ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ಸಂಸದ ಮುನಿಸ್ವಾಮಿ ಅವರಿಗೆ ನಿಜವಾದ ದೇಶಭಕ್ತಿಯಿದ್ದರೆ ಆರ್ಎಸ್ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಿ ಎಂದು ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್ ಅಹಮದ್ ಸವಾಲು ಹಾಕಿದರು. ನಗರದ ಕ್ಲಾಕ್ಟವರ್ನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ರಾಷ್ಟ್ರಧ್ವಜ ಹಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಮಾತನಾಡದ ಸಂಸದ ಮುನಿಸ್ವಾಮಿ ಸದಾ ಹಿಂದು-ಮುಸ್ಲಿಂ ಬಂಧುಗಳ ಮಧ್ಯೆ ಜಗಳ ತಂದಿಡುವ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಯಾರಿಗೂ ಭಯಪಟ್ಟು ನಾವು ಧ್ವಜ ಹಾರಿಸಿಲ್ಲ. ನಮ್ಮ ರಾಷ್ಟ್ರಭಕ್ತಿಯನ್ನು ನಾವು ಸಾಬೀತು ಪಡಿಸಿದ್ದೇವೆ. ದೇಶಪ್ರೇಮದ ಬಗ್ಗೆ ನಮಗೆ ಇವರು ಪಾಠ ಮಾಡ ಬೇಕಿಲ್ಲ ಎಂದು ಕಿಡಿಕಾರಿದರು.
ನಾವು ಕ್ಲಾಕ್ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದೇವೆ. ಅದೇ ರೀತಿ ಸಂಸದರು ಆರ್ ಎಸ್ ಎಸ್ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಸಾಬೀತು ಮಾಡಿಕೊಳ್ಳಲಿ.ಹಿಂದೂ-ಮುಸ್ಲಿಂ ನಡುವೆ ಪ್ರಚೋದನಾಕಾರಿ ಹೇಳಿಕೆಗಳನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು. ಆಗಸ್ಟ್ 15 ರಂದು ನಾವೆಲ್ಲರೂ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನುಆಗಸ್ಟ್ 14 ರಂದು ಎಂದು ಹೇಳುವ ಸಂಸದರ ಬುದ್ಧಿ ನಮಗೆ ಅರ್ಥವಾಗಿದೆ. ಇಂತಹ ರಾಜಕೀಯ ಬದಿಗೊತ್ತಿ ಅಭಿವೃದ್ಧಿ ಕಡೆಗೆ ಗಮನ ಕೊಡಲಿ ಎಂದು ಸಲಹೆ ನೀಡಿದರು. ಕ್ಲಾಕ್ಟವರ್ ನಿಮ್ಮಪ್ಪದಾ. ನಿಮ್ಮಪ್ಪದಾ ಅಂತಯಾವಾಗಲೂ ಸಂಸದರು ಹೇಳುತ್ತಾರೆ. ಆದರೀಗ ಹೇಳುತ್ತೇನೆ. ಈ ಕ್ಲಾಕ್ಟವರ್ ನಮ್ಮಪ್ಪದೇ ಇನ್ನು ಮುಂದೆ ಈ ರೀತಿ ಹೇಳಿಕೆಗಳನ್ನು ನೀಡಬೇಡಿ ಎಂದು ಎಚ್ಚರಿಸಿದ ಜಮೀರ್ 1938 ರಲ್ಲಿ ನಮ್ಮತಾತ ಹಾಜಿ ಮಹಮದ್ ಮುಸ್ತಾಫ ಸಾಹೇಬ್ ಕ್ಲಾಕ್ಟವರ್ ನಿರ್ಮಾಣ ಮಾಡಿದ್ದು, ಮೈಸೂರು ಮಹಾರಾಜ ನರಸಿಂಹರಾಜ ಒಡೆಯರ್ ಅವರು ಕ್ಲಾಕ್ಟವರ್, ಎಸ್ಸೆನ್ನಾರ್ ಆಸ್ಪತ್ರೆ, ಬಸ್ ನಿಲ್ದಾಣಗಳ ಉದ್ಘಾಟನೆ ಮಾಡಿದ್ದರು. ಚರಿತ್ರೆಗೊತ್ತಿಲ್ಲದ ಮುನಿಸ್ವಾಮಿ ಕೇವಲ ಓಟಿಗೋಸ್ಕರ ಅಣ್ಣ-ತಮ್ಮಂದಿರ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆಎಂದುದೂರಿದರು.
