(www.vknews.in) ಹುಬ್ಬಳ್ಳಿ: ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರಪ್ರದೇಶದ ಶ್ರೀಕಾಶಿ ಜ್ಞಾನ ಸಿಂಹಾಸನ ಜಗದ್ಗುರು ಪೀಠವು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲು ಶಿಷ್ಯವೇತನ ಯೋಜನೆಯನ್ನು ಜಾರಿಗೆ ತಂದಿದ್ದು, ಕಳೆದ 15 ವರ್ಷಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಅರ್ಹ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಪ್ರಾಥಮಿಕ ಶಿಕ್ಷಣದಿಂದ ಉಚ್ಛ ಶಿಕ್ಷಣದವರೆಗೆ ವ್ಯಾಸಂಗದ ಸಂದರ್ಭದಲ್ಲಿ ತಾವು ಅನೇಕ ವಿಧದ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದು, ಅಲ್ಲಲ್ಲಿ ಸಮಾಜದ ಸರ್ವರಿಂದ ಅನೇಕ ಸಹಾಯ ಸಹಕಾರಗಳನ್ನು ಪಡೆದು ಪಿ.ಎಚ್ಡಿ. ಉಚ್ಚ ಪದವಿ ವಿಭೂಷಿತರಾಗಿದ್ದನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಶಿಕ್ಷಣವೇ ಶಕ್ತಿ ಎಂಬುದನ್ನರಿತು ಕಾಶಿ ಜಗದ್ಗುರು ಪೀಠಾರೋಹಣ ಮಾಡಿದ ದಿನದಿಂದಲೇ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿತ್ತು ಎಂದಿದ್ದಾರೆ.
*ಭಕ್ತಗಣದ ಕಾಣಿಕೆ ಮೀಸಲು* : ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಅನೇಕ ಪಟ್ಟಣ ಮತ್ತು ಮಹಾನಗರಗಳಲ್ಲಿ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆಯ ತಪೋನುಷ್ಠಾನ ಕೈಕೊಂಡಾಗ, ಪ್ರತೀ ವರ್ಷದ ತಮ್ಮ ಜನ್ಮ ದಿನದ ಸಂದರ್ಭದಲ್ಲಿ ಹಾಗೂ ೨೦೦೭ರಲ್ಲಿ ಜರುಗಿದ ತಮ್ಮ ಷಷ್ಠ್ಯಬ್ದಿಪೂರ್ಣ ಸಮಾರಂಭದಲ್ಲಿ ಭಕ್ತಗಣ ನೀಡಿದ ಗುರುಕಾಣಿಕೆಯ ಸಂಪೂರ್ಣ ಹಣವನ್ನು ಈ ಶಿಷ್ಯವೇತನ ಯೋಜನೆಗೆ ಮೀಸಲಿರಿಸಿ, ಇದನ್ನು ರಾಷ್ಟ್ರೀಕೃತ ಬ್ಯಾಂಕ್ದಲ್ಲಿ ಶಾಶ್ವತ ನಿಧಿಯನ್ನಾಗಿ ಇಡಲಾಗಿದೆ. ಈ ನಿಧಿಯಿಂದ ಪ್ರಾಪ್ತವಾಗುವ ಬಡ್ಡಿ ಹಣದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಆರಂಭಿಸಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ ೧೨ ಸಾವಿರ ರೂಪಾಯಿಯಂತೆ ಅವರ ವಿದ್ಯಾರ್ಜನೆಯ ವ್ಯಾಸಂಗ ಪ್ರಕ್ರಿಯೆ ಸಂಪನ್ನಗೊಳ್ಳುವವರೆಗೆ ಈ ಶಿಷ್ಯವೇತನ ಕೊಡಲಾಗುತ್ತಿದೆ. ಈ ತನಕ ಸುಮಾರು 10 ಸಾವಿರಕ್ಕೂ ಅಧಿಕ ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದವರು ತಿಳಿಸಿದ್ದಾರೆ.
