ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ಜಿಲ್ಲೆಯ ಅಧಿಕಾರಿಗಳು ರಾಜ್ಯ ಪುರಸ್ಕೃತ ಯೋಜನೆಗಳಿಗೆ ನೀಡುವಷ್ಟೇ ಮಹತ್ವವನ್ನು ಕೇಂದ್ರ ಪುರಸ್ಕೃತಗಳಿಗೂ ಯೋಜನೆಗಳಿಗೂ ಸಹ ನೀಡಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ( ದಿಶಾ ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಸಾರ್ವಜನಿಕರ ಹಿತ ಕಾಪಾಡಲು ಶ್ರಮಿಸಬೇಕು. ಪ್ರಸ್ತುತ ಸರ್ಕಾರ ಬದಲಾಗಿದೆ . ಅಧಿಕಾರಿ ವೃಂದವೂ ಬದಲಾಗುತ್ತಿದೆ. ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಕುಂಠಿತವಾಗಬಾರದು. ಪರಿಣಾಮಕಾರಿಯಾಗಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಗುರಿಯನ್ನು ಹೊಂದಬೇಕು ಮತ್ತು ಅದರಂತೆ ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕು ಎಂದರು. ಜಂಟಿ ಕೃಷಿ ನಿರ್ದೇಶಕಿ ರೂಪಾದೇವಿ ಅವರು ಸಭೆಗೆ ಇಲಾಖೆಯ ಪ್ರಗತಿ ಮಾಹಿತಿಯನ್ನು ನೀಡಿ ಮುಂಗಾರು ಮಳೆ ಪ್ರಾರಂಭವಾಗುವ ಈ ಹಂತದಲ್ಲಿ ಸಾಕಷ್ಟು ಬಿತ್ತನೆ ಬೀಜದ ದಾಸ್ತಾನು ಲಭ್ಯವಿದ್ದು , ಈಗಾಗಲೇ ಬಿತ್ತನೆ ಪ್ರಾರಂಭ ಮಾಡಲು ಆಹಾರ ಧಾನ್ಯಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರು ಕೃಷಿ , ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆಗಳು ಈ ಜಿಲ್ಲೆಯ ಪ್ರಮುಖ ಮೂರು ಇಲಾಖೆಗಳು ಈ ಭಾಗದ ರೈತರಿಗೆ ಈ ಮೂರು ಇಲಾಖೆಗಳೇ ಜೀವಾಳ ಮೂರು ಇಲಾಖೆಗಳು ಒಂದಕ್ಕೊಂದು ಸಮನ್ವಯ ಸಾಧಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸ್ತುತ ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಳೆಗಾರರಿಗೆ ಅವರ ಕಷ್ಟದ ಫಲ ದೊರೆಯುತ್ತಿಲ್ಲ.
ಬೆಳೆಗೆ ಹೊಸ ಮಾದರಿಯ ವೈರಸ್ ಸೋಕಿ ಇಳುವರಿ ಕಡಿಮೆಯಾಗಿದ್ದು , ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೂ ಸಹ ಪೂರೈಸಲಾಗದ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಲ್ಲಿ ಸಾಕಷ್ಟು ಆಹಾರ ಪದಾರ್ಥಗಳ ದಾಸ್ತಾನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯಾವುದೇ ಹಾಸ್ಟೆಲ್ಗಳಲ್ಲಿ ಆಹಾರ ಪಧಾರ್ಥಗಳ ಅಥವಾ ಆಹಾರದ ಕೊರತೆ ಬಾರದಂತೆ ನೋಡಿಕೊಳ್ಳಬೇಕು.
