ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಡ ಮಹಿಳೆಯರಿಗೆ ಸಾಲದ ಆಸೆ ತೋರಿಸಿ ಸದಸ್ಯತ್ವದ ಅರ್ಜಿ ಪಡೆದು ಸಾಲ ನೀಡಿದ್ದೇವೆಂದೂ, ಅದನ್ನು ಮರು ಪಾವತಿಸಿ ಎನ್ನುತ್ತಾ ಮಹಿಳೆಯರಲ್ಲಿಗೆ ಮನೆ ಮನೆಗೆ ಬಂದು ಗೂಂಡಾಗಿರಿ, ಮಹಿಳಾ ದೌರ್ಜನ್ಯ ಎಸಗುತ್ತಾ ಮಾತೆಯರ ಮೇಲೆ ಮಾನಸಿಕ ಭಯೋತ್ಪಾದನೆ ನಡೆಸುವ ಮೈಕ್ರೋ ಫೈನಾನ್ಸ್ಗಳ ಸಿಬ್ಬಂದಿಗಳನ್ನು ತಡೆಯಲು ಸರಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ, ನ್ಯಾಯವಾದಿ ಬಿ ಎಂ ಭಟ್ ಆಗ್ರಹಿಸಿದರು.
ಬಿ ಸಿ ರೋಡು ಮಿನಿ ವಿಧಾನಸೌಧ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣದ ಉದ್ದೇಶದಿಂದ ಸರಕಾರ ಆರ್ ಬಿ ಐ ಮೂಲಕ ಮೈಕ್ರೋ ಫೈನಾನ್ಸ್ಗಳಿಗೆ ಗೈಡ್ಲೈನ್ಸ್ ನೀಡಿ ಅನುಮತಿ ನೀಡಿದೆ. ಮಹಿಳೆಯರಿಗೆ ಸ್ವ ಉದ್ದಿಮೆಗಳನ್ನು ರಚಿಸಲು ಆರ್ಥಿಕ ನೆರವು ನೀಡಿ ಅವರನ್ನು ಸಬಲರನ್ನಾಗಿಸಬೇಕು, ಇದರಲ್ಲಿ ವಿಫಲರಾದರೆ ಆ ಹಣವನ್ನು ಮೋರ್ಟೋರಿಯಂ ಮಾಡಲಾಗುವುದು ಎಂಬುದು ಯೋಜನೆಯಲ್ಲಿ ವಿವರಿಸಲಾಗಿದೆ. ಕಾರ್ಮಿಕ ನೀರೀಕ್ಷಕರ ಕಚೇರಿಯ ಲೈಸೆನ್ಸ್ ಪಡೆದ ಈ ಮೈಕ್ರೋ ಫೈನಾನ್ಸ್ಗಳು ಮಹಿಳಾ ಸಬಲೀಕರಣದ ಬದಲಿಗೆ ಮಹಿಳಾ ದೌರ್ಜನ್ಯ ಎಸಗುತ್ತಾ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಯಾವುದೇ ದಾಖಲೆ ಇಲ್ಲದೆಯೇ ಸಾಲ ಇದೆ ಎಂದು ಸಿಬಿಲ್ಗೆ ಹಾಕಲಾಗಿದೆ ಎಂದು ಬೆದರಿಸುತ್ತಾ, ಬ್ಯಾಂಕುಗಳು ಕೂಡಾ ಸಾಲ ನೀಡದಂತೆ ಒತ್ತಡ ಹಾಕುವಷ್ಟು ಇವರ ದೌರ್ಜನ್ಯ ಬೆಳೆದು ನಿಂತಿದೆ ಎಂದವರು ಆರೋಪಿಸಿದರು.
ಸರಕಾರಕ್ಕೆ ವಂಚಿಸಿದ ಹಣದಿಂದ ಲಾಭ ಮಾಡಲು ಹೊರಟ ದೇಶ ದ್ರೋಹಿಗಳ ವಿರುದ್ದ ಈ ಸಮರವಾಗಿದೆ. ತಪ್ಪು ಮಾಡಿದಾಗ ಸರಕಾರವನ್ನು ಟೀಕಿಸುವುದು ಸಂವಿಧಾನ ಬದ್ದ ಹಕ್ಕು ಎಂದವರು ಹೇಳಿದರು.
ದಲಿತ ಸೇವಾ ಸಮಿತಿಯ ಜಿಲ್ಲಾದ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ ಬಡ ಮಹಿಳೆಯರ ಶೋಷಣೆ ಮಾಡುವುದು ಮಹಾ ಅಪರಾಧವಾಗಿದೆ. ಈ ದೌರ್ಜನ್ಯ ಸರಕಾರಕ್ಕೆ ಗೊತ್ತಿದ್ದೂ ಮೌನವಹಿಸಿರುವುದನ್ನು ಸಹಿಸಲು ಸಾದ್ಯವಿಲ್ಲ. ಈ ಅಕ್ರಮ ಸಾಲಗಳನ್ನು ಮನ್ನಾ ಮಾಡಿ, ಮೈಕ್ರೋ ಸಿಬ್ಬಂದಿಗಳ ದೌರ್ಜನ್ಯವನ್ನು ನಿಲ್ಲಿಸಬೇಕು. ಇಲ್ಲವಾದರೆ ನಾವು ಈ ದೌರ್ಜನ್ಯ ನೋಡಿಕೊಂಡು ಸುಮ್ಮನಿರಲು ಸಾದ್ಯವಿಲ್ಲ ಎಂದು ಎಚ್ಚರಿಸಿದರು.
ಕಾರ್ಮಿಕ ನಾಯಕ ಋಣ ಮುಕ್ತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಎಲ್ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಈಶ್ವರಿ, ಸಮಿತಿಯ ತಾಲೂಕು ಅದ್ಯಕ್ಷ ಯಶೋಧರ, ಉಪಾದ್ಯಕ್ಷ ಮಹಮ್ಮದ್ ದಸ್ತಗಿರಿ, ಸಹ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ, ಚಿತ್ರಾಕ್ಷಿ, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ ಪ್ರಸಾದ್, ವಿಟ್ಲ ವಲಯ ಕಾರ್ಯದರ್ಶಿ ಫಾರೂಕ್ ಕನ್ಯಾನ, ತಾಲೂಕು ಕಾರ್ಯದರ್ಶಿ ಪ್ರಮೀಳಾ, ಸಂಚಾಲಕಿ ರಂಜಿನಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.