ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಪ್ರಸಿದ್ಧ ಧಾರ್ಮಿಕ ಸಂದರ್ಶನ ಕೇಂದ್ರವಾದ ಮಾಡನ್ನೂರು ಮಖಾಂ ಶರೀಫಿನ ಉರೂಸ್ ಸಮಾರಂಭವು ಫೆಬ್ರವರಿ 13 ರಿಂದ ಆರಂಭಗೊಂಡು 20ರ ತನಕ ಮಾಡನ್ನೂರು ಶಹೀದಿಯಾ ನಗರದಲ್ಲಿ ನಡೆಯಲಿದೆ ಎಂದು ಖತೀಬರಾದ ಸಿರಾಜುದ್ದೀನ್ ಫೈಝಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾಡನ್ನೂರಿನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾತ್ಮರುಗಳ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವು ಮಖಾಂ ಝಿಯಾರತ್, ಧ್ವಜಾರೋಹಣ, ಧಾರ್ಮಿಕ ಮತ ಪ್ರವಚನ, ನೂರೇ ಅಜ್ಮೀರ್, ಖತ್ಮುಲ್ ಕುರ್ಆನ್ ದುಆಃ ಮಜ್ಲಿಸ್,ಮೌಲಿದ್ ಪಾರಾಯಣ,ಆಂಬ್ಯಲೆನ್ಸ್ ಲೋಕಾರ್ಪಣೆ, ಅನ್ನದಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
ದಿನಾಂಕ 13 ರಂದು ಆದಿತ್ಯವಾರ ಬೆಳಗ್ಗೆ ಗಂಟೆ 10ಕ್ಕೆ ಜಮಾಅತ್ ಅಧ್ಯಕ್ಷರಾದ ಕೆ.ಕೆ. ಇಬ್ರಾಹೀಂ ಹಾಜಿ ಯವರು ಧ್ವಜಾರೋಹಣ ನಿರ್ವಹಿಸಲಿದ್ದು ಸ್ಥಳೀಯ ಖತೀಬರಾದ ಸಿರಾಜುದ್ದೀನ್ ಫೈಝಿ ದರ್ಗಾ ಝಿಯಾರತ್ ನೇತೃತ್ವ ವಹಿಸಲಿದ್ದಾರೆ. ಎಂಟು ದಿನಗಳ ಕಾಲ ನಡೆಯುಲಿರುವ ಧಾರ್ಮಿಕ ಮತಪ್ರವಚನದ ಉದ್ಘಾಟನೆಯು ಅಂದು ರಾತ್ರಿ ಮಗ್ರಿಬ್ ನಮಾಜಿನ ಬಳಿಕ ನಡೆಯಲಿದ್ದು, ಪುತ್ತೂರು ಕೇಂದ್ರ ಮಸೀದಿ ಮುದರ್ರಿಸರಾದ ಬಹು ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಲ್ ಉದ್ಘಾಟಿಸಲಿದ್ದಾರೆ, ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ರವರು ಅಧ್ಯಕ್ಷತೆ ವಹಿಸಲಿದ್ದು, ಪ್ರಾಂಶುಪಾಲರಾದ ಬಹು ಅಡ್ವೊಕೇಟ್ ಹನೀಫ್ ಹುದವಿಯವರು ಪ್ರಾಸ್ತಾವಿಕ ಬಾಷಣ ಮಾಡಲಿದ್ದಾರೆ. ಖ್ಯಾತವಾಗ್ಮಿ ಬಹು! ಅಶ್ರಫ್ ರಹ್ಮಾನಿ ಕಾಸರಗೋಡು ರವರು “ಸತ್ಕರ್ಮಗಳೊಂದಿಗೆ ಸೃಷ್ಟಿಕರ್ತನೆಡೆಗೆ” ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ದಿನಾಂಕ 14 ರಂದು ಅಸ್ಸಯ್ಯಿದ್ ಬುರ್ಹಾನ್ ತಂಙಳ್ ರವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು ಖ್ಯಾತ ವಾಗ್ಮಿಗಳಾದ *ಬಹು ಹನೀಫ್ ನಿಝಾಮಿಯವರು “ಶಿಥಿಲ ಗೊಳ್ಳುತ್ತಿರುವ ಸಂಬಧಗಳು” ಎಂಬ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ.
