(www.vknews.in)
ಕುಂದಾಪುರ, ನೀಟ್ ಪರೀಕ್ಷೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರಿಂದ ನೊಂದು ಕುಂದಾಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ . ಎನ್ನಲಾದ ವಿದ್ಯಾರ್ಥಿಯ ಮೃತದೇಹ ಬೈಂದೂರು ತಾಲೂಕಿನ ನಾವುಂದ ಸಮುದ್ರ ತೀರದಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.
ಕುಂದಾಪುರದ ವಡೇರಹೋಬಳಿ ಜೆಎಲ್ಬಿ ರಸ್ತೆಯ ನಿವಾಸಿ ರಘುವೀರ್ ಶೆಟ್ಟಿ ಎನ್ನುವವರ ಪುತ್ರ ಸಾಯೀಶ್ ಶೆಟ್ಟಿ (18) ಮೃತಪಟ್ಟ ವಿದ್ಯಾರ್ಥಿ.
ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ ಸಾಯೀಶ್ ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದರು. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅವರು ನೀಟ್ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಬೆಳಗ್ಗೆ ಸೈಬರ್ ಕೇಂದ್ರಕ್ಕೆ ತೆರಳಿ ಫಲಿತಾಂಶ ನೋಡಿದ್ದಾರೆ ಎನ್ನಲಾಗುತ್ತಿದೆ.
ಪರೀಕ್ಷೆಯಲ್ಲಿ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂದು ಬೇಸರಗೊಂಡಿದ್ದ ಅವರು ಇದೇ ಕಾರಣಕ್ಕೆ ಗುರುವಾರ ಮಧ್ಯಾಹ್ನ 11.30ರ ವೇಳೆ ಸಂಗಮ್ ಸೇತುವೆಯ ಮೇಲಿನಿಂದ ಪಂಚಗಂಗಾವಳಿ ನದಿಗೆ ಹಾರಿದ್ದಾರೆನ್ನಲಾಗಿದೆ. ಶಿವಮೊಗ್ಗದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸದ ಮುಗಿಸಿದ್ದ ಸಾಯೀಶ್ ಶೆಟ್ಟಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರೆನ್ನಲಾಗಿದೆ.
ನದಿಗೆ ಹಾರಿದ ವಿಷಯ ತಿಳಿಯುತ್ತಲೇ ಪೊಲೀಸರು, ಅಗ್ನಿಶಾಮಕ ದಳವರು, ಸ್ಥಳೀಯ ಮೀನುಗಾರರು, ಮುಳುಗು ತಜ್ಞರು ಸಾಯೀಶ್ ರಿಗಾಗಿ ಶೋಧ ನಡೆಸಿದ್ದರೂ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಪತ್ತೆ ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಬೈಂದೂರು ತಾಲೂಕಿನ ನಾವುಂದ ಸಮುದ್ರ ತೀರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.