ಕೋಲಾರ( ವಿಶ್ವ ಕನ್ನಡಿಗ ನ್ಯೂಸ್): ಪತ್ರಕರ್ತ ಇಂದಿನ ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಒಂದು ಸರಕಾಗುತ್ತಿದ್ದಾನೆ. ಅದನ್ನು ತಪ್ಪಿಸಲು ಪ್ರಯತ್ನ ಮಾಡಿದರೆ ಮಾದರಿ ಪತ್ರಕರ್ತರಾಗಿ ಉಳಿಯಬಲ್ಲರು ಎಂದು ಸಾಹಿತಿ ಸ.ರಘುನಾಥ ಅಭಿಪ್ರಾಯಪಟ್ಟರು. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಎಂ.ಎಸ್.ಪ್ರಭಾಕರ (ಕಾಮರೂಪಿ) ಅವರ ಪ್ರಥಮ ಪುಣ್ಯ ಸ್ಮರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹಿಂದೆ ಪತ್ರಕರ್ತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವನಿ ಇತ್ತು. ಇಂದು ಆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗಿ, ಪತ್ರಕರ್ತರ ಕತ್ತು ಹಿಸುಕುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದು ಪತ್ರಿಕೋದ್ಯಮ ತುಂಬಾ ಕಷ್ಟದಲ್ಲಿ ಇದೆ. ಇಂದಿನ ಕಾರ್ಪೋರೇಟ್ ವಲಯದಲ್ಲಿ ಯಾವುದೇ ಮಾದ್ಯಮ ಕ್ಷೇತ್ರದ ಕೊರಳನ್ನು ಹಿಸುಕಬಲ್ಲ ಶಕ್ತಿ ಹೊಂದಿದೆ ಎಂದು ಬೇಸರಿಸಿದರು. ಒಬ್ಬ ಪತ್ರಕರ್ತ ನಿಸರ್ಗದ ಮಡಿಲಲ್ಲಿ ಬೆಳದಾಗ ಅವನು ಎಂತಹ ಪತ್ರಕರ್ತ ಆಗಲು ಸಾಧ್ಯ ಎನ್ನಲು ಕಾಮರೂಪಿ ಪ್ರಭಾಕರ್ ಉತ್ತಮ ನಿದರ್ಶನವಾಗಿದ್ದಾರೆ. ಪತ್ರಕರ್ತ ಕಾರ್ಯನಿರತನಾಗಿದ್ದಾಗ ಭ್ರಾಮಿಕ ಒತ್ತಡಗಳಿಗೆ ಒಳಗಾಗಬಾರದು. ಒಬ್ಬ ಸಾಹಿತಿಗೆ ಸಾಮಾಜಿಕ ಬರವಣಿಗೆಗೆ ಮೂಲ ಬೀಜವನ್ನು ಪತ್ರಕರ್ತ ನೀಡುತ್ತಾನೆ. ಪತ್ರಕರ್ತ ಹಾಗೂ ಸಾಹಿತಿ ಒಟ್ಟಿಗೆ ಕೆಲಸ ಮಾಡಿದರೆ ಒಳ್ಳೆಯ ಸಾಮಾಜಿಕ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ನಿರ್ಮಾಣ ಮಾಡಬಹುದು. ಪತ್ರಕರ್ತ ಸಮಾಜ ಮುಖಿಯಾಗುವ ಸಂದರ್ಭ ಈಗಿಲ್ಲ. ಪತ್ರಕರ್ತ ನಿರಂತರ ಒದುಗನಾಗಿದ್ದರೆ ಆತ ಸಶಕ್ತ ಸಾಮಾಜಿಕ ಪತ್ರಕರ್ತರಾಗಿರುತ್ತಾರೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರದ ನೆಲದಲ್ಲಿ ಹುಟ್ಟಿ ಬೆಳೆದು, ಇಲ್ಲೇ ಬಾಲ್ಯವನ್ನು ಕಳೆದ ಪ್ರಭಾಕರ ಪತ್ರಿಕಾ ಕ್ಷೇತ್ರದಲ್ಲಿ ವಿಶ್ವಾದ್ಯಂತ ಸಂಚರಿಸಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು. ಅವರು ಅಸ್ಸಾಂನಲ್ಲಿ ಹೆಚ್ಚು ಕೆಲಸ ಮಾಡಿದ್ದು, ಅಸ್ಸಾಂನ ಕಾಮರೂಪ ಸ್ಥಳದಲ್ಲಿದ್ದ ಅವರಿಗೆ ಇಷ್ಟವಾದ ಸ್ಥಳದ ಹೆಸರನ್ನು ಕಾಮರೂಪಿ ಎಂಬ ಕಾವ್ಯನಾಮವನ್ನು ಅವರು ತಮ್ಮ ಹೆಸರಿನ ಮುಂದೆ ಹಾಕಿಕೊಂಡಿದ್ದಾರೆ. ಪ್ರಭಾಕರ ಅವರು ಇಂಗ್ಲೀಷ್ ಪತ್ರಕರ್ತರಾಗಿದ್ದರೂ ಕನ್ನಡ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ಎಂದರು. ನೆಲ್ಸನ್ ಮಂಡೇಲಾರನ್ನು ಸಂದರ್ಶನ ಮಾಡಿದ ಭಾರತದ ಏಕಮಾತ್ರ ಪತ್ರಕರ್ತರಾಗಿದ್ದರು. ತಮ್ಮ ಕೊನೆಯ ದಿನಗಳನ್ನು ತವರೂರಾದ ಕೋಲಾರದಲ್ಲೇ ಉಳಿದುಕೊಂಡಿದ್ದರು.ಅವರು ಅಷ್ಟು ದೊಡ್ಡ ಸಾಧನೆ ಮಾಡಿದರೂ ಇಮತಿಷ್ಟು ಅಹಂ ಇರಲಿಲ್ಲ ಎಂದು ಅವರ ಸೇವೆಯನ್ನು ಸ್ಮರಿಸಿದರು. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಮರೂಪಿ ಪ್ರಭಾಕರ ಕೋಲಾರ ಪತ್ರಕರ್ತರಿಗೆ ಆದರ್ಶಪ್ರಾಯರಾಗಿ ಜಾಗತಿಕ ಮಟ್ಟದ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದರು, ಪ್ರತಿಯೊಬ್ಬರಿಗೂ ಗೌರವ ಕೊಡುವಂತ ಗುಣವನ್ನು ಅವರಲ್ಲಿ ಕಾಣ ಬಹುದಿತ್ತು, ಪತ್ರಿಕೆಗಳಲ್ಲಿನ ಸಣ್ಣಪುಟ್ಟ ವಿಚಾರದ ಲೋಪ ದೋಷವನ್ನು ಗುರುತಿಸಿ ತಿದ್ದುವ ಬುದ್ದಿವಂತಿಕೆಯನ್ನು ಅವರಲ್ಲಿ ಕಾಣಬಹುದಿತ್ತು ಎಂದರು.
ಜ್ಞಾನ ಕೋಶದ ಬೆಳವಣಿಗೆಗೆ ಎಲ್ಲಾ ವಿಚಾರಗಳ ಅರಿವು ಅಗತ್ಯವಿದೆ, ಅವರು ಹೆಚ್ಚಾಗಿ ಅಧ್ಯಯನದ ಮೂಲಕ ವಿಷಯಗಳನ್ನು ಗ್ರಹಿಸುತ್ತಿದ್ದರು, ಪತ್ರಿಕೋದ್ಯಮದಲ್ಲಿ ಬರವಣಿಗೆಯ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಕಿರಿಯ ಪತ್ರಕರ್ತರನ್ನು ತಮ್ಮ ಒಡನಾಡಿಗಳಂತೆ ಭಾವಿಸಿ ಗುರುಗಳಾಗಿ ತಿದ್ದುತ್ತಿದ್ದರು ಎಂದು ಹಲವಾರು ಪ್ರಸಂಗ ಗಳ ಸಮೇತ ವಿವರಿಸಿದರು.
ಸಂಘದ ವತಿಯಿಂದ ಪತ್ರಿವರ್ಷವು ಕಾಮರೂಪಿ ಪ್ರಭಾಕರ ಅವರ ಸ್ಮರಣೆಯ ಕಾರ್ಯಕ್ರಮಗಳ ಮೂಲಕ ಅವರ ಅವರ ವಿಚಾರಧಾರೆಗಳನ್ನು ಕಿರಿಯ ಪತ್ರಕರ್ತರಲ್ಲಿ ಅರಿವು ಮೂಡಿಸುವ ಕಾರ್ಯ ಮುಂದುವರೆಸಲು ನಿರ್ಧರಿಸಿದೆ ಎಂದು ತಿಳಿಸಿದರು. ಖಜಾಂಚಿ ಎ.ಜಿ.ಸುರೇಶ್ಕುಮಾರ್ ನಿರೂಪಿಸಿ, ಸಿ.ವಿ.ನಾಗರಾಜ್ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಎನ್.ಮುನಿವೆಂಕಟೇಗೌಡ, ಬಿ.ಸುರೇಶ್, ಅಬ್ಬಣಿ ಶಂಕರ್, ಕೆ.ಬಿ.ಜಗದೀಶ್, ವಿಶ್ವಕುಂದಾಪುರ, ಎಸ್.ರವಿಕುಮಾರ್, ರಾಜೇಂದ್ರಸಿಂಹ, ಕೆ.ಎನ್.ಮಹೇಶ್, ಮಾಮಿ ಪ್ರಕಾಶ್, ಜೆ.ಅಂಬರೀಶ್, ಸೋಮಣ್ಣ, ಸುನೀಲ್ಕುಮಾರ್, ಸ್ಕಂದಕುಮಾರ್, ಮದನ್, ಶಬ್ಬೀರ್ ಅಹಮ್ಮದ್, ವಿನೋದ್, ಶ್ರೀಹರಿ, ಗೋಪಿ, ಸರ್ವಜ್ಞ ಮೂರ್ತಿ, ಆಸೀಫ್ ಪಾಷ, ಎನ್.ಸತೀಶ್, ನವೀದ್ ಪಾಷ, ಪುರುಷೋತ್ತಮ್ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.