ಆರೋಗ್ಯ ಮಾಹಿತಿ(ವಿಶ್ವಕನ್ನಡಿಗ ನ್ಯೂಸ್): ಇದೊಂದು ವೈರಾಣುವಿನಿಂದ ಹರಡುವ ಜ್ವರವಾಗಿದ್ದು, ಇತ್ತೀಚೆಗೆ ಕೇರಳದ ಕೊಚಿನ್ ನಗರದಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು, ಜನರು ಒಂದು ರೀತಿಯ ಆತಂಕಕ್ಕೆ ಒಳಗಾಗಿದ್ದಾರೆ ಎಂದೂ ವರದಿಗಳು ತಿಳಿಸಿದೆ. ವೆಸ್ಟ್ ನೈಲ್ ವೈರಾಣುವಿನಿಂದ ಹರಡುವ ಈ ಜ್ವರ, ಪ್ಲಾವಿ ವೈರಸ್ ಗುಂಪಿಗೆ ಸೇರಿ ಇದೇ ಗುಂಪಿಗೆ ಸೇರಿದ ವೈರಾಣುವಿನಿಂದ ಝಿಕಾ ಜ್ವರ, ಡೆಂಗ್ಯೂ ಜ್ವರ ಮತ್ತು ಹಳದಿ ಜ್ವರ ಹರಡುತ್ತದೆ ಎಂದು ತಿಳಿದು ಬಂದಿದೆ. ಕ್ಯೂಲೆಕ್ಸ್ ಎಂಬ ಸೊಳ್ಳೆಯಿಂದ ಹರಡುವ ವೈರಾಣು, ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ. ಇದೊಂದು ಒಂದೇ ಒಂದು ಆರ್ಎನ್ಎ ಎಂಬ ವರ್ಣ ತಂತುವಿನ ಎಳೆಯಿಂದ ಕೂಡಿರುವ ವೈರಾಣು ಆಗಿರುತ್ತದೆ. ಪ್ರತಿ 5 ರಲ್ಲಿ ಒಬ್ಬ ಮಂದಿ ಈ ವೈರಾಣುವಿಗೆ ತುತ್ತಾದಾಗ ಜ್ವರ ಹಾಗೂ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಪ್ರತಿ 150 ರಲ್ಲಿ ಒಬ್ಬರಿಗೆ ಈ ವೈರಾಣು ಜ್ವರ ಮಾರಣಾಂತಿಕವಾಗಿ ಹರಡುತ್ತದೆ. 1999 ರಲ್ಲಿ ಮೊದಲ ಬಾರಿಗೆ ಅಮೇರಿಕಾದಲ್ಲಿ ಈ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿತು.
ರೋಗದ ಲಕ್ಷಣಗಳು: ಹೆಚ್ಚಿನ ಎಲ್ಲಾ ರೋಗಿಗಳಲ್ಲಿ ಸೊಳ್ಳೆ ಕಡಿತದ ಬಳಿಕ 3 ರಿಂದ 15 ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು 3 ರಿಂದ 6 ದಿನಗಳ ವರೆಗೆ ಇರುತ್ತದೆ. ಕೇವಲ 10 ಶೇಕಡಾ ಮಂದಿಯಲ್ಲಿ ತೀವ್ರವಾಗಿ ಕಾಡಿ ವಾರಗಟ್ಟಲೆ ಸುಸ್ತು, ಆಯಾಸ ಇರುತ್ತದೆ. ಸಾಮಾನ್ಯವಾಗಿ ಜ್ವರ, ತಲೆನೋವು, ಮೈ ಕೈ ನೋವು, ಸುಸ್ತು, ವಾಂತಿ, ವಾಕರಿಕೆ, ಆಯಾಸ, ಮೈ ಮೇಲೆ ಕೆಂಪು ಗುಳ್ಳೆಗಳು ಸಾಮಾನ್ಯವಾಗಿ ಹೊಟ್ಟೆಯ ಮತ್ತು ಎದೆಯ ಸುತ್ತ ಮುತ್ತ ಕಾಣಿಸಿಕೊಳ್ಳುತ್ತದೆ.
