(www.vknews.in) : ನನ್ನ ಕವನ ಸಂಕಲನ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ಆದರೆ ಅದು ಆಗಲಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಬರೆದಿದ್ದ ನನ್ನ ಕವನಗಳು ಕಣ್ಣಿಗೆ ಬಿದ್ದವು. ಅದನ್ನು ನಿಮ್ಮ ಮುಂದೆ ಪ್ರಕಟಿಸುತ್ತಿದ್ದೇನೆ.
ಕವನ ಸಂಕಲನ ಕುರಿತು: ಕಲುಶಿತ ಸಮಾಜದ ಶುದ್ಧೀಕರಣಕ್ಕೆ ಸಾಹಿತ್ಯ ಕೂಡ ದಿವ್ಯ ಔಷಧ. ಸಾಹಿತ್ಯದಿಂದ ಕ್ರಾಂತಿಗಳಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಇಂದಿನ ಕಾಲಮಾನವನ್ನು ಗಮನಿಸುತ್ತಿದ್ದರೆ ಎಲ್ಲರೂ ಬೆಚ್ಚಿ ಬೀಳುವಂತ ಸಂಗತಿಗಳು ಘಟನೆಗಳು ನಮ್ಮ ಕಣ್ಮುಂದೆ ಹಾದು ಹೋಗುತ್ತಿವೆ. ಕೊಲೆ,ಸುಲಿಗೆ,ಅತ್ಯಾಚಾರ,ಮೋಸ- ವಂಚನೆ,ಕಪಟತನ,ದುರಾಸೆ, ಲಂಚಗುಳಿತನ ಒಂದೆ-ಎರಡೆ..? ಎಣಿಸುತ್ತ ಹೋದರೆ ಪಟ್ಟಿ ಬೆಳೆಯುತ್ತದೆ. ಇಂತಹ ಕಲುಶಿತ ಕತ್ತಲೆಯಲ್ಲಿ ಸತ್ಯದ ಎಳೆಗಳು ಬೆಳ್ಳಿಗೆರೆಯಂತೆ ಕಾಣಿಸುತ್ತವೆ. ಆ ಸತ್ಯದ ಎಳೆಯೇ ಮುಂದೆ ಆದರ್ಶವಾಗುತ್ತದೆ.
ಕವಿಯಾದವನು, ಸಾಹಿತಿಯಾದವನು ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ತನ್ನ ಹೃದಯಂತರಾಳದಲ್ಲಿ ಗರ್ಭಿಸಿಕೊಂಡು ಕಾವ್ಯ-ಕತೆಗಳ ಹಾಗೂ ಲೇಖನಗಳ ಮೂಲಕ ಸಮಾಜಕ್ಕೆ ಚಿಕಿತ್ಸೆ ನೀಡಲು ಹೊರಡುತ್ತಾನೆ. ಮನುಷ್ಯ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದಾನೆ. ಹಸಿರು ಕ್ರಾಂತಿಯಿಂದ ಭೂಮಿ ಬಂಜರಾಗುತ್ತಿದೆ. ಅಂತರ್ಜಲ ಕುಸಿದಿದೆ. ರಸ್ತೆಗಳ ಪಕ್ಕ ತೋಪಿನಂತಿದ್ದು ಪ್ರಯಾಣಿಕರಿಗೆ ಸದಾ ನೆರಳು ನೀಡುತ್ತಿದ್ದ ನೂರಾರು ವರ್ಷದ ಮರಗಳು ನೆಲಕ್ಕುರುಳಿ ಬೋಳು-ಬೋಳಾಗಿ ಮಾರಿಗೊಂದು ಊರಾಗಿದೆ.
ಇದನೆಲ್ಲ ಗಮನಿಸುತ್ತಿರುವ ಕವಿ ಜಬೀವುಲ್ಲಾ ಖಾನ್ ಅವರು ತಮ್ಮದೆಯಾದ ಶೈಲಿಯಲ್ಲಿ ಹೀಗೆ ಹೇಳುತ್ತಾರೆ – “ಹಿತ್ತಿಲಿಲ್ಲದ ಮನೆ, ಮನೆ ಮಧ್ಯೆ ಕಕ್ಕಸು, ನೋಡಿ ನಮ್ಮ ಜೀವನ ಸರ್ಕಸು, ಕೆರೆ ಇಲ್ಲ ಹೊಳೆ ಇಲ್ಲ ಬಾವಿ ಇಲ್ಲ, ನೀರಿಗಾಗಿ ನಿದ್ದೆ ಹೋಯಿತಲ್ಲ” – ಮುಂದೊಂದು ದಿನ ಯುದ್ಧ ಅಂತ ನಡೆದರೆ ಅದು ನೀರಿಗಾಗಿಯೇ ನಡೆಯಬೇಕೇನೋ! ನೀರಿಗಾಗಿ ನಿದ್ದೆಹೋಯಿತಲ್ಲ; ಎಂದು ಕವಿ ಮುನ್ನೆಚ್ಚರಿಕೆಯನ್ನು ಕೊಡುತಾರೆ. ಹದ್ದುಗಳ ಕಣ್ಣು ನನ್ಮೇಲೆ, ಯೌವನದ ಬೆಂಕಿ ಎದೆಯಲಿ – ದಿನ ನಿತ್ಯವೂ ಹೆಣ್ಣಿನ ಬಗ್ಗೆ ಪತ್ರಿಕೆಗಳಲ್ಲಿ ಹಾಗೂ ವಾಹಿನಿಗಳಲ್ಲಿ ಗಮನಿಸುತ್ತಿದ್ದೇವೆ.
ವಿದ್ಯೆ ಕಲಿಸುವ ಶಿಕ್ಷಕ ತನ್ನ ಶಿಷ್ಯೆ ಮೇಲೆ ಅತ್ಯಾಚಾರ, ಉಪದೇಶ ಮಾಡುವ ಆಧ್ಯಾತ್ಮಿಕ ಗುರು ತನ್ನ ಭಕ್ತೆಯ ಮೇಲೆ ಅತ್ಯಾಚಾರ, ಅಧಿಕಾರಿ ತನ್ನ ಕೈಕೆಳಗಿರುವ ನೌಕರಳ ಮೇಲೆ ಅತ್ಯಾಚಾರ, ತಂದೆ ಮಗಳ ಮೇಲೆ ಅತ್ಯಾಚಾರ, ಅಮಾಯಕ ಪ್ರವಾಸಿಗರ ಮೇಲೆ ಅತ್ಯಾಚಾರ – ಹೀಗೆ ಹೆಣ್ಣಿನ ಮೇಲೆ ನಿರಂತರ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಈ ರೀತಿಯ ವಾತಾವರಣದಲ್ಲಿ ಒಂಟಿ ಹೆಣ್ಣು ಯಾವ ರೀತಿ ಬದುಕು ಸಾಗಿಸಬೇಕು? ಇದರ ಬಗ್ಗೆ ಚಿಂತಿಸಿ ಕವಿ ಮೇಲಿನ ಸಾಲುಗಳನ್ನು ಬರೆದಿರಬೇಕು. ಎತ್ತ ಹೋದರೂ ದೇಶದಲ್ಲಿ ದುರಾಡಳಿತ ತಾಂಡವಾಡುತ್ತಿದೆ. ಈ ದೇಶದ ಗತಿ ಏನಾಗುತ್ತೋ, ಎತ್ತ ಹೋದರೂ ವಿಷಸರ್ಪದಂತಿರುವ ಅಧಿಕಾರಿಗಳಿದ್ದಾರಲ್ಲ ಎಂಬ ಕೊರಗು ಕವಿಯನ್ನು ಕಾಡುತ್ತಿರಬೇಕು. ಆ ನೆಲೆಯಲ್ಲಿ ಚಿಂತಿಸುವುದು ಈ ರೀತಿ – “ಏನಾಗುವುದೋ ಈ ಬನದ ಭವಿಷ್ಯ, ಪ್ರತಿಯೊಂದು ಕೊಂಬೆಯ ಮೇಲೆ ಕುಳಿತಿದೆ ವಿಷಸರ್ಪ” ಸರ್ಕಾರವಾಗಲಿ, ಸಮಾಜವಾಗಲಿ ತಪ್ಪು ದಾರಿ ಹಿಡಿದಾಗ ಅದನ್ನು ಎಚ್ಚರಿಸು ಹೊಣೆಗಾರಿಕೆ ಪ್ರಜ್ಞಾವಂತರದಾಗಿರುತ್ತದೆ.
