(www.vknews.in) : ಹುಬ್ಬಳ್ಳಿ ರೈಲು ನಿಲ್ದಾಣದಿಂದ ಸುಮಾರು ೮ ಕಿ. ಮೀ. ದೂರದಲ್ಲಿ ಬೈರಿಕೊಪ್ಪ ಎಂಬ ಸ್ಥಳದಲ್ಲಿ ಒಂದು ದರ್ಗಾ ಇತ್ತು. ದರ್ಗಾ ಎಂದರೆ ಐಕ್ಯಮಂಟಪ ಅಥವಾ ಸಮಾಧಿ. ಬೈರಿಕೊಪ್ಪ ಹುಬ್ಬಳ್ಳಿ ಮತ್ತು ಧಾರವಾಡದ ಹೆದ್ದಾರಿಯಲ್ಲಿ ಕಾಣಸಿಗುತ್ತದೆ. ರಸ್ತೆ ಅಗಲೀಕರಣ ಮಾಡಲು ಹಜ್ರತ್ ಮೆಹಮೂದ್ ಷಾ ಖಾದ್ರಿ (ರ) ರವರ ದರ್ಗಾ ಅಡ್ಡಿಯಾಗಿತ್ತು ಎಂಬುವುದು ಕೆಲವರ ವಾದ. ಡಿಸೆಂಬರ್ ೨೨ನೇ ತಾರೀಖು ರಾತ್ರಿ ಸುಮಾರು ೩ ಗಂಟೆಗೆ ದರ್ಗಾ ಕೆಡವಿ, ಅಗೆದು ಅಲ್ಲಿಂದ ಶರೀರವನ್ನು ತೆಗೆಯಲಾಯಿತು. ಸುಮಾರು ೩೦೦ ವರ್ಷಗಳ ಹಿಂದೆ ಮೃತಪಟ್ಟಿರುವ ಗುರುಗಳ ಶರೀರವನ್ನು ಮತ್ತೊಂದು ಕಡೆ ತೆಗೆದುಕೊಂಡು ಹೋಗಿ ಮಣ್ಣು ಮಾಡಲಾಯಿತು. ಸ್ಥಳಾಂತರಗೊಂಡ ಗುರುಗಳ ಪುಣ್ಯ ಶರೀರದ ವಿಡಿಯೋ ಬಹಳ ವೈರಲ್ ಆಯಿತು. ಆ ದರ್ಗಾ ಭಾವೈಕ್ಯತೆಯ ಕೇಂದ್ರಬಿಂದುವಾಗಿತ್ತು. ಅಲ್ಲಿಗೆ ಹಿಂದೂ ಮುಸಲ್ಮಾನರೆಲ್ಲರೂ ಬರುತ್ತಿದ್ದರು. ಈ ರೀತಿ ಕೆಡವಬಾರದಿತ್ತು ಎಂದು ಕೆಲವರು ಮಾಧ್ಯಮಗಳ ಮುಂದೆ ದುಃಖ ವ್ಯಕ್ತಪಡಿಸಿದರು.
ಮನುಷ್ಯ ಸತ್ತ ನಂತರ ಶರೀರವನ್ನು ಮಣ್ಣುಪಾಲು ಮಾಡುತ್ತೇವೆ. ಕೆಲವೇ ತಿಂಗಳುಗಳಲ್ಲಿ ಮಣ್ಣಲ್ಲಿ ಶರೀರ ನಾಶವಾಗಿ ಹೋಗುತ್ತದೆ. ಆದರೆ ಸೃಷ್ಟಿಕರ್ತನ ನೈಜ ಸ್ನೇಹಿತರ ಶರೀರವು ಕೊಳೆಯದೆ ಸದಾ ತಾಜಾ ಆಗಿರುತ್ತದೆ. ನಮ್ಮ ದುರದೃಷ್ಟ ನಾವು ಸಾಕ್ಷ್ಯಾಧಾರದ ಮಾತುಗಳನ್ನು ಮಾತ್ರ ನಂಬುತ್ತೇವೆ. ನಮ್ಮ ತರ್ಕ ಬುದ್ಧಿಯು ಸಹ ಅದೇ ಹೇಳುತ್ತದೆ. ಸೃಷ್ಟಿಕರ್ತನ ಸೃಷ್ಟಿಯನ್ನೂ ಸಹ ನಾವು ವಿಜ್ಞಾನದ ಚೌಕಟ್ಟಿನಲ್ಲೇ ಪರೀಕ್ಷಿಸುತ್ತೇವೆ. ಇದೇ ವಿಜ್ಞಾನ ಒಂದು ದಿನ ಸೃಷ್ಟಿಕರ್ತನ ಸೃಷ್ಟಿಯ ಗುಟ್ಟು ಬಹಿರಂಗ ಮಾಡಬಹುದು.
