(www.vknews.in) : ಭಾರತ 565 ರಾಜ್ಯಗಳನ್ನು ಒಳಗೊಂಡಿತ್ತು. ನೆರೆಹೊರೆ ರಾಜ್ಯಗಳ ಜೊತೆ ಯುದ್ಧಗಳು ನಡೆಯುತ್ತಲೇ ಇದ್ದವು. ಒಬ್ಬ ದೊರೆ ಬೇರೆ ದೊರೆಯನ್ನು ಸೋಲಿಸಿದರೆ ವೀರಾಧಿವೀರನ ಬಿರುದು ಪಡೆಯುತ್ತಿದ್ದ. ಯುದ್ಧದಲ್ಲಿ ಸೈನಿಕರ ಪ್ರಾಣ ಹೋಗದೇ ಯುದ್ಧ ಗೆಲ್ಲಲು ಸಾಧ್ಯವೇ ? ಒಬ್ಬ ದೊರೆ ಗೆದ್ದರೆ, ಮತ್ತೊಬ್ಬ ದೊರೆ ಸೋಲಲೇ ಬೇಕು. ಇದೇ ಯುದ್ಧದ ನಿಯಮ.
ಒಬ್ಬ ರಾಜ ತನ್ನ ಸೈನ್ಯಬಲದಿಂದ ಯುದ್ಧ ಚಾಣಾಕ್ಷತನದಿಂದ ತನ್ನ ರಾಜ್ಯವನ್ನು ಎಷ್ಟು ವಿಸ್ತಾರ ಮಾಡಿಕೊಳ್ಳುತ್ತಾನೋ ಆತ ಅಷ್ಟೇ ಪ್ರಬಲ ರಾಜನಾಗುತ್ತಾನೆ. ಯುದ್ಧದಲ್ಲಿ ಲಕ್ಷಾಂತರ ಮಹಿಳೆಯರು ವಿಧವೆಗಳಾಗುವುದು, ಮಕ್ಕಳು ತಬ್ಬಲಿಗಳಾಗುವುದುಂಟು. ಭಾರತ ಭೂಮಿ ಕೋಟ್ಯಂತರ ಸಾವುನೋವುಗಳನ್ನು ಕಂಡಿದೆ. ಹಿಂದಿನ ಕಾಲದ ಯುದ್ಧಗಳ ಬಗ್ಗೆ ಅನೇಕ ಪುಸ್ತಕಗಳು ಬೆಳಕನ್ನು ಚೆಲ್ಲುತ್ತವೆ. ಪೂರ್ವಪ್ರಧಾನಮಂತ್ರಿ ಮನಮೋಹನ ಸಿಂಗ್ ರವರ ಪುತ್ರಿ ದಮನ್ ಸಿಂಗ್ “ಏನ್ಷಿಯನ್ ಇಂಡಿಯನ್ ವಾರ್ಫೇರ್” ಹೆಸರಿನ ಪುಸ್ತಕವನ್ನು ಬರೆದಿದ್ದಾರೆ. ಅವರ ಪ್ರಕಾರ ಶಾಂತಿಗಿಂತ ಈ ನೆಲೆಯಲ್ಲಿ ರಕ್ತ ಹರಿದಿರುವುದೇ ಹೆಚ್ಚು.
ಮುಸಲ್ಮಾನರು, ಬ್ರಾಹ್ಮಣರು, ಕ್ರೈಸ್ತರು ಮತ್ತು ಇನ್ನಿತರರು ಭಾರತಕ್ಕೆ ಬಂದರು. ಅವರ ಕಲೆ, ಸಂಸ್ಕೃತಿ, ಧರ್ಮ, ಆಚಾರವಿಚಾರ ಇತ್ಯಾದಿ ಎಲ್ಲವೂ ಈ ಮಣ್ಣಲ್ಲಿ ಬೇರೂರಿತು. ಮೊಘಲರ ಸಾಮ್ರಾಜ್ಯ ಅಫ್ಘಾನಿಸ್ತಾನದ ಕಾಬೂಲಿನಿಂದ ಕರ್ನಾಟಕ ಸಿರಾ ವರೆಗೆ ಹರಡಿತ್ತು. ಭಾರತ ಓರ್ವ ಚಕ್ರವರ್ತಿಯ ಕೆಳಗೆ ಅಖಂಡಭಾರತವಾಯಿತು. 565 ರಾಜ್ಯಗಳ ಜನಸಂಖ್ಯೆ ಒಂದು ದೇಶವಾದರೆ ಅದರ ಒಟ್ಟಾರೆ ಜನಸಂಖ್ಯೆ 160 ಕೋಟಿಯಾಗುವುದರಲ್ಲಿ ಸಂಶಯವೇ ಇಲ್ಲ. ಯುದ್ಧಗಳಲ್ಲಿ ಸೈನಿಕರು ಬಲಿಯಾಗುತ್ತಿದ್ದರು. ಸೈನಿಕರು ದೇಶದ ಪ್ರಜೆಗಳಲ್ಲವೇ ? ಜನಸಂಖ್ಯೆ ಕಡಿಮೆಯಾಗುವುದು ಸಹಜ. ಬಹುಶಃ ಆ ಕಾಲದಲ್ಲಿ ಒಂದು ಮನೆಗೆ ಒಂದೇ ಮಗು ಸಾಕು ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಇಂದು ಭಾರತದಲ್ಲಿ 1000 ಗಂಡಸರಿಗೆ 960 ಹೆಣ್ಣುಗಳು ಮಾತ್ರ ಲಭ್ಯ. ಮುಂದಿನ ದಿನಗಳಲ್ಲಿ ಈ ಅನುಪಾತ ಇನ್ನೂ ಹೆಚ್ಚಾಗಬಹುದು. ಮೂರನೇ ಮಹಾ ಯುದ್ಧ ಆದರೆ ಏನು ಗತಿ ? ಆಗ ಅನುಪಾತ ಉಲ್ಟಾ ಆಗಬಹುದೇನೋ…!
