ಗೊಲ್ತಮಜಲು(ವಿಶ್ವಕನ್ನಡಿಗ ನ್ಯೂಸ್): ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಸಂಸ್ಥೆಯು ನಿಮ್ಮೆಲ್ಲರ ಸಹಕಾರದಿಂದ 100ನೇ ರಕ್ತದಾನ ಶಿಬಿರದತ್ತ ಹೆಜ್ಜೆ ಹಾಕುತ್ತಿದೆ. ಆಗಸ್ಟ್ 01 2021 ರಂದು ಗೊಲ್ತಮಜಲಿನ ಹಜ್ಜಾಜ್ ಸ್ಪೋರ್ಟ್ಸ್ ಸಭಾಂಗಣದಲ್ಲಿ ಜರಗಲಿರುವುದು.
ಮೂರು ವರ್ಷಗಳಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ನಡೆದು ಬಂದ ದಾರಿ: ಆಸ್ಪತ್ರೆಯಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಎದುರಾದಾಗ ಅವರೊಂದಿಗಿರುವ ಕುತುಟುಂಬಸ್ತರು ಪಡುವ ರೋದನೆ, ಹಾಹಾಕಾರ ನಿಜಕ್ಕೂ ಮನ ಕಲುಕುವಂತಾದ್ದು. ಕೆಲವೊಂದು ಗ್ರೂಪಿನ ರಕ್ತವಂತೂ ಸಿಗುವುದೇ ವಿರಳವಾಗಿ ಅದೆಷ್ಟೋ ಜೀವಗಳು ಇಹ ಲೋಕವನ್ನೇ ತ್ಯಜಿಸಿದಂತಹಾ ಹೃದಯ ವಿದ್ರಾವಕ ಘಟನೆಗಳೆಷ್ಟೋ?…. ಇವೆಲ್ಲವನ್ನೂ ನೋಡುತ್ತಾ ವೇದಿಕೆಯನ್ನು ರೂಪಿಸಲು ಅವಕಾಶವನ್ನು ಎದುರು ನೋಡುತ್ತಿದ್ದ ಕೆಲವೊಂದು ಯುವಕರು ತಮ್ಮ ತಮ್ಮಲ್ಲಿಯೇ ಚರ್ಚಿಸಿ ಏಕ ಕಾಲದಲ್ಲಿ ಒಂದೇ ಮಾನಸಿಕತೆಯುಳ್ಳ ತಂಡವೊಂದನ್ನು ರಚಿಸಿ, ನೊಂದ ಜೀವಿಗಳಿಗೆ ಆಶಾಕಿರಣವಾಗಬೇಕೆಂದು ತೀರ್ಮಾನಿಸಿ 25-07-2018ರಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಎಂಬ ಹೆಸರಿನ ಸಂಸ್ಥೆಯನ್ನು ರಚಿಸಿದರು.
ಶರವೇಗದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ ತಂಡವು ಹಲವಾರು ರಕ್ತ ದಾನ ಶಿಬಿರಗಳು, ಅದೆಷ್ಟೋ ತುರ್ತು ರಕ್ತದಾನಿಗಳನ್ನು ಆಸ್ಪತ್ರೆಗಳಿಗೆ ತಲುಪಿಸುತ್ತಾ, ಅದೆಷ್ಟೋ ದಾನಿಗಳಿಂದ ಶೇಖರಿಸಿಟ್ಟ ರಕ್ತವನ್ನು ನೀಡುತ್ತಾ ಯಶಸ್ವಿಯಿಂದ ಯಶಸ್ವಿಯ ಕಡೆಗೆ ದಾಪುಗಾಲು ಹಾಕುತ್ತಾ ಮುನ್ನಡೆಯಿತು. ತಮ್ಮ ಪ್ರಥಮ ವರ್ಷದ ವಾರ್ಷಿಕಾಚರಣೆಯನ್ನು ನಡೆಸುವ ಸಂಧರ್ಭದಲ್ಲಿ ಜನಮನ ಗೆದ್ದ ಮುಂಚೂಣಿಯ ತಂಡವಾಗಿ ಮಾರ್ಪಟ್ಟಿತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ತಮ್ಮ ಸಂಸ್ಥೆಯ ಪ್ರಥಮ ವರ್ಷವನ್ನು ಫೋರಮ್ ಫಿಝ ಮಾಲ್ ನಲ್ಲಿ ರಕ್ತ ದಾನ ಶಿಬಿರ ಆಯೋಜಿಸುವುದರೊಂದಿಗೆ, ಮಕ್ಕಳ ಕಾರ್ಯಕ್ರಮ, ಕವಿಗೋಷ್ಠಿಯಂತಹ ಹಲವಾರು ಸಾಂಸ್ಕ್ರತಿಕ ಚಟುವಟಿಕೆಗಳನ್ನು