(www.vknews.in) : ಮೇಲು ಜಾತಿ ಮತ್ತು ಕೆಳ ಜಾತಿ ಎಂಬ ಜಾತಿ ವ್ಯವಸ್ಥೆ ಅಭಿವೃದ್ಧಿಯ ಈ ಯುಗದಲ್ಲೂ ತಾಂಡವಾಡುತ್ತಿದೆ. ಮದುವೆ ಸಂಬಂಧಕ್ಕೆ ಜಾತಿ ನೋಡಲಾಗುತ್ತದೆ. ಮನೆಗೆಲಸಕ್ಕೆ ಯಾರಿಗಾದರೂ ನೇಮಿಸಿಕೊಳ್ಳಬೇಕಾದರೆ ಜಾತಿ ನೋಡಲಾಗುತ್ತದೆ. ಮನೆ ಬಾಡಿಗೆಗೆ ತೆಗೆದುಕೊಳ್ಳಬೇಕಾದರೆ ಜಾತಿ ಕೇಳಲಾಗುತ್ತದೆ. ನೌಕರಿ ಗಿಟ್ಟಿಸಿಕೊಳ್ಳಲು ಸಹ ಪ್ರತಿಭೆಗಿಂತ ಜಾತಿಯೇ ಮುಖ್ಯವಾಗಿ ಹೋಗಿದೆ. ಒಂದು ಕಟ್ಟಡದ ಶಂಕುಸ್ಥಾಪನೆಯಾಗಲಿ ಅಥವಾ ಉದ್ಘಾಟನೆಯಾಗಲಿ ಜಾತಿಯನ್ನು ಪರಿಗಣಿಸಿ ಮಾಡಿಸಲಾಗುತ್ತದೆ. ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಹಿಂಜರಿಯುತ್ತಾರೆ. ಊಟ ತಯಾರಿಸುವವರ ಜಾತಿ ಮತ್ತು ಬಡಿಸುವವರ ಜಾತಿಯ ಬಗ್ಗೆ ನಿಗಾ ವಹಿಸಲಾಗುತ್ತದೆ. ಮನುಷ್ಯ ಸತ್ತರೆ ಆತನ ಶವ ಸಂಸ್ಕಾರ ಯಾವ ಜಾತಿಯವರು ನೆರವೇರಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಒಂದೇ ಊರಾದರೂ ಸ್ಮಶಾನಗಳು ಎರಡು. ಅದೂ ಜಾತಿ ಆಧಾರಿತ. ಸಮಾನತೆ ಎಂಬ ಪದ ಹಾಳೆಗಳಲ್ಲಿ ಮಾತ್ರ ಉಳಿದುಬಿಟ್ಟಿದೆ.
ಜಾತಿ ವ್ಯವಸ್ಥೆ ಒಂದೇ ದೇಶಕ್ಕೆ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಕಡೆ ವ್ಯಾಪಿಸಿದೆ. ಸಚ್ಚಾರ್ ಕಮಿಟಿ ವರದಿಯ ನಂತರ ಭಾರತದಲ್ಲಿ ಮುಸಲ್ಮಾನರ ಅನೇಕ ಶೋಷಿತ ಉಪಜಾತಿಗಳು ಬೆಳಕಿಗೆ ಬಂದವು. ವರ್ಷಗಳು ಉರುಳಿದರೂ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅವರು ಈಗಲೂ ಹಿಂದುಳಿದಿದ್ದಾರೆ. ಸಮಾಜದ ಜಾತಿ ವ್ಯವಸ್ಥೆಗೆ ಬಲಿಯಾಗುತ್ತಿದ್ದಾರೆ. ಅಮೀರ್ ಖಾನನ ಸತ್ಯಮೇವಜಯತೆ ಎಂಬ ಕಾರ್ಯಕ್ರಮದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ವಿವರವಾಗಿ ತೋರಿಸಲಾಗಿದೆ. ಪಟ್ಟಣಗಳಲ್ಲಿ ಜಾತಿ ವ್ಯವಸ್ಥೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಎಲ್ಲರು ಅವರದೇ ಆದ ಜೀವನದ ಜವಾಬ್ದಾರಿಗಳ ಹೊರೆಯಲ್ಲಿ ಮುಳುಗಿ ಹೋಗಿರುತ್ತಾರೆ. ಮಾನಸಿಕವಾಗಿ ಜಾತಿ ವ್ಯವಸ್ಥೆ ಜೀವಂತವಾಗಿದ್ದರೂ ಪಟ್ಟಣದ ಹೋಟೆಲ್ಲುಗಳಲ್ಲಿ, ಪಬ್ಬುಗಳಲ್ಲಿ, ಬಸ್ಸುಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಅಷ್ಟಾಗಿ ಕಾಣುವುದಿಲ್ಲ. ಆದರೆ ಹಳ್ಳಿಗಳಲ್ಲಿ ಯಾವ ಮನೆಯವನು ಯಾವ ಜಾತಿಗೆ ಸೇರಿದ್ದಾನೆ ಎಂಬುದು ಇಡೀ ಊರಿಗೆ ತಿಳಿದಿರುತ್ತದೆ. ಜಾತಿ ಆಧಾರಿತ ಬೀದಿಗಳೇ ಇರುತ್ತವೆ.
