(www.vknews.in) : ಎಲ್ಲ ಧರ್ಮಗಳಲ್ಲು ಜಪ ಮಾಡುವ ರೂಢಿ ಉಂಟು. ಕುರಾನ್, ನಮಾಜ್ ಮತ್ತು ಇನ್ನಿತರೇ ದುವಾಗಳು ಒಂದು ರೀತಿಯ ಜಪದ ಶ್ರೇಣಿಯಲ್ಲಿ ಬರುತ್ತವೆ. ಲೌಕಿಕ ಜೀವನವನ್ನು ಸಾಗಿಸುತ್ತಾ ಅಲೌಕಿಕ ಸ್ಥಿತಿಯಲ್ಲಿ ಚಿತ್ತವನ್ನು ಪಳಗಿಸುವ ಮತ್ತು ಕೊಂಡುಯ್ಯುವ ನಿಟ್ಟಿನಲ್ಲಿ ಜಪ ಮತ್ತು ಧ್ಯಾನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತವೆ. ಮಾನಸಿಕ ಸ್ಥಿತಿಯ ಬದಲಾವಣೆಯ ನಿಯಂತ್ರಣ ಸಾಧಕನ ಹತೋಟಿಯಲ್ಲಿರುತ್ತದೆ. ಸಾಧಕ ಎಷ್ಟು ಸಮರ್ಥಕನಾಗಿರುತ್ತಾನೋ ಆತನಲ್ಲಿ ಅಲೌಕಿಕತೆಯೂ ಅಷ್ಟೇ ಪ್ರಮಾಣದಲ್ಲಿರುತ್ತದೆ.
ಒಬ್ಬ ಸಾಧಕ ನಮಾಜ್ ಮಾಡುತ್ತಿದ್ದ. ಆತನ ಮುಂದಿನಿಂದ ಓರ್ವ ಪ್ರೇಯಕ ಹಾದು ಹೋಗುತ್ತಾನೆ. ನಮಾಜ್ ಪೂರ್ಣಗೊಳಿಸಿದ ನಂತರ ಸಾಧಕ ಪ್ರೇಯಕನಿಗೆ, ನಾನು ನಮಾಜ್ ಮಾಡುತ್ತಿರುವುದು ನಿನಗೆ ಕಾಣಲಿಲ್ಲವೇ, ನನ್ನ ಪ್ರಾರ್ಥನೆಯಲ್ಲಿ ಅಡ್ಡಿಯಾಯಿತಲ್ಲ ಎಂದಾಗ, ನಾನು ನನ್ನ ಪ್ರೇಯಸಿಯ ಗುಂಗಲ್ಲಿ ಮುಳುಗಿ ಹೋಗಿದ್ದೇನೆ, ಅವಳ ನೆನಪು ಬಿಟ್ಟರೆ ನನಗೆ ಏನೂ ಕಾಣದು, ನೀನು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಸಂಪೂರ್ಣವಾಗಿ ಆತನ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಿದ್ದರೆ, ಆತನ ಹೊರತು ನಿನಗೆ ಬೇರೇನೂ ಗೋಚರಿಸುತ್ತಿರಲಿಲ್ಲ. ಇದರ ಸಾರಾಂಶ ಏನೆಂದರೆ ನಾವು ನಮಾಜ್ ನಲ್ಲಿ ಕುರಾನ್ ಜಪಿಸುವಾಗ ಏಕಾಗ್ರತೆಯಿಂದ ಧ್ಯಾನಗ್ರಸ್ಥರಾಗಿ ಮನಃಪೂರ್ವಕವಾಗಿ ಜಪಿಸಬೇಕು.