“ಕುರುಡು ಕಾಂಚಾಣ ಕುಣಿಯುತಲಿತ್ತು , ಕಲಿಗೆ ಬಿದ್ದವರ ತುಳಿಯುತಲಿತ್ತು” – ಬೇಂದ್ರೆಯವರ ಈ ಕವನವನ್ನು ನೆನಪಿಸುವಂತ ರೀತಿಯಲ್ಲಿ ಖಾನ್ ಅವರು – “ಕುರುಡು ಸರ್ಕಾರ ಕುಣಿಯುತಿದೆ, ನಾಡ ಜನರ ತುಳಿಯುತಿದೆ ಕುರುಡು ಸರ್ಕಾರ” ಎಂದು ಸರ್ಕಾರವನ್ನು ಎಚ್ಚರಿಸುತ್ತಾರೆ. ಮುಂದೇನಾಗುವುದೋ, ಕಾದು ನೋಡಬೇಕು – ಇಂದಿನ ರಾಜಕಾರಣದ ಮೇಲೆ ಕವಿಗೆ ಆಕ್ರೋಶವಿದೆ. ವಿಭಕ್ತ ಕುಟುಂಬದ ಚಿತ್ರಣವನ್ನು ಖಾನ್ ಈ ರೀತಿ ಕಟ್ಟುತ್ತಾರೆ – “ಒಂದೇ ಮನೆ ಎರಡು ಒಲೆ, ಮನಶಾಂತಿ ಆಯಿತು ಕೊಲೆ, ಇತ್ತ ತುತ್ತು ಅತ್ತ ಮುತ್ತು”- ಜಬೀವುಲ್ಲಾ ಖಾನ್ ಅವರು ಎಲ್ಲ ಸ್ತರದಲ್ಲೂ ಕವನ ಪೋಣಿಸಿದ್ದಾರೆ. ಮುಂದೆ ಇವರು ಉತ್ತಮ ಕವಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ನೆಲೆಯಲ್ಲಿ ಇವರ ಸಾಧನೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಸಮಾಜದ ವಿವಿಧ ಸ್ತರಗಳಲ್ಲಿ ತಮ್ಮ ಗಮನವನ್ನು ಹರಿಸಿ ಕಾವ್ಯ ಕಟ್ಟುವ ಪ್ರಯತ್ನ ಮಾಡಿದ್ದಾರೆ.
ಬರೆಯುವುದರ ಜೊತೆಗೆ ಹೆಚ್ಚು ಅಧ್ಯಯನ ಶೀಲರಾದಾಗ ತಮ್ಮ ಅಂತರಂಗದಲ್ಲಿ ಮೂಡುವ ಭಾವನೆಗಳಿಗೆ ಇನ್ನೂ ಗಟ್ಟಿಯಾದ ಕಾವ್ಯ ಕಟ್ಟುವ ಶಕ್ತಿ ಬರುತ್ತದೆ. ಅಯುತರ ಚಿಂತನೆಗಳೆಲ್ಲ ಸಮಾಜಮುಖಿಯಾಗಿದ್ದು ಸಮಾಜದ ಬಗ್ಗೆ ಅಪಾರ ಕಾಳಜಿವಹಿಸಿದ್ದಾರೆ. ಇದೇ ರೀತಿ ಮುಂದೆಯು ಉತ್ತಮ ಚಿಂತನೆ ನಡೆಸುತ್ತ ಉತ್ತಮ ಕಾವ್ಯ ಕಟ್ಟಲಿ ಎಂದು ಆಶಿಸುತ್ತೇನೆ. – ಸಾ.ಮ.ಶಿವಮಲ್ಲಯ್ಯ – ಸಾಹಿತಿ ಮತ್ತು ಸಾಮಾಜಿಕ ಚಿಂತಕರು
ಖಾನ್ ಕವನಗಳು
ಪ್ರಾರ್ಥನೆ ನೀನೆ ನನ್ನ ದೈವ ನೀನೆ ನನ್ನ ದಾತ ನೀನೆ ವಿಶ್ವದ ಪ್ರಭು
ಪರಮ ದಯಾಳು, ಕರುಣಾನಿಧಿಯು ನಿರ್ಣಾಯಕ ದಿನದ ಅಧಿಪತಿಯು
ನಿನ್ನ ಸ್ನೇಹದಿಂದ ಅರಿತುಕೊಂಡೆ ಇಂದು ಸುತ್ತಮುತ್ತಲೆಲ್ಲವು ನಿನ್ನದೆ ಪ್ರಕಾಶವು
ತುಸು ಇತ್ತ ನೋಡು ತುಸು ಕರುಣೆ ತೋರು ನಿನ್ನ ಬಿಟ್ಟರೆ ನನಗೆ ಯಾರಿರುವರು ಹೇಳು
ಸದ್ಬುದ್ಧಿ ನೀಡು ಸನ್ಮಾರ್ಗ ತೋರು ಪಾಪವ ಅಳಿಸಿ ಅಪರಂಜಿ ಮಾಡು
ಎಲ್ಲರ ಹಣೆಯ ಬರಹಗಾರ ನೀನು ಬರೆ ನನ್ನ ವಿಧಿಯ ಸುವಣðಶಾಯಿಯಲ್ಲಿ
ನಾನೊಬ್ಬ ಮನುಜ ದುಡುಕೋದು ಸಹಜ ತೋರು ನೀನೆ ದಾರಿಯು ನೀನೆ ನನ್ನ ದೀಪವು
ಕರ್ನಾಟಕ ನಾಡನು ಸಮೃದ್ಧಿಗೊಳಿಸು ಭಾರತ ದೇಶದ ಕೀರ್ತಿಯ ಬೆಳಗು
ಪ್ರವಾದಿ ಮುಹಮ್ಮದ್(ಸ) ಪ್ರವಾದಿ ಮುಹಮ್ಮದ್ ಹೆಸರೆ ಮಧುರ ಅವರ ನಮ್ಮ ಪ್ರೇಮ ಅಮರ ಎಲ್ಲೂ ನಿಮ್ಮ ಬೆಳಕು ಸ್ವಾಮಿ ನಮ್ಮ ಬಾಳು ಬೆಳಗಿ ಸ್ವಾಮಿ
ಸೂರ್ಯವೂ ಮರಳಿತು, ಚಂದ್ರವೂ ಹೋಳಾಯಿತು ಕಲ್ಲೂ ಮಾತು ಕೇಳಿತು, ಮೋಡ ನೆರಳು ನೀಡಿತು
ನೀವು ಜಗದ ಪ್ರವಾದಿ ಸ್ವಾಮಿ ಪ್ರೇಮ ನಿಮ್ಮ ಭಾಷೆ ಸ್ವಾಮಿ
ಅಂಧಕಾರದ ಹೊತ್ತಲಿ, ಕ್ರೂರ ಜನರ ನಡುವಲಿ ಅಶಾಂತಿಯ ಊರಲಿ ಭಯಭೀತಿಯ ಬದುಕಲಿ
ಜನಿಸಿ ನಮ್ಮ ಪ್ರವಾದಿ ಸ್ವಾಮಿ ಶಾಂತಿ ತಂದ ಮಹಾತ್ಮ ಸ್ವಾಮಿ
ಅನಾಥರ ಆಸರೆ, ಬಡಬಗ್ಗರ ಸ್ನೇಹಿತ ಬಲಹೀನರ ಸೇವಕ, ಪೀಡಿತರ ರಕ್ಷಕ