ಕಾಲ ಉರುಳಿದಂತೆ ಪ್ರಪಂಚದ ಚರಿತ್ರೆ ಬದಲಾಗುತ್ತಾ ಹೋಯಿತು. ಆ ಚರಿತ್ರೆಯ ಪುಟಗಳಲ್ಲಿ ಭಾರತವೂ ಒಂದು. ಮೊಘಲ್ ಸಾಮ್ರಾಜ್ಯದಲ್ಲಿ ಭಾರತ ಅಖಂಡಭಾರತವಾಗಿತ್ತು. ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ 24 ರಷ್ಟು ಇತ್ತು. ಪುನಃ ಇತಿಹಾಸದಲ್ಲಿ ಬದಲಾವಣೆಗಳಾಯಿತು. ಬ್ರಿಟಿಷರು ಭಾರತಕ್ಕೆ ಬಂದರು. 1947 ರಲ್ಲಿ ಭಾರತದ ಜಿಡಿಪಿ ಶೇ 4 ಕ್ಕೆ ಇಳಿಯಿತು. ಮೊಘಲರು ಇಲ್ಲೇ ಮಣ್ಣುಪಾಲಾದರು. ಬ್ರಿಟಿಷರು ಭಾರತ ಬಿಟ್ಟು ಹೊರಟುಹೋದರು. ಮುಸಲ್ಮಾನರು ಪಾಕಿಸ್ತಾನಕ್ಕೆ ಹೊರಟುಹೋದರು. ಉಳಿದ ಮುಸಲ್ಮಾನರು ಮತ್ತು ಬ್ರಾಹ್ಮಣರು ಇದೇ ನಮ್ಮ ತಾಯ್ನಾಡು ಎಂದು ಒಪ್ಪಿಕೊಂಡು ಬದುಕತೊಡಗಿದರು.
ಸಾವಿರಾರು ವರ್ಷಗಳು ಕಳೆದುಹೋಗಿವೆ. ಆದರೆ ಧರ್ಮಗಳ ನಡುವಿನ ತಿಕ್ಕಾಟ ಮಾತ್ರ ನಿಂತಿಲ್ಲ. ಜನರನ್ನು ಶಾಂತಿಯಿಂದ ಬದುಕಲು ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಬಿಡುತ್ತಿಲ್ಲ. ಅಶೋಕನ ಕಾಲದಲ್ಲಿ ಬೌದ್ಧ ಧರ್ಮ ಬೆಳೆದರೂ ಕಾಲ ಉರುಳಿದಂತೆ ಭಾರತದಲ್ಲಿ ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಯಿತು. ಬೌದ್ಧರು ಭಾರತ ನಮ್ಮ ಮಾತೃ ಭೂಮಿ ಎನ್ನುತ್ತಾರೆ. ಹಿಂದೂ ಧರ್ಮದ ಲಾಲನೆ ಪಾಲನೆ ಮಾಡಿ ಉಳಿಸಿಕೊಂಡು ಬಂದಿರುವುದು ನಾವೇ ಈ ದೇಶದ ಅಧಿಪತಿಗಳು ಎಂದು ಬ್ರಾಹ್ಮಣರು ಹೇಳುತ್ತಾರೆ. ಮುಸಲ್ಮಾನರು ನಾವು ಪಾಕಿಸ್ತಾನಕ್ಕೆ ಧಿಕ್ಕರಿಸಿ ಭಾರತವೇ ನಮ್ಮ ತಾಯ್ನಾಡು, ನಮ್ಮ ಸಾವು ಬದುಕು ಈ ಮಣ್ಣಲ್ಲೇ ಎನ್ನುತ್ತಾರೆ.