ನಮ್ಮಂಥ ಸಾಮಾನ್ಯ ಜನರಲ್ಲಿ ಅಲೌಕಿಕ ದೃಷ್ಟಿಯ ಕೊರತೆ ಇರುವ ಕಾರಣ ಕನಿಷ್ಠಪಕ್ಷ ದೇವರು ನಮ್ಮನ್ನು ನೋಡುತ್ತಿದ್ದಾನೆ ಎಂಬ ಭಾವನೆಗೆ ಮನಸ್ಸನ್ನು ಒಳಪಡಿಸಬೇಕೆಂದು ಗುರುಹಿರಿಯರು ಹೇಳುತ್ತಾರೆ. ಪ್ರತಿ ನಿಮಿಷಕ್ಕೆ ನೂರಾರು ಯೋಚನೆಗಳು ನಮ್ಮ ಮನಸ್ಸುಗಳಲ್ಲಿ ಸೃಷ್ಟಿಗೊಳ್ಳುತ್ತವೆ. ಪ್ರತಿ ನಿಮಿಷ ಮನಸ್ಸನ್ನು ಜಾಗೃತಗೊಳಿಸಿ, ದಾರಿತಪ್ಪಿದ ಮಗನನ್ನು ಮನೆಗೆ ಕರೆತಂದಂತೆ ಅಲೌಕಿಕತೆಯತ್ತ ಎಳೆಯಬೇಕಾಗುತ್ತದೆ. ಯಾರ ಮನಸ್ಸು ಸಾಧಕತೆಯಲ್ಲಿ ಎಷ್ಟು ಪರಿಪಕ್ವವಾಗಿದೆ ಎಂಬುದು ಆ ದೇವರೇ ಬಲ್ಲ. ಪ್ರಯತ್ನ ಪಡುವವರಿಗೆ ಸನ್ಮಾರ್ಗ ಖಂಡಿತವಾಗಿಯೂ ಸಿಗುತ್ತದೆ.
ನಮಾಜ್ ಮುಗಿಸಿ ಮಸೀದಿಯಿಂದ ಹೊರಗೆ ಬರುವಾಗ ಕೆಲವರು ತನ್ನ ಮಕ್ಕಳನ್ನು ಮಂತ್ರ ಊದಿಸಿಕೊಳ್ಳಲು ನಿಂತಿರುತ್ತಾರೆ. ಗುರುಹಿರಿಯರು ಆ ಮಕ್ಕಳ ಮೇಲೆ ಮಂತ್ರ ಊದುತ್ತಾರೆ. ಆ ಮಂತ್ರ ಬೇರೇನೂ ಅಲ್ಲ ಕುರಾನ್ ಪಠಣ ಅಥವಾ ಜಪ. ನಮಾಜ್ ಮಾಡಿ, ಕುರಾನ್ ಜಪಿಸಿದ ಪ್ರಭಾವ ನಿಷ್ಕಲ್ಮಶ ಉಸಿರಿನಲ್ಲಿರುತ್ತದೆ. ಯಾರ ಮೇಲೆ ಉಫ್… ಎಂದು ಊದಿದರು ಅದು ಪ್ರಭಾವ ಬೀರದೆ ಇರದು. ಮಕ್ಕಳು ಚೇತರಿಸಿಕೊಳ್ಳುತ್ತಾರೆ. ಶಾರೀರಿಕ ಮತ್ತು ಮಾನಸಿಕವಾಗಿ ಕುಗ್ಗಿರುವ ಮಕ್ಕಳನ್ನು ತಂದು ಪೋಷಕರು ಗುರುಹಿರಿಯರಿಂದ ಮಂತ್ರಿಸಿಕೊಂಡು ಹೋಗುವುದು ಇಂದಿಗೂ ಕಾಣಸಿಗುವುದು. ಅವರ ಮನಸ್ಸಿಗೆ ಶಾಂತಿ ಸಿಗುವಂತೆ ಮಂತ್ರಿಸುವುದು ಗುರುಹಿರಿಯರ ಕರ್ತವ್ಯ. ಆದರೆ ಯುವ ಪೀಳಿಗೆ ಅದನ್ನು ಕಡೆಗಣಿಸುತ್ತಿವುದು ಖೇದಕರ ಸಂಗತಿ.