ಸತ್ಯ ವಾದಿ ಪ್ರವಾದಿ ಸ್ವಾಮಿ ನ್ಯಾಯ ಕೊಟ್ಟ ಧೀಶ ಸ್ವಾಮಿ
ಮೊಹರಂ ನವಮಾಸ ಕರ್ಬಲಾದ ಸುಡು ಬಿಸಿಲಿನಲ್ಲಿ ಫುರಾತೆಯ ಕಡು ತೀರದಲ್ಲಿ
ರಣಭೂಮಿಯ ಭಯಂಕರ ಸಂಕಷ್ಟದ ಘಳಿಗೆಯಲಿ ಸತ್ಯಸುವರ್ಣಕದನದ ರಕ್ತ ಸಿಕ್ತ ಚರಿತ್ರೆಯಲ್ಲಿ ಸತ್ಯೋತ್ಸವ ಹುಸೇನ್ ಸತ್ಯೋತ್ಸವ ನಿಮಗೆ ಸತ್ಯೋತ್ಸವ ಬಾಬಾ ಸತ್ಯೋತ್ಸವ
ಸಾಹಸದ ಶಿಖರದಲ್ಲಿನ ಇತಿಹಾಸದ ಪಾಳಿಯಲಿ
ನವಮಾಸ ಹೇಳುತಿರುವ ಘಟನೆಗಳ ಜೀವದಲಿ ಜನಜನತೆಯ ಮನಗಳಲ್ಲಿ ಮಸೀದಿಗಳ ಸ್ತುತಿಗಳಲಿ
ಸತ್ಯೋತ್ಸವ ಹುಸೇನ್ ಸತ್ಯೋತ್ಸವ ನಿಮಗೆ ಸತ್ಯೋತ್ಸವ ಬಾಬಾ ಸತ್ಯೋತ್ಸವ
ಗೆಲುವನ್ನದ ಗರಿಮೆಯೆ ಸೋಲನ್ನದ ಹಿರಿಮೆಯೆ ಸತ್ವಿಕಾಸ ವೀರ ನಡೆಯ ಸ್ವರ್ಗಾಮೃತ ಚಿಲುಮೆಯೇ ಈ ಸತ್ಸಮರ ನಿತ್ಯಮರ ದೇವರ ಲೀಲೆಯೆ ಸತ್ಯೋತ್ಸವ ಹುಸೇನ್ ಸತ್ಯೋತ್ಸವ ನಿಮಗೆ ಸತ್ಯೋತ್ಸವ ಬಾಬಾ ಸತ್ಯೋತ್ಸವ
ಅನ್ಯಾಯ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ ಜಗದಲಿ ರೋಸಿಹೋದ ಆನಾಥ ಮನಸ್ಸುಗಳಲ್ಲಿ ಸಿಟ್ಟು ನಾಳೆಯೋ ನಾಳಿದ್ದೋ… ಮುಕ್ತಿಯ ಕನಸು.
ಕ್ರಾಂತಿಯ ಕನಸು ಭ್ರಮೆ ಪ್ರಕೃತಿಯೂ ಮೂಕ ಏನಾಗುವುದೋ ಈ ಬನದ ಭವಿಷ್ಯ ಪ್ರತಿಯೊಂದು ಕೊಂಬೆಯ ಮೇಲೆ ಕುಳಿತಿದೆ ವಿಷಸಪð ಆದರೂ
ಕತ್ತಲೆಯ ಹಾದಿಯಲ್ಲಿ ಆಸೆ ಆಕಾಂಕ್ಷೆಗಳ ದೀಪ ಎದುರಾಗುವ ಪ್ರತಿ ನೆರಳಲ್ಲೂ ನ್ಯಾಯಕ್ಕಾಗಿ ಹುಡುಕಾಟ.
ಕಾವೇರಿ ಮೀನುಗಳ ಮಾತು ಕಾವೇರಿ ತಾಯಿ ನೀ ಹರಿದು ಬರುವಾಗ ಕಳೆದ ಯುಗಗಳೆಷ್ಟೋ… ಇಂದೇಕೋ ಬಾಡಿದಂತಿದೆ ನಿನ್ನ ಮುಖ ನಿನ್ನಲೆಗಳೇನೋ ಪಿಸುಗುಟ್ಟುತ್ತಿವೆ ಸದಾ ಮಿನುಗುತ್ತಿದ್ದ ನಿನಗೆ ನೋಯಿಸುತ್ತಿರುವವರಾರು? ನೀನು ಸ್ವತಂತ್ರಳಲ್ಲ ಎಂಬ ನೋವೇ? ನಮ್ಮೊಂದಿಗೇನು ಮುಚ್ಚುಮರೆ ನಾವು ನಿನ್ನ ಮಡಿಲಲ್ಲಿಲ್ಲವೇ ಮಾತಾಡು, ಮೌನ ಮುರಿ ನಿನ್ನ ಹೃದಯಗರ್ಭದಲಿ ಅದೇನಡಗಿದೆ ಹೇಳು ಏನಂತ ಹೇಳಲಿ ಮೀನುಗಳೇ ಮರುಗಿದೆನ್ನ ಮನ, ಕೊರಗುತ್ತಿರುವೆ ರಾಜಕೀಯದ ಬೇಲಿಗಳಲಿ ಸಿಲುಕಿ ನಲಗುತ್ತಿರುವೆ ಬಹಳ ಬೇಸರವಾಗಿದೆ, ಬಂಡೆಗಳಿಗೆ ತಲೆ ಚಚ್ಚುತ್ತಿರುವೆ ಒಂದು ದಿನ ನಾನೇ ಬತ್ತಿ ಹೋಗುವೆ ಆಮೇಲೆ ಕುಡಿಯಲಿ ಅವರವರ ರಕ್ತ
ಹಾಗೆನ್ನಬೇಡ ತಾಯೀ ನಮ್ಮನ್ನಗಲಬೇಡ ತಾಯೀ ನೀನು ರೈತರ ಉಸಿರು ಮರೆಯಬೇಡ ತಾಯೀ
ಇರುವೆ ಒಂದು ಇರುವೆ ಕಂಡಿತು ಬೆಲ್ಲ ಹೇಳಿತು ಸಾಲಾಗಿ ನಡೆಯಿರಿ ಎಲ್ಲ ಒಂದರ ಹಿಂದೆ ಒಂದು ಶಿಸ್ತಿನಿಂದ ಸಾಲಾಗಿ ನಡೆಯಿತು ದಂಡು ಎಲ್ಲವೂ ಸೇರಿ ಎಳೆದವು ಬೆಲ್ಲ ತೋರಿದವು ಶಕ್ತಿಯ ಪ್ರದರ್ಶನವೆಲ್ಲ ಒಗ್ಗಟ್ಟಿನಲ್ಲಿ ಗುರಿ ಫಲಿಸಿತು ಎಲ್ಲವಕ್ಕೂ ಬೆಲ್ಲ ಲಭಿಸಿತು
ಅಹಂ ನಾನು ಹೋಗುತ್ತಿದ್ದ ದಾರಿಯಲಿ ಒಂದೆಡೆ ಗಿಡಮರಗಳ ಸಾಲು, ಒಂದೆಡೆ ಮಸಣ ಕಾಲಿಗೇನೋ ತಾಕಿದಂತಾಯಿತು ಅದು ಬೇರೇನಲ್ಲ ಶವದ ಮೂಳೆ ನನಗೆ ಹೇಳಿತು – ಓ ನಡೆಯುವವನೆ ತಗ್ಗಿ ಬಗ್ಗಿ ನಡೆ, ಒಮ್ಮೆ ನಾನೂ ಮನುಷ್ಯನಾಗಿದ್ದೆ ಇದೇ ನಿನ್ನ ನೈಜ ನೆಲೆ.
