ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಸಮಾಜ ಕಲಾವಿದರನ್ನು ಗೌರವಿಸುವ ಸಂಪದಾಯ ಮುಂದುವರಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ ವತಿಯಿಂದ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜಾನಪದ ಕಲಾವಿದರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಮುನಿವೆಂಕಟಪ್ಪ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದರೂ , ಇನ್ನೂ ಗುಡಿಸಲು ವಾಸಿಯಾಗಿದ್ದಾರೆ. ಅಂಥ ಅಭಿಜಾತ ಕಲಾವಿದನಿಗೆ ಸನ್ಮಾನವೊಂದೇ ಸಾಲದು, ಸಮಾಜ ಕೈಲಾದ ನೆರವು ನೀಡಬೇಕು.
ಆ ನಿಟ್ಟಿನಲ್ಲಿ ಸಮಾನ ಮನಸ್ಕರ ಸಹಕಾರದಿಂದ ಅವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು. ಕಲಾವಿದರನ್ನು ಗೌರವಿಸಲು ಹೃದಯವಂತಿಕೆ ಬೇಕು ನಿರ್ಲಕ್ಷಿತ ಕಲೆಯೆಂದು ಬಿಡದೆ ಆರಾಧಿಸಿದ ಕಲಾವಿದ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ. ಅದು ಕಲೆಗೆ ತೋರಿದ ಗೌರವ ಎಂದು ಭಾವಿಸುತ್ತೇನೆ.
ಯುವ ಕಲಾವಿದರು ತಮಟೆಗೆ ಜೀವ ತುಂಬುವ ಕಾರ್ಯ ಮಾಡಬೇಕು. ಮುನಿವೆಂಕಟಪ್ಪ ಅವರ ಮಾದರಿ ಅನುಸರಿಸಬೇಕು ಎಂದು ಹೇಳಿದರು. ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ , ದಲಿತ ಮುಖಂಡ ಎನ್.ಮುನಿಸ್ವಾಮಿ , ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ , ವಿವಿಧ ಸಮುದಾಯಗಳು ಹಾಗೂ ಸಂಘ ಸಂಸ್ಥೆಗಳಿಂದ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಸನ್ಮಾನಿತರಿಗೆ ರೂ .1 ಲಕ್ಷ ಮೌಲ್ಯದ ಚೆಕ್ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ರೂ .5000 ನಗದು ನೀಡಿ ಗೌರವಿಸಿದರು. ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್ , ಹುಂಜ ಮುನಿರೆಡ್ಡಿ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಅಕ್ಬರ್ ಶರೀಫ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ , ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್ , ಮುಖಂಡರಾದ ಸಿ.ಎಂ.ಮುನಿಯಪ್ಪ , ಕೆ.ಕೆ.ಮಂಜು , ಅಯ್ಯಪ್ಪ , ಎನ್.ವೆಂಕ ಟೇಶಪ್ಪ , ವೈ.ಆರ್.ಶಿವಪ್ರಕಾಶ್ , ಸಂಜಯ್ ರೆಡ್ಡಿ , ಸಿ.ಮುನಿರಾಜು , ಆಂಜಿ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಇದ್ದರು.
ಮೆರವಣಿಗೆ : ಪಟ್ಟಣದ ಮುಳಬಾಗಿಲು ವೃತ್ತದಿಂದ ವೇದಿಕೆವರೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು , ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.