ದೇವರ ನಾಮಗಳಲ್ಲಿ ಶಕ್ತಿ ಇರುತ್ತದೆ. ಅದನ್ನು ಜಪಿಸಿದರೆ, ನಮ್ಮ ಲೌಕಿಕ ಮತ್ತು ಅಲೌಕಿಕ ಬಯಕೆಗಳು ಈಡೇರುತ್ತವೆ. ದುವಾ ಜೊತೆ ಪ್ರಯತ್ನವೂ ಅತಿ ಮುಖ್ಯ. ಆಗಲೇ ಆದರೆ ಪ್ರಭಾವ ದ್ವಿಗುಣಗೊಳ್ಳುವುದು. ಓರ್ವ ಹಳ್ಳಿಗ ಗುರುಗಳ ಬಳಿ ಬಂದ. ನೀವೇನೋ ಆ ಪರಭಾಷೆಯಲ್ಲಿ ಓದಿ ಮಂತ್ರಿಸುತ್ತೀರಲ್ಲ, ಅದು ನಿಜವಾಗಲೂ ಪ್ರಭಾವ ಬೀರುತ್ತದೋ ಎಂದ. ಅವರು ಆತನಿಗೆ ತಿಳಿ ಹೇಳಿದರು. ಆದರೆ ಆತ ಸಂತೃಪ್ತನಾಗಲಿಲ್ಲ. ಆತನನ್ನು ಬೈದರು. ಕೋಪಗೊಂಡು ಹೊರಟು ಹೋದ. ಕೆಲವು ದಿನಗಳ ನಂತರ ಆತನನ್ನು ಕರೆದರು, ಬಾರದಿರಲು ಏನು ಕಾರಣ, ನನ್ನ ಮೇಲೆ ಕೋಪವೇ? ನಿಮ್ಮ ಬೈಗುಳ ಕೇಳಿ ಬೇಸರವಾಯಿತು ಅದಕ್ಕೆ ಬರಲಿಲ್ಲ ಎಂದ. ಗುರುಗಳು ಹೇಳಿದರು – ನಾನು ನಿನಗೆ ತಿಳಿ ಹೇಳಲು ಹಾಗೆ ಮಾಡಿದೆ. ನಿನ್ನ ಭಾಷೆಯಲ್ಲಿ ಬೈಗುಳಗಳು ಇದ್ದ ಕಾರಣ ನಿನಗೆ ಅರ್ಥವಾಯಿತು ಮತ್ತು ಪ್ರಭಾವ ಬೀರಿತು. ಹಾಗೆಯೇ ಆ ಮಂತ್ರಗಳು ದೇವನಾಮಗಳೂ ಸಹ ಮನುಷ್ಯನ ಮೇಲೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಪ್ರಭಾವ ಬೀರುತ್ತವೆ. ಭಾಷೆ ಬದಲಾದ ಮಾತ್ರಕ್ಕೆ ಪ್ರಭಾವ ಬಲಾಗುವುದಿಲ್ಲ.
ಸೂಫಿಸಂತರಿಗೆ ಮನುಷ್ಯನ ವ್ಯಕ್ತಿತ್ವವನ್ನು ಮತ್ತು ಆಂತರಿಕ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ದೇವರು ಪ್ರದಾನ ಮಾಡಿರುತ್ತಾನೆ. ಸಾಧಕನ ವ್ಯಕ್ತಿತ್ವಕ್ಕೆ, ಅಭಿರುಚಿಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ, ಯಾವ ಜಪ ಸಾಧಕನಿಗೆ ಸೂಕ್ತ ಎಂದು ನಿರ್ಧರಿಸಿ ಅವರು ನೀಡುತ್ತಾರೆ. ಯಾವ ಸಮಯದಲ್ಲಿ, ಎಷ್ಟು ಸಲ, ಹೇಗೆ ದೇವನಾಮವನ್ನು ಜಪಿಸಬೇಕು ಅದರ ಪರಿಣಾಮಗಳು ಹೇಗೆ ಬೀರುತ್ತವೆ ಎಂದು ಹೇಳಿಕೊಡುತ್ತಾರೆ. ಜಪದಿಂದ ಏಕಾಗ್ರತೆ, ಆತ್ಮಶಕ್ತಿ ಹೆಚ್ಚಾಗುವುದಲ್ಲದೆ ಅಲೌಕಿಕ ಜ್ಞಾನ ವೃದ್ಧಿಗೊಳ್ಳಲಾರಂಭಿಸುತ್ತದೆ.