ಹಾಸ್ಟೆಲ್ಗಳಲ್ಲಿ ಲಭ್ಯವಿರುವ ಜಾಗಗಳಲ್ಲಿ ಕೈತೋಟಗಳನ್ನು ಮಾಡಿ , ಹಾಸ್ಟೆಲ್ಗೆ ಬಳಕೆಗೆ ಬೇಕಾದ ತರಕಾರಿಗಳನ್ನು ಮಕ್ಕಳೇ ಬೆಳೆಸುವ ಮೂಲಕ ಆರೋಗ್ಯಕರ ತಾಜಾ ತರಕಾರಿಯ ಕೊರತೆ ಸರಿದೂಗಿಸಿಕೊಳ್ಳಬಹುದು. ಜೊತೆಗೆ ಮಕ್ಕಳಿಗೆ ವೈಜ್ಞಾನಿಕವಾಗಿ ತೋಟಗಾರಿಕೆ ಪದ್ಧತಿಯನ್ನು ಅಭ್ಯಾಸ ಮಾಡಿಸುವಂತಾಗುತ್ತದೆ ಎಂದು ಸಂಸದರು ತಿಳಿಸಿದರು.
ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ 40 ಲಕ್ಷ ಮಾನವ ದಿನಗಳ ಸೃಜನೆಗೆ ವಾರ್ಷಿಕ ಗುರಿಯನ್ನು ಹೊಂದಲಾಗಿದ್ದು , ಜೂನ್ ಅಂತ್ಯದ ವೇಳೆಗೆ 8.67 ಲಕ್ಷ ಮಾನವ ದಿನಗಳ ಸೃಜನೆಯನ್ನು ಮಾಡಲಾಗಿದೆ. ಈ ಮೂಲಕ ಶೇ .21.69 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 1725 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿ 509 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಹಾಗೂ 1216 ಶೌಚಾಲಯಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಇದಕ್ಕೆ ಸಂಸದರು ಜಿಲ್ಲೆಯಲ್ಲಿನ ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಿತವಾಗಿರುವ ಯಾವುದೇ ಶೌಚಾಲಯಗಳ ಮೇಲೆ ಯೋಜನೆಯ ವಿವರಗಳನ್ನು ನಮೂದಿಸಿರುವುದಿಲ್ಲ. ಈ ಕೂಡಲೇ ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಯೋಜನೆ ಎಂದು ನಾಮಫಲಕ ಹಾಕಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ನೀಡಲಾಗಿರುವ 154 ಸ್ವಚ್ಛತಾ ವಾಹಿನಿಗಳ ಸ್ಥಿತಿಗತಿಗಳನ್ನು ಕೂಡಲೇ ತಿಳಿಸುವಂತೆ ಹಾಗೂ ಎಲ್ಲಾ ವಾಹನಗಳನ್ನು ಪರಿಶೀಲನೆಗೊಳಪಡಿಸುವಂತೆ ತಿಳಿಸಿದರು.
ಜಲ್ ಜೀವನ್ ಮಿಷನ್ ಯೋಜನೆಯಡಿ ಬ್ಯಾಚ್ 3 ಮತ್ತು 4 ರ ಯೋಜನೆಗಳು ಪ್ರಗತಿಯಲ್ಲಿದ್ದು , 1293 ಹಳ್ಳಿಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಕಾರ್ಯ ಪ್ರಗತಿಯಲ್ಲಿವೆ. ಕೆಲವು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು , ಮತ್ತೆ ಕೆಲವು ಕಡೆ ಅಂತರ್ಜಲ ಆಧಾರಿತ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಅದಕ್ಕೆ ವಿಧಾನ ಪರಿಷತ್ ಸದಸ್ಯರು ಓವರ್ ಹೆಡ್ ಟ್ಯಾಂಕ್ಗಳ ಬಾಳಿಕೆ ಪ್ರಮಾಣ ಕಡಿಮೆಯಿದ್ದು , ಪ್ರಸ್ತುತ ಸ್ಟೋರೇಜ್ ಪಂಪ್ ಮಾದರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಎಂದರು.
