ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಶತಸಿದ್ದ , ಕೋಲಾರದ ಮುಖಂಡರು , ಜನರ ಮನವಿಗೆ ಸ್ಪಂದಿಸಿ ಕೋಲಾರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಆದರೆ ಹೈಕಮಾಂಡ್ ಅಂತಿಮ ನಿರ್ಧಾರ ಬಾಕಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ನಗರದ ಜೂನಿಯರ್ ಕಾಲೇಜು ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ತಮ್ಮ ಉಮೇದುವಾರಿಕೆ ಕೋಲಾರ ಕ್ಷೇತ್ರದಿಂದಲೇ ಎಂದು ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಚಪ್ಪಾಳೆ , ಹರ್ಷೋದ್ಗಾರ , ಸಂಭ್ರಮ ಮುಗಿಲು ಕಂಡುಬಂತು.
ಕೋಲಾರ ಕ್ಷೇತ್ರದ ಮುಖಂಡರು , ಕಾರ್ಯಕರ್ತರ ಪ್ರೀತಿ ಅಭಿಮಾನವನ್ನು ತಿರಸ್ಕರಿಸಲು ಸಾಧ್ಯವಿಲ್ಲ , ಆದ್ದರಿಂದ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನ ತೆಗೆದುಕೊಂಡಿದ್ದೇನೆ , ಆದರೆ , ಈ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅನುಮೋದನೆ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಜನರ ಆಶೀರ್ವಾದ ಇದ್ದರೆ ಮಾತ್ರವೇ ರಾಜಕೀಯದಲ್ಲಿ ನಾಯಕರಾಗುತ್ತಾರೆ , ಇಲ್ಲದಿದ್ದರೆ ಇಲ್ಲ . ನ .13 ರಂದು ಕೋಲಾರಕ್ಕೆ ಬಂದಿದ್ದಾಗ ಎಲ್ಲೆಡೆ ಒತ್ತಾಯ ಕೇಳಿ ಬಂದಿತ್ತು , ತಾವು ಈವರೆವಿಗೂ ಚಾಮುಂಡೇಶ್ವರಿ ಕ್ಷೇತ್ರದಿಂದ 5 ಬಾರಿ , ವರುಣಾದಿಂದ 2 ಬಾರಿ ಹಾಗೂ ಬಾದಾಮಿಯಿಂದ 1 ಬಾರಿ ಶಾಸಕರಾಗಿದ್ದೇನೆ , ಆದರೆ ಬಿಜೆಪಿ ತಮಗೆ ಕ್ಷೇತ್ರ ಇಲ್ಲ , ಕ್ಷೇತ್ರದ ಹುಡುಕಾಟ ಮಾಡುತ್ತಿದ್ದಾರೆಂದು ಟೀಕಿಸುತ್ತಿದೆ.
ರಾಜ್ಯದ 224 ಕ್ಷೇತ್ರಗಳ ಶಾಸಕರ ಆಯ್ಕೆಗೆ ಯಾವ ಪ್ರಕ್ರಿಯೆ ಇರುತ್ತದೋ ಅದೂ ತಮಗೂ ಅನ್ವಯವಾಗುತ್ತದೆ , ಆದ್ದರಿಂದ ತಮ್ಮ ಕೋಲಾರ ಸ್ಪರ್ಧೆ ವಿಚಾರ ಹೈಕಮಾಂಡ್ ಅನುಮೋದನೆ ಷರತ್ತಿಗೊಳಪಟ್ಟಿದೆ , ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕೋಲಾರದ ಹೊರಗಡೆ ಅಭ್ಯರ್ಥಿ , ಗೆದ್ದರೆ ಕೈಗೆ ಸಿಗುವುದಿಲ್ಲವೆಂಬ ಅಪಪ್ರಚಾರ ನಡೆಯುತ್ತಿದೆ , ಆದರೆ , ಕ್ಷೇತ್ರದ ಯಾವುದೇ ಮತದಾರ ತಮ್ಮನ್ನು ಭೇಟಿಯಾಗಲು ನಾಯಕರ ಅನುಮತಿ ಬೇಕಿಲ್ಲ ಚೆಡ್ಡಿ ಹಾಕಿದ ಶ್ರೀಸಾಮಾನ್ಯ ಕೂಡ ತಮ್ಮನ್ನು ನೇರವಾಗಿ ಭೇಟಿಯಾಗಬಹುದು , ಪ್ರತಿ ವಾರಕ್ಕೊಮ್ಮೆ ಕೋಲಾರಕ್ಕೆ ಬಂದು ಹೋಗುವೆ , ಎಲ್ಲರ ಕಷ್ಟ ಸುಖ ಆಲಿಸುವೆ , ಶಕ್ತಿ ಮೀರಿ ಕ್ಷೇತ್ರದ ಮತದಾರರ ಸಮಸ್ಯೆ ಪರಿಹರಿಸಲು ಶ್ರಮಿಸುವೆ ಎಂದರು.