ಜಪದಲ್ಲಿ ಅನೇಕ ವಿಧಗಳಿಗೆ. ಕೆಲವು ಸಾಮೂಹಿಕ ಮತ್ತೆ ಕೆಲವು ಏಕಾಂತತೆಯಲ್ಲಿ ಮಾಡುವಂಥವು. ಕೆಲವು ಜೋರಾಗಿ ಕೂಗಿ ಮಾಡುವಂಥವಾದರೆ, ಕೆಲವು ಯಾರಿಗೂ ಕೇಳಿಸದ ಹಾಗೆ ನಿಶಬ್ಧವಾಗಿ ಮಾಡಬೇಕಾಗುತ್ತದೆ. ದೀಕ್ಷೆ ಪಡೆದ ಸಾಧಕ ಎಷ್ಟು ಪ್ರಬಲವಾಗಿ ಜಪ ಮಾಡುತ್ತಾನೋ ದೇವರಿಂದ ಅಷ್ಟೇ ಸಮೀಪಿಸುತ್ತಾ ಹೋಗುತ್ತಾನೆ.
ಜೀವನ ಒತ್ತಡಗಳಿಂದ ಕೂಡಿದೆ. ಕೆಲವರಿಗೆ ಆಫೀಸಿನ ಒತ್ತಡ, ಮನೆಯ ಒತ್ತಡ, ಮತ್ತೆ ಕೆಲವರಿಗೆ ಆರೋಗ್ಯದ ಒತ್ತಡ, ಮತ್ತೆ ಕೆಲವರಿಗೆ ಮಕ್ಕಳ ಭವಿಷ್ಯದ ಒತ್ತಡ. ಸ್ಟ್ರೆಸ್ ಮತ್ತು ಟೆನ್ಶನ್ ಗಳ ಸುತ್ತ ಎಲ್ಲರ ಜೀವನ ಗಿರಗೀಟ್ಲೆಯಂತೆ ಗರಕೆ ಹೊಡೆಯುತ್ತಿದೆ. ಹಾಗಾದರೆ ಜಪಗಳ ಸಹಾಯದಿಂದ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದೆ? ಹೌದು. ಇಟ್ಟುಕೊಳ್ಳಬಹುದು. ಸ್ಟ್ರೆಸ್ ಬರ್ಸ್ಟ್ ಮಾಡಲು ಬಹಳ ಸುಲಭವಾದ ಮಾರ್ಗ ಅಥವಾ ವಿಧಾನ ಜಪ ಮತ್ತು ಧ್ಯಾನ. ನಾನು ಕಲಿತುಕೊಂಡ ವಿಧಾನ ನಿಮಗೆ ಹೇಳಿಕೊಡುತ್ತಿದ್ದೇನೆ. ಬೆಳಿಗ್ಗೆ ಅಥವಾ ಸಾಯಂಕಾಲ ಮಾಡಬಹುದು. ಬೆನ್ನು ನೇರ ಮಾಡಿ ವಜ್ರಾಸನ ಅಥವಾ ಸುಖಾಸನದ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಕಣ್ಣು ಮುಚ್ಚಿರಬೇಕು. “ಅಲ್ಲಾಹು” “ಅಲ್ಲಾಹು” “ಅಲ್ಲಾಹು” ಎಂಬ ಜಪವನ್ನು ಉಚ್ಚರಿಸಲು ಪ್ರಾರಂಭಿಸಿ. ಎಡೆಬಿಡದೆ ಸರಾಗವಾಗಿ ಜೋರಾಗಿ ಮಾಡಿ. ಸಂಪೂರ್ಣವಾಗಿ ಕಳೆದುಹೋಗುತ್ತೀರಿ. 15 ರಿಂದ 30 ನಿಮಿಷ ಮಾಡಿ ನೋಡಿ, ಮನಸ್ಸು ಎಷ್ಟು ಹಗುರವಾಗುತ್ತದೆಂದರೆ ಬೆಟ್ಟದಷ್ಟು ಭಾರ ಕಳೆದಂತಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ.
