ಸವದತ್ತಿ(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿ ನಡೆಸಲ್ಪಡುತ್ತಿರುವ ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯಕ್ಕೆ ೨೦೨೦-೨೧ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಇಲ್ಲಿ ಸೇರಬಯಸುವ ವಿದ್ಯಾರ್ಥಿಗಳು ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿರುವ ಸುಸಂಸ್ಕೃತ ಬಡ ಜಂಗಮ (ವೀರಮಹೇಶ್ವರ) ಕುಟುಂಬಗಳಿಗೆ ಸೇರಿದವರಾಗಿರಬೇಕು. ಪ್ರಾಥಮಿಕ ೬ನೇ ತರಗತಿಯಿಂದ ಮುಂದಿನ ತರಗತಿಯ ಶಿಕ್ಷಣದ ವ್ಯಾಸಂಗ ಮುಂದುವರೆಸಲು ಇಚ್ಚಿಸುವ ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಬಹುದಾಗಿದೆ.
ಶ್ರೀಮಠದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯವಿದ್ದು, ಉಚಿತ ವಸತಿ ಹಾಗೂ ಪ್ರಸಾದ(ಊಟ)ದ ವ್ಯವಸ್ಥೆಯಿದೆ. ಮಠದಲ್ಲಿರುವ ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆಯ ಮೂಲಕ ಧಾರ್ಮಿಕ, ವೈದಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ನೀಡಲಾಗುವುದು. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ನೀಡಿಕೆಗೂ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಜ್ಯೋತಿಷ್ಯಶಾಸ್ತç, ಯೋಗಶಿಕ್ಷಣ, ಆಧ್ಯಾತ್ಮಿಕ ಚಿಂತನೆ ಸೇರಿದಂತೆ ವಿಭಿನ್ನ ವಿಶೇಷ ಕಲಿಕಾ ವರ್ಗಗಳನ್ನೂ ಸಹ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳು ತಮ್ಮ ಪೂರ್ಣಹೆಸರು, ಜನ್ಮದಿನಾಂಕ, ಜನ್ಮಸ್ಥಳ, ಕಲಿಯುತ್ತಿರುವ ವರ್ಗ, ಕುಟುಂಬದ ವಾರ್ಷಿಕ ಆದಾಯ, ತಂದೆಯ ಹೆಸರು, ತಾಯಿಯ ಹೆಸರು, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ವಿವಿಧ ಪೂರಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಕಲಿತ ಶಾಲೆಯ ಮುಖ್ಯಾಧ್ಯಾಪಕರಿಂದ ಹಾಗೂ ಸ್ವಗ್ರಾಮದ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ವಿದ್ಯಾರ್ಥಿಯ ನಡತೆ ಕುರಿತು ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು. ಆಸಕ್ತ ವಿದ್ಯಾರ್ಥಿ ಪಾಲಕರು ಇಲ್ಲವೇ ಪೋಷಕರು ಎಲ್ಲ ಮಾಹಿತಿಯೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆಯ ಆಡಳಿತ ಮಂಡಳಿ, ಶ್ರೀಗುರುಶಿವಪ್ಪಯ್ಯ ಶಿವಯೋಗಿಗಳಮಠ, ಉಗರಗೋಳ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ’ ಇವರಿಗೆ ಅಕ್ಟೋಬರ್ ೨೦ರ ಒಳಗಾಗಿ ಅರ್ಜಿಸಲ್ಲಿಸಬೇಕು. ಪ್ರಸ್ತುತ ಕೋವಿಡ್-೧೯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಂದರ್ಶನಕ್ಕೆ ನಂತರ ದಿನಾಂಕ ಗೊತ್ತುಪಡಿಸಿ ದೂರವಾಣಿ ಇಲ್ಲವೇ ಆನ್ಲೈನ್ ಮೂಲಕ ಏರ್ಪಡಿಸಲಾಗುವುದು. ಹೆಚ್ಚಿನ ಮಾಹಿತಿಗೆ ೯೬೬೩೫೧೧೦೨೨, ೯೮೪೫೪೮೦೬೭೫, ೮೦೭೩೩೭೮೨೯೨, ೯೯೪೫೮೦೧೪೨೨ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪಾಠಶಾಲೆಯ ಆಡಳಿತ ಮಂಡಳಿ ಸಿಇಓ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಂ.ಆರ್. ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.