(www.vknews.in) : ಖಿನ್ನತೆಗೆ ಅನೇಕ ಕಾರಣಗಳಿವೆ. ಅದರಲ್ಲಿ ಒಂಟಿತನವೂ ಒಂದು. ಮನುಷ್ಯ ಸಂಘ ಜೀವಿ. ಆತ ಮಾನಸಿಕವಾಗಿ ಅಥವಾ ಶಾರೀರಿಕವಾಗಿ ಒಂಟಿಯಾಗಿ ಬಾಳುವುದು ಕಷ್ಟಸಾಧ್ಯದ ಕೆಲಸ. ಕೆಲವರು ಸಾಮೂಹಿಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಒಂಟಿಯಾಗಿ ಬದುಕಲು ಇಷ್ಟಪಡುತ್ತಾರೆ. ನನಗೆ ಯಾವ ಸಂಬಂಧಗಳು ಬೇಡ, ನನ್ನ ಪ್ರಪಂಚಕ್ಕೆ ನಾನೇ ರಾಜ ಅಥವಾ ರಾಣಿ ಎಂದು ಭಾವಿಸುತ್ತಾ ಜೀವನ ಸಾಗಿಸುವುದುಂಟು. ಎಲ್ಲದರಲ್ಲೂ ವೈಯಕ್ತಿಕ ಸ್ವಾತಂತ್ರ್ಯ ಬಯಸುತ್ತಾರೆ. ಅಂಥವರಿಗೆ ಕುತುಂಬ, ಸ್ನೇಹ, ಸಂಬಂಧಿಕರು ಎಲ್ಲರೂ ಸ್ವಾರ್ಥಿಗಳಾಗಿ ಕಾಣುತ್ತಾರೆ. ದೇವರಿಗೂ ಸಹ ಅಷ್ಟಾಗಿ ನಂಬಲ್ಲ. ಸ್ವತಂತ್ರವಾಗಿ ಜೀವನವನ್ನು ಮಜಾ ಮಾಡಬೇಕು ಅಷ್ಟೆ.
ತನ್ನ ಆನಂದಕ್ಕೆ ಸಮಾಜದ ಕಟ್ಟುಪಾಡುಗಳಿಗೆ ಹೆದರುವುದಿಲ್ಲ, ಬೆದರುವುದಿಲ್ಲ. ಭಯ ಭಕ್ತಿ ಅಂತು ಇರುವುದೇ ಇಲ್ಲ. ಇದು ನನ್ನ ಜೀವನ, ನಾನು ಏನು ಬೇಕಾದರೂ ಮಾಡುತ್ತೇನೆ, ಹೇಗಾದರೂ ಬದುಕುತ್ತೇನೆ ನಿಮಗೇನು ಎನ್ನುವ ಮನಃಸ್ಥಿತಿಯಲ್ಲಿರುತ್ತಾರೆ. ಅನೈತಿಕ ಸಂಬಂಧಗಳೆಲ್ಲ ಅಂಥವರಿಗೆ ಟೈಂಪಾಸ್ ಮತ್ತು ಪ್ರಾಕೃತಿಕ. ಅದರಲ್ಲಿ ತಪ್ಪೇನಿದೆ ಎನ್ನುವುದುಂಟು. ನನ್ನ ಸಂತೋಷಕ್ಕೆ ನಾನು ಮಾದಕ ದ್ರವ್ಯಗಳನ್ನು ಬಳಸುತ್ತೇನೆ. ನನ್ನ ಹಣ ನನ್ನ ಶರೀರ, ನೀವು ಯಾರು ನನಗೆ ಬೆರಳು ತೋರಿಸುವುದಕ್ಕೆ? ನನಗೆ ಮದುವೆ, ಸಂಸಾರ ಇಷ್ಟವಿಲ್ಲ. ನಾನು ಎರಡು ಸಲ ಗರ್ಭಪಾತ ಸಹ ಮಾಡಿಸಿಕೊಂಡಿದ್ದೇನೆ. ನಾನು ಸಲಿಂಗ ಕಾಮಿಯೂ ಹೌದು. ಅದು ನನ್ನ ಇಷ್ಟ. ನನಗೆ ಪಾಪ ಪುಣ್ಯ ಬೇಕಾಗಿಲ್ಲ. ನೀವು ಗಂಟೆ ಬಾರಿಸಿಕೊಂಡು ಸಾಯಿರಿ ನನಗೇನು. ಕೋರ್ಟುಗಳೇ ನಮಗೆ ಅನುಮತಿ ನೀಡಿವೆ. ಲಿವಿನ್ ರಿಲೇಶನ್ ಇಟ್ಟುಕೊಳ್ಳಬಹುದು. ಮದುವೆಗೆ ಮುಂಚೆಯೇ ಗರ್ಭಪಾತ ಮಾಡಿಸಿಕೊಳ್ಳಬಹುದು. ಸಲಿಂಗರು ಮದುವೆಯಾಗಬಹುದು. ನಿಮ್ಮ ಸಾಚಾತನ ನಮಗೇನು ಗೊತ್ತಿಲ್ಲವೇ. ಹೆಸರಿಗೆ ಮಾತ್ರ ಸುಖಸಂಸಾರ. ಹೆಸರಿಗೆ ಮಾತ್ರ ಗಂಡ-ಹೆಂಡತಿ. ಬೆನ್ನ ಹಿಂದೆ ಎಂತೆಂಥಾ ಘನಕಾರ್ಯಗಳು ನಡೆಯುತ್ತವೆ ನಿಮಗೇ ಗೊತ್ತು. ನೀವು ಸಮಾಜಕ್ಕೆ ಹೆದರುತ್ತೀರಿ. ನಿಮ್ಮದು ಎರಡು ಮುಖ. ನಾವು ಹಾಗಲ್ಲ. ಬಿಂದಾಸ್.
ತನ್ನ ಅನಿಸಿಕೆಯ ಸಂತೋಷದ ಹುಡುಕಾಟದಲ್ಲಿ ಮನುಷ್ಯ ಸಾಮಾಜಿಕ, ಧಾರ್ಮಿಕ ಬೇಲಿಗಳನ್ನು ಮುರಿದು ತನ್ನದೇ ಆದ ಪ್ರಪಂಚವನ್ನು ಕಟ್ಟಿಕೊಂಡು ಬದುಕುತ್ತಿರುತ್ತಾನೆ. ಇದೆಲ್ಲ ಎಲ್ಲಿಯ ತನಕ? ಹಣ ಮತ್ತು ಅರೋಗ್ಯ ಇರುವ ತನಕ. ಪುನಃ ಆತ ಮಾನಸಿಕವಾಗಿ ಒಂಟಿಯಾಗುತ್ತಾನೆ. ಕೆಲವು ನಿಮಿಷಗಳ, ಗಂಟೆಗಳ, ದಿನಗಳ, ವರ್ಷಗಳ ಆತನು ಅನುಭವಿಸಿದ ಸುಖ ಮಾಯವಾಗುತ್ತಾ ಹೋಗುತ್ತದೆ. ಯಾವ ಒಂಟಿತನಕ್ಕಾಗಿ ಆತ ಇಷ್ಟಪಟ್ಟನೋ ಅದೇ ಅವನ ಶತ್ರುವಾಗಿ ಬಿಡುತ್ತದೆ. ಆಳವಾಗಿ ಖಿನ್ನತೆಯಲ್ಲಿ ಮುಳುಗಿ ಹೋಗುತ್ತಾನೆ. ಹುಟ್ಟಿರುವುದೇ ಎಂಜಾಯ್ ಮಾಡುವುದಕ್ಕೆ ಎಂಬ ಕಲ್ಪನೆ ಎಡವಟ್ಟಾಗಿ ಹೋಗುತ್ತದೆ.
ಅವಿಭಾಜ್ಯ ಕುಟುಂಬಗಳು ಈಗ ಹುಡುಕಿದರೂ ಸಿಗುವುದು ಕಷ್ಟ. ಯಾರಿಗೂ ತಂದೆ-ತಾಯಿಯ ಜೊತೆ, ಅಣ್ಣ-ತಮ್ಮಂದಿರ ಜೊತೆ, ಒಟ್ಟಾರೆ ಕುಟುಂಬದ ಜೊತೆ ಸಂಸಾರ ಸಾಗಿಸಲು ಇಷ್ಟವಿಲ್ಲ. ಕುಟುಂಬಗಳು ವಿಭಜನೆಗೊಂಡು ವಿಭಕ್ತ (ನ್ಯೂಕ್ಲಿಯರ್ ಫ್ಯಾಮಿಲಿ)ಕುಟುಂಬಗಳಾದವು. ಅಲ್ಲಿ ಕಷ್ಟ-ಸುಖ ಹಂಚಿಕೊಳ್ಳಲು ಯಾರೂ ಬರಲ್ಲ. ಏಕೆಂದರೆ ನಾವು ಸಮಾಜಕ್ಕೆ ಏನು ಕೊಡುತ್ತೇವೋ, ಸಮಾಜವೂ ಸಹ ಅದನ್ನೇ ನಮಗೆ ಹಿಂತಿರುಗಿಸುವುದು. ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯ ಪ್ರೀತಿ ಸಿಗಲ್ಲ. ಸಂಸಾರದಲ್ಲಿ ಅನ್ಯೋನ್ಯವಾಗಿ ಬದುಕುವುದು ಹೇಗೆ ಎಂದು ಹೇಳಿಕೊಡುವವರು ಯಾರೂ ಇರಲ್ಲ. ಕಷ್ಟಸುಖ ಹೇಗೆ ಹಂಚಿಕೊಳ್ಳಬೇಕು, ಹೇಗೆ ನಿಭಾಯಿಸಬೇಕು, ಪ್ರೀತಿ ವಾತ್ಸಲ್ಯ ಅಂದರೆ ಏನು, ಹಿರಿಯರನ್ನು ಹೇಗೆ ಗೌರವಿಸಬೇಕು, ಕಿರಿಯರಿಗೆ ಹೇಗೆ ಪ್ರೀತಿಸಬೇಕು ಯಾವುದನ್ನೂ ಚಿಕ್ಕವರು ಕಲಿಯುವುದಿಲ್ಲ. ಮುಂದಿನ ಸಮಾಜದ ಪೀಳಿಗೆ ಹೇಗೆ ಬೆಳೆಯುತ್ತಾರೋ, ಅವರು ಸಹ ಮಾಡುವುದು ಅದನ್ನೇ – ನ್ಯೂಕ್ಲಿಯರ್ ಫ್ಯಾಮಿಲಿ. ಮುದುಕ-ಮುದುಕಿಯರ ಬಳಿ ಒಳ್ಳೆಯ ಮನೆ ಇರುತ್ತೆ, ಹಣ ಇರುತ್ತೆ, ಆದರೆ ಒಂಟಿತನ ಕಾಡುತ್ತಿರುತ್ತದೆ. ಎರಡು ನಿಮಿಷ ಮಾತನಾಡಿಸುವವರೂ ಗತಿ ಇರಲ್ಲ.
ಅಂಥದರಲ್ಲಿ ಗಂಡ ತೀರಿ ಹೋದರೆ, ಮುದುಕಿಗೆ ವೃದ್ಧಾಶ್ರಮವೇ ಗತಿ. ಮಗ ಪರದೇಶದಲ್ಲಿರುತ್ತಾನೆ. ಸೊಸೆಗೆ ಪಬ್ ಬಿಟ್ಟರೆ ಬೇರೇನೂ ಇಷ್ಟವಿಲ್ಲ. ಒಂದೇ ಮಗು ಸಾಕು ಅನ್ನುವವರಿಗೆ ಸಮಯ ಒಂದೇ ಏಟಿನಲ್ಲಿ ಪಾಠ ಕಲಿಸಿಬಿಡುತ್ತದೆ. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಮ್ಮ ಕಾಲದಲ್ಲೇ ಹೀಗೆ ಆಗುತ್ತಿದ್ದರೆ, ಮುಂದಿನ ಪೀಳಿಗೆಯ ಗತಿ ಏನು? ಅದಕ್ಕೆ ಹಿರಿಯರು ಹೇಳುವುದು – ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಆದಷ್ಟು ಪ್ರೀತಿ ಹಂಚಿ. ಪ್ರೀತಿ ಸಿಗುತ್ತದೆ. ಸಿಗಲಿಲ್ಲವೆಂದರೂ ಪರವಾಗಿಲ್ಲ. ಮನಸ್ಸು ಹಗುರವಾಗಿರುತ್ತದೆ. ಒಂಟಿತನ ಕಾಡುವುದಿಲ್ಲ. ಖಿನ್ನತೆ ಹತ್ತಿರವೂ ಸುಳಿಯುವುದಿಲ್ಲ. ಪ್ರಪಂಚದಲ್ಲಿರುವವರೆಲ್ಲಾ ಸ್ವಾರ್ಥಿಗಳು, ನಮ್ಮದು ನಾವು ನೋಡಿಕೊಳ್ಳೋಣವೆಂದು ನಾವು ಸಮಾಜದಿಂದ ದೂರವಾಗುತ್ತಾ ಹೋದರೆ, ಸಮಾಜವೂ ನಮ್ಮಿಂದ ದೂರವಾಗುತ್ತಾ ಹೋಗುತ್ತದೆ. ನಮ್ಮ ಜೀವನದ ನಿರ್ಧಾರ ನಮಗೆ ಬಿಟ್ಟಿದ್ದು. ಯೋಚಿಸಿ. ಈಗಲೂ ಸಮಯ ಮೀರಿಲ್ಲ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.