ಸ್ಟ್ರೆಸ್ ಎಂಬ ಕೊಳೆಯನ್ನು ಹೊರ ಹಾಕಲು ಈ ವಿಧಾನ ಒಮ್ಮೆ ಅನುಸರಿಸಿ ನೋಡಿ. ಸಮಾನ ಮನಸ್ಕರ ಗುಂಪಲ್ಲಿ ಎಲ್ಲರು ಒಂದೇ ಸ್ವರದಲ್ಲಿ ಮಾಡಿದರೆ ಇನ್ನೂ ಆನಂದ ಬರುತ್ತದೆ. ಸ್ನೇಹಿತರು ಇಲ್ಲವಾದಲ್ಲಿ ಮನೆಯಲ್ಲಿ ಅಥವಾ ವಿಶಾಲ ಜಾಗದಲ್ಲಿ, ಪ್ರಶಾಂತ ವಾತಾವರಣದಲ್ಲಿ ಮಾಡಿ. ಬೇರೆಯವರು ನೋಡಿ ಏನೆಂದುಕೊಳ್ಳುತ್ತಾರೋ ಎನ್ನುವ ಯೋಚನೆ ಬಿಟ್ಟುಬಿಡಿ. ನಮ್ಮ ಮನಸ್ಸಿಗೆ ಶಾಂತಿ ಬೇಕು ಅಷ್ಟೆ. ಜಪಕ್ಕೆ ಜಾತಿಯ ಬೇಲಿ ಇಲ್ಲ. ಯಾರೂ ಬೇಕಾದರೂ ಮಾಡಬಹುದು. “ಅಲ್ಲಾಹು” ದೇವರ ಬೀಜನಾಮ. ಜೋರಾಗಿ ಮಾಡಲು ಅವಕಾಶ ಸಿಗದೆ ಇರುವವರು ಸೋಫಾ ಮೇಲೆ ಆರಾಮಾಗಿ ಕುಳಿತು, ಮೆದು ಹಾಸಿಗೆಯ ಮೇಲೆ ಮಲಗಿಕೊಂಡು ನಿಶಬ್ಧವಾಗಿಯೂ ಸಹ ಮಾಡಬಹುದು. ಒಂದು ವಾರದಲ್ಲೇ ಬದಲಾವಣೆಗಳು ಕಂಡು ಬರುತ್ತವೆ.