ಕ್ರಿ.ಶ. 1932ರಲ್ಲಿ ಷಾ ಫೈಸಲ್ ಇರಾಕ್ ದೇಶದ ರಾಜನಾಗಿದ್ದ. ಆತನ ಕನಸಲ್ಲಿ ಹುದೈಫಾ ಅಲ್ ಯಮನಿ(ರ) ಎಂಬ ಸಹಾಬಿ (ಪ್ರವಾದಿಯ ಸಹಚರರು) ಬಂದು ಮಾತನಾಡಿದರು.
ಓ ಮಹಾರಾಜ! ಜಾಬಿರ್ ಇಬ್ನೆ ಅಬ್ದುಲ್ ಅನ್ಸಾರಿ ಮತ್ತು ನನ್ನನ್ನು ಟೈಗ್ರಿಸ್ ನದಿಯ ದಡದಲ್ಲಿರುವ ಸಮಾಧಿಗಳಿಂದ ಹೊರತೆಗೆದು ಬೇರೊಂದು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ, ಏಕೆಂದರೆ ನನ್ನ ಸಮಾಧಿಯ ಒಳಗೆ ಸಂಪೂರ್ಣವಾಗಿ ನೀರು ತುಂಬಿಕೊಂಡಿದೆ ಮತ್ತು ಜಾಬಿರ್ ಸಮಾಧಿಯಲ್ಲೂ ಸಹ ನೀರು ತುಂಬುತ್ತಿದೆ ಎಂದರು. ಎರಡನೆಯ ರಾತ್ರಿಯೂ ಸಹ ಇದೇ ಕನಸು ಪುನರಾವರ್ತಿತವಾಯಿತು ಆದರೆ ರಾಜ ಅದರ ಬಗ್ಗೆ ಗಮನ ಹರಿಸಲಿಲ್ಲ. ಮೂರನೇ ರಾತ್ರಿ ಇರಾಕಿನ ಮುಖ್ಯ ಮುಫ್ತಿಯ(ನ್ಯಾಯಾಧಿಪತಿ) ಕನಸಲ್ಲಿ ಹಝರತ್ ಹುದೈಫಾ(ರ) ಬಂದು ಹೀಗೆ ಹೇಳಿದರು – “ನಮ್ಮ ಶರೀರಗಳನ್ನು ಸಮಾಧಿಗಳಿಂದ ಬೇರೆ ಕಡೆಗೆ ವರ್ಗಾವಣೆ ಮಾಡಲು ರಾಜನಿಗೆ ಎರಡು ರಾತ್ರಿಗಳಿಂದ ಸೂಚನೆ ನೀಡಿದ್ದರೂ, ಇತ್ತ ಗಮನ ಹರಿಸುತ್ತಿಲ್ಲ. ಆತನಿಗೆ ನಮ್ಮ ಸಮಾಧಿಗಳನ್ನು ವರ್ಗಾವಣೆ ಮಾಡಲು ಹೇಳಿ!”
ರಾಜನೊಂದಿಗೆ ಮುಫ್ತಿಯ ಮಾತುಕತೆಯಾಯಿತು. ಈ ಕಾರ್ಯವನ್ನು ನೆರವೇರಿಸಲು ಮುಫ್ತಿಯವರು ಫತ್ವಾ (ಅಪ್ಪಣೆ) ನೀಡುವಂತೆ ಸೂಚಿಸಲಾಯಿತು. ಪ್ರಧಾನಮಂತ್ರಿ ಮಾಧ್ಯಮದ ಮೂಲಕ ಈ ವಿಷಯವನ್ನು ಜನರಿಗೆ ತಲುಪುವಂತೆ ಮಾಡಿದನು. ಜಿಲ್ಹಜ್ ಹತ್ತನೇ ತಾರೀಖಿನಂದು (ಬಕ್ರೀದ್ ತಿಂಗಳು) ಮಧ್ಯಾಹ್ನದ ನಮಾಜಿನ ನಂತರ ಸಮಾಧಿಗಳನ್ನು ಅಗೆದು ಪವಿತ್ರ ಶರೀರಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಯಿತು.