ದಿನಾಂಕ 15 ರಂದು ಬಹು ಸಯ್ಯಿದ್ ಝೈನುಲ್ ಆಬಿದೀನ್ ಜಿಪ್ರಿ ತಂಙಲ್ ಬೆಳ್ತಂಗಡಿ ದುಆಃ ನೇತೃತ್ವ ವಹಿಸಲಿದ್ದು ಪ್ರಸಿದ್ದ ವಿದ್ವಾಂಸ *ಬಹು ಅಲ್ ಹಾಫಿಳ್ ಮಸ್ ಊದ್ ಸಖಾಫಿ ಗೂಡಲ್ಲೂರು “ಅರಿಯಿರಿ ಈಮಾನಿನ ಮಾಧುರ್ಯ” ಎಂಬ ವಿಷಯದಲ್ಲಿ ಭಾಷಣ ಮಾಡಲಿದ್ದಾರೆ.
ದಿನಾಂಕ 16 ರಂದು “ನೂರೇ ಅಜ್ಮೀರ್” ಬೃಹತ್ ಆಧ್ಯಾತ್ಮಿಕ ಸಂಗಮವು ನಡೆಯಲಿದ್ದು ಖ್ಯಾತವಿದ್ವಾಂಸ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಮುನ್ನಡೆಸಲಿದ್ದಾರೆ. ಅಹ್ಲ್ ಬೈತ್ ಪ್ರಮುಖರಾದ ಬಹು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುಆಃ ನಿರ್ವಹಿಸಲಿದ್ದಾರೆ.
ಆಂಬುಲೆನ್ಸ್ ಲೋಕಾರ್ಪಾಣೆ: ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಇದರ ಆಶ್ರಯದಲ್ಲಿ ಸಾರ್ವಜನಿಕರ ತುರ್ತು ಅಗತ್ಯಗಳಿಗಾಗಿ ಅಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲಿದ್ದು, ಇದರ ಲೋಕಾರ್ಪಣೆಯು ನೂರೇ ಅಜ್ಮೀರ್ ಸಂಗಮದ ಬಹು ವಲಿಯ್ಯುದ್ದೀನ್ ಫೈಝಿ ನಿರ್ವಹಿಸಲಿದ್ದಾರೆ.
ದಿನಾಂಕ 17ರಂದು ಬಹು ಅಸ್ಸಯ್ಯಿದ್ ಮುಹಮ್ಮದ್ ಅಲವಿ ತಂಙಳ್ ವಾಲೆಮುಂಡೋವು ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದು, ಪ್ರಖ್ಯಾತವಾಗ್ಮಿ ಅನ್ವರ್ ಮುಹಿಯುದ್ದೀನ್ ಹುದವಿ ಮಲಪ್ಪುರಂ ರವರು ಮನವು ಮದೀನದತ್ತ ಎಂಬ ವಿಷಯದ ಬಗ್ಗೆ ಪ್ರವಚನ ನೀಡಲಿದ್ದಾರೆ.
ದಿನಾಂಕ 18 ರಂದು ಪ್ರಖ್ಯಾತವಾಗ್ಮಿ ಬಹು ನೌಫಲ್ ಸಖಾಫಿ ಕಳಸ ರವರು “ಅರ್ಥ ಕಳೆದು ಕೊಳ್ಳುತ್ತಿರುವ ಆಚಾರಗಳೂ, ಮೇಲೈಸುತ್ತಿರುವ ಅನಾಚಾರಗಳು” ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.
ದಿನಾಂಕ 19 ರಂದು ಸಾಯಂಕಾಲ “ಖತ್ಮುಲ್ ಕುರ್ ಆನ್ ದುಆಃ ಮಜ್ಲಿಸ್” ನಡೆಯಲಿದ್ದು ಬಹು ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ರಾಮಂದಳಿ ನೇತೃತ್ವ ನೀಡಲಿದ್ದಾರೆ.
