ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಸುದೀರ್ಘ ಇನ್ನೂರು ವರ್ಷಗಳ ಬ್ರಿಟಿಷ್ ಆಡಳಿತದಿಂದ ಭವ್ಯ ಭಾರತ ದೇಶವು ಮುಕ್ತಿಗೊಂಡ 1947 ಆಗಸ್ಟ್ 15 ಭಾರತೀಯರ ಪಾಲಿನ ಸಂಭ್ರಮದ ಸುದಿನ. ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ನೆಹರೂ ಅವರು ಭಾರತದ ತ್ರಿವರ್ಣ ಧ್ವಜವನ್ನು ಐತಿಹಾಸಿಕ ಕೆಂಪುಕೋಟೆಯ ಮೇಲೆ ಹಾರಿಸಿದ ಅಭಿಮಾನದ ದಿನ!
ಪ್ರಾಚೀನ ಕಾಲದಿಂದಲೂ ಭಾರತ ದೇಶ ಸಂಪತ್ಸಮೃದ್ಧಿಯಿಂದ ನಳನಳಿಸುತ್ತಿತ್ತು. ಇದರಿಂದ ಆಕರ್ಷಿತರಾದ ಪೋರ್ಚುಗೀಸರು ಭಾರತಕ್ಕೆ ದಂಡೆತ್ತಿ ಬಂದರು. ಪೋರ್ಚುಗೀಸ್ ಪಡೆಯ ವಂಚನೆಯನ್ನರಿತ ಭಾರತೀಯ ಸಮುದಾಯ ಅವರನ್ನು ಭಾರತದಿಂದ ಹೊಡೆದೋಡಿಸಿದರು. ನಂತರ ಫ್ರೆಂಚರೂ ಡೆಚ್ಚರೂ ಭಾರತಕ್ಕೆ ವಕ್ಕರಿಸಿದರು. ಅವರಿಗೂ ಇದೇ ಗತಿ ತೋರಿಸಲಾಯಿತು. ಕೊನೆಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಸರಿನಲ್ಲಿ ಬ್ರಿಟಿಷ್ ವಸಾಹತುಶಾಹಿ ಶಕ್ತಿಗಳು ಭಾರತಕ್ಕೆ ನುಸುಳಿದರು.
ವ್ಯಾಪಾರದ ಮುಖವಾಡ ಹೊತ್ತು ಬಂದು ಬಿಳಿ ಇಲಿಗಳು ಭಾರತದ ಅಮೂಲ್ಯ ಸಂಪತ್ತುಗಳನ್ನು ಬ್ರಿಟನ್ ಗೆ ಸಾಗಿಸುವ ಷಡ್ಯಂತ್ರ ಹೂಡಿದಾಗ ಭಾರತೀಯ ಸಮುದಾಯ ಜಾಗೃತವಾಯಿತು. ಭಾರೀ ಶಕ್ತಿಯೊಂದಿಗೆ ಆಗಮಿಸಿದ್ದ ಬ್ರಿಟಿಷರನ್ನು ಹೊಡೆದೋಡಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಬ್ರಿಟಿಷರ ಮೊದಲ ತಂತ್ರ ಹಿಂದೂ ಮುಸ್ಲಿಮರನ್ನು ವಿಭಜಿಸುವುದಾಗಿತ್ತು. ಒಡೆದು ಆಳುವ ನೀತಿ(Divide And Rule ) ಎಂಬ ತಂತ್ರ ಪ್ರಯೋಗಿಸಿ ಭಾರತದ ವಿವಿಧ ಪ್ರಾಂತ್ಯಗಳ ಹಿಂದೂ-ಮುಸ್ಲಿಂ ರಾಜರುಗಳನ್ನು ಕಚ್ಚಾಡಿಸುವಲ್ಲಿ ಯಶಸ್ವಿಯಾದ ಬ್ರಿಟಿಷರು ಭಾರತೀಯರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಂಡು ಅವರನ್ನು ದಾಸ್ಯ ಸಂಕೋಲೆಯಲ್ಲಿ ಬಿಗಿಗೊಳಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರೂ, ಮೌಲಾನ ಅಬುಲ್ ಕಲಾಂ ಆಝಾದ್,ಲಾಲಾ ಲಜಪತ ರಾಯ್,ಸುಭಾಸ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಮೌಲಾನಾ ಮುಹಮ್ಮದಲಿ ಜೌಹರ್,ಮೌಲಾನಾ ಶೌಕತ್ತಲಿ,ಅಶ್ಫಕುಲ್ಲಾ ಖಾನ್ ಮೊದಲಾದವರ ನಾಯಕತ್ವದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಸಮುದಾಯ ಬ್ರಿಟಿಷರ ವಿರುದ್ಧ ಒಗ್ಗಟ್ಟಾದರು. ಭಾರತ ಬಿಟ್ಟು ತೊಲಗಿ,ಖಿಲಾಫತ್ ಚಳವಳಿ, ಉಪ್ಪಿನಸತ್ಯಾಗ್ರಹ ಹೀಗೆ ವಿವಿಧ ರೀತಿಯ ಹೋರಾಟಗಳ ಮೂಲಕ ಬ್ರಿಟಿಷರನ್ನು ಗಂಟುಮೂಟೆ ಕಟ್ಟಿಸುವ ತೀವ್ರ ಪ್ರಯತ್ನಗಳು ಭಾರತದ ಮೂಲೆ ಮೂಲೆಗಳಲ್ಲಿ ಕವಲೊಡೆದವು. ಅದರ ಫಲವೆಂಬಂತೆ 1947 ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿ ಭಾರತ ಸ್ವತಂತ್ರವಾಯಿತು.
