(www.vknews.in) : ಪ್ರವಾದಿ ಮುಹಮ್ಮದರನ್ನು(ಸ) ಮಕ್ಕಾ ಪಟ್ಟಣದಲ್ಲಿ ಕೆಲ ದುಷ್ಟ ಜನರುಗಳ ಗುಂಪು ಬಹಳ ತೊಂದರೆಗಳನ್ನು ಕೊಡಲು ಪ್ರಾರಂಭಿಸಿದರು. ಪ್ರವಾದಿವರ್ಯರು ತಾನು ಹುಟ್ಟಿ ಬೆಳೆದ ಊರನ್ನೇ ತ್ಯಜಿಸಬೇಕಾಯಿತು. ತನ್ನ ಅನುಯಾಯಿಗಳ ಜೊತೆ ಪ್ರವಾದಿವರ್ಯರು ಮಕ್ಕಾದಿಂದ ಮದೀನಾಗೆ ಬಂದು ನೆಲೆಸಿದರು. ಮದೀನಾದ ಜನರು ಬಹಳ ಸಂತೋಷದಿಂದ ಪ್ರವಾದಿವರ್ಯರನ್ನು ಮತ್ತು ಅವರ ಅನುಯಾಯಿಗಳನ್ನು ಬರ ಮಾಡಿಕೊಂಡರು. ತಮ್ಮ ಸ್ವಂತ ಊರು, ಮನೆಮಠ, ಬಂಧುಬಳಗ ಎಲ್ಲವನ್ನೂ ಬಿಟ್ಟು ಬಂದವರ ಮನಸ್ಸುಗಳಲ್ಲಿ ಎಷ್ಟೊಂದು ನೋವಿರಬಹುದು ಆ ದೇವರೇ ಬಲ್ಲ. ಆದರೆ ಮದೀನಾದ ಜನರು ಅವರಿಗೆಲ್ಲ ಮನೆಗಳನ್ನು ಕೊಟ್ಟರು, ಹೊಸ ಬದುಕನ್ನು ಪ್ರಾರಂಭಿಸಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು. ಹೃತ್ಪೂರ್ವಕವಾಗಿ ಸಹಾಯ ಹಸ್ತ ಚಾಚಿದರು. ಮಕ್ಕಾ ತೊರೆದು ಬಂದಿದ್ದ ಜನರು ಹಾಲು ಜೇನಿನಂತೆ ಮದೀನಾದ ಜನರಲ್ಲಿ ಬೆರೆತು ಹೋದರು. ಅದೇ ಅವರ ಸ್ವಂತ ಊರಾಗಿ ಹೋಯಿತು.
ಇಂದು ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ ಯಾರಾದರೂ ಪೆನ್ನು ಕೇಳಿದರೂ ಸಹ ಪೆನ್ನಿನ ಕ್ಯಾಪನ್ನು ತೆಗೆದುಕೊಂಡು ಪೆನ್ನನ್ನು ಮಾತ್ರ ಕೊಡುತ್ತೇವೆ. ಕೇವಲ ಐದು ರೂಪಾಯಿಗಳ ಪೆನ್ನಿನ ಮೇಲೆ ಅಷ್ಟೊಂದು ಪ್ರಾಣ. ಪರರಿಗೆ ಸಹಾಯ ಮಾಡಲು ನಾವು ಎಷ್ಟರ ಮಟ್ಟಿಗೆ ಯೋಚಿಸುತ್ತೇವೆ ಎಂದು ಇದರಿಂದ ತಿಳಿಯುತ್ತದೆ. ಪ್ರಪಂಚ ಹೇಗಿದೆ ಎಂದರೆ ಸ್ವಂತ ಅಣ್ಣ ತಮ್ಮನಿಗೆ ತಾನು ಮಾಡುತ್ತಿರುವ ವ್ಯಾಪಾರ ಕಲಿಸಲು ಸಿದ್ಧವಿಲ್ಲ. ತನ್ನ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಒದಗಿಸಲು ನಾವು ಸದಾ ಸಿದ್ಧ ಆದರೆ ಸಂಬಂಧಿಕರ ಬಡ ಮಕ್ಕಳಿಗೆ ಎರಡು ಪುಸ್ತಕ ಒಂದು ಜೊತೆ ಬಟ್ಟೆ ಸಹ ಕೊಡಿಸಲು ಹಿಂಜರಿಯುತ್ತೇವೆ.
