ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರಪಂಚದ ಸೃಷ್ಟಿಕರ್ತ ಅಲ್ಲಾಹು ಸ್ಥಾಪಿಸಿ ತನ್ನ ಸೃಷ್ಟಿಗಳಾಗ ಇಡೀ ಮಾನವ ಕುಲಕ್ಕೆ ಸಂಪೂರ್ಣ ಮತ್ತು ಸಮಗ್ರ ಜೀವನ ವ್ಯವಸ್ಥೆಯಾಗಿ ರೂಪಿಸಿದ ಇಸ್ಲಾಂ ಧರ್ಮ ಎಂಬ ಪ್ರಕೃತಿ ಧರ್ಮ, ಎಲ್ಲಾ ರೀತಿಯ ಅಪಪ್ರಚಾರ, ಸುಳ್ಳಾರೋಪ,ಕುಟಿಲ ತಂತ್ರ,ಷಡ್ಯಂತ್ರಗಳನ್ನು ಮೆಟ್ಟಿ ನಿಂತು ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೂ ಜಾಗತಿಕವಾಗಿ ದೂರದ ಮೊರೊಕ್ಕೋ ವರೆಗೂ ತನ್ನ ಜ್ವಾಜ್ವಲ್ಯಮಾನ ಪ್ರಭೆಯನ್ನು ಹರಡುತ್ತಲೇ ಇದೆ.
ಅಮೆರಿಕದ ಕೀರ್ತಿ ಶಿಖರಗಳಾಗಿದ್ದ ವಿಶ್ವ ವ್ಯಾಪಾರ ಕೇಂದ್ರ ಮತ್ತು ಪೆಂಟಗನ್ ಮೇಲೆ ಅಮೆರಿಕದ ಷಡ್ಯಂತ್ರದಿಂದಲೇ ವೈಮಾನಿಕ ದಾಳಿ ನಡೆದು ಈ ಪ್ರಕರಣದೊಂದಿಗೆ ಯಾವುದೇ ಸಂಬಂಧ ವಿಲ್ಲದ ಇಸ್ಲಾಂ ಧರ್ಮ ಮತ್ತು ಮುಸ್ಲಿಮರನ್ನು ಉಸಾಮ ಬಿನ್ ಲಾದನ್ ಎಂಬ ಇಂಜಿನಿಯರ್ ಒಬ್ಬರನ್ನು ಮುಂದಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ರೆಂದು ಚಿತ್ರೀಕರಿಸುವ ಪ್ರಯತ್ನ ನಡೆದಾಗ,ಇಸ್ಲಾಂ ಧರ್ಮ ಸಾರಿದ ಶಾಂತಿ ಸಂದೇಶ ಏನು ಮತ್ತು ಮುಸ್ಲಿಂ ಸಮುದಾಯದ ಮಧ್ಯೆ ಇರುವ 1% ದಷ್ಟು ಇರುವ ನಾಮಧಾರಿಗಳಾದ ವಹ್ಹಾಬಿ ಪಂಥದ ವಿವಿಧ ಗುಂಪುಗಳು ಭಾರತ ಸಹಿತ ಜಗತ್ತಿನಾದ್ಯಂತ ನಡೆಸುತ್ತಿರುವ ಉಗ್ರವಾದ, ಭಯೋತ್ಪಾದನೆ,ನೂತನವಾದಿ ಕೃತ್ಯಗಳನ್ನು ನೈಜ ಮುಸ್ಲಿಂ ಸಮುದಾಯ ದಾಖಲೆ ಗಳೊಂದಿಗೆ ಜಗತ್ತಿನ ಮುಂದಿಟ್ಟಾಗ ಆರೋಪ ಹೊರಿಸಿದವರು ಹೇಳ ಹೆಸರಿಲ್ಲದಂತೆ ಮಾಯವಾದರು.
ನಾಮಧಾರಿಗಳು,ಉಗ್ರ ಮನಸ್ಥಿತಿ ಯವರು ಎಲ್ಲಾ ಸಮುದಾಯದಲ್ಲೂ ಎಲ್ಲಾ ಕಾಲದಲ್ಲೂ ಇರುತ್ತಾರೆ ಮತ್ತು ಅಂಥಾ ವಿಕೃತ ಮನೋಭಾವದವರನ್ನು ನೋಡಿ ಇಸ್ಲಾಂ ಧರ್ಮ ವನ್ನಾಗಲೀ ಇತರ ಸಂಸ್ಕೃತಿಯವರನ್ನಾಗಲೀ ಕೆಟ್ಟ ದೃಷ್ಟಿಯಿಂದ ನೋಡಬಾರದೆಂಬುದನ್ನು ಎಲ್ ಟಿ ಟಿ ಇ,ಐಸಿಸ್ ನಂಥಹಾ ನಕಲಿ ಗುಂಪು ಗಳ ಮಾನವ ವಿರೋಧಿ ಕೃತ್ಯಗಳನ್ನು ನೋಡಿ ಜಾಗತಿಕ ಸಮುದಾಯ ಮನದಟ್ಟು ಮಾಡಿಕೊಂಡಿದೆ. ನಂತರ ಇಸ್ಲಾಂ ಧರ್ಮ ಮತ್ತು ಜಾಗತಿಕ ಮುಸ್ಲಿಂ ಸಮುದಾಯದ ಮೇಲೆ ವಿವಿಧ ರೀತಿಯ ಆರೋಪಗಳನ್ನು ಹೊರಿಸಲಾಯಿತು. ಇದೀಗ ಜಿಹಾದ್, ಹಿಜಾಬ್,ಹಲಾಲ್ ಮೊದಲಾದ ಅರಬಿ ಪದಗಳನ್ನು ತೋರಿಸಿ ಇದೇನೋ ಭಯಂಕರ ಮತ್ತು ಭೀಕರ ಸಂಗತಿ ಎಂದು ಬಿಂಬಿಸುವವರ ಪ್ರಯತ್ನ ಗಳು ಕೂಡ ಈಗ ನೀರಿನಲ್ಲಿ ಹಿಂಡಿದ ಹುಣಸೆ ಹಣ್ಣಿನಂತಾಯಿತು!!!
