ಕೆ .ಎಸ್ ಗಣೇಶ್
ಕೋಲಾರ ಜಿಲ್ಲೆಗೆ 2022 ಹೊಸ ವಿಚಾರಗಳಿಲ್ಲದ ಒಂದು ಸಾಮಾನ್ಯ ವರ್ಷವಷ್ಟೆ 2020 , 2021 ರಲ್ಲಿದ್ದಷ್ಟು ಕಷ್ಟ , ಸಾವು , ನೋವುಗಳಿಲ್ಲ ಎಂಬುದಷ್ಟೆ ಸಮಾಧಾನ ಸಿಲಿಕಾನ್ ಸಿಟಿ ಬೆಂಗಳೂರಿಗೆ , ಅಧಿಕಾರ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಅತಿ ಹತ್ತಿರವಾಗಿರುವ ಜಿಲ್ಲೆ ಕೋಲಾರ , ಹಿಂದುಳಿದ – ಜಿಲ್ಲೆಯ ಹಣೆಪಟ್ಟಿ ಅಂಟಿಸಿಕೊಂಡು ದಶಕಗಳು ಉರುಳಿವೆ , ಅಧಿಕಾರ ಅನುಭವಿಸಿ ಹೋದ ಜನಪ್ರತಿನಿಧಿಗಳು , ಅಧಿಕಾರಿಗಳು ಕೋಲಾರದ ಈ ಹಣೆಬರಹವನ್ನು ಬದಲಿಸುವ ಪ್ರಯತ್ನವನ್ನೇ ಮಾಡಿಲ್ಲ.
ಇದನ್ನು ಜಿಲ್ಲಾ ಕೇಂದ್ರ ಎನಿಸಿಕೊಂಡಿರುವ ಕೋಲಾರ ನಗರವೇ ಸಾರಿ ಹೇಳುತ್ತಿದೆ . ಧೂಳು , ಅವ್ಯವಸ್ಥೆ , ಕಸದ ರಾಶಿ , ಕತ್ತಲ ಕೂಪ , ಎಂದಿಗೂ ಸರಿಹೋಗದ ಒಳ ಚರಂಡಿ ವ್ಯವಸ್ಥೆ , ಮುಚ್ಚ ಹೋಗಿರುವ ಚರಂಡಿಗಳು ಕೋಲಾರ ಜಿಲ್ಲಾ ಕೇಂದ್ರದ ಹೆಗ್ಗುರುತುಗಳಾಗಿವೆ , ಈ ಅವ್ಯವಸ್ಥೆಯನ್ನು ಸರಿಪಡಿಸುವುದು ಎಲ್ಲಿಂದ ಹೇಗೆ ಯಾರು ಎಂಬ ಪ್ರಶ್ನೆಗೆ ಉತ್ತರವೇ ಸಿಗದಂತಾಗಿದೆ.
ಕೋಲಾರ ನಗರಸಭೆ ಅಧಿಕಾರಿ ಜನಪ್ರತಿನಿಧಿಗಳ ಜಂಗೀ ಕುಸ್ತಿ ತಾಣವಾಗಿ ಮಾರ್ಪಟ್ಟಿದೆ . ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾ ದುಸ್ಥಿತಿ ಏರ್ಪಟ್ಟಿದೆ . ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು . ಎಂಬಂತೆ ಕೋಲಾರ ನಗರಸಭೆ ಮತ್ತು ನಗರ ಅನಾಥವಾಗಿದೆ.
ಲೋಕೋಪಯೋಗಿ ಇಲಾಖೆ ರಸ್ತೆಗಳ ದುಸ್ಥಿತಿ ಕೇಳುವಂತಿಲ್ಲ , ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ನೆಪ ಸಾಮಾನ್ಯವಾಗಿದೆ . ಗುತ್ತಿಗೆದಾರರು ಅಧಿಕಾರಿ ವರ್ಗ ರಸ್ತೆ ದುರಸ್ಥಿಯನ್ನೇ ಮರೆತು ಬಿಟ್ಟಿವೆ.
