ಮಂಗಳೂರು (www.vknews.in) : ಕೆಲ ದಿನಗಳ ಹಿಂದೆ ಎಸ್ಡಿಪಿಐ ಪಕ್ಷ ತ್ಯಜಿಸಿದ್ದ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕೆಸಿ ರೋಡ್ ಕಾಂಗ್ರೆಸ್ ಸೇರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ರಾಜೀನಾಮೆ ನೀಡುವ ಸಂದರ್ಭದಲ್ಲಿ ಅವರು ರಾಜಕೀಯ_ನಿವೃತ್ತಿ ಎಂಬ ಹ್ಯಾಶ್ ಟ್ಯಾಗ್ ಅನ್ನು ಟ್ವಿಟ್ಟರ್ ನಲ್ಲಿ ಬಳಸಿ ರಾಜಕೀಯದಿಂದ ದೂರವಿರುವ ಸೂಚನೆ ನೀಡಿದ್ದರು.
ಈ ನಡುವೆ ಅವರನ್ನು ಭೇಟಿ ಮಾಡಿರುವ ಕೆಲ ಕಾಂಗ್ರೆಸ್ ಮುಖಂಡರು ರಾಜಕೀಯದಿಂದ ದೂರವುಳಿಯುವ ನಿರ್ಧಾರದಿಂದ ಹಿಂದೆ ಸರಿದು ಕಾಂಗ್ರೆಸ್ ಪಕ್ಷ ಸೇರುವಂತೆ ಆಹ್ವಾನಿಸಿದ್ದು ಈ ಆಹ್ವಾನಕ್ಕೆ ಅಶ್ರಫ್ ಕೆಸಿ ರೋಡ್ ಸಾಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲಿ ಅವರು ಅತೀ ಶೀಘ್ರವೇ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಹೀಗೆನಾದರೂ ಆದಲ್ಲಿ ಕಾಂಗ್ರೆಸ್ ಶಾಸಕ ಯು. ಟಿ ಖಾದರ್ ಅವರನ್ನು ಈ ಬಾರಿ ಉಳ್ಳಾಲದಲ್ಲಿ ಹೇಗಾದರೂ ಮಾಡಿ ಸೋಲಿಸಬೇಕೆಂದು ಪಣ ತೊಟ್ಟಿರುವ ವಿರೋಧ ಪಕ್ಷಗಳು ಹಿನ್ನಡೆ ಅನುಭವಿಸುವುದು ಪಕ್ಕಾ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.
ಅತ್ಯುತ್ತಮ ಸಂಘಟಕ:
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಎಡಪಂಥೀಯ ಅಭ್ಯರ್ಥಿ ನಿತಿನ್ ಕುತ್ತಾರ್ ಅವರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಶ್ರಫ್ ಕೆಸಿ ರೋಡ್ ಡಿವೈಎಫ್ಐ ಅಧ್ಯಕ್ಷರಾಗಿ ತನ್ನ ಮಾತುಗಳ ಮೂಲಕ ಸ್ಥಳೀಯವಾಗಿ ಪ್ರತೀ ಗ್ರಾಮಗಳಲ್ಲಿ ಯುವಜನರನ್ನು ಸಂಘಟಿಸಿದ್ದರು. ಆನಂತರ ಅಲ್ಲಿ ರಾಜ್ಯಮಟ್ಟದ ನಾಯಕರೊಬ್ಬರ ಜೊತೆ ಮೂಡಿದ ಭಿನ್ನಾಭಿಪ್ರಾಯದ ಕಾರಣ ಕಳೆದ ವರ್ಷ ಸಂಘಟನೆ ತೊರೆದಿದ್ದರು. ಆ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅದಕ್ಕೆ ಸ್ಥಳೀಯ ಕೆಲ ಕಾಂಗ್ರೆಸ್ ಮುಖಂಡರು ಅಡ್ಡಗಾಲು ಹಾಕಿದ್ದರು. ಈ ಕಾರಣಕ್ಕಾಗಿ ಅವರು ಎಸ್ಡಿಪಿಐ ಸೇರಿದ್ದರು.
ಪಕ್ಷಾತೀತವಾಗಿ ಜನ ಮೆಚ್ಚುವ ನಾಯಕ:
ಅಶ್ರಫ್ ಕೆಸಿ ರೋಡ್ ತನ್ನ ಭಾಷಣ ಮತ್ತು ಸಂಘಟನಾ ಶೈಲಿಯ ಮೂಲಕ ಪಕ್ಷಾತೀತವಾಗಿ ಜನ ಮೆಚ್ಚುಗೆ ಪಡೆದಿದ್ದಾರೆ. ಅವರ ಭಾಷಣಗಳು ಧರ್ಮದ ವಿಷಯಾಧಾರಿತವಾಗಿರದೇ ಜನರ ಸಾಮಾಜಿಕ ಸಮಸ್ಯೆಗಳಾದ ರಸ್ತೆ, ನಿರುದ್ಯೋಗ, ಆರೋಗ್ಯ ಕ್ಷೇತ್ರ, ಶಿಕ್ಷಣ ಹೀಗೆ ಬದುಕಿನ ಪ್ರಶ್ನೆಗಳ ಬಗ್ಗೆಯೇ ಇರುತ್ತದೆ. ಹೀಗಾಗಿಯೇ ಅವರಿಗೆ ಪಕ್ಷಗಳನ್ನು ಮೀರಿ ಜನರ ಮನಸ್ಸು ಗೆಲ್ಲಲು ಸಾಧ್ಯವಾಗಿತ್ತು.