– ಜಬೀವುಲ್ಲಾ ಖಾನ್
ಜಬೀವುಲ್ಲಾ ಖಾನ್ ಹುಟ್ಟಿದ ಊರು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು. ಓದಿದ್ದು ಬೆಳೆದಿದ್ದು ಕನಕಪುರ ತಾಲ್ಲೂಕಿನ ತಿಮ್ಮಸಂದ್ರ ಎಂಬ ಕುಗ್ರಾಮದಲ್ಲಿ. ನಂತರ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮತ್ತು ವಾಸ. ನಾನೊಬ್ಬ ಹವ್ಯಾಸಿ ಬರಹಗಾರ. ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಾಧಿಕಾರಿಯಾಗಿದ್ದ ಡಾ.ಅನುರಾಧರವರ ಪ್ರೋತ್ಸಾಹದಿಂದ ಬರೆಯಲು ಮುಂದಾದೆ. "ಈಕನಸು" ಎಂಬ "ಇ-ಸಂಚಿಕೆ"ಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ "ಸನ್ಮಾರ್ಗ" ವಾರ ಪತ್ರಿಕೆಯಲ್ಲಿ ನನ್ನ ಕವನಗಳು ಪ್ರಕಟಗೊಂಡವು. ಹಾಗೆಯೇ ಮುಂದುವರಿಯುತ್ತಾ "ವಿಕೆನ್ಯೂಸ್" ಎಂಬ ಇ-ಪತ್ರಿಕೆಯಲ್ಲಿ ನನ್ನ ಲೇಖನಗಳನ್ನು ಪ್ರಕಟಿಸುವ ಅವಕಾಶ ಸಿಕ್ಕಿತು. "ವ್ಯಕ್ತಿತ್ವ ವಿಕಸನ" ಮತ್ತು "ವಿಶ್ವಶಾಂತಿಯೇ" ನನ್ನ ಲೇಖನಗಳ ತಿರುಳು. "ಪ್ರಜಾವಾಣಿ"ಯಲ್ಲೂ ನನ್ನ ಬರಹಗಳು ಪ್ರಕಟಗೊಂಡವು. "ದಾಮನೆಕರಮ್"(ಕರುಣೆಯ ಮಡಿಲು) ಎಂಬ ಒಂದು ಸಣ್ಣ ಉರ್ದು ಕೃತಿಯನ್ನು ಸಂಯೋಜಿಸಿದ್ದೇನೆ. "ನೀವು ಲೈಫ್ ನಲ್ಲಿ ಇಂಪ್ರೂವ್ ಆಗಬೇಕೆ...?", "ಸೂಫಿ ಸಂತರ ಸುಗಂಧ", "ಸರ್ವ ಶಿಕ್ಷಣದ ಸವಾಲುಗಳು", "ನಮ್ಮ ನಿಮ್ಮ ಸಕ್ಸಸ್", "ಮಕ್ಕಳಿಗಾಗಿ ಮುತ್ತಿನಂಥ ಕಥೆಗಳು" ಎಂಬ ನನ್ನ ಕೃತಿಗಳನ್ನು ಯಶಸ್ ಪಬ್ಲಿಕೇಷನ್ಸ್ ಮತ್ತು ದರ್ಪಣ ಪ್ರಕಾಶನದ ಕುಲಕರ್ಣಿ ಮತ್ತು ಕುಮಾರ್ ವಿಜಯ್ ರವರು ಪ್ರಕಟಿಸಿದರು. - Zabiulla Khan, Bangalore ಹಿರಿಯರ ಮಾತು: ಜನಾಬ್ ಜಬೀವುಲ್ಲಾ ಖಾನ್ ರವರ ಮತ್ತು ನನ್ನ ಪರಿಚಯ ಸುಮಾರು ಐದು ವರ್ಷಗಳಷ್ಟು ಹಿಂದಿನದು. ಜಾನಪದ ಪ್ರಕಾಶನವು ಪ್ರಕಟಣೆಗಾಗಿ ಆಯ್ಕೆ ಮಾಡಿದ ಪುಸ್ತಕಗಳ ಹಸ್ತ ಪ್ರತಿಗಳ ಅಕ್ಷರ ಜೋಡಣೆ ಮಾಡಿಸುತ್ತಿದ್ದ ಅವಧಿಯಲ್ಲಿ ಕಂಪ್ಯೂಟರ್ ಕಛೇರಿಯೊಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿ. ಆ ಸಂದರ್ಭದಲ್ಲಿ ಇವರು ಬರೆದು ಮುಗಿಸಿದ್ದ ಪುಸ್ತಕವೊಂದರ ಹಸ್ತಪ್ರತಿ ನನಗೆ ಲಭ್ಯವಾಯಿತು. ಕನ್ನಡಲ್ಲಿದ್ದ ಆ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅದನ್ನು ಓದಿ ನನಗೆ ಬಹಳಷ್ಟು ಹರ್ಷವಾಯಿತು. ಕನ್ನಡವು ಮಾತೃಭಾಷೆಯಾಗಿರುವವರ ಬರವಣಿಗೆಗಿಂತ ಉತ್ತಮವಾಗಿದ್ದ ಅವರ ಶೈಲಿ ನಿಜಕ್ಕೂ ಆಶಾದಾಯಕವೆನಿಸಿತು. ಬರಹವು ವ್ಯಾಕರಣ ದೋಷಗಳಿಂದ ಮುಕ್ತವಾಗಿದ್ದು ಓದಲು ಹಿತವೆನಿಸಿತು. ಜಬೀವುಲ್ಲಾ ಖಾನ್ ರವರ ಮಾತೃ ಭಾಷೆ ಉರ್ದು. ಆದರೆ ಕಲಿಕೆಗೆ ಇವರು ಆರಿಸಿಕೊಂಡದ್ದು ಕನ್ನಡ. ಚಿಕ್ಕಂದಿನಿಂದಲೂ ಇವರಿಗೆ ಬರವಣಿಗೆಯ ಹುಚ್ಚು. ಆ ಹುಚ್ಚಿನ ದೆಸೆಯಿಂದ ಬರವಣಿಗೆ ಇವರ ಹವ್ಯಾಸವಾಯಿತು. ಪತ್ರಿಕೆಗಳಿಗೆ ಕವನಗಳನ್ನು ಮತ್ತು ಲೇಖನಗಳನ್ನು ಬರೆದು ಕಳುಹಿಸುವ ಚಟದಿಂದ ಪ್ರಾರಂಭವಾದ ಲೇಖನ ಕಲೆ ಇವರ ಗಮನವನ್ನು ಕೃತಿ ರಚನೆಯತ್ತ ಸೆಳೆಯಿತು. ಕಾರ್ಪೊರೇಟ್ ಕಚೇರಿಯೊಂದರಲ್ಲಿ ವೃತ್ತಿನಿರತರಾಗಿದ್ದರೂ ಇವರ ಮನಸ್ಸು ಬರಹ ರಚನಾಕೌಶಲದತ್ತಲೇ ಹರಿಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಪತ್ನಿ ಸೀಮಾ ಕೌಸರ್ ರವರ ಸಹಕಾರವೂ ಇವರಿಗೆ ಲಭ್ಯವಾಗಿದೆ. ಜಬೀವುಲ್ಲಾ ಖಾನ್ ರವರು ಈವರಗೆ ಹಲವು ಕೃತಿಗಳನ್ನು ರಚಿಸಿ ಓದುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಉರ್ದು ಸಾಹಿತ್ಯವೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಪ್ರಕಾರವಾಗಿ ಗಳಿಸಿದ ಅನುಭವದ ದೆಸೆಯಿಂದ ಪ್ರೇರಿತರಾಗಿ ತನ್ನದೇ ಶೈಲಿಯಲ್ಲಿ ಕವನಗಳನ್ನು ಬರೆಯುತ್ತಿದ್ದಾರೆ. ಇವರು ಕನ್ನಡ ತಾಯಿಯ ಸೇವೆಯನ್ನು ಮನದುಂಬಿ ಮಾಡುವರೆಂಬ ಆಶಯದಿಂದ ನನ್ನ ಶುಭ ಕಾಮನೆಗಳಿಂದ ಇವರನ್ನು ಹೃತ್ಪೂರ್ವಕವಾಗಿ ಆಶೀರ್ವದಿಸುವ ಭಾಗ್ಯ ನನ್ನದು. - ಕೆ. ಆರ್. ಕೃಷ್ಣಮೂರ್ತಿ ಸಂಪಾದಕರು, ಜನಪದ ಪ್ರಕಾಶನ ಬೆಂಗಳೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.