ಅದ್ಭುತ ಕುರ್ಆನ್ ಪಾರಾಯಣ:- ಮಗ್ರಿಬ್ ನಮಾಝಿನ ಬಳಿಕ ಹುಟ್ಟು ಕುರುಡರೂ ವಿಶ್ವ ವಿಖ್ಯಾತ ಕುರ್ಆನ್ ಪಾರಾಯಣಗಾರರೂ ಆದ, ಬಹು ಹಾಫಿಲ್ ಅನೀಸುರ್ರಹ್ಮಾನ್ ಬೈಂದೂರಿಯವರಿಂದ ಅದ್ಭುತ ಶೈಲಿಯ ಕುರ್ಆನ್ ಪಾರಾಯಾಣ ನಡೆಯಲಿದ್ದು. ಮಕ್ಕ,ಮದೀನ ಮಸೀದಿಗಳ ಪ್ರಖ್ಯಾತ ಇಮಾಮರುಗಳ ಹಾಗೂ ಜಗತ್ತಿನ ಖ್ಯಾತ ಕುರ್ಆನ್ ಪಾರಾಯಣಗಾರರ ಶೈಲಿಯಲ್ಲಿ ಕುರ್ಆನ್ ಪಾರಾಯಣ ನಡೆಸಲಿದ್ದಾರೆ. ಖ್ಯಾತ ಭಾಷಣ ಗಾರರಾದ ಬಹು ಹಾಫಿಲ್ ಈ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ “ಕಬರ್ ಕರೆಯುತ್ತಿದೆ” ಎಂಬ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ.
ದಿನಾಂಕ 20 ರಂದು ಮಗ್ರಿಬ್ ನಮಾಝಿನ ಬಳಿಕ ಉರೂಸು ಸಮಾರಂಭದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು ಪ್ರತಿಷ್ಟಿತ ‘ಸಮಸ್ತ’ ಉಲಮಾ ಒಕ್ಕೂಟದ ಅಧ್ಯಕ್ಷರೂ ಮಾಡನ್ನೂರು ಮೊಹಲ್ಲಾದ ಘನವೆತ್ತ ಖಾಝಿಗಳೂ ಆದ ಬಹು ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಜಿಪ್ರಿ ಮುತ್ತುಕೋಯ ತಂಙಳ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಬಹು ಸಯ್ಯಿದ್ ಅಲಿ ತಂಙಳ್ ಕುಂಬೋಳ್ ದುಆಃ ನಡೆಸಲಿದ್ದು ,ಜಮಾಅತ್ ಅಧ್ಯಕ್ಷರಾದ ಬಹು ಕೆ.ಕೆ ಇಬ್ರಾಹೀಂ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ ಅಂತರಾಷ್ಟ್ರೀಯ ಖ್ಯಾತಿಯ ಮತ ಪ್ರವಚನಕಾರರಾದ ಬಹು ನಿಝಾಮುದ್ದೀನ್ ಅಝ್ಹರಿ ಕುಮ್ಮನಂ ರವರು “ಸಜ್ಜನರ ಹಾದಿ” ಎಂಬ ವಿಷಯದ ಕುರಿತು ಮತ ಪ್ರವಚನ ನೀಡಲಿದ್ದಾರೆ.
ಎಲ್ಲಾ ಕಾರ್ಯಕ್ರಮಗಳಲ್ಲಿ ಅಹ್ಲ್ ಬೈತಿನ ಪ್ರಮುಖರೂ, ಖ್ಯಾತ ಉಲಮಾ,ಉಮರಾ ನೇತಾರರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಂದು ರಾತ್ರಿ ಅನ್ನದಾನವೂ ನಡೆಯಲಿದೆ ಎಂದು ಅವರು ವಿವರ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಡನ್ನೂರು ಮಸೀದಿ ಅಧ್ಯಕ್ಷರಾದ ಕೆ.ಕೆ ಇಬ್ರಾಹೀಂ ಹಾಜಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್, ಜಮಾಅತ್ ಕಮಿಟಿ ಉಪಾಧ್ಯಕ್ಷರಾದ ಸಿ.ಹೆಚ್. ಅಬ್ದುಲ್ ಅಝೀಝ್, ಪ್ರಧಾನ ಕಾರ್ಯದರ್ಶಿಯಾದ ಎನ್. ಅಬ್ದುಲ್ ಖಾದರ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.