ಚಿಂತಾಮಣಿ (ವಿಶ್ವ ಕನ್ನಡಿಗ ನ್ಯೂಸ್):ವಿದ್ಯಾರ್ಥಿಗಳಿಗೆ ಶಾಲಾ ದಿನಗಳಿಂದಲೇ ವ್ಯವಹಾರಿಕ ಜ್ಞಾನ, ಸಮಾಜದಲ್ಲಿ ಸಾರ್ವಜನಿಕರೊಂದಿಗೆ ವ್ಯವಹಾರ, ಲೆಕ್ಕಪತ್ರಗಳ ಅನುಭವವನ್ನು ಕಲಿಸಲು ನಗರದ ಸ್ವಾತಿ ಅನುದಾನಿತ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಲಘುಬಗೆಯಿಂದ ಭಾಗವಹಿಸಿ ವಿವಿಧ ತರಕಾರಿ ಹಾಗೂ ತಿಂಡಿ ತಿನುಸುಗಳ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಿದರು. ನಗರದ ಸುತ್ತಮುತ್ತಲ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ವಿಶೇಷವಾಗಿ ಸೊಪ್ಪು, ತರಕಾರಿ, ಹಣ್ಣು ಹಂಪಲುಗಳ ರಾಶಿ ಮಾಡಿಕೊಂಡು ತಮ್ಮ ತಮ್ಮ ಕೌಶಕ್ಯಗಳಿಂದ ಗ್ರಾಹಕರ ಮನಸೆಳೆಯುತ್ತಿದ್ದರು.
ಜತೆಗೆ ಬಾಯಲ್ಲಿ ನೀರೂರಿಸುವ ಕುರುಕುಲು ತಿಂಡಿಗಳು, ಕೇಕ್, ಬಿಸ್ಕಿಟ್,ಐಸ್ ಕ್ರೀಂ, ತಂಪುಪಾನಿಯಗಳನ್ನು ಅಲಂಕಾರಿಕವಾಗಿ ಜೋಡಿಸಿಕೊಂಡು ಗ್ರಾಮಹಕನ್ನು ಆಕರ್ಷಿಸಿ ಪೈಪೋಟಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಮಕ್ಕಳ ಪೋಷಕರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಮಕ್ಕಳ ಸಂತೆಗೆ ಆಗಮಿಸಿ ವಿವಿಧ ತರಕಾರಿ, ತಿಂಡಿ ತಿನಿಸುಗಳನ್ನು ಖರೀದಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಮಕ್ಕಳ ಸಂತೆಯಲ್ಲಿ ಚಕ್ಕಲಿ ಕೋಡುಬಳೆ, ಖಾರದ ಮಿಕ್ಚರ್ ಮತ್ತಿತರ ಖಾರದ ತಿಂಡಿಗಳು, ಮಿಠಾಯಿ, ರವೆಉಂಡೆ, ಚಾಕಲೇಟ್ ಮುಂತಾದ ಸಿಹಿತಿಂಡಿಗಳ ಅಂಗಡಿಗಳನ್ನು ತೆರೆದಿದ್ದರು.
ವಿದ್ಯಾರ್ಥಿಗಳು ತಮ್ಮದೇ ಶೈಲಿಯಲ್ಲಿ ಗ್ರಾಹಕರನ್ನು ಕೂಗಿ ಕೂಗಿ ಕರೆದು ಮನವೊಲಿಸಿ ಮಾರಾಟ ಮಾಡಿದರು. ಬಜ್ಜಿ, ಬೊಂಡ, ಒಡೆ, ಐಸ್ ಕ್ರೀ, ತಂಪುಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಸಂತೆಗೆ ಬಂದವರು ಗುಂಪು ಗುಂಪಾಗಿ ಬೊಂಡಾ, ಬಜ್ಜಿ, ಗೋಬಿ ಮಚೂರಿ ತಿಂದು ಐಸ್ ಕ್ರೀಂ ಸವಿಯುತ್ತಿದ್ದರು. ಪೋಷಕರು ಹಾಗೂ ಗ್ರಾಹಕರು ಬಾಯಿ ಚಪ್ಪರಿಸಿಕೊಂಡು ಹೋಗುತ್ತಿದ್ದರು.
ಪ್ರತಿನಿತ್ಯ ನಾಲ್ಕು ಗೋಡೆಗಳ ನಡುವೆ ಪಾಠ ಪ್ರವಚಲ್ಲಿ , ಓದು-ಬರಹಗಳಲ್ಲಿ ಮಗ್ನರಾಗಿರುತ್ತಿದ್ದ ವಿದ್ಯಾರ್ಥಿಗಳಿಗೆ ಸಂತೆ ಕಾರ್ಯಕ್ರಮ ಹೊಸ ಅನುಭವ ಪಡೆಯಲು ಅವಕಾಶವಾಯಿತು.
ವಿದ್ಯಾರ್ಥಿಗಳಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಸಂಜೆಯವರೆಗೂ ವ್ಯಾಪಾರ ಬಲು ಜೋರಾಗಿ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಡಿ.ವಿ.ವೆಂಕಟರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ, ಗಣಿತದ ಲೆಕ್ಕಾಚಾರಗಳ ಕುರಿತು ಪ್ರಾಯೋಗಿಕ ಅನುಭವ ಪಡೆಯಲು ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕರಾದ ವಿ.ನಾಗರಾಜು, ವಿ.ವೆಂಕಟರತ್ನಮ್ಮ, ಸಹ ಶಿಕ್ಷಕರಾದ ನಾರಾಯಣಸ್ವಾಮಿ, ಪ್ರಕಾಶ್, ಅಮರನಾಥ್, ಪ್ರಸಾದ್ ಗಿರಿಜಮ್ಮ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.