ಮನಸ್ಸು ನನ್ನದೂ ಮನಸ್ಸು ಕಲ್ಲಲ್ಲ ದು:ಖ ಪಡದೆ ಇರೋಲ್ಲ ಈ ಬಾಳು ದುಃಖಗಳ ಗಂಟು ಸಾಯುವ ತನಕ ಮನುಷ್ಯನಿಗೆ ಬಿಡದು ಇದರ ನಂಟು ಮನೆಯಿಲ್ಲ ಮಠವಿಲ್ಲ ಕುಳಿತಿರುವೆ ದಾರಿಯಲಿ ಯಾರೂ ಕೇಳಲಿಲ್ಲ ಬಿಕ್ಕಿ ಬಿಕ್ಕಿ ಅಳುತ್ತಿರುವೆ ವ್ಯಥೆ ಪಡುತ್ತಿರುವೆ ನನ್ನದೂ ಮನಸ್ಸು ಕಲ್ಲಲ್ಲ ದು:ಖ ಪಡದೆ ಇರೋಲ್ಲ
ವಿಧವೆ ನಾನು ವಿಧವೆ ಮಾಡಿ ನನಗೆ ಮರುಮದುವೆ ಹದ್ದುಗಳ ಕಣ್ಣು ನನ್ಮೇಲೆ ಭಯ ಭೀತಿಯ ಬದುಕು ಕಡು ಬಡತನ ಅಪಶಕುನಳೆಂಬ ಕಳಂಕ ಯೌವನದ ಬೆಂಕಿ ಎದೆಯಲಿ. ನಿಮ್ಮಂತೆಯೇ ನನ್ನದು ಮನಸ್ಸಲ್ಲವೇ? ನಾನು ವಿಧವೆ ಮಾಡಿ ನನಗೆ ಮರುಮದುವೆ
ಬಡತನ ನೊಂದ ಮನಸು ಬೆಂದ ಕನಸು ದಾರಿ ಏನೂ ಕಾಣೆನು ಸಾಲದ ಭಾರ ಬಾಳು ಬಲು ಘೋರ ಈ ಬೇನೆ ನಾ ತಾಳೆನು ವಯಸ್ಸಿಗೆ ಬಂದ ಮಗಳು ಚಿಂತೆ ಕಾಡುತಿದೆ ಹಗಲಿರುಳು ವರದಕ್ಷಿಣೆಯ ಪಿಡುಗು ಮೈಯೆಲ್ಲಾ ನಡುಗು ಬಡವನ ಅಳಿಯನಾಗಲು ಯಾರಿಗೂ ಇಷ್ಟವಿಲ್ಲ ಬಡ ಹೆಣ್ಣಿಗೆ ಬಾಳು ಕೊಡಲು ಯಾರೂ ಸಿದ್ಧರಿಲ್ಲ ಹಣವಂತನಾಗುತಿದ್ದಾನೆ ಹಣವಂತ, ಬಡವ ಬಡವನೇ ಈ ಅರ್ಥಶಾಸ್ತ್ರ ತಿಳಿಯಲಾರೆ ನಾವೂ ಜನರು, ಬದುಕಿ, ಬದುಕಲು ಬಿಡಿ ಪ್ರತಿ ಬಣ್ಣದ ಹೂವು ಅರಳಲು ಬಿಡಿ.
ಚಿನ್ನ ಭುವಿಯ ಮಡಿಲಲ್ಲಿದ್ದೆ ನಿಶ್ಚಿಂತೆಯಾಗಿ ಮಲಗಿದ್ದೆ ಭೂತಾಯ ಅಗೆದು ನನ್ನ ಹೊರ ತೆಗೆದು ನನ್ನ ಸ್ನೇಹ ಕಿತ್ತೊಗೆದು ನನ್ನನು ಬೆಂಕಿಯಲಿ ಸುಟ್ಟು ಕೊಡಬಾರದ ಹಿಂಸೆ ಕೊಟ್ಟು ಕರಗಿಸಿ ಹೊಸ ರೂಪವ ಕೊಟ್ಟು ಮಾರುಕಟ್ಟೆಯಲಿ ಮಾರಲಿಟ್ಟು ಬಂದವರಿಗೆಲ್ಲಾ ನೋಡಲು ಬಿಟ್ಟು ಕೈ ಕೈಯಲಿ ಕೊಟ್ಟು ಬೆಲೆ ಕಟ್ಟಿ, ನನ್ನ ಮಾನ ಹರಾಜಿಟ್ಟು ಬಂದ ಹಣ ಎಣಿಸಿಟ್ಟು ನನ್ನನು ಮಾರಿಬಿಟ್ಟರು. ಶ್ರೀಮಂತರ ಕತ್ತಲಿ ಕಿವಿಯಲಿ ಮೂಗಲಿ ಕೈಯಲಿ ಕಾಲಲಿ ನಾನು ಶೃಂಗಾರದ ಹೆಸರಲಿ, ಗರ್ವದ ಕೆಸರಲಿ ಕೊಲೆಯಾದೆ ನಾನು. ನನಗಾಗಿ ಕೊಲೆ ದರೋಡೆ ಸುಲಿಗೆ ಛೆ ಏಕಾಗಿ ಬಂದೆ ನಾ ಹೊರಗೆ ನನಗೆ ಸಾವಿಲ್ಲ ಬದುಕಿದ್ದರು ನನಗೆ ಬದುಕಿಲ್ಲ ಏನು ಮರ್ಮವೋ ಏನು ಕರ್ಮವೋ ನಾನು ಬಂಗಾರ ನಿಮಗೆ ಸಿಂಗಾರ.
ಸಿಹಿ ಕಹಿ ದಿನಗಳು ಇರುವುದಿಲ್ಲ ಆ ದಿನ ಉಳಿಯುವುದು ಆ ನೆನಪು ತುಂಬಾ ದೂರದಿಂದ ನಡೆದು ಬಂದೆ ಎಣಿಸಲಸಾಧ್ಯ ಆ ಹೆಜ್ಜೆಗಳು ಅದೆಷ್ಟೊಂದು ತಿರುವು ಬಾಳ ಪಥದಲಿ ಗೊಂಬೆಯಾದೆನು ಸಮಯದ ಕೈಯಲಿ ಬಯಸಿದ್ದೆಲ್ಲ ನಡೆಯಲಿಲ್ಲ ನಡೆದಿದ್ದೆಲ್ಲ ಕಹಿ ಸತ್ಯ ದೇವರಿದ್ದಾನೆ ಎಂಬುವುದಕ್ಕೆ ಸಾಕ್ಷಿ ಮೌನದಾಗರವಾಯಿತು ಮನಸ್ಸು ಚಿಕ್ಕವರಾಗಿದ್ದಾಗ ದೊಡ್ಡವರಾಗುವ ಚಿಂತೆ ದೊಡ್ಡವರಾದಾಗ ಚಿಂತೆಗಳ ಕಂತೆ ಬಾಲ್ಯ, ಯೌವ್ವನ, ವೃದ್ಧಾಪ್ಯ ‘ನಾಲ್ಕು ದಿನಗಳ ಜೀವನ’ ಕೇಳಲೆಷ್ಟು ಚೆನ್ನ ಈ ಬಾಯಿಮಾತು ವರ್ಷಗಳು ಉರುಳಿದವು ಆ ನಾಲ್ಕು ದಿನ ಕಳೆಯಲು ಐದನೆ ದಿನವೇ ಸಾವು ಮುಕ್ತಾಯವಾಯಿತು ಬಾಳ ಪುಟವು
ಹೋರಾಟ ಹುಟ್ಟಿದರೆ ಎಲ್ಲರು ಸಂತಸ ಪಡುವರು ಸತ್ತರೆ ಅಳುವರು ಅರ್ಥವಾಗದು ಏನಿದು ತಮಾಷೆ ನಾಲ್ಕು ದಿನಗಳ ಜೀವನ ಇಷ್ಟೊಂದು ಭಾರವೇಕೆ ಅರ್ಥವಾಗದು ಏನಿದು ತಮಾಷೆ ನೀರಿಗೆ ಬೆಲೆಯುಂಟು ರಕ್ತಕೆ ಬೆಲೆಯಿಲ್ಲ ಅರ್ಥವಾಗದು ಏನಿದು ತಮಾಷೆ ಜೊತೆಯಲ್ಲೇನೂ ಬರಲ್ಲ ಮತ್ತೇಕೆ ಸ್ವಾರ್ಥ ದುರಾಸೆ ಅರ್ಥವಾಗದು ಏನಿದು ತಮಾಷೆ ಎಲ್ಲಿಂದ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಏನಿದು ಅಗ್ನಿಪರೀಕ್ಷೆ ಅರ್ಥವಾಗದು ಏನಿದು ತಮಾಷೆ ಯಾರು ದೇವರು? ಹೇಗಿದ್ದಾನವನು ನಾನು ಯಾರು? ನೀನು ಯಾರು? ಅರ್ಥವಾಗದು ಏನಿದು ತಮಾಷೆ
ಅವನು ಭೂಮಿ ಅಗೆದು ಬೀಜದ ಸಮಾಧಿ ಮಾಡಿ ಚಿಗುರೊಡೆಯುವುದನ್ನು ಕಾದರು.
