(www.vknews.com) : ಕರ್ನಾಟಕ ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ಶೈಕ್ಷಣಿಕ ಸಮಸ್ಯೆಗಳು ಉದ್ಭವಿಸುತ್ತಿದೆ. ರಾಜ್ಯ ಸರ್ಕಾರವು ಶಿಕ್ಷಣ ವಲಯಗಳಿಗೂ ತಮ್ಮ ಗಮನಹರಿಸಬೇಕಾಗಿದೆ. ರಾಜ್ಯದಲ್ಲಿ ಲಾಕ್ಡೌನ್ ಸಂದರ್ಭದಲ್ಲೂ ವಿದ್ಯಾರ್ಥಿಗಳು, ಶಿಕ್ಷಕರು ಹಲವಾರು ರೀತಿಯ ಸಮಸ್ಯೆಗಳಿಗೆ ಒಳಗಾಗಿದ್ದಾರೆ ಆದರೆ ಇದರ ಬಗ್ಗೆ ರಾಜ್ಯ ಸರ್ಕಾರವು ಯಾವುದೇ ಗಮನಹರಿಸದಿರುವುದು ಖೇದಕರದ ಸಂಗತಿಯಾಗಿದೆ. ಕ್ಯಾಂಪಸ್ ಫ್ರಂಟ್ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸರ್ಕಾರಕ್ಕೆ ಪತ್ರಿಕಾಗೋಷ್ಠಿಯ ಮುಖಾಂತರ ಒತ್ತಾಯಿಸುತ್ತಿದೆ.
ಪ್ರಮುಖ ಬೇಡಿಕೆಗಳು :-
ಆನ್ಲೈನ್ ತರಗತಿ ಹಾಗೂ ಕಾಲೇಜು ಶುಲ್ಕ ಸಮಸ್ಯೆ
ಲಾಕ್ಡೌನ್ನ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಹಲವು ಖಾಸಗಿ ಶಾಲಾ – ಕಾಲೇಜುಗಳು ಶುಲ್ಕವನ್ನು ಪಾವತಿಸಲು ಹೇಳಿ ಮಾನಸಿಕ ಕಿರುಕುಳ ನೀಡಿ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಹಾಗೂ ಆರ್ಥಿಕ ಸಂಕಷ್ಟದ ಕಾರಣ ವಿದ್ಯಾರ್ಥಿಗಳು ಶುಲ್ಕ ಪಾವತಿಸದಿರುವುದರಿಂದ ಆನ್ಲೈನ್ ತರಗತಿಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಶುಲ್ಕ ಪಾವತಿಸಲು ಹೆಚ್ಚಿನ ಸಮಯವಕಾಶವನ್ನು ನೀಡಬೇಕು ಹಾಗೂ ಆನ್ಲೈನ್ ತರಗತಿಗಳಿಗೆ ಅನುಮತಿ ನಿರಾಕರಿಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡಬಾರದೆಂದು ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ನೋಟೀಸು ಜಾರಿಗೊಳಿಸಬೇಕು.
ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಶೀಘ್ರ ಬಿಡುಗಡೆಗೊಳಿಸಿ
ಕಾಲೇಜು ಶುಲ್ಕ ವಿದ್ಯಾರ್ಥಿಗಳು ಕಟ್ಟಲು ಸಾಧ್ಯವಾಗದ ಪ್ರಮುಖ ಕಾರಣವಾಗಿದೆ ಈ ಬಾರಿಯ ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಮಂಜೂರಾಗದೆ ಅದನ್ನೇ ನಂಬಿದ್ದ ವಿದ್ಯಾರ್ಥಿಗಳು ಆತಂಕಕ್ಕೆ ಸಿಲುಕಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಕಳೆದ ಸಲದ ವಿದ್ಯಾರ್ಥಿ ವೇತನ ಇನ್ನೂ ಕೂಡ ರಾಜ್ಯದ ಹಲವಾರು ವಿದ್ಯಾರ್ಥಿಗಳಿಗೆ ಮಂಜೂರಾಗಿಲ್ಲ ಅದೇ ರೀತಿ ಅರಿವು ಸಾಲ ಯೋಜನೆಯ ಬಗ್ಗೆ ಇಲಾಖೆಯೇ ಮೌನ ವಹಿಸಿದಂತೆ ಭಾಸವಾಗುತ್ತಿದೆ. ಸರ್ಕಾರವು ಆದಷ್ಟು ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸಿ ಶೀಘ್ರ ಅರಿವು ಸಾಲ ಯೋಜನೆ ಹಾಗೂ ವಿದ್ಯಾರ್ಥಿ ವೇತನ ಮಂಜೂರುಗೊಳಿಸಬೇಕು.
ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ
ಸರ್ಕಾರವು ಘೋಷಿಸಿದ ಆರ್ಥಿಕ ಪ್ಯಾಕೇಜ್ನಲ್ಲಿ ಶಿಕ್ಷಕರಿಗೆಯಾಗಲಿ, ಶೈಕ್ಷಣಿಕ ವಲಯದಲ್ಲಿ ದುಡಿಯುತ್ತಿರುವವರಿಗಾಗಲೀ ಯಾವುದೇ ಪ್ಯಾಕೇಜ್ ಘೋಷಿಸದೆ ಶೈಕ್ಷಣಿಕ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ.
ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೀಡಾದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಾಗ ಶಿಕ್ಷಕರನ್ನೂ ಪರಿಗಣಿಸಬೇಕಾಗಿತ್ತು, ದೇಶವನ್ನು ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಮಹತ್ತರವಾದ ಜವಾಬ್ದಾರಿ ನಿರ್ವಹಿಸುತ್ತಿರುವ ಬಹುತೇಕ ಶಿಕ್ಷಕರ ಬದುಕು ಇಂದು ಕತ್ತಲಾವರಿಸಿವೆ. ಗುತ್ತಿಗೆ, ಅರೆಕಾಲಿಕ ನೇಮಕಾತಿಯ ಮೂಲಕ ಶಿಕ್ಷಕ ವೃತ್ತಿಗೆ ಆಯ್ಕೆಯಾದ ಶಿಕ್ಷಕರು ಸಿಗುತ್ತಿದ್ದ ಅಲ್ಪಸ್ವಲ್ಪ ವೇತನದಿಂದ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ಶಿಕ್ಷಕರಿಗೆ ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ವೇತನವಿಲ್ಲದೆ ತಮ್ಮ ಅಳಲನ್ನು ಯಾರ ಬಳಿಯೂ ಹೇಳಲಾರದ ಸ್ಥಿತಿಯಲ್ಲಿದ್ದಾರೆ. ಸಮಾಜದ ವಿವಿಧ ಸ್ತರದ ಜನರಿಗೆ ಪ್ಯಾಕೇಜ್ಗಳನ್ನು ಘೋಷಿಸುವಾಗ ಕಷ್ಟದ ಜೀವನ ನಡೆಸುವ ಶಿಕ್ಷಕರನ್ನೂ ಪರಿಗಣಿಸುವ ಮೂಲಕ ಜ್ಞಾನದ ಬೆಳಕನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡಬೇಕಾಗಿದೆ. ಶೀಘ್ರವಾಗಿ ರಾಜ್ಯ ಸರ್ಕಾರವು ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗಿದೆ.
ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರ್ಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸಿ
ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರ್ಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸಬೇಕೆಂದು ಅರೆವೈದ್ಯಕೀಯ ವಿದ್ಯಾರ್ಥಿಗಳು ಹೋರಾಟ ಪ್ರಾರಂಭಿಸಿದ್ದಾರೆ , ವೈದ್ಯಕೀಯ ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಅರೆವೈದ್ಯಕೀಯ ಕೋರ್ಸ್ ಗೆ ಪ್ರತ್ಯೇಕವಾಗಿ ಸರಕಾರದ ಮಂಡಳಿ ಇಲ್ಲದ ಕಾರಣ ಅರೆವೈದ್ಯಕೀಯ ಪದವೀಧರರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ವರ್ಷಾನುವರ್ಷ ಬಹುದೊಡ್ಡ ಸಂಖ್ಯೆಯಲ್ಲಿ ಅರೆವೈದ್ಯಕೀಯ ಪದವಿಯನ್ನು ಪಡೆದು ತೇರ್ಗಡೆಯಾಗುತ್ತಾರೆ. ಆದರೆ, ಸರಕಾರದಿಂದ ಅಂಗೀಕೃತವಾದ ಅಧಿಕೃತ ಅರೆವೈದ್ಯಕೀಯ ಮಂಡಳಿ ಇಲ್ಲಿಯವರೆಗೂ ಸ್ಥಾಪನೆಯಾಗಿಲ್ಲ. ಹಲವು ಖಾಸಗಿ ನೋಂದಣಿಯಾದ ಸಂಸ್ಥೆಗಳಿದ್ದರೂ ಈಗ ಅದಕ್ಕೆ ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಮಾನ್ಯತೆ ಇಲ್ಲದೆ ಇರುವುದರಿಂದ ಅರೆವೈದ್ಯಕೀಯ ಪದವೀಧರರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ . ಅಂತರ್ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶವು ಈಡೇರುತ್ತಿಲ್ಲ.
ತಕ್ಷಣ ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ, ಪದವೀಧರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸಬೇಕಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ; ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ
ಇದೇ ಶೈಕ್ಷಣಿಕ ವರ್ಷದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಕುರಿತು ಉನ್ನತ ಶಿಕ್ಷಣ ಸಚಿವರು ನೀಡಿರುವ ಹೇಳಿಕೆಯು ಹಾಸ್ಯಾಸ್ಪದವಲ್ಲದೇ ಶಿಕ್ಷಣವನ್ನು ಕೇಸರಿಕರಣಗೊಳಿಸುವ ಹುನ್ನಾರವು ಆಗಿದೆ, ಹೊಸ ಶಿಕ್ಷಣ ನೀತಿಯಲ್ಲಿ ಕಿವಿಗೆ ತಂಪು ನೀಡುವಂತಿರುವ ಆಕರ್ಷಕವಿರುವ ಪೊಳ್ಳು ಮಾತುಗಳು ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತಿವಾಗಿವೆ, ಅದನ್ನು ಕಾರ್ಯರೂಪಕ್ಕೆ ತರಬೇಕಾದರೆ ಅದಕ್ಕೆ ಸರಿಯಾದ ಪ್ರಾಯೋಗಿಕವಾಗಿ ವಾಸ್ತವಕ್ಕೆ ಪೂರಕವಾದ ಯೋಜನೆ ಇಲ್ಲ. ವಿಪರ್ಯಾಸವೆಂದರೆ ಉನ್ನತ ಶಿಕ್ಷಣ ಸಚಿವರು ಹೇಳಿರುವ ಹೇಳಿಕೆಯ ಪ್ರಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಿಕ್ಕೆ ಬೇಕಾಗುವ ಹಣದ ವೆಚ್ಚಕ್ಕೆ ಮತ್ತೆ ಬಜೆಟ್ ನಲ್ಲಿ ರಾಜ್ಯ ಸರಕಾರ ಶಿಕ್ಷಣ ಇಲಾಖೆಗೆ ಮೀಸಲಿಟ್ಟ ಹಣದ ನಡುವೆ ಅಜಗಜಾಂತರವಾದ ವ್ಯತ್ಯಾಸವಿದೆ. ಇದೆಲ್ಲವೂ ಮೀರಿ ಹೊಸ ಶಿಕ್ಷಣ ನೀತಿಯು ಜಾತ್ಯತೀತ ತತ್ವಗಳನ್ನು ನಾಶಪಡಿಸಲಿಕ್ಕೆ ಬೇಕಾಗಿ ಮಾಡಿರುವ ಸಂಘಪರಿವಾರದ ಶಾಖೆಯಲ್ಲಿ ವಿನ್ಯಾಸಗೊಳಿಸಿದ ಕರಡು ಪ್ರತಿಯಾಗಿದೆ. ಶಿಕ್ಷಣವನ್ನು ಕೇಸರಿಕರಣಗೊಳಿಸುವ ದೃಷ್ಟಿಕೋನವನ್ನಿಟ್ಟುಕೊಂಡು ದೇಶಕ್ಕೆ ಮಾರಕವಾಗಿರುವ ಹಿಂದುತ್ವ ಸಿದ್ಧಾಂತವನ್ನು ಶಾಲಾ ಕಾಲೇಜುಗಳಲ್ಲಿ ಕಾರ್ಯಗತಗೊಳಿಸಲು ರಾಜ್ಯ ಬಿಜೆಪಿ ಸರಕಾರ ಈ ಹೀನ ಕೃತ್ತ್ಯಕ್ಕೆ ಕೈ ಹಾಕುತ್ತಿದೆ, ಇದನ್ನು ಕ್ಯಾಂಪಸ್ ಫ್ರಂಟ್ ಯಾವ ಕಾರಣಕ್ಕೂ ಸಹಿಸಲ್ಲ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯು ಸಂವಿಧಾನದ ಆಶಯಗಳ ತಳಹದಿಯ ಮೇಲೆ ನಡೆಯುತ್ತೆ ಹೊರತು ಯಾವ ಹಿಂದುತ್ವದಿಂದ ಅಡಿಯಲ್ಲಿ ಅಲ್ಲ ಎಂಬುದನ್ನು ಬಿಜೆಪಿ ಸರಕಾರಕ್ಕೆ ಗೊತ್ತಿರಲಿ. ಈ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ಮುಂದಾದರೆ ಎಲ್ಲಾ ಬಗೆಯ ಹೋರಾಟದ ಮೂಲಕ ಇದನ್ನು ಪ್ರತಿರೋಧಿಸಲು ಕ್ಯಾಂಪಸ್ ಸನ್ನದ್ದವಾಗಿದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.
ಈ ರೀತಿಯ ಇನ್ನಿತರ ಹಲವಾರು ಪರೀಕ್ಷಾ ವಿಚಾರದಲ್ಲಿ ಗೊಂದಲಗಳು, ಆನ್ಲೈನ್ ತರಗತಿಗಳ ಸಮಸ್ಯೆಗಳು ನಡೆಯುತ್ತಿದೆ. ಇದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಶೈಕ್ಷಣಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಪತ್ರಿಕಾಗೋಷ್ಠಿಯ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ :-
ಅಥಾವುಲ್ಲ ಪುಂಜಾಲ್ಕಟ್ಟೆ ( ರಾಜ್ಯಾಧ್ಯಕ್ಷರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ)
ಸಾಧಿಕ್ ಜಾರತ್ತಾರು (ರಾಜ್ಯ ಸಮಿತಿ ಸದಸ್ಯರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ)
ಸಿರಾಜ್ ಮಂಗಳೂರು ( ಜಿಲ್ಲಾ ಮುಖಂಡರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ )
ಇಮ್ರಾನ್ ಪಾಂಡವರಕಲ್ಲು ( ಜಿಲ್ಲಾ ಮುಖಂಡರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ)
ಸರಫುದ್ದೀನ್ ( ಗ್ರಾಮಾಂತರ ಜಿಲ್ಲಾಧ್ಯಕ್ಷರು, ಕ್ಯಾಂಪಸ್ ಫ್ರಂಟ್ ಮಂಗಳೂರು)
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.