ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ತಾಲ್ಲೂಕಿನ ಕಾಮಧೇನುಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು , ಬಡತನ ಶಾಪವಾಗಬಾರದು , ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸರ್ಕಾರದ ಧೈಯವನ್ನು ಶಿಕ್ಷಕರು ಬದ್ಧತೆಯಿಂದ ಅನುಷ್ಠಾನಗೊಳಿಸಬೇಕು ಎಂದರು.
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆಗಳು ಬಲಗೊಳ್ಳಬೇಕಾಗಿದೆ , ಈ ನಿಟ್ಟಿನಲ್ಲಿ ಸರ್ಕಾರ ನೀಡುತ್ತಿರುವ ಬಿಸಿಯೂಟ , ಕ್ಷೀರಭಾಗ್ಯ , ಸಮವಸ್ತ್ರ , ಪಠ್ಯಪುಸ್ತಕಗಳ ಜತೆಗೆ ದಾನಿಗಳು ನೆರವಾಗಬೇಕು ಮತ್ತು ಶಿಕ್ಷಕರು ಈ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುವುದರ ಜತೆಗೆ ಬದ್ಧತೆಯಿಂದ ಬೋಧನೆಯಲ್ಲಿ ತಲ್ಲೀನರಾಗಲಿ ಎಂದು ಆಶಿಸಿದರು.
ವಿದ್ಯೆ ಯಾರ ಸ್ವತ್ತು ಅಲ್ಲ , ಅದು ಸಾಧಕನ ಸ್ವತ್ತಾಗಿದೆ ಎಂಬುದನ್ನು ಅರಿತು ಕಲಿಕೆ ಮುಂದುವರೆಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು , ಸರ್ಕಾರಿ ಶಾಲೆಗಳಲ್ಲಿ ಓದುತ್ತಿದೇವೆ ಎಂಬ ಯಾವ ಕೀಳಿರಿಮೆ ಅಗತ್ಯವಿಲ್ಲ , ಈ ದೇಶದಲ್ಲಿ ಮಹಾನ್ ಸಾಧಕರೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಎಂದು ತಿಳಿಸಿದರು.
ಮೊಬೈಲ್ಗೀಳು ಬೇಡ , ದುಶ್ಚಟಗಳಿಂದ ದೂರವಿದ್ದು , ನಿರಂತರ ಕಲಿಕೆಯ ಮೂಲಕ ಸಾಧಕರಾಗಿ ನಿಮ್ಮ ಜೀವನ ನೀವೇ ರೂಪಿಸಿಕೊಳ್ಳಬೇಕು , ಸಮಾಜಕ್ಕೆ ನೀವು ಹೊರೆ ಯಾಗದೇ ಆಸ್ತಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ಬಿಳಿ ಹಾಳೆ ಇದ್ದಂತೆ ಅದರ ಮೇಲೆ ಕಪ್ಪುಚುಕ್ಕೆ ಬೀಳದಂತೆ ಪೋಷಕರು ಮಾತ್ರವಲ್ಲ , ಶಿಕ್ಷಕರು ಎಚ್ಚರಿಕೆ ವಹಿಸಬೇಕು , ನಿಮ್ಮದೇ ಮಕ್ಕಳೆಂದು ಭಾವನೆಯಿಂದ ಅವರ ಕಲಿಕೆಗೆ ನೀವು ದಾರಿದೀಪವಾಗಿ ಎಂದು ಕೋರಿದರು.
ವೇದಿಕೆ ನಿರ್ಮಾಣಕ್ಕೆ ನಾಳೆಯಿಂದಲೇ ಕ್ರಮ ಶಾಲೆಯ ಆವರಣದಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಅಗತ್ಯವಾದ ವೇದಿಕೆ ನಿರ್ಮಿಸಿಕೊಡಲು ಶಾಲೆಯ ಮುಖ್ಯಶಿಕ್ಷಕ ಸಿದ್ದೇಶ್ ಮನವಿಗೆ ಸ್ಪಂದಿಸಿದ ಗೋವಿಂದ ಗೌಡರು , ನಾಳೆಯಿಂದಲೇ ವೇದಿಕೆ ಕಾಮಗಾರಿ ಆರಂಭಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು. ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ , ಈ ಎರಡು ನಿಮ್ಮದಾದರೆ ನಿಮ್ಮ ಸಾಧನೆಯ ಹಾದಿ ಸುಲಭವಾಗುತ್ತದೆ ಎಂದು ತಿಳಿಸಿ , ಆರೋಗ್ಯದ ಬಗ್ಗೆ ಮಕ್ಕಳು ಕಾಳಜಿ ವಹಿಸಿ , ಸ್ವಚ್ಚತೆಗೆ ಒತ್ತು ನೀಡಿ ಎಂದರು .
ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್. ಗಣೇಶ್ ಮಾತನಾಡಿ , ಸಮವಸ್ತ್ರ ಸದ್ಬಳಕೆ ಮಾಡಿಕೊಳ್ಳಿ , ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಿ ಮುಂದೆ ನೀವು ಸಾಧಕರಾಗಿ ಸಮಾಜಕ್ಕೆ ನೆರವಾಗಿ ಎಂದರು. ಕಾಮಧೇನುಹಳ್ಳಿಯ ಪ್ರತಿಮನೆಯಲ್ಲೂ ಸರ್ಕಾರಿ ನೌಕರರಿದ್ದಾರೆ , ನ್ಯಾಯಾಧೀಶರು , ವಕೀಲರು , ಡಾಕ್ಟರ್ಗಳು ತುಂಬಿದ್ದಾರೆ , ಅವರ ಹಾದಿಯಲ್ಲೇ ನೀವು ನಡೆದು ಗ್ರಾಮದ ಹಿರಿಮೆ ಎತ್ತಿಹಿಡಿಯಿರಿ , ಉನ್ನತ ಸ್ಥಾನಕ್ಕೇರಿ ಎಂದು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಸಿದ್ದೇಶ್ , ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸದಾ ನೆರವಿನ ಹಸ್ತ ಚಾಚುತ್ತಿರುವ ಬ್ಯಾಲಹಳ್ಳಿ ಗೋವಿಂದಗೌಡರ ಕಾರ್ಯ ಶ್ಲಾಘನೀಯವಾಗಿದ್ದು , ಮತ್ತಷ್ಟು ನೆರವಿಗೆ ಕೋರಿದರು.
ಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಾಣಕ್ಕೆ ತತ್ ಕ್ಷಣವೇ ಒಪ್ಪಿಗೆ ನೀಡಿ ಕಾಮಗಾರಿ ಆರಂಭಿಸಲು ಸೂಚಿಸಿರುವ ಗೋವಿಂದಗೌಡರಿಗೆ ಧನ್ಯವಾದ ಸಲ್ಲಿಸಿದ ಅವರು , ಸರ್ಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಇಂದು ಸರ್ಕಾರದ ನೆರವಿನ ಜತೆಗೆ ಇಂತಹ ದಾನಿಗಳ ನೆರವು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಗ್ರಾಮದ ಮುಖಂಡ ರವಿಚಂದ್ರೇಗೌಡ , ಕಾಮಧೇನುಹಳ್ಳಿ ಸರ್ಕಾರಿ ಪ್ರೌಢ ಶಾಲೆ ಅಭಿವೃದ್ಧಿಗೆ ಮತ್ತಷ್ಟು ನೆರವಿನ ಅಗತ್ಯವಿದ್ದು , ಗೋವಿಂದಗೌಡರು ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಕೀರ್ತಿ , ಜಯಶ್ರೀ , ಪೂರ್ಣಿಮಾ ಪ್ರಾರ್ಥಿಸಿ , ಶಿಕ್ಷಕಿ ಬಿ.ಎ.ಕವಿತಾ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ , ಗ್ರಾಮದ ಮುಖಂಡ ಆರ್.ಎ.ಚೌಡಪ್ಪ , ಪಾರೇಹೊಸಹಳ್ಳಿ ನಾರಾ ಯಣಸ್ವಾಮಿ , ವಿನೋದ್ , ಮಂಜುನಾಥ್ , ಶಿಕ್ಷಕರಾದ ಮಂಜುನಾಥ್ , ಬ್ಯಾಟಪ್ಪ , ಅಪರ್ಣಶೆಟ್ಟಿ , ವಾಣಿಶ್ರೀ , ವೇದಾ , ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.