ಚಿಗುರೊಡೆದು ಗಿಡವಾಗಿ ಬೆಳೆದು ಅರಳಿತು ಹೂವು.
ಒಣ ಬೀಜಕ್ಕೆ ಜೀವ ತುಂಬಿದವರಾರು ಸುವಾಸನೆ ಹೂವಿಗೆ
ಕೊಟ್ಟವರಾರು ಅವನೆ ಅವನೆ ಅವನು.
ಓ ಗುರುವೇ ನಿನ್ನ ಮುಗುಳ್ನಗೆಯ ಪ್ರಜ್ವಲ ಬೆಳಕು ಬೆಳಗಿತು ಜ್ಞಾನ ದೀಪವ ನನ್ನೀ ಕತ್ತಲ ಮನದಲಿ
ಕ್ಷಣಕ್ಷಣ ಚಿಗುರಿ ಬೆಳೆಯುತ್ತಿರುವ ನನ್ನ ಜ್ಞಾನದಾಹದ ಬಳ್ಳಿಗೆ ಬಾನೆತ್ತರ ಬೆಳೆದು ಹೂಬಿಡುವ ಆಸೆ…
ನಿನ್ನ ಪಾದಗಳಲ್ಲಿ ಮಲಗುವ ಅಪ್ಪಣೆ ಕೊಡು ಓ ಗುರುವೇ ಈ ಹೂವಿಗೆ
ಕಾಲ ನನ್ನನು ಎಲ್ಲಿ ಹುಡುಕುತಿರುವೆ ನೀನು ಬಡವನ ಬಡತನದಲಿ ನಾನು ಅನಾಥನ ಕೂಗಲಿ ನಾನು ವಿಧವೆಯ ದುಃಖದಲಿ ನಾನು ನಿರಾಶ್ರಿತರ ಸಾಲಲಿ ನಾನು ಮುರಿದ ಹೃದಯಗಳಲಿ ನಾನು ತಂದೆತಾಯಿಯ ಮಮತೆಯಲಿ ನಾನು ದಾನಿಯ ಕೈಗಳಲಿ ನನ್ನನು ಕಾಣು ವೃದ್ಧರ ವೃದ್ಧಾಪ್ಯದಲಿ ನಾನು ನಾನು ನಿರಂತರ ನನ್ನನು ಎಲ್ಲಿ ಹುಡುಕುತಿರುವೆ ನೀನು !
ವಿಸ್ಮಯ ವಿಶ್ವ ಒಂದು ಸುಂದರ ಮುಂಜಾನೆ ಪ್ರಕೃತಿ ಬಿಚ್ಚಿಡುತ್ತಿರುವ ಅಮೂಲ್ಯ ಖಜಾನೆ ಮೂಡಣ ದಿಗಂತದಲಿ ಮೋಡಗಳ ಆಟ ಪುಟಿಯುತಿರುವ ಪ್ರಥಮ ಕಿರಣಗಳ ಮಾಟ ಅದ್ಭುತ ರಂಗು ರಂಗಿನ ದೃಶ್ಯ ಮನಸೆಳೆವ ನಿಸರ್ಗ ರಹಸ್ಯ ಮರಗಳ ಹಚ್ಚ ಹಸಿರು ನಾದಮಯ ಎಲೆಗಳ ಉಸಿರು ಹಕ್ಕಿಗಳ ಇಂಚರ ಮುಂಜಾನೆ ತಂಗಾಳಿಯ ಸಡಗರ ಸೃಷ್ಟಿಯಾಯಿತು ಕಲಾತ್ಮಕ ಪರಿಸರ ಸೃಷ್ಟಿಕರ್ತನೇ ಅದೆಷ್ಟೊಂದು ಸುಂದರ ನಿನ್ನ ವಿಶ್ವ ಕಂಡು ಬೆರಗಾದೆನು ಈ ವಿಸ್ಮಯ ವಿಶ್ವ.
ಸ್ನೇಹದ ಹೆಜ್ಜೆ ಗುರುತು ಜೀವನದ ಒಂದು ಹಂತದಲಿ ಸ್ನೇಹ ಉಳಿಯಿತು ಕೇವಲ ನೆನಪಿನಲಿ ಹಳೆಯ ಸ್ನೇಹದ ನೆನಪಾಯಿತು ಸುಮ್ಮನೆ ಕಣ್ಣಲಿ ನೀರು ಹನಿಯಿತು ಇಬ್ಬರ ಬಾಯಲಿ ಎಂಜಲ ತುತ್ತು ಸ್ನೇಹದ ಕಡಲಲಿ ನೆನಪಿನ ಮುತ್ತು ಆ ದಿನಗಳು ಮತ್ತೆ ಬರುವುದಿಲ್ಲ ಆ ಸಂತಸ ಮತ್ತೆ ತರುವುದಿಲ್ಲ ನನ್ನನ್ನು ಅರ್ಥಮಾಡಿಕೊಂಡವರು ನನ್ನ ಉಸಿರಾಗಿದ್ದವರು ಹಗಲಿರುಳು ಜೊತೆಗಿದ್ದವರು ಎಲ್ಲಕ್ಕಿಂತ ಮಿಗಿಲಾಗಿದ್ದವರು ಬದುಕಿನ ರಥವನು ಹತ್ತಿ ಕಾಲದ ಸುಳಿಯಲಿ ಸಿಲುಕಿ ತೇಲಿ ಹೋದರು, ನನ್ನ ಸ್ನೇಹಿತರು ಕಣ್ಣಿಲ್ಲದವನು ಕುರುಡನಾದರೆ ಸ್ನೇಹಿತರಿಲ್ಲದವನು ಅನಾಥರಂತೆ
ಹುಚ್ಚು ಮನಸ್ಸಿನ ಹತ್ತು ಮುಖಗಳು ಮನಸ್ಸೆಂಬ ಹುತ್ತದಲಿ ಆಸೆಗಳ ಹಾವು ಘಳಿಗೆಗೊಂದು ಬಣ್ಣ ಯಾರಿಗೂ ಕಾಣದು ಅಣ್ಣ ಆಸೆಗಳ ಮಡಕೆ ಒಡೆಯಿತು ಒಂದೊಂದಾಗಿ ಆಚೆ ಹಾರಿತು ಬೆಳಿಗ್ಗೆ ತಪಸ್ವಿ, ರಾತ್ರಿ ಕಾಮಿ ರಾತ್ರಿ ಜ್ಞಾನಿ, ಬೆಳಿಗ್ಗೆ ಅಜ್ಞಾನಿ ಸುಮ್ಮನಿರಲೂ ಬಿಡುತ್ತಿಲ್ಲ ಯೋಚನೆ ಒಳ್ಳೆಯ ಕೆಟ್ಟ ಪರಿಕಲ್ಪನೆ ಗಾಳಿಯಲ್ಲಿ ಯೋಚನೆಗಳು ಹಾರುತ್ತಿರಬೇಕು ನನ್ನ ಮನಸ್ಸು ಸ್ಪರ್ಷತಂತಾಗಿರಬೇಕು! ಸ್ವರ್ಗದ ಆಸೆ ಕೆಲವೊಮ್ಮೆ ಹಣದ ಆಸೆ ಮತ್ತೊಮ್ಮೆ ಸಾವಿನ ಭಯ ಮಗದೊಮ್ಮೆ ವಿಶ್ವ ಜಯಿಸುವ ಛಲ ಕೆಲವೊಮ್ಮೆ ಕಾಲದ ಬಿರುಗಾಳಿಗೆ ಸಿಲುಕಿ ಲೋಲಕವಾಗಿದೆ ಬದುಕು ಭಾವನೆಗಳ ಕೋಟೆಯಲಿ ಕಲ್ಪನೆಗಳ ಕಹಳೆ ಯೋಚಿಸಲು ಖರ್ಚಿಲ್ಲ ಯೋಚನೆಗಳಿಗೆ ಸಾವಿಲ್ಲ