ಏರ್ಪಡಿಸುವುದರ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ತದನಂತರ ತಮ್ಮ ಕಾರ್ಯಪ್ರೌರತೆಯನ್ನು ಇನ್ನಷ್ಟು ತೀವ್ರ ಗೊಳಿಸುತ್ತಾ ನಿಸ್ವಾರ್ಥ ಸೇವಾ ಮನೋಭಾವನೆಯುಳ್ಳ ಕಾರ್ಯ ನಿರ್ವಾಹಕರು ತಾವಾಗಿ ಬಂದು ಸಂಸ್ಥೆಗೆ ಸೇರಿಕೊಳ್ಳುವಂತಹಾ ಹಂತಕ್ಕೆ ತಲುಪಿತು. ಎರಡನೇ ವಾರ್ಷಿಕಾಚರಣೆಯ ಸಂಧರ್ಭಕ್ಕೆ ತಲುಪುವಷ್ಟರಲ್ಲಿ ಸಂಸ್ಥೆಯು ಬಹಳ ಎತ್ತರಕ್ಕೆ ಬೆಳೆಯಿತು. ಆದರೆ ಕೋವಿಡ್-19 ಎಂಬ ಮಹಾ ಮಾರಿಯು ಇಡೀ ವಿಶ್ವವನ್ನೇ ಆವರಿಸಿಕೊಂಡಾಗ ಎರಡನೇ ವಾರ್ಷಿಕಾಚರಣೆಯನ್ನು ಆಚರಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗಳಿಗೆ ಊಟ, ಹಣ್ಣು ಹಂಪಲುಗಳನ್ನು ಕೊಡುವ ಮೂಲಕ ಸರಳ ವಾಗಿ ಆಚರಿಸಲಾಯಿತು. ಕೊರೋಣದಿಂದ ಇಡೀ ವಿಶ್ವವೇ ತತ್ತರಿಸಿದ್ದ ಸಂಧರ್ಭದಲ್ಲಿ ಎದೆ ಗುಂದದೆ ಕೆಚ್ಚೆದೆಯಿಂದ ರೋಗಿಗಳಿಗೆ ಬೇಕಾದ ರಕ್ತವನ್ನೂ, ರೋಗಿಗಳ ಅಥವಾ ಕಷ್ಟದಲ್ಲಿ ಸಿಲುಕಿಕೊಂಡ ಅದೆಷ್ಟೋ ಮಂದಿಯನ್ನು ಬೇಕಾದ ಸ್ಥಳಕ್ಕೆ ತಲುಪಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಪ್ಲಾಸ್ಮಾ ಥಿರಪಿಯಿಂದ ಕೋವಿಡ್ ಚಿಕಿತ್ಸೆ ಫಲಕಾರಿಯಾಗಲಿದೆ ಎಂಬ ವಾರ್ತೆ ಸಿಕ್ಕಿದ ಕೂಡಲೇ ಪ್ರಪ್ರಥಮವಾಗಿ ಬೆಂಗಳೂರಿಗೆ ಧಾವಿಸಿ ಪ್ಲಾಸ್ಮಾ ದಾನ ಮಾಡಿದ ಹೆಗ್ಗಳಿಕೆಯನ್ನೂ ಕೂಡ ಬ್ಲಡ್ ಹೆಲ್ಪ್ ಕೇರ್ ಗಿಟ್ಟಿಸಿಕೊಂಡಿತು. ಮಾತ್ರವಲ್ಲ 2ನೇ ಸ್ಥಾನ ಪಡೆದ ಹೆಗ್ಗಳಿಕೆಯೊಂದಿಗೆ ಜಿಲ್ಲಾದಿಕಾರಿಯಿಂದ ಪ್ರಶಂಶನಾ ಪತ್ರವನ್ನೂ, ಸನ್ಮಾನವನ್ನೂ ಪಡೆದು ಕೊಂಡಿತು.
ಹೀಗೆ ತಮ್ಮ ಎಡೆ ಬಿಡದ ಪ್ರವರ್ತನೆಯನ್ನು ಮುಂದುವರಿಸುತ್ತಾ ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಾ ಜನ ಸೇವೆಯೇ ನಮ್ಮ ದ್ಯೇಯ ಎಂಬಂತೆ ಮುನ್ನುಗ್ಗುತ್ತಾ ಮೂರನೇ ವರ್ಷಕ್ಕೆ ತಲುಪುವಾಗ ಸಂಸ್ಥೆಯು 99 ಶಿಬಿರಗಳನ್ನು ಆಯೋಜಿಸಿ ಆರರಿಂದ ಏಳು ಸಾವಿರ ಯೂನಿಟ್ ರಕ್ತ ಶೇಖರಿಸುವಲ್ಲಿ ಯಶಸ್ವಿಯಾಯಿತು. ಮಾತ್ರವಲ್ಲ ತುರ್ತು ಸಂಧರ್ಭಗಳಲ್ಲಿ 600ಕ್ಕೂ ಮಿಕ್ಕ ದಾನಿಗಳನ್ನು ತಲುಪಿಸುವುದರ ಮೂಲಕ ಜನ ಮನ್ನಣೆಯನ್ನೂ ಪಡೆಯಿತು. ಈ ಮದ್ಯೆ ಸಂಸ್ಥೆಯೂ ಹಲವಾರು ಜನೋಪಯೋಗಿ ಕೆಲಸಗಳನ್ನು ಕೂಡಾ ಮಾಡುತ್ತಾ ಬಂದಿದ್ದು ಅದು ಇನ್ನಷ್ಟು ನಾಗರಿಕರ ಪ್ರೀತಿಗೆ ಪಾತ್ರವಾಯಿತು.