ಭಗವಂತ ಬಾಯಿ ಕೊಟ್ಟಿದ್ದಾನೆ ಎಂದು ಸುಮ್ಮ ಸುಮ್ಮನೆ ಏನೇನೋ ಹೇಳಬೇಡಿ, ಮುಸ್ಲಿಂರ ದೇಶಭಕ್ತಿಯನ್ನು ಪ್ರಶ್ನೆ ಮಾಡುವಗೋಜಿಗೆ ಹೋಗಬೇಡಿ, ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದ್ದು ಸೂರಾಯ್ಯ ತಯ್ಯಬ್ ಎಂಬುದು ನೆನಪಿರಲಿ. ದೇಶಕ್ಕಾಗಿ ಬಹಳಷ್ಟು ತ್ಯಾಗ ಬಲಿದಾನಗಳನ್ನು ಈ ಸಮುದಾಯ ಮಾಡಿದೆ. ಮುಸ್ಲಿಂ ದೊರೆಗಳ ಆಡಳಿತಾವಧಿಯಲ್ಲಿ ಮಸೀದಿಗಳ ಜೊತೆ ಹಿಂದೂ ದೇವಾಲಯಗಳ ನಿರ್ಮಾಣ ಮಾಡಿದ್ದೇವೆ ಹಾಗೂ ಈಗಲೂ ನಮ್ಮಕರ್ನಾಟಕದ ಕೆಲ ದೇವಾಲಯಗಳಲ್ಲಿ ಸುಲ್ತಾನ್ ಆರತಿ ಪೂಜಾಕಾರ್ಯಕ್ರಮ ನಡೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ ಎಂದರು.
ಪದೇ ಪದೇ ಪಂಕ್ಚರ್ ಅಂಗಡಿ, ಚಿಕನ್ ಶಾಪ್, ತಂದೆ ತಾಯಿಯರನ್ನು ಸಾಕುವುದಿಲ್ಲ ಎಂಬ ಮಾತುಗಳನ್ನಾಡ ಬೇಡಿ, ಈ ಕೆಲಸಗಳನ್ನು ಮಾಡಿಕೊಂಡೆ ನನ್ನ ಸಮುದಾಯದವರು ನಾಲ್ಕು ಕುಟುಂಬಗಳ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಸಹ ಸಮುದಾಯದವರು ಮುಂದಿದ್ದು ಪಂಕ್ಚರ್ ಅಂಗಡಿಯವರು ಸಹ ಓದಿಕೊಂಡೇ ಈ ಕೆಲಸ ಮಾಡುತ್ತಿರುತ್ತಾರೆ. ನಮ್ಮನ್ನು ಶೈಕ್ಷಣಿಕವಾಗಿ ತುಳಿಯಲು ಬೇಕಾದಷ್ಟು ಪಾಲಿಸಿಗಳನ್ನು ಮಾಡುತ್ತಿದ್ದಾರೆ, ಇದೆಲ್ಲಾ ಬೇಡ ಎಂದರು ಇದಕ್ಕೂ ಮುಂಚೆ ನೀವು ಪಂಕ್ಚರ್ ಹಾಕಿಸಿಕೊಳ್ಳಲು ಬಂದಿಲ್ಲವೇ ಎಂದು ಪ್ರಶ್ನಿಸಿದ ಜಮೀರ್ ಮುಂದಿನ ದಿನಗಳಲ್ಲೂ ಬನ್ನಿ ಪಂಕ್ಚರ್ ಹಾಕುತ್ತೇವೆ ಎಂದು ವ್ಯಂಗ್ಯವಾಡಿದರು.
ಇತಿಹಾಸ ತಿರುಚಿ ಹೇಳುವುದನ್ನು ಬಿಟ್ಟುಅಭಿವೃದ್ಧಿಯಕಡೆಗೆ ಒತ್ತು ನೀಡಿ ಎಂದು ಸಲಹೆ ಮಾಡಿದರಲ್ಲದೆ, ನಿನ್ನಪ್ಪದಾ..ನನ್ನಪ್ಪದಾ ಎಂದೆಲ್ಲಾ ಇನ್ನು ಮುಂದೆ ಮಾತನಾಡಬೇಡಿ…ಇದೇನು ಆಸ್ತಿನಾ ನಾವು ಬರೆದುಕೊಳ್ಳೋಕೆ ಎಂದು ಪ್ರಶ್ನಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.