ಸಿರಿನಾಡು ಕರುನಾಡು ನಮ್ಮ ನಾಡು ನಮ್ಮ ಜನ ಸತ್ತರೂ ತೀರದು ಈ ಭೂಮಿಯ ಋಣ ಕಾವೇರಿಯ ನಾಡು ಶ್ರೀಗಂಧದ ಬೀಡು ಕರುನಾಡು ಕೆಂಪೇಗೌಡ ಶ್ರೀ ಕೃಷ್ಣದೇವರಾಯ ಒಡೆಯರು ಕಟ್ಟಿದ ಬೀಡು ಕರುನಾಡು ಟಿಪ್ಪು ಹೈದರ್ ಇಸ್ಮಾಯೀಲರ ಹೆಮ್ಮೆಯ ನಾಡು ಕರುನಾಡು ಎಲ್ಲ ಮತಧರ್ಮಗಳಿಗೂ ವಿಶ್ವವಿದ್ಯಾಲಯ ಪರನಾಡಿಗರಿಗೂ ಕಲ್ಪವೃಕ್ಷ ಕರುನಾಡು ನಮ್ಮ ಉದಾರತೆಗೆ ಯಾರೂ ಸಾಟಿ ಇಲ್ಲ ಇಲ್ಲಿ ಎಲ್ಲರೂ ಒಂದೇ ಜಾತಿ ಭೇದ ಇಲ್ಲಿಲ್ಲ ನಾವೆಲ್ಲ ಕನ್ನಡಿಗರು ಭಾಷೆ ಸಂಪರ್ಕದ ಮೂಲವೆಂಬುದು ಮರೆಯದಿರಿ ಪರಭಾಷೆ ಕಲಿತು ಕನ್ನಡ ಭಾಷೆ ತೊರೆಯದಿರಿ ಪ್ರಾಚೀನ ಭಾಷೆ ಹಳೆಗನ್ನಡ ಕಸ್ತೂರಿ ಭಾಷೆ ಹೊಸಗನ್ನಡ
ಬಂತು ದೀಪಾವಳಿ ದೀಪಗಳ ಮೇಳ, ಸೊಡರುಗಳ ಹಬ್ಬ ದೀಪಾವಳಿ ಬಾಳಲಿ ಬೆಳಕು, ಮನದಲಿ ಆನಂದ ತರಲಿ ದೀಪಾವಳಿ ಭೂಮಿಯ ರಂಗನ್ನು ಈ ರಾತ್ರಿ ನೋಡಿ ನಕ್ಷತ್ರಗಳನ್ನು ನಾಚಿಸುವಂತಿದೆ ದೀಪಗಳ ಮೋಡಿ ಈ ರಮ್ಯ ರಾತ್ರಿಯನು ಹೇಗೆ ವರ್ಣಿಸಲಿ ಬೆಳಕಿನ ಹಬ್ಬ ಹೇಗೆ ಬಣ್ಣಿಸಲಿ ಮಿಂಚು ಹುಳುಗಳ ಮಿಂಚೋ ! ಅಥವಾ ಆಕಾಶದಲಿ ರಂಗುರಂಗಿನ ನಕ್ಷತ್ರಗಳ ಹುಡಿಯೋ ! ಮನೆಯಂಗಳದಲ್ಲಿ ದೀಪಗಳ ಸಾಲು ಮನದಂಗಳದಲ್ಲಿ ಒಲವಿನ ಹೊನಲು ಹರ್ಷೊಲ್ಲಾಸದ ಗೀತೆಗಳು ತುಟಿಯಂಚಲಿ ಬಾಳಲಿ ಬೆಳಕು, ಮನದಲಿ ಆನಂದ ತರಲಿ ದೀಪಾವಳಿ
ಸತ್ಯಮೇವ ಜಯತೆ ಸತ್ಯಮೇವ ಜಯತೆ ದೇಶದ ಸೂತ್ರ ಆದರೆ ಪ್ರತಿಕ್ಷಣ ಸಾಯುತಿದೆ ಕಾನೂನಿನ ಕುಲ ಗೋತ್ರ ದುರಾಡಳಿತ ಅನ್ಯಾಯ ಗುಂಡಾಗಿರಿ ಹೆಡೆ ಎತ್ತಿವೆ ದಕ್ಷತೆ ನ್ಯಾಯ ನೀತಿ ಬದುಕಿದ್ದು ಸತ್ತಿವೆ ಮೋಸ ವಂಚನೆ ಕೊಲೆ ದರೋಡೆ ಭುಗಿಲೆದ್ದಿವೆ ಮನುಷ್ಯತ್ವ ಮಾನವೀಯತೆ ಸಹನೆ ನೆಲ ಕಚ್ಚಿವೆ ಆಸ್ಪತ್ರೆ, ಶಾಲೆ, ಅನ್ನ – ದುಬಾರಿ ಜನಸಾಮಾನ್ಯರ ಗೋಳು ಕೇಳುವವರಾರಿಲ್ಲಿ ಮನೆ ಮನ ವ್ಯಾಪಾರ ನೌಕರಿಯಲಿ ಅಶಾಂತಿ ಬದುಕಿಗಿಂತ ಸಾವು ಮೇಲು ಆದರೆ ಅದೂ ದುಬಾರಿ ಧೈರ್ಯದಿಂದ ದೇವನು ನೀಡಿರುವ ವರಗಳನು ಬಾಚಿ, ಹಾಸಿಗೆ ಇದ್ದಷ್ಟು ಕಾಲು ಚಾಚಿ ಸೋಲನೊಪ್ಪದೆ, ವಿಧಿಬರಹ ಎನ್ನದೆ ಸಮಯದ ಚಕ್ರವ್ಯೂಹ ಸೀಳಿ ಮುನ್ನಡೆ
ನಮ್ಮ ಸರ್ಕಾರ ಕುರುಡು ಸರ್ಕಾರ ಕುಣಿಯುತಿದೆ ನಾಡ ಜನರನು ತುಳಿಯುತಿದೆ ಕುರುಡು ಸರ್ಕಾರ
ಬಿಳಿ ಬಟ್ಟೆ ಧರಿಸಿ ಕಪ್ಪುಕೆಲಸ ವೆಸಗುತಿದೆ ಕುರುಡು ಸರ್ಕಾರ
ಆಶ್ವಾಸನೆ ನೀಡುತಿದೆ ದ್ರೋಹ ಬಗೆಯುತಿದೆ ಕುರುಡು ಸರ್ಕಾರ
ಸರ್ಕಾರ ಕಣ್ಣಿದ್ದೂ ಕುರುಡಾದರೂ ಜನರು ಕುರುಡರಲ್ಲ
ಮುಂದೇನಾಗುವುದೋ ಕಾದು ನೋಡಬೇಕು ಕುರುಡು ಸರ್ಕಾರ