ಪೈಪ್ಲೈನ್ ಹಾಕುವಾಗ ರಸ್ತೆ ಕಟಿಂಗ್ ಮಿಷನ್ಗಳನ್ನು ಬಳಸಿ ರಸ್ತೆ ಅಗೆಯುವುದನ್ನು ತಪ್ಪಿಸಿ , ಒಂದು ವೇಳೆ ಈಗಾಗಲೇ ರಸ್ತೆ ಅಗೆದಿದ್ದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಿ ಎಂದು ಸಂಸದರು ಅಧಿಕಾರಿಗಳಿಗೆ ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಳಬಾಗಿಲಿನಲ್ಲಿ ನೂತನವಾಗಿ ನಿರ್ಮಿತವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಿವೇಶನ ಮಂಜೂರಾಗಿದ್ದು , ಕಾಮಗಾರಿ ಪ್ರಾರಂಭವಾಗಬೇಕಿದೆ ಎಂದು ಸಭೆಗೆ ತಿಳಿಸಿದರು. ಬಂಗಾರಪೇಟೆ ತಾಲ್ಲೂಕಿನಲ್ಲಿ ಹಾಗೂ ಮಾಲೂರು ತಾಲ್ಲೂಕಿನಲ್ಲಿ ಡಯಾಲಿಸಿಸ್ ಮಿಷನ್ಗಳ ಕೊರತೆ ಇರುವುದಾಗಿ ಹಾಗೂ ಎಸ್.ಎನ್.ಆರ್ . ಜಿಲ್ಲಾಸ್ಪತ್ರೆಯಲ್ಲಿ 3 ನೇ ಮಹಡಿಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು , ಅಲ್ಲಿ ಡಯಾಲಿಸಿಸ್ ಸೆಂಟರ್ಗಳನ್ನು ಸ್ಥಾಪಿಸುವುದಕ್ಕಾಗಿ ಮಿಷಿನ್ಗಳ ಅಗತ್ಯತೆಯಿದೆ ಎಂದು ತಿಳಿಸಿದರು. ಅದಕ್ಕೆ ಸಂಸದರು ಬಂಗಾರಪೇಟೆಗೆ 3 ಮತ್ತು ಮಾಲೂರಿಗೆ 2 ಸೇರಿದಂತೆ ಒಟ್ಟು 10 ಡಯಾಲಿಸಿಸ್ ಮಿಷನ್ಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕಲ್ಲು ಗಣಿಗಾರಿಕೆ ಗ್ರಾಮಗಳಲ್ಲಿ ಕಳೆದ 45 ದಿನಗಳಿಂದ ಗಣಿಗಾರಿಕೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು , ಯಂತ್ರಾಧಾರಿತ ಗಣಿಗಾರಿಕೆಗೆ ಸರ್ಕಾರವು ಅನುಮತಿ ನಿರಾಕರಿಸಿದೆ ಎಂದು ತಿಳಿಸಿದರು. ಅದಕ್ಕೆ ಸಂಸದರು ಮಾನವಾಧಾರಿತ ಗಣಿಗಾರಿಕೆಗೆ ಒತ್ತು ನೀಡುವಂತೆ ತಿಳಿಸಿದರು. ಈ ಪ್ರಾಂತ್ಯದಲ್ಲಿ ಎಲ್ಲಾ ಜನಾಂಗದವರು ಕಲ್ಲು ಗಣಿಗಾರಿಕೆ ಮಾಡುವವರಿದ್ದಾರೆ. ಅವರಿಗೆ ಜೀವನೋಪಾಯಕ್ಕೆ ತೊಂದರೆಯಾಗದಂತೆ ಗಣಿಗಾರಿಕೆಗೆ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಸಮಗ್ರ ಶಿಕ್ಷಣ ಯೋಜನೆಯ ಅಧಿಕಾರಿಗಳು ಖಾಸಗಿ ಶಾಲೆಗಳಲ್ಲಿ ಡೊನೇಷನ್ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಮತ್ತು ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಸೂಚಿಸಿದರು.
ಆಹಾರ ಇಲಾಖೆಯಿಂದ ಜಿಲ್ಲೆಯಲ್ಲಿ 81495 ಉಜ್ವಲ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ . 29977 ಅಂತ್ಯೋದಯ ಅನ್ನ ಪಡಿತರ ಚೀಟಿಗಳನ್ನು , 3,11,260 ಆದ್ಯತಾ ಪಡಿತರ ಚೀಟಿಗಳನ್ನು ಒಟ್ಟಾರೆ ಜಿಲ್ಲೆಯಲ್ಲಿ 3,41,237 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 12,05,937 ಸದಸ್ಯರಿಗೆ ಪ್ರತಿ ಮಾಹೆ 5 ಕೆ.ಜಿ.ಯಂತೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಅದಕ್ಕೆ ಸಂಸದರು ಕೇಂದ್ರ ಸರ್ಕಾರವು ನೀಡುತ್ತಿರುವ 5 ಕಿಲೋ ಹಾಗೂ ಪ್ರಸ್ತುತ ರಾಜ್ಯ ಸರ್ಕಾರವು ಘೋಷಿಸಿರುವ 10 ಕಿಲೋ ಅಕ್ಕಿಯನ್ನು ಒಟ್ಟಾರೆ 15 ಕಿಲೋ ಅಕ್ಕಿಯನ್ನು ಅಂತ್ಯೋದಯ ಪಡಿತರ ಚೀಟಿದಾರರಿಗೆ ನೀಡುವಂತೆ ಸರ್ಕಾರಕ್ಕೆ ಕಿಲೋ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 3014 ಮನೆಗಳು ಮಂಜೂರಾಗಿದ್ದು , ಅವುಗಳಲ್ಲಿ 1398 ಮನೆಗಳು ಈಗಾಗಲೇ ಪೂರ್ಣಗೊಂಡಿವೆ ಮತ್ತು 288 ಮನೆಗಳಿಗೆ ಈಗಾಗಲೇ ಅಡಿಪಾಯವನ್ನು ಹಾಕಲಾಗಿದೆ ಹಾಗೂ 985 ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ಸಂಸದರು ಶೇಕಡ 50 ರಷ್ಟು ಸಹ ಈ ಯೋಜನೆ ಪ್ರಗತಿ ಕಂಡಿರುವುದಿಲ್ಲ . ಮುಂದಿನ ಸಭೆ ವೇಳೆಗೆ ಶೇ .100 ರಷ್ಟು ಪ್ರಗತಿಯನ್ನು ಈ ಯೋಜನೆಯಡಿಯಲ್ಲಿ ಸಾಧಿಸಬೇಕು ಎಂದು ತಿಳಿಸಿದರು. 78.60 ಕೋಟಿಗಳ ವೆಚ್ಚದ ಕಾಮಗಾರಿಗಳನ್ನು ಈಗಾಗಲೇ ನಗರಾಭಿವೃದ್ಧಿ ಕೋಶದಿಂದ ಪೂರೈಸಿರುವುದಾಗಿ ತಿಳಿಸಿದರು. ಶೇಕಡ 59 ರಷ್ಟು ಗುರಿ ಸಾಧನೆ ಮಾಡಿರುವುದಾಗಿ ಸಭೆಗೆ ತಿಳಿಸಿದರು.