ಅನೇಕ ಸಮಾಜ ಸುಧಾರಕರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಹೋರಾಡಿದರು, ಶ್ರಮಪಟ್ಟರು. ಆದರೆ ಬುಡಸಮೇತ ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯಲಾಗಲಿಲ್ಲ. ಮಾನವರೆಲ್ಲ ಒಂದೇ, ಸಮಾನರು, ಅನ್ಯಾಯದ ವಿರುದ್ಧ ಹೋರಾಡೋಣವೆಂದು ಕೆಲವರು ಉಗ್ರವಾದ ಹೋರಾಟಕ್ಕೆ ಸಿದ್ಧರಾಗಿ ನಾನಾಕಾರಣಗಳಿಂದ ತಮ್ಮ ಗುರಿಯನ್ನು ತಲುಪುವುದರಲ್ಲಿ ವಿಫಲರಾದರು. ಅನೇಕ ವರ್ಷಗಳಿಂದ ಬಂದಿರುವ ಈ ಮೇಲು ಕೀಳು ಎಂಬ ಮಾನಸಿಕ ರೋಗ ಬಹುಶಃ ಹೀಗೆ ಮುಂದುವರೆಯಲಿದೆ. ಇದರಿಂದ ಹೊರಬರಲು ಕೆಲವರು ಧರ್ಮ ಪರಿವರ್ತನೆಯೂ ಮಾಡಿಕೊಂಡಿದ್ದಾರೆ. ಅತೀ ವಿದ್ಯಾವಂತರಾಗಲು ಮತ್ತು ಶ್ರೀಮಂತರಾಗಲು ಪ್ರಯತ್ನಿಸುತ್ತಿದ್ದಾರೆ. ವರ್ಷಗಳು ಉರುಳುತ್ತಿವೆ. ಅವರು ಮುಖ್ಯವಾಹಿನಿಗೆ ಬರಲು ಇನ್ನೂ ಎಷ್ಟು ಯುಗಗಳು ಕಾಯಬೇಕೋ…! ಕರೋನ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಜನರು ಬದಲಾದರು ಎಂಬ ಭಾವನೆ, ಕರೋನ ಹೋದ ನಂತರ ಹುಸಿಯಾಗಿ ಹೋಯಿತು. ವಿಶ್ವಶಾಂತಿಯ ಕನಸು ಭಸ್ಮವಾಗಿ ಹೋಯಿತು. ನಿನ್ನ ಜಾತಿ, ಮತ, ಧರ್ಮವೇ ಬೇರೆ ನಿಜ. ಆತನ ಜಾತಿ, ಮತ, ಧರ್ಮವೇ ಬೇರೆ ನಿಜ. ಆದರೇನಂತೆ ನಿಮ್ಮಿಬ್ಬರ ಹುಟ್ಟು ಒಂದೇ ತಾನೆ? ನೀನು ಆಗರ್ಭ ಸಿರಿವಂತನೇನೋ ನಿಜ. ಆತ ಕಡು ಬಡವನೇನೋ ನಿಜ. ಆದರೇನಂತೆ ನಿಮ್ಮಿಬ್ಬರ ವಾಸ ಒಂದೇ ಭೂಮಿ ತಾನೆ? ನೀನು ಮಹಾ ಪ್ರತಿಷ್ಠಿತ, ವರ್ಚಸ್ವಿ, ಅಧಿಕಾರಿ ನಿಜ. ಆತ ಸಾಮಾನ್ಯ ಕೂಲಿ ಕಾರ್ಮಿಕ, ನೇಕಾರ ನಿಜ. ಆದರೇನಂತೆ ನಿಮ್ಮಿಬ್ಬರ ಅಂತ್ಯ ಒಂದೇ ತಾನೆ?
ಜೀವನದಲ್ಲಿ ಸಫಲರಾಗುವವರೆಗೂ ನಮ್ಮನ್ನು ಯಾರೂ ಕೂಡ ಗುರುತಿಸುವುದಿಲ್ಲ. ಏಕೆಂದರೆ ಇಲ್ಲಿ ಗೆಲ್ಲುವ ಕುದುರೆಗೆಯೇ ಬೆಲೆ. ನೀವು ಇಲ್ಲಿಯವರೆಗೆ ಏನು ಸಾಧಿಸಿದ್ದೀರಿ ಎನ್ನುವುದೇ ಮುಖ್ಯ. ಮನುಷ್ಯ ತನ್ನ ಕರ್ಮದಿಂದ ಗುರುತಿಸಿಕೊಳ್ಳಬೇಕೇ ಹೊರತು ಜಾತಿಯಿಂದಲ್ಲ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.