ಹುಬ್ಬಳ್ಳಿ (www.vknewes.com) : ಶಿವಸಂಸ್ಕøತಿಯ ಮೂಲಪುರುಷನಾಗಿರುವ ಮತ್ತು ಅದ್ಭುತ ಕ್ರಿಯಾಶಕ್ತಿಯನ್ನು ಹೊಂದಿರುವ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಭಾದ್ರಪದ ಮಾಸದ ಮೊದಲ ಮಂಗಳವಾರ ಅಂದರೆ ಸಪ್ಟಂಬರ್ 14 ರಂದು ರಾಷ್ಟ್ರವ್ಯಾಪಿಯಾಗಿ ಏಕಕಾಲಕ್ಕೆ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯ ಸಂಚಾಲಕ ಗಿರೀಶಕುಮಾರ ಬುಡರಕಟ್ಟಿಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಭದ್ರಸ್ವಾಮಿಯ ಪರಂಪರೆ, ಸಂಪ್ರದಾಯ, ಅರ್ಚನೆ, ಆರಾಧನೆ ಬಹಳಷ್ಟು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿವೆ. ವೀರಶೈವ ಧರ್ಮದ ಗುರುಪರಂಪರೆಯ ಮೂಲ ಧರ್ಮಪೀಠಗಳಾದ ಶ್ರೀರಂಭಾಪುರಿ, ಶ್ರೀಉಜ್ಜಯಿನಿ, ಶ್ರೀಕೇದಾರ, ಶ್ರೀಶ್ರೀಶೈಲ ಹಾಗೂ ಶ್ರೀಕಾಶಿ ಪೀಠಗಳ ಪರಂಪರೆಯಲ್ಲಿ ಶ್ರೀವೀರಭದ್ರಸ್ವಾಮಿಯ ಉಲ್ಲೇಖಗಳು ಎದ್ದುಕಾಣುತ್ತವೆ. ಶ್ರೀವೀರಭದ್ರಸ್ವಾಮಿಯು ಶ್ರೀರಂಭಾಪುರಿ ಜಗದ್ಗುರು ಪೀಠದ ಗೋತ್ರಪುರುಷನೂ ಆಗಿದ್ದಾನೆ ಎಂದರು.
ಕರ್ನಾಟಕವೂ ಸೇರಿದಂತೆ ಭಾರತದ ಬಹುಪಾಲು ರಾಜ್ಯಗಳಲ್ಲಿ ವೀರಭದ್ರಸ್ವಾಮಿಯ ಭಕ್ತರಿದ್ದು, ಅಸಂಖ್ಯಾತ ಭಕ್ತ ಸಂಕುಲದ ಕುಲದೇವರಾಗಿ ಶ್ರೀವೀರಭದ್ರಸ್ವಾಮಿಯು ನಿತ್ಯವೂ ಮನೆ-ಮನಗಳಲ್ಲಿ ಪೂಜೆಗೊಳ್ಳುತ್ತಿರುವುದು ವಿಶೇಷವಾಗಿದೆ. ಆಂಧ್ರಪ್ರದೇಶದ ರಾಯಚೋಟಿ ಕ್ಷೇತ್ರದಲ್ಲಿರುವ ಶ್ರೀವೀರಭದ್ರಸ್ವಾಮಿಯು ವಿಶೇಷವಾದ ಶಕ್ತಿಸಂಪನ್ನತೆಯನ್ನು ಹೊಂದಿದ್ದು, ಭಾರತದ ವೀರಭದ್ರಸ್ವಾಮಿ ದೇವಾಲಯಗಳಲ್ಲಿ ಇದು ಅಗ್ರಸ್ಥಾನವನ್ನು ಹೊಂದಿದೆ. ಇದರಂತೆ ರಾಜ್ಯದಲ್ಲಿರುವ ಬಹುಪಾಲು ವೀರಭದ್ರಸ್ವಾಮಿ ದೇವಾಲಯಗಳಿಗೆ ತನ್ನದೇ ಆದ ವಿಶಿಷ್ಟ ಮಹತ್ವವಿದೆ ಎಂದೂ ಅವರು ಹೇಳಿದರು.