ಅತ್ತೆ ಸೊಸೆ ಒಂದೇ ಮನೆ ಎರಡು ಒಲೆ ಮನಃಶಾಂತಿಯ ಆಯಿತು ಕೊಲೆ ಇತ್ತ ತುತ್ತು ಅತ್ತ ಮುತ್ತು ಬಿಡಿಸಲಾಗದ ಒಗಟು ಮುರಿಯಲಾರದ ನಂಟು ಹಗಲು ರಾತ್ರಿ ಜಗಳ ತಾಳಲಾರೆ ಕಿರುಕುಳ ಸಾಯುವ ಹಾಗಿಲ್ಲ ಬದುಕುವ ಹಾಗಿಲ್ಲ ದಾರಿಯೇ ತೋಚುತ್ತಿಲ್ಲ ನಿಸ್ವಾರ್ಥ ತಂದೆ ಏನೂ ತಿಳಿಯದ ತಮ್ಮ ನಿಸ್ಸಹಾಯಕ ತಂಗಿ ಮುಗ್ಧ ಕರುಳಿನ ಕುಡಿಗಳು ದುಃಖದ ಮಡು, ಮೋಡಗಳ ಅಳು ಸ್ವರ್ಗದಂಥ ಮನೆ ನರಕವಾಯಿತು ಕನಸುಗಳೆಲ್ಲ ನುಚ್ಚುನೂರಾಯಿತು ದಾರಿ ತೋರದೆ ನ್ಯಾಯ ಕಾಣದೆ ಕೊರಗಿದೆ ಮನಸು ವಿಧಿಯ ಬರಹವೋ ಅವಳ ಬರಹವೋ ಕಾಣೆನು ಪೋಷಕರ ವಯಸ್ಸು ಆಕೆಗಾಯಿತು ಪೋಷಕರ ಸ್ಥಾನ ಆಗ ಅರ್ಥವಾಯಿತು ಪಶ್ಚಾತ್ತಾಪ ಕಾಡಿತು ಆದರೆ ಕಾಲ ಮೀರಿತ್ತು
ವಿದ್ಯೆ ಕಲಿಯೋಣ ಬಾ ವಿದ್ಯೆ ಒಂದು ಜ್ಯೋತಿ ಕಲಿಯಬೇಕು ಸಾಕ್ಷರತೆಯ ಬೆಳಕಿಂದ ಬಾಳು ಬೆಳಗಬೇಕು
ಮದೀನಾದಿಂದ ಚೀನಾ ವಿದ್ಯೆಗಾಗಿ ಮಾಡಿ ಪಯಣ ಪ್ರವಾದಿವರ್ಯರ ಮಾತೆಷ್ಟು ಚೆನ್ನ
ವಿದ್ಯೆ ಎಲ್ಲರಿಗು ಸಿಗಲ್ಲ ಕಷ್ಟ ಪಡದೆ ಬರಲ್ಲ
ಕಲಿಯಲು ವಿದ್ಯೆ ವಯಸ್ಸಿನ ಮಿತಿಯಿಲ್ಲ ಹಂಬಲ ಒಂದೇ ಸಾಕು ಬೇರೇನು ಬೇಕಿಲ್ಲ
ಮೊಬೈಲ್, ವೈಫೈ, ಟೀವಿಗೆ ದುಡ್ಡುಂಟು ಶಾಲೆಯ ಶುಲ್ಕ ಕಟ್ಟಲು ದುಡ್ಡಿಲ್ಲ!
ಕಲಿಯದಿರಲು ವಿದ್ಯೆ ಕುಂಟುನೆಪ ಸರಿಯಲ್ಲ
ಶಾಲೆ ಮುಗಿಸಿ ಕಾಲೇಜಿಗೆ ಬಾ ಇದು ಜ್ಞಾನ ಮಂದಿರ ಮಗುವಂತೆ ಒಳಗೆ ಬಾ
ಯುದ್ಧಗಳು ಸಮುದ್ರ ತೀರದಲ್ಲಿ, ಬಂಡೆಯ ಮೇಲೆ ಬೆಳಗಿನಿಂದ ಸಾಯಂಕಾಲದವರೆಗೂ ಕುಳಿತು, ನಿನ್ನನೇ ನೋಡುತ ನಿನ್ನ ಅಲೆಗಳೊಂದಿಗೆ ಪ್ರೀತಿ ಚಿಗುರಿ ಮಾತು ಬೆಳೆದು, ಮಾತು ಮಾತಲ್ಲೆ ಹೃದಯ ಬಿಚ್ಚಿರುವೆ.
ಪ್ರತಿದಿನ ಬರುವೆ ನನ್ನನ್ನೇ ನೋಡುತಿರುವೆ ಏಕಾಂಗಿಯಾಗಿ ಕುಳಿತು ಗಾಡ ಚಿಂತೆಯಲ್ಲಿ ಮುಳುಗಿರುವೆ ಯಾರು ನೀನು ಎಲ್ಲಿಂದ ಬಂದಿರುವೆ.
ಏನು ಹೇಳಲಿ…. ಲೋಕದ ಬಗ್ಗೆ ಚಿಂತಿಸುತ್ತಿರುವೆ ಬುದ್ಧಿ ಮಂಕಾಗಿ ಕುಳಿತಿರುವೆ ನಿನ್ನ ತೀರದಿಂದಾಚೆಯಿಂದ ಕಂಪಿಸುತ್ತಿದೆ ಯುದ್ಧದ ಕೂಗು ನಿನ್ನ ಅಲೆಗಳಿಗೆ ತಾಕಿ ಬರುವ ಗಾಳಿ ನೀಡುತಿದೆ ಮುನ್ಸೂಚನೆ ನಿನ್ನ ಬಣ್ಣವೂ ಒಂದಿನ ಕೆಂಪಾಗುವುದು
ಆಕಾಶ ಕಪ್ಪು ಬೆಂಕಿಯ ಮಳೆಯಾಗುವುದು ಸೂರ್ಯ ಅಳುವನು ಚಂದ್ರ ಶೋಕ ತಾಳಲಾರದೆ ಮೋಡಗಳಲ್ಲಿ ಮರೆಮಾಚುವನು. ಓ ಗೆಳೆಯಾ, ನಿನ್ನ ಮಾತು ಕೇಳಿ ಝುಂಮ್ಮೆಂದಿತು ಎನ್ನೆದೆ ನನ್ನ ಆಳಕ್ಕಿಂತ ನಿನ್ನ ಅಂತರಾಳದ ನೋವಿನ ಆಳ ಅತಿ ಆಳ
ಆ ಯುದ್ಧದ ಅಗ್ನಿ ಪರೀಕ್ಷೆ ಸಾವು ನೋವಿನ ಘಳಿಗೆ ಬಾರದಿರಲೆಂದು ದೇವರಲ್ಲಿ ಬೇಡುವೆ.
ಟಿಪ್ಪು ಸುಲ್ತಾನ್ ಟಿಪ್ಪು ನೀನು ವೀರ ಯೋಧ ತಾಯ್ನಾಡಿಗಾಗಿ ಪ್ರಾಣ ಕೊಟ್ಟ ಅಮರ ಯೋಧ ನಾಡಿಗಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟೆ ಕಾವೇರಿ ನೆಲವನು ಕಾಪಾಡಲು ನಿದ್ದೆಗೆಟ್ಟೆ
ಶೃಂಗೇರಿ ಮಠ ನಿನಗೆ ಚಿರಋಣಿ ನೀನು ಕನ್ನಡ ನಾಡಿನ ಕಣ್ಮಣಿ
ರಾಕೆಟ್ ಮಾಡಿದ ಬುದ್ಧಿ ನಿನ್ನದು ನೌಕಾಪಡೆ ಕಟ್ಟಿದ ಕೀರ್ತಿ ನಿನ್ನದು
ಮೈಸೂರು ಹುಲಿ ನಿನ್ನ ಬಿರುದು ಅದು ತೀರ ನಿನಗೆ ಕಿರಿದು
ನೀನು ಭಾರತರತ್ನ ನಿನ್ನಂತೆ ನಡೆಯಲು ಆಡಳಿತ ವರ್ಗ ಮಾಡಲಿ ಪ್ರಯತ್ನ.
