ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ):- ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಕೋವಿಡ್ ಮಾರ್ಗಸೂಚಿ ಪಾಲಿಸುವುದನ್ನು ಮರೆತರೆ ಸಂಕಷ್ಟ ತಪ್ಪಿದ್ದಲ್ಲ . ಈಗಾಗಲೇ ತಜ್ಞರು ೩ ನೇ ಅಲೆಯ ಕುರಿತು ಎಚ್ಚರಿಕೆ ನೀಡಿರುವುದರಿಂದ ಜನತೆ ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ನಗರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಜಿ.ರಮೇಶ್ ಕರೆ ನೀಡಿದರು.
ನಗರ ಪ್ರಾರ್ಥಮಿಕ ಕೇಂದ್ರಕ್ಕೆ ಸೇರಿದ ಹಾರೋಹಳ್ಳಿಯ ಉಪ ಕೇಂದ್ರದಲ್ಲಿ ಕೋವಿಡ್ -೧೯ , ೩ ನೇ ಅಲೆ ತಡೆಯುವ ಕುರಿತು ಅರಿವು ಕಾರ್ಯಕ್ರಮ , ಡೆಂಗ್ಯು , ಮಲೇರಿಯಾ ವಿರೋಧಿ ಮಾಸಾಚರಣೆ , ವಿಶ್ವ ಜನಸಂಖ್ಯಾ ನಿಯಂತ್ರಣ ಪಾಕ್ಷಿಕ ಕುರಿತು ಮಾಹಿತಿ ನೀಡಿ ಅವರು ಮಾತನಾಡುತ್ತಿದ್ದರು. ಈಗಾಗಲೇ ಕೋವಿಡ್ ೧ ಮತ್ತು ೨ ನೇ ಅಲೆಯಿಂದ ಸಂಕಷ್ಟ ಅನುಭವಿಸಿದ್ದೇವೆ ಎಂದ ಅವರು , ೩ ನೇ ಅಲೆ ಬರುವ ಎಚ್ಚರಿಕೆ ನೀಡಿರುವುದರಿಂದ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ , ಜೀವ ರಕ್ಷಣೆಗೆ ಒತ್ತು ನೀಡಿ ಎಂದರು.
ಲಸಿಕೆ ಹಾಕಿಸಿಕೊಂಡಿದ್ದೇವೆ ನಮಗೆ ಭಯವಿಲ್ಲ ಎಂಬ ಅಹಂ ಬೇಡ ಎಂದು ಕಿವಿಮಾತು ಹೇಳಿದ ಅವರು , ಮಾಸ್ಕ್ ಧರಿಸುವುದು , ಸಾಮಾಜಿಕ ಅಂತರ ಕಾಪಾಡುವುದು ಮರೆಯಬಾರದು ಎಂದು ತಿಳಿಸಿದರು. ಅದೇ ರೀತಿ ಇತರ ರೋಗಗಳಾದ ಡಂಗುಮಲೇರಿಯಾ ಕುರಿತು ಜನತೆಗೆ ಅರಿವು ಅಗತ್ಯ , ಮನೆಯ ಅಂಗಳ , ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ , ಮನೆಯಲ್ಲಿ ತೆಂಗಿನ ಚಿಪ್ಪು.ಟೈಯರ್ ಮತ್ತಿತರವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ , ಅಲ್ಲೇ ಸೊಳ್ಳೆಗಳ ಉತ್ಪತ್ತಿಯಾಗುವುದರಿಂದ ಎಚ್ಚರಿಕೆ ಅಗತ್ಯ ಎಂದರು.
ಮನೆಯ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ , ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಸೊಳ್ಳೆ ಪರದೆ ಬಳಸಿ , ಸೊಳ್ಳೆನಾಶಕಗಳನ್ನು ಉಪಯೋಗಿಸಿ ರೋಗದಿಂದ ದೂರವಿರಿ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಈ ಭಾಗದ ಜನತೆಗೆ ಕೋವಿಡ್ ಪರೀಕ್ಷೆ , ಲಸಿಕೆ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸಿ , ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಕುಲ ಕಾಲೇಜಿನ ಪ್ರಾಂಶುಪಾಲ ಮಹೇಶ್ , ನಗರಸಭೆ ಸದಸ್ಯ ಸಂಗೀತಾ , ಹಿರಿಯ ಪ್ರಯೋಗಶಾಲಾ ಅಧಿಕಾರಿ ನಾರಾಯಣಪ್ಪ , ಸ್ಥಳೀಯ ಮುಖಂಡರು ಮತ್ತು ಅಂಗನವಾಡಿ , ಆಶಾ ಕಾರ್ಯಕರ್ತೆಯರು , ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಹಾಗೂ ಹಾರೋಹಳ್ಳಿ ವಾರ್ಡಿನ ಹಿರಿಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.