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಜನಪರವಾದ ಕೆಲಸಮಾಡಿಕೊಂಡೇ ಬಂದಿದ್ದೇನೆ , ಅಭಿವೃದ್ಧಿಯ ವಿಚಾರದಲ್ಲಿ ಎಂದೂ ಹಿಂದೆ ಬಿದ್ದಿಲ್ಲ , ಹಿಂದೆ ತಾವು ಗೆದ್ದಿರುವ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದೇನೆ , ಹಾಗೆಯೇ ಕೋಲಾರವನ್ನು ಸರ್ವತೋ ಮುಖ ಅಭಿವೃದ್ಧಿಪಡಿಸುತ್ತೇನೆ ಎಂದು ಘೋಷಿಸಿದರು.
ಚುನಾವಣೆಗೂ ಮುನ್ನ ಕೋಲಾರ ಕ್ಷೇತ್ರದ ಹೋಬಳಿ ಕೇಂದ್ರಗಳಿಗೂ ಆಗಮಿಸುತ್ತೇನೆ , ಆನಂತರ ನಾಮಪತ್ರ ಸಲ್ಲಿಸಿ ಹೋಗಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ತಮ್ಮ ಸ್ಪರ್ಧೆಯನ್ನು ಖಚಿತಪಡಿಸಿದರು.
ಬಿಜೆಪಿ ಸುಳ್ಳಿನ ಕಾರ್ಖಾನೆ ಬಿಜೆಪಿ ಸುಳ್ಳಿನ ಕಾರ್ಖಾನೆಯಾಗಿದೆ , ಬಿಜೆಪಿ ಬಗ್ಗೆ ಎಚ್ಚರವಾಗಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಹೇಳಿದರು. ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಬಿಜೆಪಿ ಬಗ್ಗೆ ತೀವ್ರವಾಗ್ದಾಳಿ ನಡೆಸಿದ ಅವರು , ಕೋಲಾರದಲ್ಲಿ ಬಿಜೆಪಿ ಇಲ್ಲ ಆದರೂ , ಜನತೆ ಎಚ್ಚರವಾಗಿರಬೇಕೆಂದು ಸಲಹೆ ನೀಡಿದರು.
ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಐದು ವರ್ಷದೊಳಗೆ 2 ಲಕ್ಷ ಕೋಟಿ ವೆಚ್ಚ ಮಾಡಿ ಪೂರ್ಣಗೊಳಿಸಿ ಪ್ರತಿ ರೈತರ ಭೂಮಿಗೆ ನೀರು ಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಕೆಸಿ ವ್ಯಾಲಿ ಯೋಜನೆಗೆ 1400 ಕೋಟಿ ರೂ , ಚಿಕ್ಕಬಳ್ಳಾಪುರಕ್ಕೆ ಎಚ್ಎನ್ ವ್ಯಾಲಿ ಯೋಜನೆ , ಎತ್ತಿನ ಹೊಳೆಗೆ 13 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಭೂಮಿ ಪೂಜೆ ಸಲ್ಲಿಸಿದ್ದು , ಅಧಿಕಾರಕ್ಕೆ ಬಂದ 2 ವರ್ಷದೊಳಗೆ ಎತ್ತಿನಹೊಳೆ ಯೋಜನೆಯನ್ನು ಪರಿಷ್ಕೃತ 24 ಸಾವಿರ ಕೋಟಿ ವೆಚ್ಚ ಮಾಡಿ ಪೂರ್ಣಗೊಳಿಸಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ದ ಕುಡಿಯುವ ನೀರು ಹರಿಸುವುದಾಗಿ ಪ್ರಕಟಿಸಿದರು.
ಅಲ್ಪಸಂಖ್ಯಾತರಿಗೆ ಯೋಜನೆಗಳು , ಕೋಲಾರಕ್ಕೆ ಸೂಪರ್ ಸ್ಪೆಷಲ್ ಆಸ್ಪತ್ರೆ , ಪರಿಶಿಷ್ಟರಿಗೆ ಆರ್ಥಿಕ ಶಕ್ತಿ ಹೀಗೆ ನುಡಿದಂತೆ ಸರಕಾರ ತಮ್ಮದಾಗಲಿದೆ , ಹಿಂದೆಯೂ ಪ್ರಣಾಳಿಯ ಎಲ್ಲಾ ಭರವಸೆಗಳನ್ನು ಈಡೇರಿಸಿ ಹೆಚ್ಚುವರಿಯಾಗಿ 30 ಕ್ಕೂ ಹೆಚ್ಚು ಯೋಜನೆಗಳನ್ನು ಅನುಷ್ಠಾನ ‘ ಗೊಳಿಸಿದ್ದಾಗಿ ವಿವರಿಸಿದರು. ದಲಿತರಿಗೆ ಗುತ್ತಿಗೆಯಲ್ಲಿ ಮೀಸಲಾತಿ , ಮಹಿಳೆಯರಿಗೆ 10 ಲಕ್ಷ ರೂವರೆವಿಗೂ ಬಡ್ಡಿ ರಹಿತ ಸಾಲಸೌಲಭ್ಯ ಜಾರಿಯ ಭರವಸೆ ನೀಡಿದರು.
ಹೈಕಮಾಂಡ್ -ತೀರ್ಮಾನ ಅಂತಿಮ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ , ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ತಾವು ಸ್ವಾಗತಿಸುವುದಾಗಿ ತಿಳಿಸಿದ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಣಯಿಸಬೇಕು , ಆನಂತರವೇ ಅಧಿಕೃತ ಘೋಷಣೆಯಾಗಬೇಕು ಎಂದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸೌಹಾರ್ದತೆ ಇಲ್ಲದೇ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ , ಈ ಕಾರಣದಿಂದ ಕೋಲಾರದಲ್ಲಿ ಸಿದ್ದರಾಮಯ್ಯ ಅಗತ್ಯವಿದೆ ಎಂದರು.
ಮಾಜಿ ಸಚಿವ ಕೃಷ್ಣ ಬೈರೇಗೌಡ , ನಮಗೆ ಬಿರಿಯಾನಿ ರಾಜಕೀಯ ಬೇಡ , ಪಕ್ಷ ರಾಜಕೀಯ ಬೇಡ , ಕುಟುಂಬ ರಾಜಕೀಯವು ಬೇಡ , ಸ್ವಾರ್ಥ ರಾಜಕೀಯ ಯುವಕರನು ಕೆಡಿಸುವ ರಾಜಕೀಯವು ಬೇಡ , ಅಭಿವೃದ್ಧಿ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಕೋಲಾರದಿಂದ ಗೆಲ್ಲಬೇಕು , ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದರು.
ವೇದಿಕೆಯಲ್ಲಿ ಮಾಜಿ ಸ್ಪೀಕರ್ ರಮೇಶ್ಕುಮಾರ್ , ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ , ಕೆ.ವೈ.ನಂ ಜೇಗೌಡ , ಬೈರತಿ ಸುರೇಶ್ , ಪಿ.ಆರ್.ರಮೇಶ್ , ನಾಗರಾಜ ಯಾದವ್ , ಎಂ.ಆರ್.ಸೀತಾರಾಂ , ಮುಖಂಡರಾದ ನಿಸಾರ್ ಅಹಮದ್ , ಡಾ.ಸುಧಾಕರ್ , ಕೊತ್ತೂರು ಮಂಜುನಾಥ್ , ಉಸ್ತುವಾರಿ ನಾರಾಯಣಸ್ವಾಮಿ , ಮಾಜಿ ಸಂಸದ ಚಂದ್ರಪ್ಪ , ದಲಿತ ಮುಖಂಡರಾದ ಸಿ.ಎಂ.ಮುನಿಯಪ್ಪ , ಎನ್.ಮುನಿಸ್ವಾಮಿ , ಬಾಗೇಪಲ್ಲಿ ಸಂಪಂಗಿ , ಎಂ.ಸಿ.ವೇಣುಗೋಪಾಲ್ , ಸಿ.ನಾರಾಯಣ ಸ್ವಾಮಿ , ರಕ್ಷಾರಾಮಯ್ಯ , ಪಿ.ಶ್ರೀನಿವಾಸ್ , ರವಿ ರಾಮಸ್ವಾಮಿ , ಎಲ್.ಎ.ಮಂಜುನಾಥ್ , ಪ್ರಸಾದ್ಬಾಬು , ಊರುಬಾಗಿಲು ಶ್ರೀನಿವಾಸ್ , ಕೆ.ಜಯದೇವ್ , ಉದಯ ಶಂಕರ್ , ರತ್ನಮ್ಮ , ಭರತ್ , ಫ್ರಾನ್ಸಿಸ್ ಬೆನಿಟೋ , ಹರಿ , ಮಂಜುನಾಥ್ ಮತ್ತು ನಗರಸಭಾ ಸದಸ್ಯರು , ಗ್ರಾಪಂ ಅಧ್ಯಕ್ಷರು , ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.