ದುಗ್ಧ ಗ್ರಂಥಿಗಳು ಊದಿಕೊಳ್ಳುತ್ತದೆ. ಹಿರಿಯ ನಾಗರೀಕರಲ್ಲಿ ಮತ್ತು ದೇಹದ ರಕ್ಷಣಾ ವ್ಯವಸ್ಥೆ ಕುಸಿದ ವ್ಯಕ್ತಿಗಳಲ್ಲಿ ಈ ಜ್ವರ ತೀವ್ರವಾಗಿ ಪ್ರಕಟಗೊಳ್ಳುತ್ತದೆ. ಇಂತಹ ರೋಗಿಗಳಲ್ಲಿ ಮೇಲೆ ತಿಳಿಸಿದ ಲಕ್ಷಣಗಳ ಜೊತೆಗೆ, ಸ್ನಾಯುಗಳಲ್ಲಿ ನೋವು ಮತ್ತು ಯಾತನೆ, ಅಪಸ್ಮಾರ, ದೃಷ್ಟಿ ಮಂದವಾಗುವುದು, ಗೊಂದಲ, ದೇಹ ಸ್ವಾದೀನ ಕಳೆದುಕೊಳ್ಳುವುದು ದೇಹದ ಕೆಲವು ಭಾಗಗಳು ನಿಶ್ಶಲವಾಗಿ ನರದ ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಮುಂದುವರಿದ ಹಂತದಲ್ಲಿ ಕೋಮಾ ಸ್ಥಿತಿಗೆ ತೆರೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಅಂತಿಮ ಹಂತದಲ್ಲಿ ಮೆದುಳು ನಿಷ್ಕ್ರಿಯವಾಗಬಹುದು.
ಹೇಗೆ ಹರಡುತ್ತದೆ? ಕ್ಯೂಲೆಕ್ಸ್ ಸೊಳ್ಳೆಗಳು ಈ ವೆಸ್ಟ್ ನೈಲ್ ವೈರಾಣುವಿನಿಂದ ಸೋಂಕಿತ ಹಕ್ಕಿಗಳನ್ನು ಕಡಿಯುತ್ತದೆ. ಆಗ ವೈರಾಣು ಸೊಳ್ಳೆಗಳ ದೇಹಕ್ಕೆ ಸೇರುತ್ತದೆ. ಬಳಿಕ ಈ ಸೋಂಕಿತ ಸೊಳ್ಳೆ ಮನುಷ್ಯರಿಗೆ ಅಥವಾ ಇತರ ಪ್ರಾಣಿಗಳಿಗೆ ಕಡಿದಾಗ, ವೈರಾಣು ಅವರ ದೇಹಕ್ಕೆ ಸೇರಿಕೊಳ್ಳುತ್ತದೆ. ಇದಲ್ಲದೆ ಅಸಮರ್ಪಕ ರಕ್ತಪೂರಣ, ಅಂಗಾಗ ಜೋಡನೆ ದಾನ, ಎದೆ ಹಾಲೂಡಿಸುವಿಕೆ ಮತ್ತು ಗರ್ಭ ಧರಿಸಿದಾಗ ತಾಯಿಯಿಂದ ಮಗುವಿಗೆ ವೈರಾಣು ಬರುವ ಸಾಧ್ಯತೆ ಇರುತ್ತದೆ.
ಇದು ಅತಿ ವಿರಳ ಸಾಧ್ಯತೆ ಆಗಿರುತ್ತದೆ. ಆದರೆ ದೈಹಿಕ ಸ್ವರ್ಶ, ಕಿಸ್ಸಿಂಗ್ ಅಥವಾ ತಟ್ಟಿ ಬಟ್ಟೆ ಬಳಸಿ ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಹರಡುವುದಿಲ್ಲ. ಅದೇ ರೀತಿ ಸೋಂಕಿತ ಸೊಳ್ಳೆ ಕಡಿದ ಎಲ್ಲಾ ವ್ಯಕ್ತಿಗಳಿಗೆ ಈ ಜ್ವರ ಬರಲೇ ಬೇಕೆಂದಿಲ್ಲ. ಕೇವಲ ಒಂದು ಶೇಕಡಾ ಜನರಲ್ಲಿ ಮಾರಣಾಂತಿಕವಾಗಿ ಕಾಡುತ್ತದೆ.