ಕೋಲಾರ ಜಿಲ್ಲಾ ಕೇಂದ್ರದ ಯಾವ ರಸ್ತೆಯಲ್ಲಿ ಸುರಕ್ಷಿತವಾಗಿ ಸುಗಮವಾಗಿ ಸಂಚರಿಸಬಹುದು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ . ಹಿಂದೆಲ್ಲಾ ಅಧಿಕಾರಿಗಳು , ಜನಪ್ರತಿನಿಧಿಗಳು ಸಂಚರಿಸುವ ರಸ್ತೆಗಳನ್ನಾದರೂ ಸುಸ್ಥಿತಿಯಲ್ಲಿಟ್ಟುಕೊಳ್ಳುವ ರೂಢಿ ಇತ್ತು . ಆದರೆ , ಈಗ ಅವ್ಯವಸ್ಥೆ ಆಗರವಾಗಿರುವ ರಸ್ತೆಯನ್ನೇ ಬಿಟ್ಟು ಅಧಿಕಾರಿ ಜನಪತಿನಿಧಿಗಳ ಕಾರುಗಳು ಇರುವುದರಲ್ಲೇ ಚೆನ್ನಾಗಿರುವ ರಸ್ತೆಗಳನ್ನು ಹುಡುಕಿಕೊಂಡು ಸಂಚರಿಸುತ್ತಿವೆ.
ಜವಾಬ್ದಾರಿಯಿಂದ ವಿಮುಖವಾಗುವ ಲಕ್ಷಣ ಇದೆಂಬುದನ್ನು ಜನ ಗಮನಿಸುತ್ತಲೂ ಇದ್ದಾರೆ . ಮುಖ್ಯಮಂತ್ರಿ , ಮಂತ್ರಿಗಳು ಬಂದು ಹೋದಾಗ ಲೋಕೋಪಯೋಗಿ ಇಲಾಖೆ ತಕ್ಷಣಕ್ಕಾದರೂ ರಸ್ತೆಗಳನ್ನು ದುರಸ್ತಿ ಪಡಿಸುತ್ತಿತ್ತು , ಆದರೆ , ಈಗ ಯಾರಿಗೂ ಹೆದರದಂತ ಆಡಳಿತ ವ್ಯವಸ್ಥೆಯನ್ನು ನೋಡುವಂತಾಗಿದೆ . ಇದಕ್ಕೆ ಕೋಲಾರ ನಗರದ ದುಸ್ಥಿತಿ ಸಾಕ್ಷಿಯಾಗಿದೆ.
ಮುಖ್ಯಮಂತ್ರಿಗಳ ಭೇಟಿಯನ್ನು ಹೆದ್ದಾರಿ ಪಕ್ಕದ ಗ್ರಾಮಗಳಿಗೆ ಸೀಮಿತಗೊಳಿಸಲಾಗುತ್ತಿದೆ . ಉಸ್ತುವಾರಿ ಮಂತ್ರಿಗಳು ಸಭೆ , ಸಮಾರಂಭಗಳ ಅತಿಥಿಗಳಾಗಿದ್ದಾರೆ . ಅಭಿವೃದ್ಧಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಆಡಳಿತ ವರ್ಗ ವರ್ತಿಸುತ್ತಿದೆ.
ಸಾರ್ವಜನಿಕರಿಂದ ಅಹವಾಲು ಆಲಿಸುವ ಪ್ರಕ್ರಿಯೆಯ ಇತಿಹಾಸದ ಭಾಗವಾಗಿದೆ . ಉಸ್ತುವಾರಿ ಸಚಿವರ ಕಚೇರಿ ಬಾಗಿಲು ತೆರೆದು ವರ್ಷಗಳೇ ಉರುಳಿವೆ . ಪಕ್ಷಕ್ಕೊಬ್ಬಬ್ಬರಂತೆ ಗೆದ್ದಿರುವ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು 2023 ರ ಚುನಾವಣೆಗೆ ಸಜ್ಜಾಗುತ್ತಿದ್ದಾರೆ , ಭರವಸೆಯ ಮಾತುಗಳಿಂದ ಮತದಾರರನ್ನು ಓಲೈಸುವ ತಂತ್ರೋಪಾಯಗಳು ಸಿದ್ಧವಾಗುತ್ತಿವೆ.
