ದುಬೈ (www.vknews.in) : ಮುಸ್ಲಿಂ ಸಮುದಾಯವನ್ನು ಕಣ್ಣೀರಿನಲ್ಲಿ ಮುಳುಗಿಸಿದ ದುಃಖ ವಾರ್ತೆ ಅಸ್ಸಯ್ಯದ್ ಹೈದರ್ ತಂಗಳ್ ರವರ ವಿದಾಯವು ದಾರುನ್ನೂರಿನ ಪಾಲಿಗೆ ತುಂಬಲಾರದ ನಷ್ಟವಾಗಿದೆ. ದಾರುನ್ನೂರ್ ವಿದ್ಯಾಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮವು 2013 ರಲ್ಲಿ ಅಸ್ಸಯ್ಯದ್ ಹೈದರ್ ಅಲಿ ಶಿಹಾಬ್ ತಂಗಳ್ ರವರ ದಿವ್ಯ ಹಸ್ತದಿಂದ ನೆರವೇರಿದ್ದು, ಬಳಿಕದ ದಿನಗಳಲ್ಲಿ ಕಾಮಗಾರಿ ಅತ್ಯಂತ ತ್ವರಿತಗತಿಯಲ್ಲಿ ಮುಂದುವರಿದಿದ್ದು 2017 ರಲ್ಲಿ ಮಸ್ಜಿದ್ ಬಹ್ರ್ ಅನ್ನೂರ್ ಭವ್ಯ ಮಸೀದಿಯು ಸಹ ಅಸ್ಸಯ್ಯದ್ ಹೈದರ್ ಅಲಿ ತಂಗಳ್ ರವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿರುವುದು ತಂಗಳ್ ರವರ ಸಾನಿಧ್ಯ ದಾರುನ್ನೂರ್ ವಿದ್ಯಾ ಸಂಸ್ಥೆಯೊಂದಿಗೆ ಎಷ್ಟು ನಿಕಟವಾಗಿತ್ತು ಎನ್ನುವುದಕ್ಕೆ ಕೈಗನ್ನಡಿಯಾಗಿರುತ್ತದೆ. ದಾರುನ್ನೂರ್ ಕೇಂದ್ರ ಸಮಿತಿಯ ಚೀಫ್ ಡೈರೆಕ್ಟರ್ ಆಗಿ ತಂಗಳ್ ರವರನ್ನು ನೇಮಿಸಿದ್ದು ದಾರುನ್ನೂರಿನ ಪಾಲಿಗೆ ಅಶ್ವ ಬಲವನ್ನು ನೀಡಿತ್ತು.
ಅಸ್ಸಯ್ಯದ್ ಹೈದರ್ ಅಲಿ ಶಿಹಾಬ್ ತಂಗಳ್ ರವರು ಮಿತ ಭಾಷಿಯಾಗಿದ್ದರು. ನಡೆ ನುಡಿ ವ್ಯವಹಾರ ಉಡುಗೆ ತೊಡುಗೆ ಮತ್ತು ಆಹಾರದ ವಿಷಯದಲ್ಲಿ ಸರಳತೆಯನ್ನು ಅನುಸರಿಸುತ್ತಿದ್ದರು. ಒಂದು ಬಿಳಿ ಲುಂಗಿ ಮತ್ತು ಬಿಳಿ ಶರ್ಟ್ ಕೈಯಲ್ಲಿ ವಾಚ್ ಕಿಸೆಯಲ್ಲಿ ಪೆನ್ ತಲೆಯಲ್ಲಿ ಟೊಪ್ಪಿ ಕಾಲಲ್ಲಿ ಚರ್ಮದ ಚಪ್ಪಲಿ ಇದು ದೇಶದ ಒಳಗಡೆ ನೆಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಧರಿಸುವ ಅವರ ಉತ್ತಮ ಉಡುಗೆಯ ರೀತಿಯಾಗಿತ್ತು. ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಸೂಟ್ ಧರಿಸುತ್ತಿದ್ದರು. ಅವರ ಮನೆಯ ಬಾಗಿಲು ಯಾವಾಗಲೂ ಎಲ್ಲರಿಗೂ ತೆರೆದಿತ್ತು, ಜಾತಿ ಮತ ಭೇದವಿಲ್ಲದೆ ಎಲ್ಲರಲ್ಲೂ ನಗುಮುಖದಿಂದ ಮಾತನಾಡುತ್ತಿದ್ದರು. ಅಪರಿಚರಾದ ನಮ್ಮಿಂದ ತಂಗಳ್ ರವರಿಗೆ ತೊಂದರೆ ಆಗಬಹುದೋ ಎಂದು ಅವರ ಹತ್ತಿರ ಹೋಗಲು ಒಂದು ರೀತಿಯ ಭಯ ಆಗುತ್ತಿತ್ತು. ಆದರೆ ಹತ್ತಿರ ಹೋದರೆ ಆತ್ಮೀಯ ಮಿತ್ರನಂತೆ ಬೆರೆಯುವ ಸ್ವಭಾವ ಅವರದ್ದಾಗಿತ್ತು. ಯಾರಲ್ಲೂ ಗದರಿ ಮಾತನಾಡಿದ ಅಥವಾ ಮುಖ ಸಿಂಡರಿಸಿದ ಅಥವಾ ಇನ್ನೊಬ್ಬರ ಬಗ್ಗೆ ಅಲ್ಲ ಸಲ್ಲದ ಮಾತನ್ನು ಆಡುವ ಅಥವಾ ಅದನ್ನು ಕೇಳುವ ಉತ್ಸಾಹ ತಂಗಳ್ ರವರಿಗೆ ಇರಲಿಲ್ಲ. ಲಕ್ಷಾಂತರ ಜನರ ನೇತಾರರಾಗಿದ್ದರೂ ಸಾಮಾನ್ಯ ಜನರಲ್ಲಿ ಸಾಮಾನ್ಯರಾಗಿ ವರ್ತಿಸುತ್ತಿದ್ದರು. ದಾರುನ್ನೂರ್ ಕಾರ್ಯಕ್ರಮದ ಸಲುವಾಗಿ ತಂಗಳ್ ರವರನ್ನು ದುಬೈ ಹೋಟೆಲೊಂದರಲ್ಲಿ ದಾರುನ್ನೂರ್ ಪ್ರಮುಖರೊಂದಿಗೆ ಭೇಟಿ ಕೊಟ್ಟಾಗ ಅದೆಷ್ಟು ಆತ್ಮೀಯತೆಯೊಂದಿಗೆ ಬರ ಮಾಡಿಕೊಂಡು ಮಾತನಾಡಿದರೆಂದರೆ ಅದನ್ನು ಊಹಿಸಲೂ ಅಸಾಧ್ಯ. ಅದೇ ರೀತಿ ಕಾಶಿಪಟ್ಣದಲ್ಲಿ ದಾರುನ್ನೂರಿನ ಮಸ್ಜಿದ್ ಬಹ್ರ್ ಅನ್ನೂರ್ ಉದ್ಘಾಟನೆಗೆ ತಲುಪಿದ್ದು ಅತ್ಯಂತ ಅದ್ಭುತವಾಗಿತ್ತು. ತಂಗಳ್ ರವರು ಬರುತ್ತಾರೋ ಇಲ್ಲವೋ ಎಂದು ಎಲ್ಲರೂ ಚಿಂತಾಕ್ರಾಂತರಾಗಿದ್ದಾಗ ತಕ್ಷಣ ಕಾರು ಬಂದು ನಿಂತಿತು. ತಂಗಳ್ ಇಳಿದು ಬಂದರು. ಎಲ್ಲರೂ ಹರ್ಷೋದ್ಘಾರವನ್ನು ಮೊಳಗಿಸಿದರು.