ಯಾರಿಗೆ ತೀವ್ರವಾಗಿ ಕಾಡುತ್ತದೆ? ಕಿಡ್ನಿ ತೊಂದರೆ ಇರುವವರು, ಮಧುಮೇಹ ರೋಗಿಗಳು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು, ಹೃದಯ ತೊಂದರೆ ಇರುವವರು, ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿರುವವರು, ಅಸ್ಥಿಮಜ್ಜೆ ಕಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು, ಅತಿಯಾಗಿ ಸ್ಟೀರಾಯ್ಡ್ ಸೇವನೆ ಮಾಡುವವರು, ದೇಹದ ರಕ್ಷಣಾ ವ್ಯವಸ್ಥೆ ಕುಸಿದÀ ವ್ಯಕ್ತಿಗಳು ಹಾಗೂ ಅರುವತ್ತು ವರ್ಷ ದಾಟಿದ ವ್ಯಕ್ತಿಗಳಲ್ಲಿ ಈ ವೆಸ್ಟ್ ನೈಲ್ ವೈರಾಣು ಹೆಚ್ಚು ತೀವ್ರವಾಗಿ ಕಾಡುತ್ತದೆ ಮತ್ತು ಹೆಚ್ಚಿನ ರೋಗ ಲಕ್ಷಣಗಳು ಪ್ರಾರಂಭಗೊಳ್ಳುತ್ತದೆ.
ಪತ್ತೆ ಹಚ್ಚುವುದು ಹೇಗೆ? ಸಾಮಾನ್ಯವಾಗಿ ರಕ್ತ ಪರೀಕ್ಷೆ ಮಾಡಿ ಈ ವೆಸ್ಟ್ ನೈಲ್ ವೈರಾಣುವಿನ ಆಂಟಿಬಾಡಿಗಳನ್ನು ರಕ್ತದಲ್ಲಿ ಪತ್ತೆ ಹಚ್ಚಿ ರೋಗವನ್ನು ಪತ್ತೆ ಹಚ್ಚುತ್ತಾರೆ. ಇದರ ಜೊತೆಗೆ ಸೋಂಕಿತ ಲಕ್ಷಣಗಳನ್ನು ತಾಳೆ ಹಾಕಲಾಗುತ್ತದೆ. ಗೊಂದಲ, ವಿಪರೀತ ತಲೆ ನೋವು ಹಾಗೂ ಮೆದುಳು ಸಂಬಂಧಿ ಲಕ್ಷಣಗಳು ಕಂಡು ಬಂದಲ್ಲಿ ಲಂಬಾರ್ ಪಂಕ್ಚÀರ್ ಎಂಬ ಪರೀಕ್ಷೆ ಮಾಡಲಾಗುತ್ತದೆ. ಬೆನ್ನು ಹುರಿಯ ಭಾಗದಲ್ಲಿ ಸಣ್ಣ ಸೂಜಿ ಹಾಕಿ ಮೆದುಳಿನ ಸುತ್ತಲಿನ ದ್ರವ್ಯವನ್ನು ತೆಗೆದು ಪರೀಕ್ಷೆ ಮಾಡಲಾಗುತ್ತದೆ ಮತ್ತು ಆ ದ್ರವ್ಯದಲ್ಲಿ ವೈರಾಣು ಆಂಟಿಬಾಡಿ ಪತ್ತೆ ಮಾಡುತ್ತಾರೆ ಮತ್ತು ಹೆಚ್ಚಿದÀ ಬಿಳಿ ರಕ್ತಕಣಗಳನ್ನು ಪತ್ತೆ ಹಚ್ಚುತ್ತಾರೆ. ಅಗತ್ಯವಿದ್ದಲ್ಲಿ ಮೆದುಳಿಗೆ ಉಂಟಾಗುವ ಹಾನಿಯನ್ನು ಒಖಖಿ ಮತ್ತು ಅಖಿ ಸ್ಕ್ಯಾನ್ ಮಾಡಿ ತಿಳಿಯುತ್ತಾರೆ
ಚಿಕಿತ್ಸೆ ಹೇಗೆ? ಈ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಲಸಿಕೆಯೂ ಇರುವುದಿಲ್ಲ. ರೋಗದ ಲಕ್ಷಣಗಳನ್ನು ನೋಡಿಕೊಂಡು ಜ್ವರ ನಿಯಂತ್ರಣ ಹಾಗೂ ರೋಗ ನಿರೋಧಕ ಔಷಧಿ ನೀಡಲಾಗುತ್ತದೆ. ತಲೆ ನೋವು, ಸ್ನಾಯು ನೋವು, ಮೈ ಕೈ ನೋವು ಇವುಗಳ ತೀವ್ರತೆಗೆ ಅನುಗುಣವಾಗಿ ಔಷಧ ನೀಡುತ್ತಾರೆ. ಇನ್ನು ವಿಪರೀತ ಸುಸ್ತು, ಆಯಾಸ ಇದ್ದಲ್ಲಿ ರಕ್ತನಾಳಗಳ ಮುಖಾಂತರ ಗ್ಲೂಕೋಸ್ ದ್ರಾವಣ ನೀಡಲಾಗುತ್ತದೆ.