ಅಣ್ಣನಿಗೆ ಲಕ್ಷಾಂತರ ರೂಪಾಯಿಗಳು ಬಾಡಿಗೆ ಬರುತ್ತಿರುತ್ತದೆ ಆದರೆ ತಮ್ಮ ಆಟೋ ಓಡಿಸಿ ಜೀವನ ಸಾಗಿಸುತ್ತಿರುತ್ತಾನೆ. ಸಹಾಯ ಮಾಡದೇ ಇರಲು ನೂರಾರು ಕುಂಟು ನೆಪಗಳ ಗಂಟು ಮೂಟೆಗಳು ನಮ್ಮ ಬಳಿ ಇರುತ್ತವೆ. ಸಂಬಂಧಿಕರಲ್ಲಿ ಯಾರಿಗಾದರೂ ಅರೋಗ್ಯ ಕೆಟ್ಟುಹೋಗಿದ್ದರೆ ಹೋಗಿ ನೋಡುವುದಿಲ್ಲ. ಅಲ್ಲಿಗೆ ಹೋದರೆ ಎಲ್ಲಿ ಹಣ ಕೇಳಿಬಿಡುತ್ತಾರೋ ಎನ್ನುವ ಭಯ. ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ, ಅಕ್ಕಪಕ್ಕದವರಲ್ಲಿ ಬಾಂಧವ್ಯದ, ವಾತ್ಸಲ್ಯದ, ಮನುಷ್ಯತ್ವದ ಕಂದರ ಪ್ರತಿ ದಿನ ಹೆಚ್ಚಾಗುತ್ತಾ ಹೋಗುತ್ತಿದೆ. ಯಾರಿಗೂ ಯಾರ ಮೇಲೂ ನಂಬಿಕೆ ಇಲ್ಲ, ವಿಶ್ವಾಸ ಇಲ್ಲ. ಸಹಾಯ ಮಾಡುವ ಮನಸ್ಸಂತೂ ಇಲ್ಲವೇ ಇಲ್ಲ. ಮನಸ್ಸುಗಳಲ್ಲಿ ಇರುವುದು ಒಂದೇ ಗುರಿ, ಹೇಗಾದರೂ ಮಾಡಿ ನಾವು ಶ್ರೀಮಂತರಾಗಬೇಕು, ನಾವು ನಮ್ಮ ಸಂಸಾರ ಚೆನ್ನಾಗಿದ್ದರೆ ಸಾಕು, ನಾವು ಕುಳಿತರೆ ಎದ್ದರೆ ಬಂದರೆ ಹೋದರೆ ಜನರು ಎದ್ದು ನಿಂತು ಗೌರವಿಸಬೇಕು, ಶಾಲು ಹೊದಿಸಬೇಕು, ಎಲ್ಲಾ ಕಡೆ ಪ್ರಚಾರಗೊಳ್ಳಬೇಕು. ನಾಲ್ಕು ದಿನಗಳ ಜೀವನ, ಇದೆಲ್ಲ ನಶ್ವರ ಎಂದು ಎಲ್ಲರಿಗೂ ಗೊತ್ತು. ಒಂಟಿಯಾಗಿ ಹೋಗಬೇಕು, ಜೊತೆಯಲ್ಲಿ ಆಸ್ತಿ ಪಾಸ್ತಿ, ಹಣ ಅಂತಸ್ತು ಏನೂ ಬರಲ್ಲ ಎಂದೂ ಸಹ ಗೊತ್ತು. ಆದರೂ ನಾವು ಸತ್ಯದ ದಾರಿಯನ್ನು ಮರೆತು ಕಣ್ಣಿದ್ದೂ ಕುರುಡರಂತೆ ನಟಿಸುತ್ತಿದ್ದೇವೆ.
ರಾಮನಗರದಲ್ಲಿ ಮನಸ್ಸು ಕಲಕುವಂತಹ ಘಟನೆಯೊಂದು ನಡೆದು ಹೋಯಿತು. ಅಣ್ಣನ ಶರ್ಟು ತಮ್ಮ ಹಾಕಿಕೊಂಡು ಯಾವುದೊ ಕಾರ್ಯಕ್ರಮಕ್ಕೆ ಹೋಗಿ ಬಂದ. ಅಣ್ಣ ಕೋಪಗೊಂಡು ತಮ್ಮನ ಜೊತೆ ಜಗಳ ಮಾಡಿದ. ಆ ಜಗಳ ತಮ್ಮನನ್ನು ಮಾನಸಿಕವಾಗಿ ಎಷ್ಟೊಂದು ನೋವುಂಟು ಮಾಡಿತು ಎಂದರೆ ಆತ ಆತ್ಮಹತ್ಯೆ ಮಾಡಿಕೊಂಡ. ಕೇವಲ ಒಂದು ಶರ್ಟು, ಇಂತಹ ಕೃತ್ಯಕ್ಕೆ ಎಡೆ ಮಾಡಿಕೊಟ್ಟಿತು. ಆಸ್ತಿಯ ಅಥವಾ ಹಣದ ವಿಷಯ ಬಂದರೆ ಏನಾಗಬಹುದು. ಈ ಯುವ ಪೀಳಿಗೆಯ ಮನುಷ್ಯತ್ವದ ಮಟ್ಟ ಎಷ್ಟು ಕೀಳು ಮಟ್ಟಕ್ಕೆ ಕುಸಿದಿದೆ ಎಂದು ತಿಳಿದು ಬೇಸರವಾಗುತ್ತದೆ.
