ತಿಕ ಇಮೇಲ್ ನಮ್ಮ ಇಷ್ಟದಂತೆ ನಾಮಕರಣ ಮಾಡಲು ಕಷ್ಟವಾಗುತ್ತದೆ.
ವೈಯಕ್ತಿಕ ಇಮೇಲ್ ನಾಮಕರಣ ಮಾಡುವಾಗ ಸ್ವಲ್ಪ ಗಂಭೀರವಾಗಿ ಯೋಚಿಸಿ ನಾಮಕರಣ ಮಾಡಿ. ಏಕೆಂದರೆ ಅದು ನಿಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸುತ್ತದೆ. ಕಂಪನಿಯ HR (ಮಾನವ ಸಂಪನ್ಮೂಲ ಅಧಿಕಾರಿ)ಗಳು ಇದನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸುತ್ತಾರೆ. ಕೆಲವರು ವಿಚಿತ್ರವಾದ ಹೆಸರುಗಳಿಂದ ತಮ್ಮ ಇಮೇಲ್ ಗಳನ್ನು ನಾಮಕರಣ ಮಾಡುತ್ತಾರೆ. ಉದಾಹರಣೆಗೆ: ಕಿಲ್ಲರ್ ಮಂಜು@……, ಸೈಲೆಂಟ್ ಸುನಿಲ@…., ಲವ್ ಯು ಸೋನು@….. ಇತ್ಯಾದಿ. ಹೆಚ್.ಆರ್. ತಂಡವಾಗಲಿ, ಇನ್ಯಾರೋ ಪರಿಚಿತ ಅಥವಾ ಅಪರಿಚಿತರಾಗಲಿ ನಿಮ್ಮ ಇಮೇಲ್ ಹೆಸರು ನೋಡಿದಾಕ್ಷಣ ನಿಮ್ಮ ಬಗ್ಗೆ ಒಂದು ಕಲ್ಪನೆಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಅದು ನಿಮ್ಮ ಅಭಿವೃದ್ಧಿಗೆ ಕಂಟಕವಾಗಬಹುದು. ಟ್ರೋಲಿಂಗ್ ಗ್ಯಾಂಗ್ ಅನೇಕ ಹೆಸರುಗಳಿಂದ ಇಮೇಲ್ ಸೃಷ್ಟಿಸಿಕೊಂಡಿರುತ್ತಾರೆ, ಅದು ಬೇರೆಯೇ ವಿಷಯ.
ನೀವು ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಇಮೇಲ್ ಹೇಗಿರಬೇಕು? ನಿಮ್ಮ ಹೆಸರಿನಿಂದ ಪ್ರಾರಂಭಿಸಿ. ಸರಾಗವಾಗಿ ಉಚ್ಚಾರವಾಗುವಂತಿರಬೇಕು. ಬೇಗನೇ ಮನದಟ್ಟಾಗುವಂತಿರಬೇಕು. ಮಹಿಷಾಸುರತಿಲಕಾಷ್ಠಬಂಧನ@ಜಿಮೇಲ್.ಕಾಂ ಅಂತ ಇಟ್ಟುಕೊಂಡರೆ, ಅಪ್ಪರಾಣೆ ಯಾರೂ ಇಷ್ಟಪಡುವುದಿಲ್ಲ. ಏಕೆಂದರೆ ಓದುವುದು ಮತ್ತು ಉಚ್ಚರಿಸುವುದು ಸ್ವಲ್ಪ ಕಷ್ಟ. ನೀವೇ ನಿಮ್ಮ ವ್ಯಕ್ತಿತ್ವವನ್ನು ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ.
ಇಮೇಲ್ ಬರೆಯುವಾಗ Subject ಬಹಳ ಮುಖ್ಯ. ಮನುಷ್ಯನ ಗುಣ ಆತನ ಶೂಗಳಿಂದ ಅಳೆಯಬಹುದು ಎಂದು ಹಿರಿಯರು ಹೇಳುತ್ತಾರೆ. ಜನರ ದೃಷ್ಟಿ ಮೊದಲು ಬೀಳುವುದೇ ಕಾಲುಗಳ ಮೇಲೆ. ಪಾದರಕ್ಷೆಗಳು ಶುಚಿಯಾಗಿವೆಯೇ, ನಯವಾಗಿವೆಯೇ, ಗುಣಮಟ್ಟ ಚೆನ್ನಾಗಿದೆಯೇ, ನೋಡಲು ಚೆನ್ನಾಗಿ ಕಾಣುತ್ತಿವೆಯೇ – ಎಲ್ಲವನ್ನು ಗಮನಿಸಿ ನಿಮ್ಮ ಅಭಿರುಚಿಯನ್ನು ಮತ್ತು ವ್ಯಕ್ತಿತ್ವವನ್ನು ಅಳೆದು ಬಿಡುತ್ತಾರೆ. ಅಂತಃರಂಗ ಪರಮಾತ್ಮನಿಗೆ ಬಿಟ್ಟುದ್ದು. ಆದರೆ ಜನರು ನೋಡುವುದೇ ನಿಮ್ಮ ಬಹಿರಂಗ ಎನ್ನುವುದನ್ನು ಮರೆಯಬೇಡಿ. ಇಮೇಲ್ Subject ನಿಖರಾಗಿರಲಿ. ಅಂದರೆ ಅದರಲ್ಲಿ ಸ್ಪಷ್ಟತೆ ಇರಬೇಕು, ಸರಳತೆ ಇರಬೇಕು, ಓದಿದಾಕ್ಷಣ ವಿಷಯ ಅರ್ಥವಾಗುವಂತಿರಬೇಕು.
