(www.vknews.in) ಶಿಕ್ಷಣ ಇಲಾಖೆಯುಸುತ್ತೋಲೆಯೊಂದರ ಮೂಲಕ ಎಲ್ಲಾ ಶಾಲೆಗಳಲ್ಲಿ ನವೆಂಬರ್ 26 ರಂದು ಸಂವಿಧಾನ ದಿನವನ್ನು ಶಾಲೆಗಳಲ್ಲಿ ಆಚರಿಸುವ ಕುರಿತು
ಸುತ್ತೋಲೆ ಹೊರಡಿಸಿರುವುದನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ತುಂಬು ಹೃದಯದಿಂದ ಸ್ವಾಗತಿಸುತ್ತದೆ . ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸಂವಿಧಾನ ಮೂಲ ತತ್ವಗಳನ್ನು ತಿಳಿದು ಅರ್ಥೈಸಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಭಾರತದ ಸಂವಿಧಾನವನ್ನು ಗೌರವಿಸಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಈ ಬಗೆಯ ಪ್ರಯತ್ನಗಳು ತುಂಬಾ ಸಹಕಾರಿಯಾಗುತ್ತವೆಯೆಂದು ಸಮನ್ವಯ ವೇದಿಕೆಯು ನಂಬಿದೆ. ಅಂದಿನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಇಲಾಖೆಯು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮನ್ವಯ ವೇದಿಕೆ ಸರ್ಕಾರಕ್ಕೆ ಮನವಿ ಮಾಡುತ್ತದೆ.
ನವೆಂಬರ್ 26 ರ ಸಂವಿಧಾನ ದಿನವನ್ನು ಶಾಲೆಗಳಲ್ಲಿ ಆಚರಿಸುವ ಸಂದರ್ಭದಲ್ಲಿ, ಸಂವಿಧಾನದ ಮೂಲ ತಿರುಳಾದ ಪ್ರಸ್ತಾವನೆಯನ್ನು ಓದುವ ಜೊತೆಗೆ ಭಾರತದ ಪ್ರಜೆಯಾಗಿ ಅದನ್ನು ಪೂರ್ಣವಾಗಿ ಜಾರಿಗೊಳಿಸುವ ಪ್ರತಿಜ್ಞೆಯನ್ನು ಸಹ ಮಾಡಿಸುವುದು. ನೇರವಾಗಿ ಮಕ್ಕಳಿಗೆ ಬದುಕಿಗೆ ಸಂಬಂಧಿಸಿದ ಪರಿಚ್ಛೇಧಗಳಾದ 15, 21,21ಎ, 24, 39 ಇ ಮತ್ತು ಎಫ್ , 46 ಹಾಗು 47 ನ್ನು ಶಿಕ್ಷಕರು ಓದಿ ವಿವರಿಸಲು ಕ್ರಮ ವಹಿಸುವುದರೊಂದಿಗೆ ಮಕ್ಕಳು ಸಂವಿಧಾನದ ಪ್ರಸ್ತಾವನೆಯನ್ನು ತಮ್ಮ ಕೈ ಬರಹದಲ್ಲಿಯೇ ಬರೆದುಕೊಳ್ಳಲು ಮತ್ತು ಅದನ್ನು ನವೆಂಬರ್ 26 ರಂದು ಗಟ್ಟಿಯಾಗಿ ಓದಲು ಸಹಾಯವಾಗುವಂತೆ ಮನನ ಮಾಡಲು ಶಿಕ್ಷಕರು ಪೂರ್ವಭಾವಿಯಾಗಿ ಸಂವಿಧಾನದ ಪ್ರಸ್ತಾವನೆಯನ್ನು ತರಗತಿ ಕೋಣೆಗಳ ಕಪ್ಪು ಹಲಗೆಯ ಮೇಲೆ ದುಂಡಾಗಿ ಮತ್ತು ಸ್ಪಷ್ಟವಾಗಿ ಬರೆದು ಮಕ್ಕಳಿಗೆ ಅದನ್ನು ನಕಲು ಮಾಡುವಂತೆ ಕ್ರಮವಹಿಸುವುದು.
ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ರೂಪಿಸಿ ಜಾರಿಗೊಳಿಸುವುದನ್ನು ಖಾತರಿಪಡಿಸಿಕೊಂಡು ಅಗತ್ಯ ಮೇಲುಸ್ತುವಾರಿ ಮತ್ತು ಮಾರ್ಗದರ್ಶನಕ್ಕಾಗಿ ಶಿಕ್ಷಕೇತರ ಸಿಬ್ಬಂದಿಗಳಾದ ಶಿಕ್ಷಣ ಸಂಯೋಜಕರು , ಸಿಆರ್ಪಿ, ಬಿಆರ್ಪಿ , ಬಿಇಒ, ಬಿಆರ್ಸಿ , ಉಪನಿರ್ದೇಶಕರು, ಡಯಟ್ನ ಮತ್ತು ಸಿಟಿಇ ಯ ಎಲ್ಲಾ ಬೋಧಕ ಸಿಬ್ಬಂದಿ ಹಾಗು ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳನ್ನು ಅಂದು ಶಾಲೆಗಳಿಗೆ ನಿಯೋಜಿಸಲು ಕ್ರಮ ವಹಿಸುವುದು
ಈ ಮೇಲಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ನವೆಂಬರ್ ೨೬ ರ ಸಂವಿಧಾನ ದಿನಾಚರಣೆಯನ್ನು ಶಾಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸರ್ಕಾರವನ್ನು ಒತ್ತಾಯಿಸುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.