ಕರುನಾಡಲ್ಲಿ ಜನಿಸಿದ ಪುಣ್ಯವಂತರು ನಾವು ಮಲೆನಾಡ ಹಸಿರನ್ನು ಕಣ್ಮನ ತಣಿಸುವ ನಾವು ಭೋರ್ಗರೆವ ನದಿ-ನಾದಕ್ಕೆ ತಲೆದೂಗುವ ನಾವು ಶೌರ್ಯ ಮೆರೆದ ಮಹಾತ್ಮರ ನೆನೆಯೋಣ ನಾವು
ಗಿರಿ-ಪರ್ವತ, ಕಂದರ ನಮಗೊಲಿದ ಸೌಭಾಗ್ಯವು ಕವಿರತ್ನ ದಾಸರು ಈ ಮಣ್ಣಿನ ಹೊನ್ನ ಕಳಸವು ಅಕ್ಕರೆ ಸಂಸ್ಕೃತಿಯಲಿ ವೈವಿಧ್ಯತೆಯ ಭಂಡಾರವು ಕರುಣೆಯ ನೀತಿ ಸಾರದಲ್ಲಿ ಕಸ್ತೂರಿಯ ಘಮವು
ಕಣ ಕಣದಿ ಐಕ್ಯತೆ , ಹೊಸ ಭಾವದ ಸಿರಿನುಡಿಯು ದಿವ್ಯತೆಯ ಮೆರೆಸಿಹುದು ಇಲ್ಲಿ ಭವ್ಯ ಶಿಲ್ಪಕಲೆಯು ಅಣು-ಅಣುವಿನಲ್ಲೂ ಜ್ಞಾನಪೀಠದ ಗರಿಮೆಯು ಪಂಪ ರನ್ನ ಪೊನ್ನ ಕನಕರ ಸಾಹಿತ್ಯದ ಹಿರಿಮೆಯು
ಜ್ಞಾನದಾಹಿಗೆ ವಿಜ್ಞಾನ ತಂತ್ರಜ್ಞಾನದ ಪ್ರಖರತೆಯು ಪ್ರವಾಸಿ ಕಣ್ಣಿಗೆ ಜೋಗದ ಹಾಲ್ನೊರೆ ಝರಿಯು ಐಹೊಳೆ, ಬಾದಾಮಿ ನೆನಪನುಳಿಯುವ ಕಲೆಯು ರೇಷ್ಮೆ , ಬೊಂಬೆಯ ತವರೂರಿನ ಶ್ರೀಮಂತಿಕೆಯು
ತೇಗು ಹೊನ್ನೆ ಮರಗಳಲ್ಲಿ ಸಿರಿಗಂಧದ ಅಂದವು ಸಹ್ಯಾದ್ರಿ ತಪ್ಪಲಲ್ಲಿ ನಿತ್ಯಹರಿದ್ವರ್ಣ ಶೋಭಿತವು ಮಯೂರ, ಮದಕರಿ, ರಾಯಣ್ಣ ಆಳಿದ ನೆಲವು ಅಬ್ಬಕ್ಕ , ಚೆನ್ನಮ್ಮರ ವೀರ-ಧೀರತೆಯ ಫಲವು
ಆತಿಥ್ಯ ತೋರುವ ಪ್ರೇಮದಾಲಯವಾಗುವ ನಾವು ಅಂತರಂಗದ ನುಡಿಯಲಿ ಪ್ರೀತಿ ಹಂಚೋಣ ನಾವು ಮಾತೃಭಾಷೆ ಸೊಗಡ ಎಲ್ಲೆಡೆ ಪಸರಿಸುವ ನಾವು ಸಿರಿಗನ್ನಡವು ನಮ್ಮೊಳಗಿರಲು ಸಿರಿವಂತರು ನಾವು
– ರಮೀಝ ಯಂ.ಬಿ, ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.