ಮಂಗಳೂರು (www.vknews.com) : ಕಳೆದ ಐವತ್ತು ವರ್ಷಗಳಿಂದ ಮಂಗಳೂರು ನಗರದ ಜೀವಾಳದಂತಿರುವ ಕೇಂದ್ರ ಮಾರುಕಟ್ಟೆಯನ್ನು ಲಾಕ್ ಡೌನ್ ಕಾರಣದಿಂದ ಸ್ಥಗಿತ ಗೊಳಿಸಿದ ಬಳಿಕ ಇದನ್ನೇ ನಂಬಿದ್ದ ಹತ್ತು ಸಾವಿರ ಮಂದಿ ಬೀದಿಗೆ ಬಿದ್ದಿದ್ದಾರೆ.
ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಿಲ್ಲವೆಂಬ ನೆಪವೊಡ್ಡಿ ಕೇಂದ್ರ ಮಾರುಕಟ್ಟೆಯನ್ನು ಬೈಕಂಪಾಡಿಗೆ ಸ್ಥಳಾಂತರಿಸಿದ ಬಳಿಕ ಅಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲವೆಂದು ವ್ಯಾಪಾರಿಗಳು ಉಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ.
ಕೆಲವು ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯಾಪಾರ ಮುಂದುವರಿಸಿದರೆ 80% ಜನರು ಬೈಕಂಪಾಡಿಗೆ ವ್ಯಾಪಾರ ನಡೆಸಲು ಬರಲೇ ಇಲ್ಲ. ಇಬ್ಬಗೆ ನೀತಿ ಅನುಸರಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಬೇಕಾಗುವ ಯಾವುದೇ ರೀತಿಯ ತಯಾರಿ ನಡೆಸದೆ ಜನರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ.
ಮಂಗಳೂರು ನೆಹರೂ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ತೆರೆಯುವ ನಿರ್ಧಾರ ಕೆಲವು ವಿಘ್ನ ಸಂತೋಷಿಗಳು ನ್ಯಾಯಾಲಯದ ಮೆಟ್ಟಲೇರಿದ ಕಾರಣ ಅದಕ್ಕೂ ತಡೆ ಬಿದ್ದಿದೆ. ಒಟ್ಟಿನಲ್ಲಿ ಕರ್ನಾಟಕದ ಪ್ರಮುಖ ನಗರವಾದ ಮಂಗಳೂರು, ವ್ಯಾಪಾರಿಗಳ,ಕಾರ್ಮಿಕರ ಅವಕಾಶ ನಿರಾಕರಣೆ ಮೂಲಕ ಸುದ್ದಿಯಲ್ಲಿದೆ.
ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರಿ ಗಳ ನೆರವಿಗೆ ಮಂಗಳೂರು ಮಹಾ ನಗರ ಪಾಲಿಕೆ ಕೂಡಲೇ ಧಾವಿಸಬೇಕು. ತಾವು ಜನರ ತೆರಿಗೆಯಿಂದ ಎಲ್ಲಾ ರೀತಿಯ ಸೌಕರ್ಯ ಗಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಾ ಒಂದು ಹೊತ್ತಿನ ತುತ್ತಿಗಾಗಿ ಹಗಲು ರಾತ್ರಿಯೆನ್ನದೆ ಕಷ್ಟ ಪಡುತ್ತಿದ್ದ ವ್ಯಾಪಾರಿಗಳ ಮತ್ತು ಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡುವ ಆಡಳಿತ ವರ್ಗದ ಕ್ರಮವನ್ನು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀಕ್ಷ್ಣವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.