ನನ್ನ ಪಟ್ಟಣ ಹಿತ್ತಲಿಲ್ಲದ ಮನೆ ಮನೆ ಮಧ್ಯೆ ಕಕ್ಕಸು ನೋಡಿ ನಮ್ಮ ಜೀವನ ಸರ್ಕಸ್ಸು ಕೆರೆ ಇಲ್ಲ, ಹೊಳೆ ಇಲ್ಲ, ಬಾವಿ ಇಲ್ಲ ನೀರಿಗಾಗಿ ನಿದ್ದೆ ಹೋಯಿತೆಲ್ಲ ಧೂಳು, ಹೊಗೆ, ಶಬ್ದ ಮಾಲಿನ್ಯ ದಿನೇ ದಿನೇ ಮರಗಳು ಮಾಯವಾಗುತ್ತಿವೆಯಲ್ಲ ಗುಬ್ಬಚ್ಚಿ ನೋಡಿ ಎಷ್ಟು ವರ್ಷವಾಯಿತೋ ನಮ್ಮನು ಸಾಯಲು ಬಿಟ್ಟು ಎಲ್ಲೋ ಹೋಗಿವೆಯಲ್ಲ
ಪಕ್ಕದ ಮನೆಯಲ್ಲಿ ಸಾವು ನಮಗೇನು ನನ್ನ ಬಂಧುಗಳಲ್ಲ ಸ್ಮಶಾನಗಳಲ್ಲೂ ಜಾಗವಿಲ್ಲ ಪ್ರತಿದಿನ ಸಾವು ಕಾದು ಕುಳಿತಿದೆಯಲ್ಲ !
ನನ್ನ ಮಗು ಉಪವಾಸ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದೆ ಸೂರ್ಯ ಮುಳುಗುವ ಹೊತ್ತು ಕಾಯುತ್ತಿದ್ದೆ ನಿಮಿಷ ನಿಮಿಷ ಸೆಕೆಂಡು ಸೆಕೆಂಡು ಲೆಕ್ಕಚಾರ ಕಣ್ಣೆಲ್ಲ ಒಮ್ಮೆ ಗಡಿಯಾರದತ್ತ ಮತ್ತೊಮ್ಮೆ ತಟ್ಟೆಯತ್ತ ಸಮಯ ಬಂದೇ ಬಿಟ್ಟಿತು ಕೊನೆಗೂ ಆ ಕ್ಷಣ ತಂದೇ ಬಿಟ್ಟಿತು ಗಟಗಟನೆ ನೀರು ಕುಡಿದು ತಟ್ಟೆಯಲ್ಲಿದ್ದುದ್ದೆಲ್ಲವನ್ನು ತಿಂದು ನಿಟ್ಟುಸಿರು ಬಿಟ್ಟೆ
ಮಗುವಿನತ್ತ ನೋಡುತ್ತಿದ್ದ ತಾಯಿಗೆ ಬಂತು ನೂರು ಆನೆ ಬಲ ಮುದ್ದಾಡಿದಳು ಮಗುವನ್ನು ಹತ್ತು ಸಲ ಮೊದಲ ಉಪವಾಸ ಇದ್ದಿದ್ದು ಮಗುವಲ್ಲವೇನೋ…! ತಾನೇ ಅಡಿಷಡ್ವರ್ಗಗಳನ್ನು ಗೆದ್ದಂತೆ ವರ್ತಿಸಿದಳು ಬಡಪಾಯಿ ಮಗುವಿಗೇನು ಗೊತ್ತು ಉಪವಾಸದ ಮರ್ಮ ಧರ್ಮ ಅಧರ್ಮ ಮಗು ನೀನು ಮಗುವಾಗಿಯೇ ಇರು ದೊಡ್ಡವನಾಗಿ ಬೆಳೆಯಬೇಡ ವಾರ್ತೆ ಮಾತ್ರ ನೋಡಲೇಬೇಡ
ನಿನ್ನ ಮನಸ್ಸು ಈಗಲೂ ಅಪರಂಜಿ ಹೊನ್ನು ಈಗಲೇ ತಿಳಿಯಲು ಹೋಗಬೇಡ ಹಿಜಾಬ್ ಝಟ್ಕಾ ಹಲಾಲ್ ಅಜಾನ್ ಇತ್ಯಾದಿ ಆಟವಾಡು, ಕಣ್ತುಂಬ ನಿದ್ದೆ ಮಾಡು, ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು ಸಾಕು
ವಿಜ್ಞಾನಿ ಅಬ್ದುಲ್ ಕಲಾಂ, ಯೂಸುಫ್ ಹಮೀದ್, ಇಸ್ರಾರ್ ಅಹ್ಮದ್ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು ಸಾಕು
ಡಾಕ್ಟರ್ ಯಸ್. ಝೆಡ್. ಖಾಸಿಂ, ಸಿ. ಎಂ. ಹಬೀಬುಲ್ಲಾ, ಯಸ್. ಎನ್. ಎ. ರಿಜ್ವಿ ಪ್ರೊಫೆಸರ್ ಮುಜಾಹಿದ್ ಹುಸೇನ್ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು, ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು, ಸಾಕು
ಬಿಸ್ಮಿಲ್ಲಾ ಖಾನ್, ಅಮ್ಜದ್ ಅಲಿ ಖಾನ್, ಜಾಕಿರ್ ಹುಸೇನ್ ಎ. ಆರ್. ರೆಹ್ಮಾನ್, ಮಹಮ್ಮದ್ ರಫಿ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು, ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು, ಸಾಕು
ವೊಖಾರ್ಡ್ ಹಾಬಿಲ್, ಹಿಮಾಲಯ ಡ್ರಗ್ಸ್ ಮನಾಲ್, ಡಾಕ್ಟರ್ ಕಿದ್ವಾಯಿ ವಿಪ್ರೋ ಅಜೀಮ್, ಪ್ರೆಸ್ಟೀಜ್ ರಜಾಕ್ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು, ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು, ಸಾಕು
ಪಕ್ಷಿ ಪಿತಾಮಹಾ ಸಲೀಂ ಅಲಿ, ಕಾರ್ಪೋರೇಶನ್ ಬ್ಯಾಂಕ್ ಪಿತಾಮಹಾ ಖಾನ್ ಸಾಬ್ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು, ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು, ಸಾಕು
ಭಾರತದ ಗಿಣಿ ಅಮೀರ್ ಖುಸ್ರೋ, ಮಹಾನ್ ಕವಿ ಮಿರ್ಜಾ ಘಾಲಿಬ್ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು, ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು, ಸಾಕು
ಅಂಚೆ ಸ್ಟ್ಯಾಂಪ್ ಗಳಲ್ಲಿರುವ ಹುಸೇನ್ ಅಹ್ಮದ್ ಮದನಿ, ರಫಿ ಅಹ್ಮದ್ ಕಿದ್ವಾಯಿ, ಹಸ್ರತ್ ಮೊಹಾನಿ, ಅಸಫ್ ಅಲಿ, ಟೀಪು ಸುಲ್ತಾನ್, ಮಜ್ಹರುಲ್ ಹಖ್, ಅಬ್ದುರ್ರಹೀಮ್ ಶಾಹಿಬ್, ಹಕೀಮ್ ಅಜ್ಮಲ್ ಖಾನ್ ಆಗಬೇಡ ಆಟವಾಡು, ಕಣ್ತುಂಬ ನಿದ್ದೆ ಮಾಡು ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು, ಸಾಕು
ತಾಯಿಗೆ ರೇಷ್ಮೆ ಸೀರೆ ತರಬೇಡ, ರೇಷ್ಮೆ ಟಿಪ್ಪುವಿನ ಕೊಡುಗೆ ಕಾಫಿ ಮಾರಬೇಡ, ಕುಡಿಯಬೇಡ, ಕಾಫಿ ಬಾಬಾ ಬುಡನ್ ಕೊಡುಗೆ ಮಗು ನೀನು ಇನ್ನೂ ಚಿಕ್ಕವನು ಆಟವಾಡು, ಕಣ್ತುಂಬ ನಿದ್ದೆ ಮಾಡು ಸಾಕು ಪಂಕ್ಚರ್ ಹಾಕು, ಕಲ್ಲಂಗಡಿ ಮಾರು, ಗ್ಯಾರೇಜಿಗೆ ಹೋಗು ಸಾಕು
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.