ಜಿಲ್ಲಾದ್ಯಂತ 31,000 ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅದಕ್ಕೆ ಸಂಸದರು ಸರ್ಕಾರದ ಯೋಜನೆಗಳನ್ನು ಲೋಕಾರ್ಪಣೆ ಮಾಡುವ ಮುನ್ನಾ ಶಿಷ್ಟಾಚಾರ ಪಾಲಿಸಿ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕವಾಗಿ ಅಳವಡಿಸುವಾಗ ಕಡ್ಡಾಯವಾಗಿ ಕೇಂದ್ರದ ನಾಯಕರ ಭಾವಚಿತ್ರಗಳು ಹಾಗೂ ಯೋಜನೆಯ ವಿವರಗಳನ್ನು ಸೌಲಭ್ಯಗಳ ಮೇಲೆ ಬರೆಯಿಸಬೇಕು. ಸಾರ್ವಜನಿಕರಿಗೆ ಸೌಲಭ್ಯವು ಯಾವ ಯೋಜನೆಯ ಮೂಲಕ ತಲಪಿದೆ ಎನ್ನುವ ಮಾಹಿತಿಯನ್ನು ಅಳವಡಿಸಬೇಕು ಎಂದರು. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 766 ಅಂಗಡಿಗಳಿಗೆ ಸಾಲ ಸೌಲಭ್ಯ ನೀಡಲಾಗಿದೆ.
ಈ ಯೋಜನೆಯಿಂದ ಪ್ರಯೋಜನ ಪಡೆದ ಫಲಾನುಭವಿಗಳು ತಮ್ಮ ವ್ಯಾಪಾರದ ಗಾಡಿಗಳ ಮೇಲೆ ಯೋಜನೆ ನಾಮಫಲಕವನ್ನು ಅಳವಡಿಸಬೇಕು. ಈ ಕುರಿತು ನಿರಂತರವಾಗಿ ಅಧಿಕಾರಿಗಳು ಪರಿಶೀಲಿಸಬೇಕು ಎಂದರು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಅಂಚೆ ಇಲಾಖೆಯಿಂದ ಸಾರ್ವಜನಿಕರಿಗೆ ಲಭ್ಯವಾಗುವ ಯೋಜನೆಗಳ ವಿವರವಾದ ಪಟ್ಟಿಯನ್ನು ಸಿದ್ಧ ಪಡಿಸಿ ಅಳವಡಿಸಲು ಅಂಚೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಮುದ್ರಾ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಕ್ರಮವಹಿಸುವಂತೆ ತಿಳಿಸಿದರು ಯಾವುದೇ ಕಾರಣಕ್ಕೂ ಕೇಂದ್ರ ಯೋಜನೆಗಳು ಅನರ್ಹರ ಪಾಲಾಗುವುದನ್ನು ಸಹಿಸುವುದಿಲ್ಲ ಎಂದರು. ಲೀಡ್ ಬ್ಯಾಂಕ್ನ ಅಧಿಕಾರಿಗಳಿಗೆ ಸಾರ್ವಜನಿಕ ಬಳಕೆ ಸ್ಥಳಗಳಾದ ಆಸ್ಪತ್ರೆ ಆವರಣ ಮತ್ತು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಜನರಿಗೆ ಅನುಕೂಲವಾಗುವಂತೆ ಎ.ಟಿ.ಎಂ. ಗಳ ಸ್ಥಾಪನೆ ಮಾಡಬೇಕು ಎಂದು ಸೂಚಿಸಿದರು.
ಮೇಲ್ಕಂಡ ಇಲಾಖೆಗಳನ್ನು ಹೊರತುಪಡಿಸಿ ಕಂದಾಯ ಇಲಾಖೆ , ಮಹಿಳಾ ಮತ್ತು ಮಕ್ಕಳ ಇಲಾಖೆ , ಬೆಸ್ಕಾಂ , ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ , ಲೋಕೋಪಯೋಗಿ ಇಲಾಖೆ , ಪಂಚಾಯತ್ ರಾಜ್ ಇಲಾಖೆ , ಸಾಮಾಜಿಕ ಅರಣ್ಯ ಇಲಾಖೆ , ಮುಂತಾದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಕ್ರಂ ಪಾಷ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ , ದಿಶಾ ಸಮಿತಿ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ , ಸಾಮಾ ಅನಿಲ್ ಬಾಬು , ಸೂರ್ಯನಾರಾಯಣ ರಾವ್ , ಎಂ.ವಿ. ವೇಣುಗೋಪಾಲ್ , ದಾಕ್ಷಾಯಿಣಿ , ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.