ಕೋಲಾರದ ಮತದಾರರು ಏಳು ದಶಕಗಳಿಂದ ಹೀಗೆ ಮರಳಾಗಿದ್ದರ ಪ್ರತಿಫಲ ಕೋಲಾರ ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತಿಫಲನಗೊಳ್ಳುತ್ತಿದೆ . ಒಂಚೂರು ವ್ಯತ್ಯಾಸವಾದರೂ ಜನ ಬೀದಿಗಿಳಿದು ರಂಪಾಟ ಮಾಡುತ್ತಾ , ಘೋಷಣೆ ಕೂಗುತ್ತಾಧಿಕ್ಕಾರ ಮೊಳಗಿಸುತ್ತಿದ್ದ ವಾತಾವರಣ ಬದಲಾಗಿದೆ.
ಬೇಡಿಕೆಗೆ ಕಿವಿಗೊಡುವ ಅಧಿಕಾರಿ , ಜನಪ್ರತಿನಿಧಿಗಳು ಕ್ಷೀಣಿಸುತ್ತಿದ್ದಾರೆ . ಜನ ಸಾಮಾನ್ಯರಲ್ಲಿ ಹೋರಾಟ ಮಾಡುವ ಚೈತನ್ಯವೂ ಇಂಗಿ ಹೋಗುತ್ತಿದೆ . ಇಂತಹ ಸನ್ನಿವೇಶದಲ್ಲಿ ನಮಗಿರುವ ಭರವಸೆ ಹೊಸ ನಾಯಕತ್ವ , ಕೋಲಾರ ಜನರ ಆಶೋತ್ತರ ಈಡೇರಿಸುವ ಜನಪ್ರತಿನಿಧಿಯ ಆಯ್ಕೆ ಮಾಡಿಕೊಳ್ಳುವುದು , 2023 ಇದಕ್ಕೆ ಅವಕಾಶ ಕಲ್ಪಿಸುತ್ತಿದೆ.
ಹೊಸ ವರ್ಷದ ಸ್ವಾಗತ ಎಂದರೆ ಹೊಸ ಸಂಕಲ್ಪ , ಹೊಸ ಗುರಿ , ಹೊಸ ಅಭಿವೃದ್ಧಿ ಪಥದ ಅನ್ವೇಷಣೆ , ಕೋಲಾರ ಜಿಲ್ಲೆಯ ಮಟ್ಟಿಗೆ 2023 ಹೊಸ ದಿಕ್ಖೂಚಿಯಾಗಬೇಕಿದೆ.
ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕಿದೆ . ನೋಟಿಗೆ ಓಟು , ಧರ್ಮ , ಜಾತಿ , ಉಪಜಾತಿ ರಾಜಕೀಯ ಇನ್ನಾದರೂ ನೇಪಥ್ಯಕ್ಕೆ ಸರಿಯಬೇಕಿದೆ . 2023 ರ ವಿಧಾನಸಭಾ ಚುನಾವಣೆಗೆ ಅಭಿವೃದ್ಧಿ ಪರವಾದ ಫಲಿತಾಂಶಕ್ಕೆ ಮುನ್ನುಡಿ ಬರೆಯಬೇಕಿದೆ.
ಪ್ರಜಾಸಭುತ್ವದಡಿ ಚಲಾವಣೆಯಾಗುವ ಪ್ರತಿ ಮತವೂ ಬೆಳಕಿನ ಕಿಡಿಗಳಾಗ ಬೇಕಿದೆ . ಕತ್ತಲ ಕೋಲಾರವನ್ನು ಬೆಳಗಿಸುವ ಆಡಳಿತ ವ್ಯವಸ್ಥೆ , ವಾತಾವರಣವನ್ನು , ನಾವ ನಿರ್ಮಿಸಿಕೊಳ್ಳಬೇಕಿದೆ.
ಕೆ.ಎಸ್. ಗಣೇಶ್ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗು ಅಧ್ಯಕ್ಷ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಕೋಲಾರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.