(www.vknews.in)
ಗಂಧದ ಗುಡಿ ಚಂದದ ನುಡಿ ಅಂದದ ಸೊಬಗಿನ ಕರುನಾಡು ಜ್ಞಾನ ವಿಜ್ಞಾನ ಕಲೆ ಸಂಸ್ಕೃತಿಯ ತವರೂರು ನಮ್ಮಯ ಹೊನ್ನಾಡು
ತಾಯಿ ಭಾರತಿಯ ನೆಚ್ಚಿನ ಕುವರಿ ಭವ್ಯ ಪರಂಪರೆಯ ಸಿರಿಗೂಡು ಜ್ಞಾನ ಪೀಠಿಗರ ನಂದನವನವಿದು ಕನ್ನಡಿಗರ ಹೆಮ್ಮೆಯ ತಾಯ್ನಾಡು
ಸಗ್ಗದ ವೈಭೋಗಕೆ ಸರಿಸಮ ಕಬ್ಬಿಗ ಕೋಗಿಲೆಗಳ ನೆಲೆವೀಡು ಜೋಗದ ಸಿರಿ ಅರಮನೆ ಐಸಿರಿ ಸವಿ ಸೊಗಡುಗಳ ರಸಗೂಡು
ನದಿ ನದಂಗಳ ಬಳಕುವ ಲಾಸ್ಯದ ಗಿರಿಕಾನನವಿಲ್ಲಿ ಸಮ್ಮೋಹಕವು ತೊನೆಯುವ ಸಿರಿ ಧಾನ್ಯದ ಕಣಜವು ಕಣ್ಮನವಿಲ್ಲಿ ಸೆಳೆಯುವವು
ಜೀವರಾಶಿಗಳು ಖಗಮೃಗದಾಗರ ಖನಿಜ ಕನಕಗಳ ನೆಲೆಯೇಯಿದು ಜಾನಪದ ಶಾಸ್ತ್ರೀಯ ನೃತ್ಯ ಗಾನದ ಕೋವಿದರ ಹಂದರವೇಯಿದು
ಅಮರ ಶಿಲ್ಪಿಗಳ ಶಿಲ್ಪಕಲಾ ನೈಪುಣ್ಯ ಸಂಗೀತ ನುಡಿವ ಶಿಲಾ ಸ್ಥಂಭಗಳು ರವಿವರ್ಮನ ಕುಂಚದಿ ಮೂಡಿದ ಅನುಪಮ ಭಿತ್ತಿಯ ಚಿತ್ರಗಳು
ದಾಸ ಶರಣರ ಸಾಧು ಸಜ್ಜನರ ಮಹಾ ಮಹಿಮರ ಪಾವನ ನೆಲೆಯು ನಾಡಿನ ಘನತೆ ಉತ್ತುಂಗಕೇರಿಸಿದ ಧೀಮಂತರೆಲ್ಲರ ಶೌರ್ಯದ ಸೆಲೆಯು
ತನುವನು ಸುತ್ತಿ ಬಳಸಿದ ಶರಧಿಯು ಧನ್ಯ ತಾನೆಂದು ಅನುರಣಿಸಿಹುದು ತಾಂತ್ರಿಕ ನೈಪುಣ್ಯ ಮೆರೆಸುತ ದಿನವು ಜಗದ ಅಗ್ರಗಣ್ಯ ನಾಡಾಗಿಹುದು
ಕನ್ನಡ ಮಣ್ಣಲಿ ಜನಿಸಿರಲೀಗ ಜನುಮವು ಸಾರ್ಥಕವೆನಿಸುತಿದೆ ವಿದೇಶ ನೆಲದಲಿ ಅನ್ಯರ್ಗೆ ಕನ್ನಡ ಕಲಿಸುತ ಹೆಮ್ಮೆ ಎದೆಯಲಿ ಮೂಡುತಿದೆ
ಯಶೋದಾ ಭಟ್ಟ ದುಬೈ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.