ಅನೇಕ ಸಂಶೋಧಕರ ಪ್ರತಿಪಾದನೆಯಲ್ಲಿ ಶ್ರೀವೀರಭದ್ರಸ್ವಾಮಿಯ ಜಯಂತಿಯನ್ನು ಭಾದ್ರಪದ ಮಾಸದ ಮೊದಲ ಮಂಗಳವಾರದಂದೇ ಉಲ್ಲೇಖಿಸಲಾಗಿದ್ದು, ಪ್ರಸ್ತುತ ಸಪ್ಟಂಬರ್ 14 ರಂದು ಶ್ರೀವೀರಭದ್ರಸ್ವಾಮಿಯ ಜಯಂತಿಯನ್ನು ಬಹಳಷ್ಟು ವಿಸ್ತøತವಾಗಿ ಆಚರಣೆ ಮಾಡುವಂತೆ ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಗಳು ಜಂಟಿಯಾಗಿ ಕರೆ ನೀಡಿವೆ ಎಂದರು.
ರಾಜಧಾನಿಯಲ್ಲಿ ಸಪ್ಟಂಬರ್ 14 ರಂದು ಸಂಜೆ 5 ಗಂಟೆಗೆ ರಾಷ್ಟ್ರಮಟ್ಟದ ಶ್ರೀವೀರಭದ್ರಸ್ವಾಮಿ ಜಯಂತಿ ಮಹೋತ್ಸವವು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಜರುಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಅತಿಥಿಗಳಾಗಿದ್ದು, ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಾಧ್ಯಕ್ಷ ಪ್ರದೀಪ ಕಂಕಣವಾಡಿ ಮತ್ತು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣ ಕಲಬುರ್ಗಿ ಪಾಲ್ಗೊಳ್ಳುವರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಂದ ವಿವಿಧ ಮಠಾಧೀಶರು, ವೀರಶೈವ-ಲಿಂಗಾಯತ ಮುಖಂಡರು ಪಾಲ್ಗೊಳ್ಳುವರು ಎಂದರು.
ಕಳೆದ 3 ವರ್ಷಗಳಿಂದಲೂ ಶ್ರೀವೀರಭದ್ರಸ್ವಾಮಿಯ ಜಯಂತಿ ಮಹೋತ್ಸವವನ್ನು ಜರುಗಿಸಲಾಗುತ್ತಿದ್ದು, ಈ ವರ್ಷ ಮನೆ, ಗ್ರಾಮ, ನಗರ, ತಾಲೂಕು, ಜಿಲ್ಲೆ ಸೇರಿ ಎಲ್ಲೆಡೆ ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿರುವ ಪ್ರತಿಯೊಂದೂ ವೀರಭದ್ರೇಶ್ವರ ದೇವಾಲಯಗಳಲ್ಲಿ ಸಪ್ಟಂ. 14 ರಂದು ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಗುಗ್ಗಳ ಸೇವೆ ಸೇರಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲು ಮತ್ತು ದಾಸೋಹ ಸೇವೆ ಕೈಕೊಳ್ಳುವಂತೆ ಮನವಿ ಮಾಡಲಾಗಿದ್ದು, ಶ್ರೀವೀರಭದ್ರಸ್ವಾಮಿಯ ಭಕ್ತಗಣ ಎಲ್ಲೆಡೆ ಈ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಗಿರೀಶಕುಮಾರ ಸಾರ್ವಜನಿಕವಾಗಿ ಮನವಿ ಮಾಡಿದರು.
