(www.vknews.in) ; “ಯುಗಾದಿ” ಅಥವಾ “ಉಗಾದಿ” ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನವನ್ನು ಹೊಸ ವರ್ಷದ ಮೊದಲ ದಿನವಾಗಿ, ಹೊಸ ವರ್ಷದ ಹಬ್ಬವಾಗಿ ಆಚರಿಸಲಾಗುತ್ತದೆ. ‘ಯುಗಾದಿ ‘ ಪದದ ಉತ್ಪತ್ತಿ ‘ ಯುಗ + ಆದಿ’ ಹೊಸಯುಗದ ಆರಂಭ ಎಂದಾಗುತ್ತದೆ.
ಯುಗಾದಿ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು.ಬಾಗಿಲಿಗೆ ಮಾವು-ಬೇವಿನ ತಳಿರು ತೋರಣ ಕಟ್ಟಿ, ಮನೆಯ ಅಂಗಳದಲ್ಲಿ ಸುಂದರವಾದ ಬಣ್ಣ, ಬಣ್ಣದ ರಂಗೋಲಿ ಬಿಡಿಸಿ, ಎಣ್ಣೆ ಸ್ನಾನಮಾಡಿ,ಹೊಸ ಬಟ್ಟೆ ಧರಿಸಿ, ಮಕ್ಕಳೆಲ್ಲರೂ ಸೇರಿ ಲಗೋರಿ ಆಟ ಆಡುವರು.ಮನೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ರುಚಿಯಾದ ಹೋಳಿಗೆ,ಬಗೆ ಬಗೆಯ ಸಿಹಿ, ತಿನಿಸುಗಳ ಜೊತೆಗೆ ಬೇವು-ಬೆಲ್ಲ ಮತ್ತು ತಣ್ಣನೆಯ ಪಾನಕ ತಯಾರಿಸುವರು.
ಯುಗಾದಿ ದಿನ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನು ಸಮನಾಗಿ ಸ್ವೀಕರಿಸುವರು.ಬೆಲ್ಲ ತಿಂದಮೇಲೆ ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಬೇವು ಉರಿಯನ್ನು ಶಮನಮಾಡುವುದು.ಯುಗಾದಿ ಬಂತೆಂದರೆ ಸಾಕು, ಪ್ರಕೃತಿಯಲ್ಲೊಂದು ಹೊಸ ಬದಲಾವಣೆ.ವರುಷದ ಮೊದಲ ಮಳೆ ಬಿದ್ದು ಗಿಡ-ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತವೆ. ನಿಸರ್ಗದಲ್ಲಿ ಅರಳಿನಿಂತ ಕುಸುಮಗಳ ಮೇಲೆ ದುಂಬಿಗಳು ಹಾರಾಡಿ ಮಕರಂದ ಹೀರುತ್ತಾ ಜೈಂಕಾರ ಹಾಕುವ ದೃಶ್ಯ ತುಂಬಾ ಸೊಗಸ್ಸಾಗಿರುತ್ತದೆ.
“ಯುಗಾದಿ” ಎಂದರೆ ನಿಸರ್ಗಕ್ಕೊಂದು ಮರು ಹುಟ್ಟು.ಮುಂದೆ ಬರಲಿರುವ ಹಬ್ಬಗಳಿಗೆ ಯುಗಾದಿಯೇ ಮುನ್ನುಡಿಯಾಗಿದೆ. “ಪಾಶ್ಚಿಮಾತ್ಯರು ಜನವರಿ 1 ನ್ನು ಹೊಸವರ್ಷವನ್ನಾಗಿ ಆಚರಿಸಿದರೆ, ಭಾರತೀಯರು ಯುಗಾದಿಯನ್ನು ಹೊಸವರ್ಷವನ್ನಾಗಿ ಆಚರಿಸುತ್ತಾರೆ.” ಚಂದ್ರನ ಚಲನೆಯನ್ನು ಆಧರಿಸಿ ಸಾಮಾನ್ಯವಾಗಿ ಅಮಾವಾಸ್ಯೆ, ಹುಣ್ಣಿಮೆಯ ಆಧಾರದಲ್ಲಿ ತಿಂಗಳನ್ನು ಗಣನೆಗೆ ತೆಗೆದುಕೊಳ್ಳುವ ಪದ್ಧತಿ ಚಂದ್ರಮಾನವಾಗಿದೆ.