೧೬ ಲಕ್ಷ ರೂ.ಗಳ ನಿಧಿ: ಪುಣೆ ಮಹಾನಗರದ ಬಳಿ ಚಿಂಚೋಡ ಪರಿಸರದಲ್ಲಿ ನಡೆದ ಪ್ರಸಕ್ತ ವರ್ಷದ ಶ್ರಾವಣ ಮಾಸದ ತಪೋನುಷ್ಠಾನದ ಸಂದರ್ಭದಲ್ಲಿ ಒಟ್ಟು 16 ಲಕ್ಷ ರೂಪಾಯಿಗಳ ಗುರು ಕಾಣಿಕೆ ಲಭಿಸಿದ್ದು, ಈ 16 ಲಕ್ಷ ರೂ.ಗಳನ್ನು ಬಡ ವಿದ್ಯಾರ್ಥಿಗಳ ಶಿಷ್ಯವೇತನ ಯೋಜನೆಗೆ ಖಾಯಂ ಠೇವಣಿಯಾಗಿ ತೊಡಗಿಸಲಾಗಿದೆ. ಇದೇ ಸಂಧರ್ಭದಲ್ಲಿ 8 ಜನ ಶ್ರೀಮಂತ ಸದ್ಭಕ್ತರು ‘ಕಾಶಿ ಜಗದ್ಗುರು ಪೀಠದ ಶಿಷ್ಯವೇತನ ಯೋಜನೆ’ಗೆ ಸ್ಪಂದನೆ ನೀಡಿ ಪ್ರತಿ ವರ್ಷ ಒಬ್ಬ ಬಡ ವಿದ್ಯಾರ್ಥಿಗೆ 12 ಸಾವಿರ ರೂಪಾಯಿಗಳಂತೆ ಶಿಷ್ಯವೇತನ ನೀಡಿ ನಿರಂತರ ವಿದ್ಯಾವಿಕಾಸದ ಸೇವೆಗೆ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ.
*ನೂತನ ಜಗದ್ಗುರುಗಳ ಆಸಕ್ತಿ* : ಕಾಶಿ ಜಗದ್ಗುರು ಪೀಠದ ಶಿಷ್ಯವೇತನ ಯೋಜನೆಯನ್ನು ನಿರಂತರವಾಗಿ ಎಂದಿನಂತೆ ಮುಂದುವರೆಸಲು ಕಾಶಿ ಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಬಹಳಷ್ಟು ಆಸಕ್ತಿಯನ್ನು ಹೊಂದಿದ್ದು, ತಾವೂ ಸಹ ಈ ಯೋಜನೆಯ ಶಾಶ್ವತ ನಿಧಿಗೆ ಭಕ್ತರ ಕಾಣಿಕೆಯ ಹಣ ಸೇರಿಸುವುದಾಗಿ ಭರವಸೆ ನೀಡಿದ್ದಾರೆ.
ಎಷ್ಟೋ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಮೆಡಿಕಲ್ ಹಾಗೂ ಇಂಜನೀಯರಿಂಗ್ ಪದವಿಯ ವ್ಯಾಸಂಗವನ್ನು ಮೊಟಕುಗೊಳಿಸಿರುವ ನೋವಿನ ಸಂಗತಿಗಳು ತಮ್ಮ ಅವಗಾಹನೆಗೆ ಬಂದಿದ್ದು, ಇಂತಹ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸುವಲ್ಲಿ ಅಧಿಕ ಮೊತ್ತವನ್ನು ಈ ಶಿಷ್ಯವೇತನ ಯೋಜನೆಗೆ ಸೇರಿಸಲು ಸಂಕಲ್ಪ ಮಾಡಿದ್ದೇವೆ. ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳ ಸಮಾಜದ ಮುಖಂಡರು ಕಾಶಿ ಜಗದ್ಗುರು ಪೀಠದ ಶಿಷ್ಯವೇತನ ಯೋಜನೆಯ ಯಶಸ್ಸಿಗಾಗಿ ಅಧಿಕ ಮೊತ್ತದ ಹಣಕಾಸನ್ನು ಒದಗಿಸಲು ಇಲ್ಲವೇ ಶಿಷ್ಯವೇತನ ನೀಡಿಕೆಯ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆ ಬರಬೇಕೆಂದು ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶಯ ವ್ಯಕ್ತಪಡಿಸಿದ್ದಾರೆ. ಅರ್ಜಿ ಸಲ್ಲಿಕೆ ವಿಧಾನ :ಮೆಡಿಕಲ್ ಹಾಗೂ ಇಂಜನೀಯರಿಂಗ್ ಪದವಿಯ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಮತ್ತು ಅತೀ ಕಡು ಬಡತನದ ಇತರೇ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ತಮ್ಮ ಭಾಗದ ಓರ್ವ ವೀರಶೈವ ಮಠಾಧೀಶರ ಶಿಫಾರಸ್ಸು ಪತ್ರ ಪಡೆದುಕೊಂಡು ತಮ್ಮ ಸ್ವವಿವರಗಳೊಂದಿಗೆ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಬೇಕು. SECRETARY, SHREE JAGADGURU VISHWARADHYA JNAANA SHIMHAASANA MAHAAPEETHA, JANGAMAWAADIMATHA, VARANASHI – 221001 (UTTARAPRADESH) ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.