ಕೋಲಾರ (ವಿಶ್ವಕನ್ನಡಿಗ ನ್ಯೂಸ್):- ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್ ಸಿಂಗ್ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಮಿ ತಂತ್ರಾಂಶದಲ್ಲಿ ವಿವಿಧ ಅಧಿಕಾರಿಗಳ ಬಳಿ ಬಾಕಿ ಇರುವ ಪ್ರಕರಣಗಳು , ಕಾವೇರಿ ತಂತ್ರಾಂಶದಲ್ಲಿ ತಹಶೀಲ್ದಾರ್ ಹಂತದಲ್ಲಿ ಬಾಕಿ ಇರುವ ಪ್ರಕರಣಗಳ ಪರಿಶೀಲನೆ ನಡೆಸಿ ಬಂಗಾರಪೇಟೆ ತಾಲ್ಲೂಕಿನಲ್ಲಿ 80 ಪ್ರಕರಣಗಳು ಬಾಕಿ ಇದ್ದು , ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು . ಅರೆ ನ್ಯಾಯಿಕ ಪ್ರಕರಣಗಳಲ್ಲಿ ಮೊದಲು 2 ವರ್ಷದಿಂದ 5 ವರ್ಷಗಳೊಳಗೆ ಬಾಕಿ ಇರುವ ಪ್ರಕರಣಗಳನ್ನು ತಗೆದುಕೊಂಡು 2 ತಿಂಗಳೊಳಗೆ ಇತ್ಯರ್ಥ ಪಡಿಸುವಂತೆ ತಹಶೀಲ್ದಾರ್ಗಳಿಗೆ ಸೂಚಿಸಿದರು.
ಪಹಣಿ ಕಾಲಂ 3 ಮತ್ತು 9 ಕ್ಕೆ ವ್ಯತ್ಯಾಸವಿರುವ ಪ್ರಕರಣಗಳ ತಿದ್ದುಪಡಿ , ಭೂ ಮಂಜೂರಾತಿ ನಮೂನೆ , 53 ರ ಪ್ರಕರಣಗಳ ವಿಲೇವಾರಿ , 94 ಸಿ , 94 ಸಿಸಿ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು. ಬೆಂಗಳೂರು – ಚನೈ ಎಕ್ಸ್ಪ್ರೆಸ್ ಹೈವೆ ಕಾರಿಡಾರ್ ಯೋಜನೆಗೆ ಭೂಮಿಯನ್ನು ಪಡೆದುಕೊಳ್ಳಲು ಇರುವ ತೊಡಕುಗಳನ್ನು ಕಾನೂನು ರೀತಿ ಶೀಘ್ರದಲ್ಲಿ ಪರಿಹರಿಸಿಕೊಳ್ಳಿ ಎಂದು ಸಂಬಂಧಿಸಿದ ತಹಶೀಲ್ದಾರರಿಗೆ ಸೂಚಿಸಿದರು.
ರೈತರಿಗೆ ಮನವರಿಕೆ ಮಾಡಿ ಮಾಲ್ಕಿಂಗ್ ಮತ್ತು ಲ್ಯಾಂಡ್ನ್ನು ಪಡೆಯುವುದನ್ನು ಸೆಪ್ಟೆಂಬರ್ 30 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು . ಸರ್ವೆ ಇಲಾಖೆಯ ಆಯುಕ್ತರಾದ ಮನೀಷ್ ಮುದ್ಗೀಲ್ ಅವರು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ , ಸಾರ್ವಜನಿಕರು ಸರ್ವೆ ಮಾಡಲು ಅರ್ಜಿಗಳನ್ನು ಸಲ್ಲಿಸಿದ್ದು , ಹೆಚ್ಚಿನ ಪ್ರಕರಣಗಳು ತಪಶೀಲ್ದಾರ್ ಹಂತದಲ್ಲಿ ಬಾಕಿ ಉಳಿದಿವೆ. ಕಾರಣ 3-9 ಮಿಸ್ ಮ್ಯಾಚ್ , ಆರ್.ಟಿ.ಸಿ ಮಿಸ್ ಮ್ಯಾಚ್ ಮುಂತಾದ ಕಾರಣಗಳಿಂದ ಬಾಕಿ ಇದ್ದು , ಟಾರ್ಗೆಟ್ ತೆಗೆದುಕೊಂಡು ತಹಶೀಲ್ದಾರರು ಪ್ರತಿ ವಾರ ಇತ್ಯರ್ಥ ಪಡಿಸಬೇಕು.ಪ್ರತಿ ಸರ್ವೆಯರ್ಗಳು ತಿಂಗಳಿಗೆ ಕನಿಷ್ಠ 23 ಸರ್ವೆ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳಾದ ಡಾ ! ಆರ್.ಸೆಲ್ವಮಣಿ ಅವರು ಮಾತನಾಡಿ , ಗ್ರಾಮವಾರು ಪಿ ನಂಬರ್ಗಳನ್ನು ಪಟ್ಟಿ ಮಾಡಿ ಬಾಕಿ ಇರುವ ಪಿ ನಂಬರ್ಗಳನ್ನು ಇತ್ಯರ್ಥ ಪಡಿಸಲು ತಹಶೀಲ್ದಾರ್ಗಳಿಗೆ ಸೂಚಿಸಿದರು . 2 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಬಾಕಿ ಇರುವ ಅರೆ ನ್ಯಾಯಿಕ ಪ್ರಕರಣಗಳನ್ನು ಒಂದು ವಾರದಲ್ಲಿ ದಿನಾಂಕಗಳನ್ನು ನಿಗಧಿ ಪಡಿಸಿ ಇತ್ಯರ್ಥ ಪಡಿಸಿ , ಆರೆ ನ್ಯಾಯಿಕ ಪ್ರಕರಣಗಳೆಲ್ಲಾ ರಿಜಿಸ್ಟರ್ ಡ್ಯಾಕುಮೆಂಟ್ ಮೇಲೆ ಇದ್ದು, ತಾಲ್ಲೂಕು ವಾರು ಅದಾಲತ್ಗಳನ್ನು ನಡೆಸಿ ಇತ್ಯರ್ಥ ಪಡಿಸುವಂತೆ ತಹಶೀಲ್ದಾರ್ಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರ ಕಛೇರಿಯ ಹೆಚ್ಚುವರಿ ಆಯುಕ್ತರಾದ ಇಸ್ಲಾವುದ್ದೀನ್ ಚೆ ಗದ್ಯಾಳ , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ಉಪ ವಿಭಾಗಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ , ಯೋಜನಾ ನಿರ್ದೇಶಕರಾದ ಸೋಮಶೇಖರ್ ಸೇರಿದಂತೆ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು .
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.