ಮಂಗಳೂರು (www.vknews.com) : ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಮಂಗಳೂರು ವಿಶ್ವವಿದ್ಯಾಲಯವು ದಿನ ಕಳೆದಂತೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಹಲವಾರು ಸಮಸ್ಯೆಗಳ ಆಗರವಾಗಿ ಪರಿಣಮಿಸುತ್ತಿದೆ.
ದೇಶ, ವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಮಂಗಳೂರು ವಿಶ್ವವಿದ್ಯಾಲಯದ ಅವ್ಯವಸ್ಥೆಗಳ ಬಗ್ಗೆ ರಾಜ್ಯಪಾಲರು ಕುಲಪತಿಗಳ ಸಭೆಯಲ್ಲಿ ಪ್ರಶ್ನಿಸಿ ಸಮಸ್ಯೆಯನ್ನು ಸರಿಪಡಿಸಲು ಸೂಚಿಸಿದ ಘಟನೆ ನಡೆದಿದೆ. ಇವುಗಳಿಗೆಲ್ಲ ಯಾವುದೇ ರೀತಿಯ ಅಭಿವೃದ್ಧಿ ಬಗ್ಗೆ ಗಮನ ಹರಿಸದ ಸಿಂಡಿಕೇಟ್ ಸದಸ್ಯರು ಮತ್ತು ಕುಲಪತಿ ಇದಕ್ಕೆ ನೇರ ಹೊಣೆಯಾಗಿದ್ದಾರೆ.
ಅವ್ಯವಹಾರ ಮತ್ತು ಭ್ರಷ್ಟಾಚಾರ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ಸರ್ಕಾರ ಇದರ ಬಗ್ಗೆ ಸರಿಯಾದ ತನಿಖೆ ನಡೆಸಲು ಸಮಿತಿ ರಚಿಸಬೇಕು. ಆ ಮೂಲಕ ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯಲು ಈ ಮೂಲಕ ಆಗ್ರಹಿಸುತ್ತಿದ್ದೇವೆ.
ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಈ ಕೆಳಗಿನಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳನ್ನು ಶೀಘ್ರದಲ್ಲಿಯೇ ಬಗೆಹರಿಹರಿಸಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ವಿವಿ ಘಟಕದ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು. ಕ್ಯಾಂಪಸ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾ ಮುಖಂಡ ರಿಯಾಝ್ ಅಂಕತ್ತಡ್ಕ, ಮಂಗಳೂರು ನಗರಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ವಿವಿ ಮುಖಂಡ ಮುನೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಬೇಡಿಕೆಗಳು :-
-ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ
ಯುಜಿಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 330 ಲ್ಯಾಪ್ಟಾಪ್ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆದಿದ್ದರು. ಆದರೆ ಅದನ್ನು ಬದಿಗೊತ್ತಿ ಕಿಯೋನಿಕ್ಸ್ ಸಂಸ್ಥೆಯಿಂದ ಲ್ಯಾಪ್ಟಾಪ್ ಖರೀದಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಕೇವಲ 62,950 ರೂ ಬೆಲೆಯ ಲ್ಯಾಪ್ಟಾಪ್ ಅನ್ನು ಕಿಯೋನಿಕ್ಸ್ ಸಂಸ್ಥೆಯಿಂದ 99,750 ರೂ ಕೊಟ್ಟು ಖರೀದಿಸಿರುವುದು ಅಕ್ರಮವಾಗಿದ್ದು, ಒಂದು ಬಾರಿ ಸಿಂಡಿಕೇಟ್ ನಿರ್ಣಯ ಪಡೆದು ಕನಿಷ್ಠ ದರ ಪಟ್ಟಿ ಅಂಗೀಕರಿಸಿ, ಬಳಿಕ ಏಕಾಏಕಿ ಸಿಂಡಿಕೇಟ್ ಸಮಿತಿಯ ಗಮನಕ್ಕೇ ಬಾರದೆ ಟೆಂಡರ್ ರದ್ದುಗೊಳಿಸಿ ಹಿಂಬಾಗಿಲಿನ ಮೂಲಕ ಅವ್ಯವಹಾರ ನಡೆಸಿದ್ದು, ಇದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಪದವಿ ಪರೀಕ್ಷಾ ಫಲಿತಾಂಶ ಗೊಂದಲ
ಪದವಿ ಪರೀಕ್ಷೆಗಳು ನಡೆದು ತಿಂಗಳುಗಳು ಕಳೆದಿದ್ದರೂ, ಫಲಿತಾಂಶ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ವೆಬ್ಸೈಟ್ ನಲ್ಲಿ ಪ್ರಕಟವಾದ ಫಲಿತಾಂಶವು ದೋಷಪೂರಿತವಾಗಿದೆ ಮತ್ತು ಕೆಲವೊಂದು ವಿಷಯದ ಅಂಕದ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ತೋರಿಸುತ್ತಿದೆ. ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಣವನ್ನು ಖರ್ಚುಮಾಡಿಕೊಂಡು ದಿನನಿತ್ಯ ಕಾಲೇಜು-ವಿಶ್ವವಿದ್ಯಾಲಯ ಅಲೆದಾಡುತ್ತಿದ್ದಾರೆ. ಪದವಿ ಮುಗಿಸಿ ಉದ್ಯೋಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಲು ಪರದಾಡುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಇದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಅಸಡ್ಡೆಯ ಉತ್ತರವನ್ನು ನೀಡುತ್ತಿದ್ದಾರೆ. ಇದು ಮಂಗಳೂರು ವಿವಿ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿದೆ.