ಉದಾ:- ಪ್ರವಾಹ ಪೀಡಿತ ಪ್ರದೇಶಗಳಾದ ದ. ಕ. ಹಾಗೂ ಉತ್ತರಕನ್ನಡ ಜಿಲ್ಲೆಯ ಹಲವಾರು ಸ್ಥಳಗಳಿಗೆ ಭೇಟಿನೀಡಿ ಸುಮಾರು 10,00,000 ಕ್ಕೂ ಮಿಕ್ಕ ಆಹಾರ ಸಾಮಾಗ್ರಿಗಳನ್ನೂ, ಕೋವಿಡ್ ಸಂಧರ್ಭದಲ್ಲಿ ನಿರಾಶ್ರಿತರಿಗೆ ಆಹಾರ ತಲುಪಿಸುತ್ತಾ, ಹಣ್ಣು ಹಂಪಲುಗಳನ್ನು ತಲುಪಿಸುತ್ತಾ, ಅವರನ್ನು ಸಮಾಧಾನ ಪಡಿಸುತ್ತಾ ವಿಶೇಷ ಸೇವೆಯನ್ನು ಮಾಡುತ್ತಾ ಮುನ್ನಡೆದಿದೆ. ಸಂಸ್ಥೆಯು ಇದೇ 25-07-2021ಕ್ಕೆ ಮೂರು ವರ್ಷದ ಸಂಭ್ರಮಾಚರಣೆಯನ್ನು ಕಾಲದ ಬೇಡಿಕೆಯಂತೆ ಅತೀ ಸರಳವಾಗಿ ಉಡುಪಿ ಜಿಲ್ಲೆಯ ಕಾಪು ಪ್ರದೇಶದ ಮಲ್ಲಾರ್ ಎಂಬಲ್ಲಿರುವ ಹಝ್ರತ್ ಸಾದಾತ್ ವೃದ್ದಾಶ್ರಮದ ವಿಶೇಷ ಅಥಿತಿಗಳಿಗೆ ಅನ್ನದಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಮಾತ್ರವಲ್ಲ ಉಡುಪಿ ಪರಿಸರದ ಆಪತ್ಬಾಂದವ ಎಂದೇ ಹೆಸರುವಾಸಿಯಾಗಿರುವ ಈಶ್ವರ್ ಮಲ್ಪೆ ಎಂಬುವವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಮೇಲಿನ ಎಲ್ಲಾ ಯಶಸ್ವಿಗೂ ಪ್ರಥಮವಾಗಿ ಸರ್ವ ಶಕ್ತನಾದ ಅಲ್ಲಾಹನ ಸಹಾಯ, ಹಾಗೂ ನಿಸ್ವಾರ್ಥ ಮನೋಭಾವನೆಯುಳ್ಳ ಪದಾಧಿಕಾರಿಗಳು, ಕಾರ್ಯ ನಿರ್ವಾಹಕರು. ಅದೇ ರೀತಿ ನಮ್ಮೊಂದಿಗೆ ಸಹಕರಿಸಿದ ಸಂಘ ಸಂಸ್ಥೆಗಳು, ಆಸ್ಪತ್ರೆಗಳು ಅಲ್ಲಿನ ರಕ್ತನಿಧಿ ಸಿಬ್ಬಂದಿಗಳು, ಉದಾರ ದಾನಿಗಳು, ಮುಖ್ಯವಾಗಿ ಸಾಮಾಜಿಕ ಕಳಕಲಿಯುಳ್ಳ ರಕ್ತ ದಾನಿಗಳು. ಎಲ್ಲರಿಗೂ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಸರ್ವ ಶಕ್ತನು ನಮ್ಮ ಸಂಸ್ಥೆಯನ್ನು ಇನ್ನೂ ಉನ್ನತ ಶಿಖರಕ್ಕೇರಿಸಲಿ. ಮಾತ್ರವಲ್ಲ ಇಲ್ಲಿಯವರೆಗೆ ಆಶೀರ್ವಾದ ಮಾಡಿದ ಎಲ್ಲರೂ ನಮ್ಮ ಸಂಸ್ಥೆಗೆ ಇನ್ನೂ ಕೂಡ ಹೆಚ್ಚಿನ ರೀತಿಯಲ್ಲಿ ಸಹಕರಿಸಿ ಆಶೀರ್ವದಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ). BLOOD HELP CARE KARNATAKA(R)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.