ಹಳ್ಳಿಗಳಲ್ಲಿ ವಿಶೇಷವಾಗಿ ಚಕ್ರಬಂಡಿಗೆ ಬಣ್ಣ ಬಳಿದು, ಹೋರಿಗಳಿಗೆ ಬಣ್ಣದ ಹೊದಿಕೆ, ಕೊರಳಿಗೆ ಗೆಜ್ಜೆ ಸಾರ ಕಟ್ಟಿ, ಚಕ್ರಬಂಡಿಯಲ್ಲಿ ತಂಪಾದ ಪಾನಕ ತುಂಬಿಕೊಂಡು ಊರಿನ ಮಧ್ಯದಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗಿರುವ ಬಂಧು-ಮಿತ್ರರಿಗೆ, ಮಕ್ಕಳಿಗೆ ದಣಿವಾರಿಸಲು ಪಾನಕ ಹಂಚುವರು. ಯುಗಾದಿ ಎಂದಾಕ್ಷಣ ಹೊಸ ವರ್ಷ ಪ್ರಾರಂಭದ ದಿನ.ಹೊಸ ವರ್ಷದ ಜೊತೆಗೆ ಹೊಸ ಭರವಸೆ,ಹೊಸ ಹುರುಪು,ಹೊಸ ಚೈತನ್ಯ,ಹೊಸ ಉಲ್ಲಾಸ ತುಂಬುವ ದಿನ.
ಎಲ್ಲರೂ ಕುಟುಂಬದ ಸದಸ್ಯರೊಂದಿಗೆ ಬೆರೆತು, ಎಣ್ಣೆ ಸ್ನಾನ ಮಾಡಿ ಹೊಸಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ, ನೈವೇದ್ಯ ಮಾಡಿ, ಮನೆಯಲ್ಲಿ ಹೋಳಿಗೆ ಜೊತೆಯಲ್ಲಿ ವಿವಿಧ ತಿನಿಸುಗಳು, ಬೇವು-ಬೆಲ್ಲ ಸವಿದು ಸಂಜೆ ಸೂರ್ಯಾಸ್ತಮದ ನಂತರ ಚಂದ್ರನ ಹುಡುಕಾಟಕ್ಕಾಗಿ ಒಬ್ಬರಿಗೊಬ್ಬರು ಸ್ವರ್ಧೆಗೆ ಬಿದ್ದಂತೆ ಆಕಾಶದತ್ತ ಬೆರಳು ಮಾಡಿ ತೋರಿಸುವರು.ಚಂದ್ರ ಕಂಡೊಡನೆ ಒಬ್ಬರಿಗೊಬ್ಬರು ಬೇವು, ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯ ತಿಳಿಸುತ್ತಾ ಸಂಭವಿಸುವರು.ನಂತರ ದೇವರ ದರ್ಶನ ಪಡೆದು,ಗುರು-ಹಿರಿಯರಿಗೆ ಬೇವು-ಬೆಲ್ಲ ನೀಡಿ ನಮಸ್ಕರಿಸಿ ಆಶೀರ್ವಾದ ಪಡೆಯುವರು.
ಒಟ್ಟಾರೆಯಾಗಿ ಹಿಂದೂಗಳಿಗೆ ಯುಗಾದಿ ಹಬ್ಬ ಎಲ್ಲಾ ಹಬ್ಬಗಳಿಂತಲೂ ಶ್ರೇಷ್ಠವಾದದ್ದು.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳೊಂದಿಗೆ
ಲೇಖಕರು:- ಸಿ.ಹೆಚ್.ನಾಗೇಂದ್ರಪ್ಪ. ಶಿಕ್ಷಕರು, ನವಿಲೇಹಾಳು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.