ತಲಪಾಡಿ (www.vknews.in) ; ಅನ್ಯಾಯಕ್ಕೀಡಾದ ವಿವಿಧ ಸಮುದಾಯಗಳ ಪರ ಧೀರ ಧ್ವನಿ ಮೊಳಗಿಸಿದ ಭಾರತದ ಅಪ್ರತಿಮ ಹೋರಾಟಗಾರ ಅಬ್ದುನ್ನಾಸರ್ ಮಅದನಿ ಯವರನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ಜೈಲಿನಲ್ಲಿರುವಂತೆ ಮಾಡಿದ ಆಡಳಿತ ವ್ಯವಸ್ಥೆಯ ಅಮಾನವೀಯ ಕ್ರಮ ಜಗತ್ತಿನ ಮುಂದೆ ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ! ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದ್ದಾರೆ.
ನಿರಪರಾಧಿ ನಾಸಿರ್ ಮಅದನಿ ಅನುಭವಿಸುತ್ತಿರುವ ಯಾತನೆಯ ಬಗ್ಗೆ ಕೇರಳ ವಿಧಾನಸಭೆ ತುರ್ತು ಮಧ್ಯಪ್ರವೇಶ ಮಾಡಬೇಕೆಂದು ಅಗ್ರಹಿಸಿ ತಲಪಾಡಿ ಯಲ್ಲಿ ಪಿಡಿಪಿ ವತಿಯಿಂದ ನಡೆದ ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸತ್ಯ ಮತ್ತು ನ್ಯಾಯಪರ ಮಾತನಾಡುವವರನ್ನು ಹತ್ತಿಕ್ಕುವ ಕೆಲಸ ಭಾರತದಲ್ಲಿ ನಿರಂತರ ನಡೆಯುತ್ತಿದ್ದು ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ಹಿಂದೆ ಕಾರ್ಯಾಚರಿಸುವವರು ಎಷ್ಟೇ ದೊಡ್ಡ ಪ್ರಭಾವಿಗಳಾದರೂ ತಕ್ಕ ಫಲ ಅನುಭವಿಸಲಿದ್ದಾರೆ. ದ್ವೇಷ ರಹಿತ ರಾಜಕೀಯ ಮತ್ತು ಕೋಮುವಾದ ಮುಕ್ತ ನಾಡನ್ನು ಕಟ್ಟುವ ಕನಸು ಕಂಡು ತನ್ನ ಯೌವ್ವನ ಪ್ರಾಯದಲ್ಲೇ ಧಾರ್ಮಿಕ, ರಾಜಕೀಯ, ಸಾಮಾಜಿಕ ರಂಗದಲ್ಲಿ ಸಿಡಿಲಬ್ಬರದ ಭಾಷಣ ಮೂಲಕ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಮೂಡಿ ಬಂದ ಅಬ್ದುನ್ನಾಸರ್ ಮಅದನಿ ಯವರು ಈಗ ಗಂಭೀರ ಸ್ಥಿತಿಯಲ್ಲಿದ್ದು ಅವರ ರಕ್ಷಣೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ತಕ್ಷಣ ಧಾವಿಸಿ ಮಾನವೀಯತೆ ಮೆರೆಯಬೇಕೆಂದು ಅವರು ಆಗ್ರಹಿಸಿದರು.
ಕರ್ನಾಟಕ ಭಾವೈಕ್ಯತಾ ಪರಿಷತ್ ಸಂಚಾಲಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ಮಾತನಾಡಿ ” ಭಯೋತ್ಪಾದನೆ, ಉಗ್ರವಾದ ವಿರುದ್ಧ ಕಂಚಿನ ಕಂಠ ಮೊಳಗಿಸಿದ ಭಾರತ ಕಿರೀಟ ಧರಿಸದ ಸುಲ್ತಾನ್ ಖ್ಯಾತಿಯ ಕ್ರಾಂತಿಕಾರಿ ನಾಯಕ ಅಬ್ದುನ್ನಾಸರ್ ಮಅದನಿ ಯವರನ್ನೇ ಭಯೋತ್ಪಾದಕನನ್ನಾಗಿ ಚಿತ್ರೀಕರಿಸಿದ ಆಡಳಿತ ವರ್ಗ ಸ್ವತಃ ತಾನು ಮಾಡುವ ಮಾನವ ವಿರೋಧಿ ಕೃತ್ಯಗಳನ್ನು ಮರೆಮಾಚಲು ನಿರಪರಾಧಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ.
ಸರ್ವ ಜನ ವಿಭಾಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕಾದವರು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕೃತ್ಯದಲ್ಲಿ ತೊಡಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಕೇರಳ ಮತ್ತು ಕರ್ನಾಟಕ ಸರಕಾರಗಳ ಮಾನವ ವಿರೋಧಿ ನೀತಿಯಿಂದಾಗಿ ತಪ್ಪು ಮಾಡದವರು ಜೈಲು ಶಿಕ್ಷೆ ಅನುಭವಿಸುವಂತಾಗಿದೆ ಎಂದರು.
ಪಿಡಿಪಿ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್.ಎಂ.ಬಶೀರ್ ಮಂಜೇಶ್ವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯೂನುಸ್ ತಳಂಗರ,ರಶೀದ್ ಮುಟ್ಟುಂತಲ,ಮುಹಮ್ಮದ್ ಕುಂಞಿ ಬದಿಯಡ್ಕ ಮೊದಲಾದವರು ಮಾತನಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.