ನಿರಂತರ ಚರ್ಚೆ-ಚಿಂತನೆ : ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಅಸುರೀ ದುಷ್ಟ ಶಕ್ತಿಗಳ ಅಟ್ಟಹಾಸವನ್ನು ಅಡಗಿಸಲು ಶಿವಸಂಕಲ್ಪ ಸೃಷ್ಟಿಯ ವಿಶಿಷ್ಟ ಅವತಾರವೇ ಶ್ರೀವೀರಭದ್ರ ದೇವರು. ಸಾತ್ವಿಕ ಮೌಲ್ಯಗಳ ಉಳಿವು-ವಿಕಾಸದ ಜನಪರ ಆಶಯದ ಮಹಾಶಕ್ತಿಯಾಗಿರುವ ಶ್ರೀವೀರಭದ್ರೇಶ್ವರನ ಕುರಿತು ಹೆಚ್ಚೆಚ್ಚು ಸಂಶೋಧನೆಗಳು ನಡೆಯಬೇಕಾಗಿದೆ. ಶ್ರೀವೀರಭದ್ರಸ್ವಾಮಿಯ ದೇವಾಲಯಗಳು ಹಾಗೂ ಐತಿಹ್ಯಗಳು ಭಾರತದೆಲ್ಲೆಡೆ ಇದ್ದು, ಅವುಗಳನ್ನು ನಿಖರ ನೆಲೆಯಲ್ಲಿ ಅಧ್ಯಯನಕ್ಕೆ ಅಳವಡಿಸಬೇಕಾಗಿದೆ. ಬರುವ ದಿನಗಳಲ್ಲಿ ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯು ಈ ನಿಟ್ಟಿನಲ್ಲಿ ರಾಜ್ಯದ ವಿಭಿನ್ನ ಜಿಲ್ಲೆಗಳಲ್ಲಿರುವ ಶ್ರೀವೀರಭದ್ರಸ್ವಾಮಿ ಕ್ಷೇತ್ರಗಳಲ್ಲಿಯೇ ನಿರಂತರ ನಿರ್ದಿಷ್ಟ ಚರ್ಚೆ-ಚಿಂತನೆ ನಡೆಸುವಲ್ಲಿ ವಿಚಾರ ಸಂಕಿರಣ, ಸಮಾವೇಶ, ಸಮ್ಮೇಳನ ಜರುಗಿಸಲು ತೀರ್ಮಾನಿಸಲಾಗಿದೆ. ಸಪ್ಟಂ. 14 ರಂದೇ ಏಕಕಾಲಕ್ಕೆ ರಾಷ್ಟ್ರವ್ಯಾಪಿಯಾಗಿ ಶ್ರೀವೀರಭದ್ರೇಶ್ವರ ಜಯಂತಿ ಮಹೋತ್ಸವವನ್ನು ನಡೆಸುತ್ತಿರುವುದರಿಂದ ಶ್ರೀವೀರಭದ್ರಸ್ವಾಮಿ ಸನ್ನಿಧಿಯಲ್ಲಿ ಭಕ್ತಿ ಸಮರ್ಪಣೆಯ ವ್ಯಾಪಕ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಪಿಎಂ. ಚಿಕ್ಕಮಠ ಮತ್ತು ರಮೇಶ ಉಳ್ಳಾಗಡ್ಡಿ, ರಾಜ್ಯ ವಕ್ತಾರ ನ್ಯಾಯವಾದಿ ಪ್ರಕಾಶ ಅಂದಾನಿಮಠ, ಧಾರವಾಡ ಜಿಲ್ಲಾಧ್ಯಕ್ಷ ಗದಿಗೆಯ್ಯ ಹಿರೇಮಠ, ಕಾರ್ಯದರ್ಶಿ ಚೆನ್ನಯ್ಯ ಚೌಕಿಮಠ, ಸಂಘಟನಾ ಕಾರ್ಯದರ್ಶಿ ಶಂಕರ ಕುರ್ತಕೋಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.