ಕೌಟುಂಬಿಕ ಹಿನ್ನಲೆ:
ಅಶ್ರಫ್ ಕೆಸಿ ರೋಡ್ ಅವರು ಕೆಸಿ ರೋಡ್ ಕೊಮರಂಗಳದ ಪಡ್ಪು ಕುಟುಂಬದವರು. ಅವರ ತಂದೆ ಪಿಎಂ ಅಬೂಬಕ್ಕರ್ ಸಕಲೇಶಪುರದಲ್ಲಿ ಏಲಕ್ಕಿ, ಟಿಂಬರ್ ಉದ್ಯಮಿಯಾಗಿದ್ದರು. ಸುಮಾರು 10 ವರ್ಷ ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಅಶ್ರಫ್ ಕಳೆದ 7 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದಾರೆ.
ರಾಜಕೀಯ ಹಿನ್ನಲೆ;
2017 ರ ಫೆಬ್ರವರಿ ತಿಂಗಳಿನಲ್ಲಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಗಳೂರು ಭೇಟಿಯ ಸಂದರ್ಭದಲ್ಲಿ ಎಡ ಪಕ್ಷಗಳ ಜೊತೆ ಗುರುತಿಸಿಕೊಂಡ ಇವರು ಆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐಎಂ ಅಭ್ಯರ್ಥಿ ನಿತಿನ್ ಕುತ್ತಾರ್ ಪರವಾಗಿ ಕೆಲಸ ಮಾಡಿದ್ದರು. ಆ ನಂತರ ಎಡ ಪಂಥೀಯ ಯುವಜನ ಸಂಘಟನೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷರಾದರು. ಮಂಗಳೂರು ಪೂರ್ವವಲಯ ಬಸ್ಸು ನೌಕರರ ಸಂಘಟನೆಯಾದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಸ್ಥಾಪನೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರಾಗಿದ್ದಾರೆ. ತೊಕ್ಕೊಟ್ಟು ಫ್ಲೈ ಓವರ್ ಹೋರಾಟ, ಸುರತ್ಕಲ್ ಟೋಲ್ ಹೋರಾಟ, ತಲಪಾಡಿ ಟೋಲ್ ವಿರೋಧಿಸಿ ನಡೆಸಿದ ತಲಪಾಡಿ ಚಲೋ ಪಾದಯಾತ್ರೆ, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಪ್ರತೀ ಗ್ರಾಮ ಪಂಚಾಯಿತಿ ಮುಂದೆ ನಡೆಸಿದ ಹೋರಾಟ, NRC – CAA ವಿರೋಧಿ ಹೋರಾಟ ಹೀಗೆ ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರಾಜ್ಯ ನಾಯಕರೊಬ್ಬರ ಜೊತೆಗಿನ ಭಿನ್ನಾಭಿಪ್ರಾಯಗಳ ಕಾರಣ ಕಳೆದ ವರ್ಷ ಡಿವೈಎಫ್ಐ ತೊರೆದಿದ್ದ ಇವರು ಆನಂತರ ಎಸ್ಡಿಪಿಐ ಸೇರಿ ಅಲ್ಲಿ ಸರಿ ಹೊಂದದೇ ರಾಜೀನಾಮೆ ನೀಡಿ ಹೊರಬಂದಿದ್ದರು.
ಕಾಂಗ್ರೆಸ್ ಸೇರ್ಪಡೆಯಿಂದ ಲಾಭ ಯಾರಿಗೆ?
ಅಶ್ರಫ್ ಕೆಸಿ ರೋಡ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರೆ ಖಂಡಿತ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ . ಇವರ ಸೇರ್ಪಡೆಯಿಂದ ಸಂಘಟನಾ ಕಾರಣಗಳಿಗಾಗಿ ಪಕ್ಷದಿಂದ ದೂರವಿರುವ ಯುವಜನರನ್ನು ಪಕ್ಷಕ್ಕೆ ಆಕರ್ಷಿಸಲು ಸಾಧ್ಯವಾಗಲಿದೆ. ಈ ಭಾರೀ ಹೇಗಾದರೂ ಮಾಡಿ ತಾವು ಸೋತರೂ ಪರವಾಗಿಲ್ಲ, ಯು. ಟಿ ಖಾದರ್ ಅವರನ್ನು ಮಾತ್ರ ಗೆಲ್ಲಲು ಬಿಡಬಾರದು. ಯಾವುದೇ ಬೆಲೆ ತೆತ್ತಾದರೂ ಅವರನ್ನು ಸೋಲಿಸಲೇ ಬೇಕು ಎಂದು ಕಾಲಿಗೆ ಚಕ್ರ ಕಟ್ಟಿ ಓಡಾಡುತ್ತಿರುವ ವಿರೋಧ ಪಕ್ಷಗಳಿಗೆ ಹಿನ್ನಡೆ ಆಗುವುದು ಮಾತ್ರ ಖಂಡಿತ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.