-ಇನ್ನೂ ಪ್ರಕಟಗೊಳ್ಳದ ಸ್ನಾತಕೋತ್ತರ ಪರೀಕ್ಷೆ ಫಲಿತಾಂಶ
ದ್ವಿತೀಯ ಸ್ನಾತಕೋತ್ತರ ತರಗತಿಗಳು ಪ್ರಾರಂಭಗೊಂಡು ತಿಂಗಳು ಕಳೆದರೂ ಪ್ರಥಮ ಹಾಗೂ ದ್ವಿತೀಯ ವರ್ಷದ ಫಲಿತಾಂಶ ಇನ್ನೂ ಪ್ರಕಟಗೊಲ್ಲದೇ ಇರುವುದು ಮಂಗಳೂರು ವಿವಿಯ ಬೇಜವಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಖಾಸಗೀ ಕಾಲೇಜುಗಳಲ್ಲಿ ಪ್ರಥಮ ಸ್ನಾತಕೋತ್ತರ ತರಗತಿಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಆದರೆ ವಿವಿ ಯಲ್ಲಿ ಇನ್ನೂ ಪ್ರಾರಂಭಗೊಂಡಿಲ್ಲ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಕೆಲವು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದುಕೊಂಡರೂ ಮಾರ್ಕ್ ಕಾರ್ಡ್ ಇಲ್ಲದೇ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎನ್ಇಪಿ ಆಧಾರಿತ ನಾಲ್ಕು ವರ್ಷಗಳ ಪದವಿ ತರಗತಿಗಳು ಆರಂಭವಾಗಿದ್ದು, ಆದರೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಕ್ರಮ ಪ್ರಕಟಗೊಳ್ಳದೆ ಇರುವುದು ತರಾತುರಿಯಲ್ಲಿ ಜಾರಿಗೆ ತಂದಿರುವ ಎನ್ಇಪಿ ಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. NCF ನ ಪ್ರಕಾರ ಪಠ್ಯಕ್ರಮ ಸಂಪೂರ್ಣವಾಗಿ ತಯಾರಾಗಲು ಇನ್ನೂ ಸಮಯಾವಕಾಶದ ಅಗತ್ಯವಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಗೊಂದಲ ನಿರ್ಮಾಣವಾಗಿದೆ.
ವಿವಿಯಲ್ಲಿ ಪದವಿ ತರಗತಿಗಳನ್ನು ನಡೆಸಲು ಕೊಠಡಿಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಎನ್ಇಪಿ ಯನ್ನು ಬಹಳ ಆತುರದಿಂದ ಜಾರಿಗೆ ತರಲಾಗಿದ್ದು, ಆದರೆ ಬೇಕಾದ ಮೂಲಸೌಕರ್ಯವನ್ನು ಒದಗಿಸಲು ವಿವಿಗೆ ಸಾಧ್ಯವಾಗಿಲ್ಲ, ಪದವಿಯ ಕೆಲವೊಂದು ತರಗತಿಗಳು ಯಕ್ಷಗಾನ ಕಲಾಮಂದಿರದಲ್ಲಿ ನಡೆಯುತ್ತಿದೆ. ಮೂಲ ಸೌಕರ್ಯದ ಇಂತಹ ಸಮಸ್ಯೆಗಳನ್ನು ವಿವಿಯು ಶೀಘ್ರ ಬಗೆಹರಿಸಲಿ, ಸರ್ಕಾರವನ್ನು ಮೆಚ್ಚಿಸಲು ಎನ್ಇಪಿಯಂತಹ ಅಸಂವಿಧಾನಿಕ ನೀತಿಗಳ ಜಾರಿ ಮಾಡುವ ಮುಖಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.