ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಬಡವರು , ರೈತರು , ತಾಯಂದಿರ ಹೃದಯ , ನಾಲಿಗೆಯಲ್ಲಿ ಡಿಸಿಸಿ ಬ್ಯಾಂಕ್ ಹೆಸರು ಹರಿದಾಡುತ್ತಿದೆ , ಇಂತಹ ಸಂಸ್ಥೆಯನ್ನು ಹಾಳು ಮಾಡುವ ಪ್ರಯತ್ನ ನಡೆಸಿದರೆ ಸಮಾಜ ಎಂದಿಗೂ ಕ್ಷಮಿಸದು ಎಂಬುದನ್ನು ಅರಿತು ಕೆಲಸ ಮಾಡಿ ಎಂದು ಸಿಬ್ಬಂದಿಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ , ಪಾರದರ್ಶಕ ಆಡಳಿತಕ್ಕಾಗಿ ಮತ್ತು ಭ್ರಷ್ಟತೆ ಇಣುಕಿ ನೋಡದಂತೆ ತಡೆಯಲು ಇಡೀ ಪ್ಯಾಕ್ಸ್ ವ್ಯವಸ್ಥೆಯನ್ನೇ ಗಣಕೀಕರಣ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ. ನ .೧ ರಿಂದ ಪ್ಯಾಕ್ಸ್ಗಳ ಪೂರ್ಣ ಗಣಕೀಕರಣ ಮತ್ತು ವಹಿವಾಟು ಆರಂಭಗೊಳ್ಳಲಿದ್ದು , ಇದು ಸಹಕಾರ ಕ್ಷೇತ್ರದಲ್ಲೇ ಒಂದು ಮೈಲಿಗಲ್ಲು ಎಂದ ಅವರು , ಸೊಸೈಟಿಗಳ ಆಯಾದಿನದ ವಹಿವಾಟು ಕ್ಷಣಾರ್ಧದಲ್ಲಿ ಆನ್ಲೈನ್ನಲ್ಲಿ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಲಭ್ಯವಾಗಲಿದ್ದು , ತಾಯಂದಿರು , ರೈತರಲ್ಲಿ ಸಹಕಾರ ಸಂಸ್ಥೆಗಳ ಬಗೆಗಿನ ನಂಬಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.
ಗಣಕೀಕರಣವಾಗದಿದ್ದರೆ ಸಾಲಸೌಲಭ್ಯ ಇಲ್ಲ ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಹಿನ್ನಡೆಯಾದರೆ ಅದು ಜಿಲ್ಲೆಯ ಬಡವರು , ತಾಯಂದಿರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ಬದ್ಧತೆಯಿಂದ ನಿರೀಕ್ಷೆಗೂ ಮೀರಿ ಕೆಲಸ ಮಾಡಿ ಬ್ಯಾಂಕನ್ನು ಉಳಿಸಿ ಬೆಳೆಸುವ ಹೊಣೆ ನಿಮ್ಮ ಮೇಲಿದೆ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು. ಅವಿಭಜಿತ ಜಿಲ್ಲೆಯ ಎಲ್ಲ ಸೊಸೈಟಿಗಳನ್ನು ಆನ್ಲೈನ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಈ ಮೂಲಕ ಪಾರದರ್ಶಕ ಆಡಳಿತಕ್ಕೆ ದಿಟ್ಟ ಹೆಜ್ಜೆ ಇರಿಸಲಾಗಿದೆ.
ಹೀಗಾಗಿ ಇನ್ನು ಮುಂದೆ ಎಲ್ಲರೂ ಎಟಿಎಂ ಮೂಲಕ ಹಣ ಪಡೆದುಕೊಳ್ಳುವುದರಿಂದ ಸಿಬ್ಬಂದಿ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದ್ದು ಇದನ್ನು ಸಮರ್ಥವಾಗಿ ಎದುರಿಸುವ ಕೆಲಸ ಆಗಬೇಕಾಗಿದೆ ಎಂದರು. ಗಣಕೀಕರಣದಿಂದ ಹೊರಗುಳಿಯುವ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕಿನಿಂದ ಯಾವುದೇ ಸಾಲಸೌಲಭ್ಯ ಸಿಗುವುದಿಲ್ಲ ಎಂದು ಎಚ್ಚರಿಸಿದ ಅವರು , ಪ್ರತಿ ಸೊಸೈಟಿಯೂ ಗಣಕೀಕರಣಗೊಳ್ಳಲು ಕ್ರಮ ಕೈಗೊಳ್ಳಿ , ಈ ಸಂಬಂಧ ಕೆಲಸದ ಜವಾಬ್ದಾರಿ ಹೊತ್ತಿರುವ ವಿ – ಸಾಫ್ಟ್ ಸಿಬ್ಬಂದಿಗೆ ಸಹಕಾರ ನೀಡಿ ಎಂದರು.
