ಮುಲ್ಕಿ(ವಿಶ್ವಕನ್ನಡಿಗ ನ್ಯೂಸ್): ದೇವನಲ್ಲಿ ನಂಬಿಕೆ ಇಟ್ಟ ಮಾನವನಿಗೆ ಅವನು ಕೊಡಮಾಡುವ ಅನುಗ್ರಹಗಳ ಸಾಲಿನಲ್ಲಿ ಆರೋಗ್ಯವು ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನಿರಂತರ ಅಲ್ಲಾಹನಲ್ಲಿ ಬೇಡುವ ಜೊತೆಗೆ ಅದಕ್ಕೆ ಪೂರಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ವರ್ತಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮುಲ್ಕಿ ಕೇಂದ್ರ ಜುಮಾ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. “ಒಬ್ಬ ಸತ್ಯ ವಿಶ್ವಾಸಿಗೆ ಆರೋಗ್ಯಕ್ಕಿಂತ ಶ್ರೇಷ್ಟವಾದ ಅನುಗ್ರಹ ಬೇರೆ ಇಲ್ಲ ” ಎಂಬ ಹದೀಸನ್ನು ಉಲ್ಲೇಖಿಸಿದ ಖತೀಬರು ಆರೋಗ್ಯಕ್ಕಾಗಿ ಕೇವಲ ಪ್ರಾರ್ಥಿಸಿ ಕೈ ತೊಳೆದು ಕೊಂಡರೆ ಸಾಲದು. ಅದಕ್ಕಾಗಿ ನಾವು ಶ್ರಮ ಪಡಬೇಕಾಗಿದೆ.
ಆರೋಗ್ಯದ ಬಗ್ಗೆಗಿನ ಜವಾಬ್ದಾರಿಯನ್ನು ನಿಭಾಯಿಸದೇ ಕೇವಲ ಆರೋಗ್ಯಕ್ಕಾಗಿ ಪ್ರಾರ್ಥಿಸುವುದು ವಿಷ ಕುಡಿದು ಆಯುಷ್ಯಕ್ಕಾಗಿ ಪ್ರಾರ್ಥಿಸುವುದಕ್ಕೆ ಸಮಾನ ಎಂದು ಅವರು ವ್ಯಾಖ್ಯಾನಿಸಿದರು. ಯಾವೊಂದು ಧರ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಕಲಿಸಿದೆಯೋ ಅದೇ ಧರ್ಮದ ಜನ ಇಂದು ಗರಿಷ್ಟ ಸಂಖ್ಯೆಯಲ್ಲಿ ಆಸ್ಪತ್ರೆಗಳಲ್ಲಿ ಅಲೆದಾಡುತ್ತಿರುವುದು ವಿಪರ್ಯಾಸವಾಗಿದೆ.
ಆದಾಯದ ಹೆಚ್ಚಿನ ಭಾಗ ಔಷಧಿಗಾಗಿ ವಿನಿಯೋಗಿಸುವ ಒಂದು ಸಮೂಹದಿಂದ ನಮಗೆ ಬೇರೆ ಏನನ್ನೂ ನಿರೀಕ್ಷಿಸಲು ಸಾದ್ಯವಿಲ್ಲ.
ಆದ್ದರಿಂದ ಸನ್ನದ್ದ ಸಂಘಟನೆಗಳು ಯುದ್ದೋಪಾದಿಯಲ್ಲಿ ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸ ಬೇಕಾದ ಕೆಲಸ ಕಾರ್ಯ ಮಾಡಬೇಕಿದೆ ಎಂದು ಅವರು ಎಚ್ವರಿಸಿದರು.