ಪರರಿಗೆ ಸಹಾಯ ಮಾಡುವ ಅಭ್ಯಾಸವನ್ನು ಚಿಕ್ಕಂದಿನಿಂದಲೇ ಮನೆಯ ಹಿರಿಯರು ಮಕ್ಕಳಿಗೆ ಹೇಳಿಕೊಡಬೇಕು. ತಾವು ಜೊತೆಯಲ್ಲಿ ನಿಂತು ಸಮಾಜ ಕಲ್ಯಾಣ ಕಾರ್ಯಗಳನ್ನು ಮಾಡಬೇಕು. ಅದು ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕು. ಸಹಾಯ ಮಾಡಲು ಆಗರ್ಭ ಶ್ರೀಮಂತರಾಗಿರಬೇಕೆಂದೇನಿಲ್ಲ. ಮನಸ್ಸುಗಳು ಪರಿವರ್ತನೆಗೊಳ್ಳಬೇಕು. ಯಾವಾಗಲು ಪರರ ಸ್ವತ್ತನ್ನು ಕಬಳಿಸುವದರಲ್ಲೇ ನಿಸ್ಸೀಮರಾಗಿದ್ದರೆ, ನಮ್ಮ ಮಕ್ಕಳೂ ಸಹ ಅದೇ ದಾರಿಯನ್ನು ಪಾಲಿಸುತ್ತಾರೆ. ಎಂತೆಂಥ ರಾಜಮಹಾರಾಜರು, ಅಧಿಕಾರಿಗಳು, ರಾಜಕಾರಣಿಗಳು ಈ ಪ್ರಪಂಚವನ್ನು ಬಿಟ್ಟು ಹೊರಟು ಹೋಗಿದ್ದಾರೆ. ನಾವು ಸಮಾಜದಲ್ಲಿ ಎಂಥವರನ್ನು ನೆನಪಿಸಿಕೊಳ್ಳುತ್ತೇವೆ, ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋದವರನ್ನು ಮಾತ್ರ. ಅಲ್ಲವೇ ? ನೀವು ಯಾವುದೇ ಕ್ಷೇತ್ರದಲ್ಲಿರಿ, ಶ್ರೀಮಂತ ಅಥವಾ ಕಡು ಬಡವರಾಗಿರಿ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸುತ್ತಮುತ್ತಲ ಸಮಾಜಕ್ಕೆ ಒಳಿತು ಮಾಡಿ. ಮಕ್ಕಳನ್ನು, ಯುವ ಪೀಳಿಗೆಯನ್ನು ಪ್ರೋತ್ಸಾಹಿಸಿ.
ಚಾರಿಟೇಬಲ್ ಟ್ರಸ್ಟುಗಳನ್ನು ಕೇವಲ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಮಾತ್ರ ಉಪಯೋಗಿಸಬೇಡಿ. ಅದರ ಸದುಪಯೋಗವನ್ನು ಸಹ ಮಾಡಿ. ನಮ್ಮ ಭಕ್ತಿ ಪೂಜೆ ಪುರಸ್ಕಾರ ಹಜ್ಜು ಉಮ್ರಾಗಳಿಂದ ನಮಗೆ ಮಾತ್ರ ಲಾಭ. ಅದರಿಂದ ದೇವರಿಗೆ ಅಥವಾ ಜನರಿಗೆ ಏನೂ ಲಾಭ ಸಿಗಲ್ಲ. ದೇವರು ಸೃಷ್ಟಿಸಿರುವ ಜನರಿಗೆ ಲಾಭವಾದರೆ ಅದರಿಂದ ದೇವರು ಸಂತೋಷ ಪಡುವುದಿಲ್ಲವೇ? ನಮ್ಮ ನಿಯ್ಯತ್ತು ಆತನಿಗೆ ಗೊತ್ತಾಗುವುದಿಲ್ಲವೇ ? ಮನಃಶಾಂತಿ ಬೇಕಾದರೆ ಪರರಿಗೆ ಸಹಾಯ ಹಸ್ತ ಚಾಚಿ ನೋಡಿ…! – ಆ ಖುಷಿಯೇ ಬೇರೆಯಾಗಿರುತ್ತದೆ…!
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಊದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.