ಸ್ವಾತಂತ್ರ್ಯದ ನಂತರ ಪಟೇಲರು ಎಲ್ಲಾ ರಾಜ್ಯಗಳನ್ನು ಒಗ್ಗೂಡಿಸಿ ಭಾರತ ಸರ್ಕಾರಕ್ಕೆ ಅಧೀನಗೊಳಿಸಿದರು. ಕೆಲವು ರಾಜ್ಯಗಳು ಭಾರತದಲ್ಲಿ ಸೇರಲು ನಿರಾಕರಿಸಿದಾಗ ಬಲ ಪ್ರಯೋಗವೂ ಮಾಡಬೇಕಾಯಿತು. ನೂರಾರು ಭಾಷೆಗಳು, ಅವರವರ ದೇವರುಗಳು, ಸಾವಿರಾರು ಜಾತಿ ಉಪಜಾತಿಗಳು ಈಗಲೂ ಭಾರತದಲ್ಲಿ ತನ್ನದೇ ಆದ ರೀತಿಯಲ್ಲಿ ಉಸಿರಾಡುತ್ತಿವೆ. ಸಂವಿಧಾನ ಎಂಬ ಕಾನೂನಿನ ಪುಸ್ತಕದಲ್ಲಿ ಎಲ್ಲರೂ ಶಾಂತಿಯಿಂದ ಬಾಳಿ ಬದುಕುವ ಹಕ್ಕಿದೆ. ಆದರೆ ದಲಿತರು ನಮಗೆ ನ್ಯಾಯ ಸಿಗುತ್ತಿಲ್ಲವೆಂದು ಧರ್ಮಾಂತರ ಗೊಳ್ಳುತ್ತಿದ್ದಾರೆ. ಭಾರತದಲ್ಲಿ ಇಸ್ಲಾಂ ಧರ್ಮ, ಕ್ರಿಸ್ತಧರ್ಮ ಮತ್ತು ಬೌದ್ಧ ಧರ್ಮಗಳಲ್ಲಿ ಜನರು ಸೇರಿಕೊಳ್ಳಲು ಅಸ್ಪೃಶ್ಯತೆಯೂ ಒಂದು ಮುಖ್ಯ ಕಾರಣ.
ದ್ರಾವಿಡರು ನಾವು ಭಾರತದ ಮೂಲ ನಿವಾಸಿಗಳು ಬ್ರಾಹ್ಮಣರ ಆಟ ಮುಂದಿನ 20 ವರ್ಷಗಳಲ್ಲಿ ಬುಡಸಮೇತ ಕಿತ್ತೊಗೆಯುತ್ತೇವೆ ಎನ್ನುವುದುಂಟು. ಬಹುಶಃ ಜನರು ದಂಗೆ ಏಳಬಹುದು. ಕೋಮುಗಲಭೆಗಳಾಗಬಹುದು, ರಕ್ತದ ಕೋಡಿಗಳು ಹರಿಯಬಹುದು. “ನ್ಯೂ ವರ್ಲ್ಡ್ ಆರ್ಡರ್” ಪ್ರಕಾರ ಎಲ್ಲವೂ ಸರ್ವನಾಶವಾಗಿ ಹೊಸಯುಗ ಪ್ರಾರಂಭವಾಗಬಹುದು. ಇಂದಿನ ಭಾರತದ ಪರಿಸ್ಥಿತಿ ಗಮನಿಸಿದರೆ ಮುಂದಿನ 50 ವರ್ಷಗಳಲ್ಲಿ ಭಾರತ ವಿಶ್ವಗುರು ಆಗುತ್ತದೋ ಅಥವಾ ಅಂತರ್ಯುದ್ಧ ಸಿವಿಲ್ ವಾರ್ ಅಥವಾ ಅಂತರರಾಷ್ಟ್ರೀಯ ಯುದ್ಧಗಳಿಗೆ ಬಲಿಪಶುಯಾಗುತ್ತದೋ ಗೊತ್ತಿಲ್ಲ. “ಎಂಡ್ ಆಫ್ ಟೈಮ್ “ಹತ್ತಿರವಿದೆ ಎಂದು ಮಾಧ್ಯಮದವರು ಹೆದರಿಸುತ್ತಿರುತ್ತಾರೆ. ನಮ್ಮ ಭಾರತದ ಶಾಂತಿ ಯಾರೂ ಕದಡದಿದ್ದರೆ ಸಾಕು.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.