ಮುಂದುವರೆದು ಮಾತನಾಡಿದ ಅವರು ಅನಾರೋಗ್ಯಕ್ಕೆ ಮುಖ್ಯವಾಗಿ ಮೂರು ಕಾರಣಗಳನ್ನು ಗುರುತಿಸ ಬಹುದಾಗಿದೆ. ಟೆನ್ಷನ್ ,ಆಹಾರ ಪದ್ದತಿ,ದೈಹಿಕ ವ್ಯಾಯಾಮದ ಕೊರತೆ ಇದುವೇ ಆ ಮೂರು ಕಾರಣಗಳು. ಟೆನ್ಷನ್ ಎಂಬುದು ಹೆಚ್ಚಾಗಿ ಖರ್ಚಿಗೆ ಕೈಯ್ಯಲ್ಲಿ ಕಾಸಿಲ್ಲದಾದಾಗ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸರಳ ಜೀವನಕ್ಕೆ ಒಗ್ಗಿ ಕೊಳ್ಳುವುದು ಆರೋಗ್ಯಪೂರ್ಣ ಜೀವನಕ್ಕೆ ಬಹಳ ಉಪಯುಕ್ತವಾಗಿದೆ ಎಂದ ಅವರು ಆದಾಯ ಎಷ್ಟಿದೆಯೋ ಅದಕ್ಕಿಂತ ಕಡಿಮೆ ಖರ್ಚು ಮಾಡುವುದು ಆರೋಗ್ಯ ಸ್ಥಿರವಾಗಲು ಉಪಯುಕ್ತವಾಗಿದೆ ಎಂದರು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಹಿರಿಯರ ಮಾತು ಇಲ್ಲಿ ಗಮನೀಯವಾಗಿದೆ. ಬದುಕಿನ ಜಂಜಾಟದಲ್ಲಿ ಈಜಿ ಜೈಸಲು ಇಂದಿನ ಸಂಧರ್ಭದಲ್ಲಿ ಆರ್ಥಿಕ ಭದ್ರತೆ ಕೂಡಾ ಬಹಳ ಮುಖ್ಯವಾಗಿದೆ. ಶೋಕೀ ಜೀವನಕ್ಕೆ ಒಗ್ಗಿ ಕೊಂಡವರಿಗೆ ಆರ್ಥಿಕ ಸಮಸ್ಯೆ ಎದುರಾದರೆ ಮತ್ತೆ ಅಲ್ಲಿ ಚಿಂತೆ ಶುರುವಾಗುತ್ತದೆ. ಚಿಂತೆಯು ಚಿತೆಗೆ ರಹದಾರಿಯಾಗುತ್ತದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಇಲ್ಲಿ ನಾವು ಅರ್ಥ ಮಾಡಿಕೊಳ್ಳ ಬೇಕಾದ ಇನ್ನೊಂದು ಮುಖ್ಯ ವಿಷಯವೇನೆಂದರೆ ನಮ್ಮ ಬದುಕಿನ ಶೈಲಿಯನ್ನು ಇತರರೊಂದಿಗೆ ತುಲನೆ ಮಾಡಿ ಕ್ರಮೀಕರಿಸಬಾರದು. ನಮ್ಮ ಆರ್ಥಿಕ ಸ್ಥಿತಿಗನುಸಾರ ಜೀವನವನ್ನು ಕಟ್ಟಿಕೊಳ್ಳಲು ಕಲಿಯ ಬೇಕಾಗಿದೆ ಎಂದರು.
ಒಟ್ಟಾರೆ ಟೆನ್ಷನ್ ಇಲ್ಲದ ಜೀವನದಿಂದ ಅರ್ಧ ಆರೋಗ್ಯವನ್ನು ಗೆಲ್ಲ ಬಹುದು ಎಂದು ಆಶಾ ಭಾವನೆ ವ್ಯಕ್ತಪಡಿಸಿದ ಖತೀಬರು “ನೀವು ಐಶ್ವರ್ಯದಲ್ಲಿ ನಿಮಗಿಂತ ಮೇಲ್ಪಟ್ಟವರನ್ನು ನೋಡದೇ ಕೆಳಗಿರುವವರನ್ನು ನೋಡಿ” ಎಂಬ ಪ್ರವಾದಿ ನುಡಿ ಈ ತತ್ವವನ್ನೇ ಸಾರಿ ಹೇಳುತ್ತದೆ ಎಂದರು.
ಅನಗತ್ಯ ಖರ್ಚು ವೆಚ್ಚಗಳು ಜನರನ್ನು ಸಾಲದ ಕೂಪಕ್ಕೆ ತಂದು ನಿಲ್ಲಿಸುತ್ತದೆ. ಸಾಲದ ಹೊರೆಯು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ಕಾರಣಕ್ಕಾಗಿ ಸಾಲ ಹೆಚ್ಚದಂತೆ ಪ್ರವಾದಿ ಸ ಅ ರವರು ಅಲ್ಲಾಹನಲ್ಲಿ ರಕ್ಷಣೆ ಕೋರುತ್ತಿದ್ದರು ಎಂದು ನುಡಿದ ಅವರು ಉತ್ತಮ ಸಮಾಜವೆಂಬ ಬಿರುದಾಂಕಿತ ಮುಸ್ಲಿಮರು ಆಡಂಭರದ ಜೀವನಕ್ಕೆ ಜೋತು ಬಿದ್ದು ಇಲ್ಲದ ತಲೆಬಿಸಿಯನ್ನು ಮೈಮೇಲೆ ಎಳೆದು ಕೊಂಡು ಶಾಸ್ವತ ರೋಗಿಗಳಾಗಿ ಹೊರಹೊಮ್ಮುವುದನ್ನು ತಪ್ಪಿಸಲು ಈ ಬಗ್ಗೆ ಉಲಮಾಗಳು ಸೂಕ್ತವಾದ ಮಾರ್ಗ ದರ್ಶನ ನೀಡ ಬೇಕಾಗುತ್ತದೆ ಎಂದರು. ಇನ್ನು ಆರೋಗ್ಯದ ನಿಟ್ಟಿನಲ್ಲಿ ಎರಡನೇಯದಾಗಿ ಗಮನಿಸ ಬೇಕಾದ ವಿಷಯ ನಮ್ಮ ಆಹಾರ ಪದ್ದತಿಯಾಗಿದೆ ಎನ್ನುತ್ತಾ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಜನಜನಿತವಾಗಿದೆ. ನಾವು ಸೇವಿಸುವ ಆಹಾರದ ಆಧಾರದಲ್ಲಿ ನಮ್ಮಆರೋಗ್ಯವನ್ನು ನಿರ್ಣಯಿಸ ಬಹುದಾಗಿದೆ . ಹಿತ ಮಿತ ಆಹಾರ ಸೇವನೆಗೆ ಇಸ್ಲಾಮ್ ಧರ್ಮ ಬಹಳ ಪ್ರೋತ್ಸಾಹ ನೀಡಿದೆ ಎಂದರು.
ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸುವಂತೆ ಜಾಗೃತಿ ಮೂಡಿಸುವ ಜೊತೆಗೆ ಫಾಸ್ಟ್ ಫುಡ್,ಜಂಕ್ಷ್ ಫುಡ್ ಸಂಸ್ಕೃತಿಗಳಿಂದ ಬೆಳೆಯವ ಮಕ್ಕಳನ್ನು ದೂರ ಇಡುವ ಕೆಲಸ ಮಾಡಬೇಕಲ್ಲದೇ ಎಲ್ಲಾ ರೋಗದ ಮೂಲ ಹೊಟ್ಟೆಯಾಗಿದೆ ಎಂಬ ಪ್ರವಾದಿ ವಚನವನ್ನು ಸಮಾಜಕ್ಕೆ ತಿಳಿಹೇಳ ಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅದೇ ರೀತಿ ಆಧುನಿಕ ಆಫೀಸ್ಯಲ್ ಜೀವನ ಶೈಲಿಯಿಂದ ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಹೆಚ್ಚು ಜನರು ರೋಗಿಗಳಾಗುತ್ತಿದ್ದು ದಿನದ ಒಂದು ಘಂಟೆಯಾದರೂ ವ್ಯಾಯಾಮಕ್ಕಾಗಿ ಮೀಸಲಿಡಲು ಮುಂದಾಗ ಬೇಕೆಂದ ಅವರು ಯಂತ್ರಗಳನ್ನು ಚಲಾಯಿಸದಿದ್ದರೆ ಯಾವ ರೀತಿ ಅದು ಕೆಟ್ಟು ಹೋಗುತ್ತದೆಯೋ ಅದೇ ರೀತಿ ನಮ್ಮ ದೇಹವನ್ನು ಕ್ರೀಯಾ ಶೀಲಗೊಳಿಸದಿದ್ದರೆ ಅನಾರೋಗ್ಯಕ್ಕೆ ಗುರಿಯಾಗುತ್ತದೆ ಎಂದರು.
ಸೂರ್ಯ ಕಿರಣ ಮೈಗೆ ತಾಗುವುವುದು ಬಹಳ ಅಗತ್ಯವಾಗಿದೆ. ಇದು ವೈಜ್ಞಾನಿಕ ಸತ್ಯವಾಗಿದೆ. ಮರಮಟ್ಟುಗಳು ಕೂಡಾ ಸೂರ್ಯ ಕಿರಣ ಸಿಗದಿದ್ದರೆ ಬೆಳೆಯುವುದಿಲ್ಲ. ಅಂತದರಲ್ಲಿ ಮನುಷ್ಯನಿಗೂ ಅದು ಅಗತ್ಯವಾಗಿದೆ. ಇಂತಹ ಆರೋಗ್ಯವರ್ಧಕ ಟಿಪ್ಸ್ ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅರೋಗ್ಯ ವಂತ ಸಮಾಜವನ್ನು ಸೃಷ್ಟಿ ಮಾಡುವುದರಲ್ಲಿ ತಿಳಿದವರು ಶ್ರಮ ವಹಿಸಲು ಮುಂದೆ ಬರಬೇಕೆಂದು ಅವರು ಸಲಹೆ ನೀಡಿದರು.
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಪರಿಪಾಠ ಬೆಳೆಸಲು ಸಲಹೆ ನೀಡಿದ ಅವರು ಸಣ್ಣ ಪುಟ್ಟ ರೋಗಗಳಿಗೆ ಮನೆಮದ್ದಿನ ಆಶ್ರಯ ಪಡೆಯ ಬೇಕೆಂದರಲ್ಲದೇ ಖಾಲಿ ಹೊಟ್ಟೆಗೆ ದಿನನಿತ್ಯ ಎರಡು ಕಪ್ ಬಿಸಿ ನೀರು ಕುಡಿದು ಆರೋಗ್ಯವಂತರಾಗಿರಲು ಸೂಚನೆ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.