1950 ಜನವರಿ ಇಪ್ಪತ್ತಾರರಂದು ಡಾ| ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನ ಪ್ರಕಾರ ಭಾರತೀಯ ಹೊಸ ಗಣರಾಜ್ಯವನ್ನು ಘೋಷಿಸಲಾಯಿತು. ಇದರಿಂದಾಗಿ ಇಡೀ ಜಗತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಮನ ಸೆಳೆಯಿತು. ವಿವಿಧತೆಗಳಲ್ಲಿ ಏಕತೆ (Unity in Diversity) ಎಂಬ ಭಾರತದ ವಿಶೇಷತೆ ವಿದೇಶ ರಾಷ್ಟ್ರಗಳನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು. ವಿವಿಧ ಧರ್ಮ, ಜಾತಿ,ಸಂಸ್ಕೃತಿಗಳ ಜನರು ಬಹುತ್ವದಿಂದ ಜೀವಿಸುವ ಭಾರತದ ಸೌಂದರ್ಯ ವಿಶ್ವ ಭೂಪಟದಲ್ಲಿ ಮಹತ್ವಪೂರ್ಣವಾಗಿ ಪ್ರಜ್ವಲಿಸಿತು.
ಬದಲಾದ ರಾಜಕೀಯ ಪರಿಸ್ಥಿತಿಯಿಂದ ಭಾರತೀಯರು ಪರಸ್ಪರ ಭಿನ್ನರಾಗಿರಬಹುದು. ಆದರೆ ಭಾರತದ ಅಸ್ಮಿತೆಯನ್ನು ಇಲ್ಲದಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಹಲವಾರು ಮಹಾನ್ ನಾಯಕರ ತ್ಯಾಗೋಜ್ವಲ ಹೋರಾಟದ ಫಲವಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಅದರ ಮಹತ್ವ ಮಂಕಾಗದಂತೆ ಜನತನದಿಂದ ಕಾಪಾಡಬೇಕಾದ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲಿದೆ. ಪ್ರತಿವರ್ಷ ಸ್ವಾತಂತ್ರ್ಯ ದಿನ ಬರುವಾಗ ಸ್ವಾತಂತ್ರ್ಯಕ್ಕಾಗಿ ಸರ್ವವನ್ನೂ ತ್ಯಜಿಸಿದ ನಮ್ಮ ನಾಯಕರ ಜೀವನ ಚರಿತ್ರೆಯನ್ನು ಅಧ್ಯಯನ ನಡೆಸಿ ಅವರ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ನಾವು ಪಣ ತೊಡಬೇಕಿದೆ. ಹಾಗಾದರೆ ಮಾತ್ರ ಅವಿರತ ಶ್ರಮದ ಫಲವಾಗಿ ಲಭಿಸಿದ ಸ್ವಾತಂತ್ರ್ಯಕ್ಕೆ ಅರ್ಥ ಬರಬಹುದು. ಸಮಸ್ತ ಭಾರತೀಯ ಜನತೆಗೆ 76 ನೇ ಸ್ವಾತಂತ್ರೋತ್ಸವದ ಶುಭಾಶಯಗಳು.
✍️ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.