ಡಿಸಿಸಿ ಬ್ಯಾಂಕಿಗೆ ಸಾಧನೆಗಳ ಗರಿ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಈಗಾಗಲೇ ಅತಿ ಹೆಚ್ಚು ತಾಯಂದಿರಿಗೆ ಸಾಲ ನೀಡಿರುವುದು , ಎನ್ಪಿಎ ಕಡಿಮೆ ಮಾಡಿರುವುದರಲ್ಲಿ ರಾಷ್ಟ್ರ ಮಟ್ಟದ ಖ್ಯಾತಿಗೆ ಒಳಗಾಗಿದೆ . ಇದೀಗ ಇದರ ಜತೆಗೆ ಸಂಪೂರ್ಣ ಸೊಸೈಟಿಗಳ ಗಣಕೀಕರಣದ ಮೂಲಕ ಮತ್ತೊಂದು ಸಾಧನೆಯ ಗೌರವ ಸಿಗಲಿದೆ ಎಂದರು. ಬ್ಯಾಂಕ್ ಅಭಿವೃದ್ಧಿಯ ಹಾದಿಯಲ್ಲಿ ಸಾಗುವಾಗ ಸಹಜವಾಗಿ ಟೀಕೆ ಟಿಪಣಿ ಎದುರಾಗುತ್ತಿದ್ದು ಇದನ್ನು ಸಕಾರಾತ್ಮಕವಾಗಿ ಎದಿರಿಸುವ ಮೂಲಕ ಗುರಿ ಮುಟ್ಟಬೇಕು . ಟೀಕೆಗೆ ಸಾಧನೆ ಉತ್ತರವಾಗಬೇಕಿದ್ದು , ಮನುಷ್ಯ ಸುಲಭವಾಗಿ ಸಾವನ್ನು ಒಪ್ಪಬಹುದೇ ವಿನಃ ಸೋಲಲ್ಲ ಎಂದು ಕಿವಿಮಾತು ಹೇಳಿದರು.
ಠೇವಣಿ ಸಂಗ್ರಹ ಗುರಿ ಸಾಧನೆ ಮಾಡಿ ಡಿಸಿಸಿ ಬ್ಯಾಂಕಿನಿಂದ ಬಿಡುಗಡೆ ಮಾಡಿರುವ ಬಾಂಡ್ನ್ನು ಮಾರಾಟ ಮಾಡಲು ಸಿಬ್ಬಂದಿ ಮುಂದಾಗಬೇಕಿದ್ದು ದಿನವೊಂದಕ್ಕೆ ಪತಿ ಶಾಖೆಯಿಂದ ಕನಿಷ್ಠ ೫೦ ಬಾಂಡ್ ಬಿಕರಿ ಆಗಬೇಕು . ಪ್ರತಿ ಸೊಸೈಟಿಗೂ ಠೇವಣಿ ಸಂಗ್ರಹದ ಗುರಿಯನ್ನು ಬ್ಯಾಂಕ್ ವ್ಯವಸ್ಥಾಪಕರು ನೀಡಬೇಕಿದ್ದು ೧೦ ಕೋಟಿ ರೂ . ಸಾಲಕ್ಕೆ ೧ ಕೋಟಿ ರೂ ಡಿಪಾಸಿಟ್ ಆಗಲೇಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕಿನ ೧೨೫ ಸಿಬ್ಬಂದಿ ಸಹಾ ವೈಯಕ್ತಿಕವಾಗಿ ಠೇವಣಿ ಸಂಗ್ರಹ ಮಾಡುವ ಮೂಲಕ ಗುರಿ ಸಾಧನೆ ಮಾಡಬೇಕು ಎಂದು ಸೂಚಿಸಿದ ಅಧ್ಯಕ್ಷರು , ಸಾಲಕ್ಕಾಗಿ ಮಾತ್ರ ಡಿಸಿಸಿ ಬ್ಯಾಂಕ್ ಎಂಬ ಅಪವಾದ ದೂರಮಾಡಿ ಎಂದು ಸೂಚಿಸಿದರು. ಸೊಸೈಟಿಗಳು ಸದಾ ಕ್ರಿಯಾಶೀಲವಾಗಿರಲು ಈಗಾಗಲೇ ದೇಶಿಸ್ಕಿಲ್ಸ್ ಸಂಸ್ಥೆ ಆಶ್ರಯದಲ್ಲಿ ಪ್ಯಾಕ್ಗಳು ಶೂನ್ಯ ಬಂಡವಾಳದೊಂದಿಗೆ ಅಗತ್ಯವಸ್ತುಗಳ ಮಾರಾಟದ ಮಾಲ್ ಆರಂಭಕ್ಕೂ ಸೂಚಿಸಿದ ಅದು ಕಾರ್ಯಗತವಾದರೆ ತಾಯಂದಿರು , ರೈತರು , ಸಾರ್ವಜನಿಕರೊಂದಿಗೆ ಸೊಸೈಟಿ ಸಂಪರ್ಕ ಹೆಚ್ಚಲಿದೆ . ಠೇವಣಿ ಹರಿದು ಬರಲು ಸಹಕಾರಿಯೂ ಆಗಲಿದೆ ಎಂದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂ ಖಲೀಮುಲ್ಲಾ ಅಧಿಕಾರಿಗಳಾದ ಹುಸೇನ್ ದೊಡ್ಡಮನಿ , ಅರುಣ್ಕುಮಾರ್ , ಶುಭಾ , ಪದ್ಮಮ್ಮ , ಬೇಬಿ ಶಾಮಿಲಿ , ಬಾಲಾಜಿ , ಜಬ್ಬಾರ್ ಮತ್ತಿತರ ಸಿಬ್ಬಂದಿ ಹಾಜರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.