ಬರಡು ಭೂಮಿಯಲಿ ಬಡವಾಗಿ ಬಿದ್ದ ಬಂಡೆ ಕಲ್ಲಿಗೆ ತಾನಾರೆಂದು ಗುರುತಿಲ್ಲ.. ಉಸಿರಿಗೊಂದು ಉಳಿಪೆಟ್ಟು ಮೇಲೆ ಮೇಲೆ ನೀಡುವ ಕಲ್ಲುಕುಟಿಗನ ಜಾತಿ ಗೊತ್ತಿಲ್ಲ..
ಶಿಲೆಯದು ಶಿಲ್ಪವಾಗಿ ಪೂಜನೀಯ ಪಥದತ್ತ ಪಯಣಿಸುತ್ತಿರುವ ಕೊನೆ ತಿಳಿದಿಲ್ಲ.. ಪಡೆದ ಹುಟ್ಟು ಬಿದ್ದ ಜಾಗ ಎದ್ದ ಸ್ಥಿತಿಯೊಳು ಗಮ್ಯವಿತ್ತಾಗ ಆರಂಭದ ಅರಿವಿಲ್ಲ..
ಹುಟ್ಟಿದ ಹುಟ್ಟದು ವಿಶ್ವಮಾನವ ತನ್ನೊಳಗಿನ ಅಂತ:ಸಾಮರ್ಥ್ಯ ಅಂಕೆಗೂ ಸಿಗಲಿಲ್ಲ.. ಸುತ್ತಲ ಆವಾಸದ ಪರಿಧಿಯೊಳು ಸಾಗಿದಾಗ ಅಲ್ಪಮಾನವ ಪಟ್ಟವದು ತಟ್ಟಿದರಲ್ಲ..
ಹೊತ್ತ ಹೊತ್ತಗೆಯದು ಪುಟ ತೆರೆಯಲು ಕಾತರಿಸುತ್ತಿರಲು ಮೇಲು ಕೀಳು ಭಾವವಿಲ್ಲ.. ಹೊತ್ತು ಹೊತ್ತು ಹೊಟ್ಟೆ ತಣಿಸಲು ಹವಣಿಸುತ್ತಿರುವ ಅನ್ನಕ್ಕೆ ಜಾತಿಯಿಲ್ಲ..
ಜ್ಞಾನದೇಗುಲದ ಕದ ತಟ್ಟಿದ ಕನಸು ಕಂಗಳ ಕಂದಮ್ಮಗಳಿಗೆ ಕಪ್ಪು ಬಿಳುಪು ಬಣ್ಣವಿಲ್ಲ.. ಅಕ್ಷರದಿ ಅಕ್ಕರೆಯದು ಅನುರಣಿಸುತ್ತಿರಲು ಬಡವ-ಬಲ್ಲಿದ ಜಾತಿ-ಧರ್ಮದ ಸುಳಿವಿಲ್ಲ..
ದಿಗಂತದಿ ಪ್ರಜ್ವಲಿಸುತ ಜಗವ ಬೆಳಗುವ ದಿನಕರನ ಅದಮ್ಯ ಚೇತನಕೆ ಕೊನೆಯಿಲ್ಲ.. ಬಾಳ ಜ್ಯೋತಿಗೆ ಜಾತ್ಯತೀತತೆಯ ಎರಕ ಹೊಯ್ದ ಗುರುವರ್ಯರಿಗೆ ಸರಿಸಾಟಿಯಿಲ್ಲ..!
– ತುಳಸಿ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.