ಇಮೇಲ್ ಕಂಟೆಂಟ್: ಯಾರಿಗೆ, ಏನು ವಿಷಯ ಬರೆಯಬೇಕೋ ಅರ್ಥವಾಗುವ ರೀತಿಯಲ್ಲಿ ಬರೆಯಿರಿ. ಎರಡು ಸಲ ಓದಿ, ಏನಾದರು ತಪ್ಪಿದ್ದರೆ ಸರಿಪಡಿಸಿಕೊಳ್ಳಿ. ಗೂಗಲ್ ಸಹಾಯ ತೆಗೆದುಕೊಳ್ಳಿ. ಸಂಪೂರ್ಣವಾಗಿ ಇಮೇಲ್ ಶಿಷ್ಟಾಚಾರಗಳನ್ನು ಕಲಿತುಕೊಳ್ಳಿ. ಉತ್ತಮವಾಗಿ ಇಮೇಲ್ ರಚನೆ ಮಾಡಲು ಅನುಕೂಲವಾಗುತ್ತದೆ. ಇಮೇಲ್ ಮುಕ್ತಾಯ “ಧನ್ಯವಾದಗಳಿಂದ” ಮಾಡಿ. ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ನಮೂದಿಸಲು ಮರೆಯಬೇಡಿ. ಸಂಪೂರ್ಣ ಇಮೇಲ್ ಒಂದೇ ಬಣ್ಣದಲ್ಲಿರಲಿ. ಕಪ್ಪು ಬಣ್ಣವನ್ನೇ ಬಳಸಿ. ಒಂದೇ ರೀತಿಯ ಫಾನ್ಟ್ ಇರಲಿ. ಇಮೇಲ್ ಕಳುಹಿಸುವ ಮುನ್ನ Attachment ಒಮ್ಮೆ ಪರೀಕ್ಷಿಸಿಕೊಳ್ಳಿ. ಎಷ್ಟೋ ಸಲ ಏನೋ ಬೇರೆಯದನ್ನು ಲಗತ್ತಿಸಿಬಿಡುವುದುಂಟು. ಸಾಮಾನ್ಯವಾಗಿ ಎಲ್ಲರು ಬಯೋ ಡೇಟಾವನ್ನು PDF ಫಾರ್ಮಾಟಿನಲ್ಲಿ ಬಯಸುತ್ತಾರೆ. ವರ್ಡ್ ನಿಂದ ಪಿಡಿಎಫ್ ಗೆ ಪರಿವರ್ತಿಸಿ ಜಾಗರೂಕತೆಯಿಂದ ಕಳುಹಿಸಿ.
ಇನ್ನೊಂದು ವಿಷಯ: ಯಾವುದಾದರು ಕಂಪನಿಗೆ ಸಂದರ್ಶನಕ್ಕೆ ಹೋಗಿ ಬಂದ ಮೇಲೆ “Thank You “ ಇಮೇಲ್ ಕಳುಹಿಸಿ. ನೀವು ಕೆಲಸ ಮಾಡಲು ಅಭಿರುಚಿ ತೋರಿಸುತ್ತಿರುವಿರಿ ಎಂದು ವ್ಯಕ್ತವಾಗುತ್ತದೆ. ಎಷ್ಟೋ ಸಲ ಕೆಲಸ ಗಿಟ್ಟಿಸಿಕೊಳ್ಳುವುದರಲ್ಲಿ ಸಹಾಯವಾಗಬಲ್ಲದು.
ಕೊನೆಯದಾಗಿ, ಇಮೇಲ್ ಹೋಗಿದೆಯೋ ಇಲ್ಲವೋ ಎಂದು Sent items ನಲ್ಲಿ ಒಮ್ಮೆ ಗಮನಿಸಿಕೊಳ್ಳಿ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.