ತೀವ್ರವಾದ ಜ್ವರ ಹಾಗೂ ಸುಸ್ತು ಇದ್ದಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ನೀಡುತ್ತಾರೆ. ಹೆಚ್ಚಿನ ಎಲ್ಲಾ ರೋಗಿಗಳಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದ ರೋಗಿಗಳಲ್ಲಿ ಮೆದುಳಿನ ಉರಿಯೂತ ಕಂಡುಬಂದಲ್ಲಿ ಇಂಟರ್ ಫೆರಾನ್ ಚಿಕಿತ್ಸೆ, ಸ್ಟೀರಾಯ್ಡ್ ಔಷಧಿ ಮತ್ತು ಮೆದುಳಿನ ಉರಿಯೂತ ಕಡಿಮೆ ಮಾಡುವ ಔಷಧಿ ನೀಡುತ್ತಾರೆ. ರೋಗದ ಚರಿತ್ರೆ, ರೋಗದ ಲಕ್ಷಣಗಳು, ರೋಗದ ತೀವ್ರತೆ ಮತ್ತು ರೋಗಿಯ ದೇಹದ ಸ್ಥಿತಿಗೆ ಅನುಗುಣವಾಗಿ ಚಿಕಿತ್ಸೆಯ ಪ್ರಮಾಣ ಮತ್ತು ಚಿಕಿತ್ಸೆಯ ಗತಿಯನ್ನು ವೈದ್ಯರೇ ನಿರ್ಧರಿಸುತ್ತಾರೆ
ಕೊನೆ ಮಾತು: ವೆಸ್ಟ್ ನೈಲ್ ಜ್ವರ ಸಾಂಕ್ರಾಮಿಕ ರೋಗವಲ್ಲ. ಕ್ಯೂಲೆಕ್ಸ್ಸ್ ಸೊಳ್ಳೆ ಕಡಿದ ಎಲ್ಲರಿಗೂ ಜ್ವರ ಬರಬೇಕೆಂದಿಲ್ಲ. 70 ರಿಂದ 80 ಶೇಕಡಾ ರೋಗಿಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. 20 ಶೇಕಡಾ ರೋಗಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕೇವಲ ಒಂದು ಶೇಕಡಾ ರೋಗಿಗಳು ಮಾತ್ರ ತೀವ್ರವಾಗಿ ಕಾಡಿ ಮಾರಣಾಂತಿಕವಾಗಿ ಕಾಡಬಹುದು. ಲಸಿಕೆ ಇಲ್ಲದ, ಚಿಕಿತ್ಸೆಗೆ ಸ್ವಂದಿಸುವ, ತಡೆಗಟ್ಟಬಹುದಾದ ರೋಗವಾಗಿದ್ದು ಸೊಳ್ಳೆ ಕಚ್ಚದಂತೆ ಜಾಗ್ರತೆ ವಹಿಸುವುದರಲ್ಲಿ ಜಾಣತಣ ಅಡಗಿದೆ.
ಡಾ|| ಮುರಲೀ ಮೋಹನ್ಚೂಂತಾರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.