ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಎಪ್ಪತ್ತು ವರ್ಷಗಳಲ್ಲಿ ನಾವು ಭಾರತವನ್ನು ವಿಶ್ವ ನೋಡುವಂತೆ ಮಾಡಿದ್ದೇವೆ ಅಂತ ಕಾಂಗ್ರೇಸ್ ಪಕ್ಷವು ಲಾಗ ಹಾಕಿದರೂ, ಒಂದು ವೇಳೆ ಕಾಂಗ್ರೇಸ್ ಬದಲು ಬೇರೆ ಯಾವ ಪಕ್ಷ ದೇಶದಲ್ಲಿ ಎಪ್ಪತ್ತು ವರ್ಷ ಆಡಳಿತ ನಡೆಸಿದರೆ ಹಳೆಯ ಎತ್ತಿನಗಾಡಿಯಲ್ಲೇ ಹೋಗಬೇಕಿತ್ತೇನೋ ಅನ್ನುವ ಅನುಮಾನ ಕಾಡುವುದು ಸಹಜ. ಅವರಿಗೇನು ಗೊತ್ತು ಕಾಲ ಬದಲಾಗುತ್ತಿದ್ದಂತೆ ಪ್ರಪಂಚವು ಪ್ರಗತಿಯತ್ತ ಸಾಗುವುದು. ಏನೇ ಆದರೂ ಬೇರೆ ಪಕ್ಷಗಳಿಗೆ ಹೋಲಿಸಿದರೆ ಪ್ರಜೆಗಳಿಗೆ ಒಂದಿಷ್ಟು ಸಂತೃಪ್ತಿ ಸಿಗುವುಗು ಕಾಂಗ್ರೇಸಿನಿಂದ ಅಂದರೆ ತಪ್ಪಾಗಲ್ಲ.
ಹೇಗಾದರೂ ಮಾಡಿ ನಾವು ಸಹ ದೇಶದಲ್ಲಿ ಅಧಿಕಾರ ಮಾಡಬೇಕು ಅನ್ನುವುದು ಬಿಜೆಪಿಯ ಎಪ್ಪತ್ತು ವರ್ಷಗಳ ಶತ ಪ್ರಯತ್ನ. ಕಳೆದ ಎಂಟು ವರ್ಷಗಳಲ್ಲಿ ನಾವು ಡಬ್ಬಲ್ ಇಂಜಿನ್ ಸರಕಾರದ ಆಡಳಿತವನ್ನು ಕಂಡಿದ್ದೇವೆ ಮಾತ್ರ ಅಲ್ಲ, ಅನುಭವಿಸಿಯೂ ಆಯಿತು. ನೋಟ್ ಬ್ಯಾನ್ನಿಂದ ಹಿಡಿದು ಎನ್ ಆರ್ ಸಿ, ಪುಲ್ವಾಮಾ ದಾಳಿ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಏರಿಕೆ, ದಿನಸಿ ಸಾಮಾನುಗಳ ಬೆಲೆ ಏರಿಕೆ,ಸುಳ್ಳು ಉದ್ಯೋಗ ಪ್ರಣಾಳಿಕೆ, ಖಾತೆಯಲ್ಲಿ ಹಣ ಜಮೆ, ನೆರೆ ಪ್ರವಾಹದಿಂದ ಅದೆಷ್ಟೋ ಮನೆಗಳು ಜೀವಗಳು ಕೊಚ್ಚಿ ಹೋದರೂ ತಿರುಗಿ ನೋಡದೆ ವಿದೇಶ ಪ್ರಯಾಣ, ಮಹಿಳಾ ಕ್ರೀಡಾ ಪಟುಗಳ ಮೇಲೆ ಸಂಸದರಿಂದಲೇ ಲೈಂಗಿಕ ಕಿರುಕುಳ, ಶೇಖಡಾ ನಲುವತ್ತು ಕಮಿಷನ್, ಹೆಣದ ಮೇಲಿನ ರಾಜಕಾರಣ, ರಾಜಕೀಯದಲ್ಲಿ ಕುದುರೆ ವ್ಯಾಪಾರ, ಮಣಿಪುರ ಹೊತ್ತಿ ಉರಿದು ಜನರ ಶವಗಳು ಅಲ್ಲಲ್ಲಿ ಅನಾಥವಾಗಿ ಬಿದ್ದಿರುವುದು. ಮಾತ್ರವಲ್ಲ ಕೆಲ ಪುಂಗಿಗಳು ಬಿಟ್ಟ ಬಡಾಯಿಯ ರಬಸಕ್ಕೆ ಚಿನ್ನದ ರಸ್ತೆಗಳಿಗೆ ಸೆಕ್ಯುರಿಟಿ ನಿಲ್ಲಬೇಕಾದ ಅವಸ್ಥೆ, ಎಲ್ಲವನ್ನೂ ನೋಡಿ ಸುಸ್ತಾಗಿ ಬಳಲಿ ಬೆಂಡಾದ ಜನತಾ ಜನಾರ್ದನ ಕೊನೆಗೂ ತಿರುಗಿ ಬಿದ್ದಿದ್ದಾನೆ. ತಾನು ಮಾಡಿದ ತಪ್ಪಿನ ಅರಿವಾದ ಜನಾರ್ಧನ ಈ ಸಲ ಒಂದು ಇಂಜಿನಿನ ಕಂಪೆನಿಯನ್ನು ಬದಲಾಯಿಸಿಯೇ ಬಿಟ್ಟಿದ್ದಾನೆ. ಜನರಿಗೆ ಬೇಕಾಗಿರುವುದು ಗ್ಯಾರಂಟಿಗಳು ಅಲ್ಲ. ಬದಲಾಗಿ ನೆಮ್ಮದಿಯ ಜೀವನ. ತಾವೇ ಕಟ್ಟುವ ತೆರಿಗೆಯಿಂದ ತಮಗೆ ಏನಾದರೂ ಪ್ರಣಾಳಿಕೆಗಳ ಮೂಲಕ ಸಿಕ್ಕರೆ ಎರಡೂ ಕೈ ಚಾಚಿ ಸ್ವೀಕರಿಸಲೇ ಬೇಕು.
ಆದರೆ ಕೇಂದ್ರದ ಐವತ್ತೆಂಟು ಇಂಚಿನ ಇಂಜಿನ್ಗೆ ಯಾರೂ ನಿರೀಕ್ಷಿಸದಂತಹ ಮತ್ತೊಂದು ಆಘಾತ ಎದುರಾಗಲಿದೆ. ಮಾಡಿರುವ ಎಡವಟ್ಟುಗಳು ಹಲವಾರು ಇದ್ದರೂ ಈ ಒಂದು ಮಹಾ ಎಡವಟ್ಟಿನಿಂದ ಈಗಾಗಲೇ ದಕ್ಷಿಣ ಭಾರತದಲ್ಲಿ ದೂಳಿಪಟವಾಗಿ ಗಾಯವಾಗಿರುವ ಬಿಜೆಪಿಗೆ ಗಾಯದ ಮೇಲೆ ಬರೆ ಎಂಬಂತೆ ಆಗಿದೆ. ಹೌದು ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅಮಾನ್ಯ ಗೊಳಿಸಿರುವುದು ದೇಶದಲ್ಲಿಯೇ ಹಲವಾರು ಕಡೆ ತನ್ನ ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿದೆ ಎಂದು ರಾಜಕೀಯ ತಜ್ಜರ ಅಭಿಪ್ರಾಯ. ರಾಹುಲ್ ಗಾಂಧಿ ಏನೇ ಮಾಡಿದರೂ ಪಪ್ಪು ಅನ್ನುತ್ತಿದ್ದ ಜಿಜೆಪಿ ಮತದಾರರೇ ಪಪ್ಪುವನ್ನು ಒಪ್ಪಿಕೊಂಡಿದ್ದಾರೆ. ಅವರು ಜನರೊಂದಿಗೆ ಬೆರೆಯುವ ರೀತಿ, ಎಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಬೇಟಿ ನೀಡಿ ಸಂತೈಸುವ ರಾಹುಲ್ ರವರ ಗುಣವನ್ನು ದೇಶದ ಜನರು ಕೊಂಡಾಡಿ ಕೊಳ್ಳುತ್ತಿದ್ದಾರೆ.
ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಫಲಿತಾಂಶ ಕಂಡಿದೆ, ಮುಂದೆಯೂ ಕಾಣಲಿದೆ. ರಾಹುಲ್ ಗಾಂಧಿಯವರು ಎಲ್ಲೋ ಒಂದು ಕಡೆ ಮೋದಿ ಎಂಬ ಪದವನ್ನು ಬಳಸಿ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಆರೋಪ ಇದೆ. ಅವರ ಆ ಮಾತನ್ನು ಯಾರೂ ಸಮರ್ಥಿಸುವುದೂ ಇಲ್ಲ, ಆದರೆ ಇವತ್ತು ದೇಶದ ಕೆಲವು ರಾಜಕಾರಣಿಗಳು ಮಾಡುವ ಕೋಮು ಉದ್ರೇಕಿತ ಮಾತುಗಳು, ಹಗರಣಗಳು, ಭ್ರಷ್ಟಾಚಾರಗಳು, ಲೈಂಗಿಕ ಕಿರುಕುಳಗಳನ್ನು ನೋಡಿ ಸುಮ್ಮನಿರುವ ಸರಕಾರ ಯಾವ ರೀತಿ ನಡೆದು ಕೊಂಡಿದೆ ಎಂಬುವುದನ್ನು ಮುಂದಿನ ಲೋಕಸಭಾ ಚುಣಾವಣೆಯಲ್ಲಿ ಜನತಾ ಜನಾರ್ದನ ತೀರ್ಮಾನಿಸಲಿದ್ದಾನೆ. ಜಿಜೆಪಿಯ ಭದ್ರ ಕೋಟೆಯಾಗಿರುವ ದಕ್ಷಿಣ ಭಾರತದಲ್ಲಿ ನಲುವತ್ತಕ್ಕಿಂತ ಕಡಿಮೆ ಸೀಟ್ಗಳು ಕಷ್ಟಪಟ್ಟು ಸಿಕ್ಕಿದರೆ ಭಾಗ್ಯ ಅನ್ನಬಹುದು.
ಇನ್ನು ಕರ್ನಾಟಕದಲ್ಲಿ ಕಳೆದ ಸಲ ಇಪ್ಪತ್ತೈದು ಕಡೆ ಜಯಿಸಿದ ಪಕ್ಷಕ್ಕೆ ಈ ಸಲ ಜನರು ತಿರುಗಿ ಅವರಾಗೀಯೆ ಬೀಳಿಸಲಿದ್ದಾರೆ. ಹೆಚ್ಚುವರಿಯಾಗಿ ಕೊಡುವ ಐದು ಕೆಜಿ ಅಕ್ಕಿಗೆ ಕರ್ನಾಟಕದ ಈ ಸಲದ ವಿರೋಧ ಪಕ್ಷದವರು ಕೇಂದ್ರದ ಹಿತ್ತಲ ಬಾಗಿಲು ಬಡಿದು ಕತ್ತರಿ ಹಾಕಿರುವುದು ಮುಂದಿನ ಲೋಕಸಭಾ ಚುಣಾವಣೆಯಲ್ಲಿ ತಾವು ಮಾಡಿದ ತಪ್ಪಿನ ಅರಿವಾಗಲಿದೆ. ಮುಂದೆ ಬರುವ ಮಧ್ಯಪ್ರದೇಶ, ರಾಜಸ್ಥಾನ ಚುಣಾವಣೆಯ ಫಲಿತಾಂಶಗಳು ಕಾಂಗ್ರೇಸ್ ಪರ ಇದೆ ಎಂಬುವುದು ಎಲ್ಲಾ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಜನತಾ ಜನಾರ್ದನ ತಿರುಗಿ ಬಿದ್ದಿದ್ದಾನೆ.
✍️ಇಕ್ಬಾಲ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.