ಹಜ್ ತಿಂಗಳಾದ್ದರಿಂದ ಎಲ್ಲಾ ಹಜ್ ಯಾತ್ರಿಗಳು ಷಾ ಫೈಸಲ್ಗೆ ಈ ಕಾರ್ಯಾಚರಣೆ ಮುಂದೂಡಬೇಕು, ಏಕೆಂದರೆ ಈ ಅದ್ಭುತ ದೃಶ್ಯವನ್ನು ನಮಗೂ ಸಹ ನೋಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಬೇಡಿಕೊಂಡರು. ಆಗ ರಾಜ ಈ ಕಾರ್ಯವನ್ನು 20ನೇ ತಾರೀಖಿಗೆ ಮುಂದೂಡಿದನು.
20ನೇ ತಾರೀಖಿನ ಮಧ್ಯಾಹ್ನದ ನಮಾಜಿನ ನಂತರ ಎಲ್ಲಾ ಜಾತಿಯ ಜನ ಸಂದಣಿಯಿಂದ ಬಾಗ್ದಾದ್ ತುಂಬಿಕೊಂಡಿತು. ಮೊದಲನೆಯದಾಗಿ ಹಝರತ್ ಹುದೈಫಾ(ರ)ರವರ ಸಮಾಧಿಯನ್ನು ಅಗೆದು ಬಹಳ ಸುರಕ್ಷಿತವಾಗಿ ಶರೀರವನ್ನು ತೆಗೆಯಲಾಯಿತು. ಕನಸಲ್ಲಿ ಹೇಳಿದಂತೆ ಸಮಾಧಿಯಲ್ಲಿ ನೀರು ತುಂಬಿತ್ತು. ರಾಜ, ನ್ಯಾಯಾಧೀಶ, ಪ್ರಧಾನಮಂತ್ರಿ ಮತ್ತು ಈಜಿಪ್ಟಿನ ಯುವರಾಜ ಫಾರೂಕ್ ಸೇರಿ ಶರೀರವನ್ನು ಗಾಜಿನ ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿಟ್ಟರು. ನಂತರ ಹಝರತ್ ಜಾಬಿರ್ರವರ(ರ) ಶರೀರವನ್ನು ಸಹ ಸಮಾಧಿಯಿಂದ ಹೊರ ತೆಗೆದು ಗಾಜಿನ ಪೆಟ್ಟಗೆಯಲ್ಲಿಡಲಾಯಿತು.
ಜನಸಂದಣಿ ಈ ವಿಸ್ಮಯ ದೃಶ್ಯವನ್ನು ವೀಕ್ಷಿಸುತ್ತಿದ್ದರು. ಎರಡು ಶರೀರಗಳು ಜೀವಂತ ಶರೀರಗಳಂತೆ ತಾಜಾ ಆಗಿ ಕಾಣುತ್ತಿದ್ದವು. ಬಾಗ್ದಾದಿನಿಂದ ಮೂವತ್ತು ಮೈಲಿ ದೂರವಿರುವ ‘ಸಲ್ಮಾನ್ ಪಾರ್ಕ್’ ಎಂಬ ಸ್ಥಳದಲ್ಲಿ ಮತ್ತೊಬ್ಬ ಪ್ರವಾದಿ ಮುಹಮ್ಮದ್ರವರ(ಸ) ಸಹಚರರಾಗಿದ್ದ ಹಝರತ್ ಸಲ್ಮಾನ್ ಫಾರ್ಸಿರವರ(ರ) ಸಮಾಧಿಯ ಪಕ್ಕ ಹೊಸ ಸಮಾಧಿಗಳನ್ನು ಮಾಡಲಾಯಿತು.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.