ಸಮಸ್ಯೆ ಯಾರೇ ನಾಮಧಾರಿಗಳು ಸೃಷ್ಟಿಸಿದರೂ ಆ ಸಮಸ್ಯೆಗಳ ಕಾರಣದಿಂದ ಇಸ್ಲಾಂ ಧರ್ಮ ವನ್ನು ಮುಕ್ತವಾಗಿ ಕಲಿಯುವ ಮತ್ತು ಮುಸ್ಲಿಂ ಸಮುದಾಯ ಅಂದರೆ ಏನು ಎಂದು ತಿಳಿಯುವ ಅವಕಾಶವಂತೂ ನಿರ್ಮಾಣ ವಾಗಿರುವುದು ಇಲ್ಲಿ ಗಮನಿಸಬೇಕಾದ ಅಂಶ.
ಇಲ್ಲಿನ ಹಿಂದೂ ಕ್ರೈಸ್ತ ಸಹಿತ ಎಲ್ಲಾ ಸಮಾಜ ಬಾಂಧವರಿಗೆ ಇಸ್ಲಾಂ ಧರ್ಮ ವೆಂದರೆ ಒಂದು ಮಾನವ ನಿರ್ಮಿತ ಸಿದ್ಧಾಂತ ಅಲ್ಲ ಮತ್ತು ಅಖಿಲ ಪ್ರಪಂಚದ ಸೃಷ್ಟಿಕರ್ತ ಅಲ್ಲಾಹುವಿನ ಶರೀಅತ್ ನಿಯಮವಾಗಿದೆ ಎಂದು ಚೆನ್ನಾಗಿ ಗೊತ್ತಿದೆ. ಇದೇ ಕಾರಣದಿಂದ ಇತರ ಸಮಾಜ ಬಾಂಧವರು ಮಸೀದಿ ಎಂಬ ಸೃಷ್ಟಿಕರ್ತ ಅಲ್ಲಾಹು ವಿನ ಭವನ ಗಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಹರಕೆ ನೀಡುತ್ತಿರುವುದನ್ನು ಕಾಣಬಹುದು. ಸಂತ ಪುರುಷರಾದ ಔಲಿಯಾಗಳು ಮತ್ತು ಸಜ್ಜನರ ಉರೂಸ್ ಕಾರ್ಯಕ್ರಮ ಗಳಿಗೆ ಹಿಂದೂ ಕ್ರೈಸ್ತ ಬಾಂಧವರು ತಂಡೋಪತಂಡವಾಗಿ ಹರಿದು ಬರುತ್ತಿರುವುದನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ಹಾಗಾದರೆ ಸಮಸ್ಯೆ ಇರುವುದೆಲ್ಲಿ!? ಈ ಪ್ರಶ್ನೆಗೆ ಉತ್ತರ ಸುಲಭ. ಮನುಷ್ಯ ನಿಜವಾದ ಮನುಷ್ಯ ನಾದರೆ ಮಸೀದಿ, ದೇವಸ್ಥಾನ, ಚರ್ಚ್, ಹಿಂದೂ,ಮುಸ್ಲಿಂ, ಕ್ರೈಸ್ತ ಯಾವುದೂ ಸಮಸ್ಯೆಯೇ ಅಲ್ಲ. ಮನುಷ್ಯರ ಮನಸ್ಸು ಮಲಿನವಾಗಿ ನೀಚ ಮನಸ್ಥಿತಿ ಆದರೆ ಎಲ್ಲವೂ ಸಮಸ್ಯೆ!!!
ವರ್ತಮಾನ ಸನ್ನಿವೇಶದಲ್ಲಿ ಆಗುತ್ತಿರುವುದೂ ಅಷ್ಟೇ. ಮೂರು ದಿನಗಳ ಬದುಕಿಗಾಗಿ ದಾರಿ ಹೋಕನಂತೆ ಭೂಮಿಗೆ ಬಂದ ಮಾನವ ಜೀವನದ ಗುರಿ ತಿಳಿಯದೆ ವಿಕೃತ ಮನಸ್ಸಿನ ದಾಸರಾಗುತ್ತಾರೆ. ಆಗ ನಾಡು ಅಶಾಂತಿ, ಅನೈಕ್ಯತೆಯ ತಾಣವಾಗುತ್ತದೆ.ಇಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವವರು ಇರುವ ತನಕ ಯಾರಿಗೂ ಯಾರನ್ನೂ ಯಾವತ್ತೂ ಏನೂ ಮಾಡಲು ಸಾಧ್ಯವಿಲ್ಲ. ಇದು ಲೋಕಾಂತ್ಯದ ತನಕ ಎಲ್ಲಾ ರೀತಿಯ ವಿರೋಧಗಳನ್ನು ಮೆಟ್ಟಿ ನಿಂತು ಗಟ್ಟಿಯಾಗಿ ನೆಲೆನಿಲ್ಲಲಿರುವ ಮಾನವರಿಗಿರುವ ಮಾನವೀಯ ಸಿದ್ಧಾಂತ ! ಮಾನವೀಯತೆಗೆ ಜಯವಾಗಲಿ.
✍️ಕೆ.ಎ.ಅಬ್ದುಲ್ ಅಝೀಝ್ ಪುಣಚ (ಹವ್ಯಾಸಿ ಪತ್ರಕರ್ತ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.