ನಾವರಿತಂತೆ ತಂಗಳ್ ರವರು ಒಬ್ಬ ರಾಜಕೀಯ ನೇತಾರರು ಮಾತ್ರ ಆಗಿರಲಿಲ್ಲ . ಅವರೋರ್ವ ಮಹಾ ವಿದ್ವಾಂಸರಾಗಿದ್ದರು. ಸಾವಿರಕ್ಕೂ ಹೆಚ್ಚು ಜಮಾಅತಿಗೆ ಖಾಝಿಯಾಗಿದ್ದರು. ವಿಶ್ವ ವಿಖ್ಯಾತ ಉಲಮಾ ಒಕ್ಕೂಟ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಇದರ ಉಪಾದ್ಯಕ್ಷರೂ ಆಗಿದ್ದರು . ಯಾವ ಮಸೀದಿಯ ಶಿಲಾನ್ಯಾಸ ಮಾಡಬೇಕಿದ್ದರೂ ತಂಗಳ್ ರವರ ಸಾನಿಧ್ಯವನ್ನು ಜನರು ಬಯಸುತ್ತಿದ್ದರು. ಯಾರನ್ನೂ ನಿರಾಶೆ ಮಾಡಿದ ಚರಿತ್ರೆ ಇಲ್ಲ. ವರ್ಷಗಳಿಗಿಂತ ಮೊದಲೇ ದಿನಾಂಕವನ್ನು ಪಡೆಯುವ ಸನ್ನಿವೇಶ ಬರುತ್ತಿತ್ತು. ಪ್ರವಾದಿಯವರ ನುಡಿಯಂತೆ ಮೌತುಲ್ ಆಲಿಮಿ ಮೌತುಲ್ ಆಲಂ. ಒಬ್ಬ ವಿದ್ವಾಂಸನ ಮರಣ ಅದು ಲೋಕದ ಮರಣದಂತೆ. ಅದೇ ರೀತಿ ಶರಣರ ಬಾಳು ಮರಣದಲ್ಲಿ ಕಾಣು ಎಂಬ ಗಾದೆಗೆಯು ತಂಗಳ್ ರವರಿಗೆ ಅತ್ಯಂತ ನಿಖಟ ಉದಾಹರಣೆಯಾಗಿರುವುದು ಅವರ ಮರಣದ ಬಳಿಕ ಜನ ಸಾಮಾನ್ಯರಿಗೆ ಮನದಟ್ಟಾಗಿರುತ್ತದೆ. ರಾಜಕೀಯರಂಗದಲ್ಲಿ ಭೂಮಿ ಅಲ್ಲೋಲ ಕಲ್ಲೋಲವಾದರೂ ತಂಗಳ್ ರವರು ತುಟಿ ಪಿಟಿಕ್ ಎನ್ನುತ್ತಿರಲಿಲ್ಲ. ಕೊನೆಯಲ್ಲಿ ಒಂದೇ ತೀರ್ಮಾನ. ಅದೇ ತೀರ್ಪು. ಬಳಿಕ ಚರ್ಚೆಗೆ ಅವಕಾಶ ನೀಡುತ್ತಿರಲಿಲ್ಲ. ರಾಜಕೀಯ ಎದುರಾಳಿಗಳು ತಂಗಳ್ ರವರನ್ನು ಹಲವಾರು ಸಲ ನಿಂದ್ಯ ಪದಗಳನ್ನು ಬಳಸಿ ಟೀಕಿಸಿದಾಗಲೂ ಯಾವೊಬ್ಬನಿಗೂ ಉತ್ತರ ನೀಡದೆ ತನ್ನ ಸಂಸ್ಕೃತಿಯ ಉನ್ನತಿಯನ್ನು ಎಲ್ಲರಿಗೂ ಮನವರಿಕೆ ಮಾಡುತ್ತಿದ್ದರು. ಅಂತಹ ಮಹಾ ವ್ಯಕ್ತಿತ್ವವನ್ನು ಕಳೆದು ಕೊಂಡ ನಾವೆಲ್ಲರೂ ಹತಭಾಗ್ಯರು ಎಂದಷ್ಟೇ ಹೇಳಬಹುದು
ಮುಸ್ಲಿಂ ಸಮುದಾಯವನ್ನು ಅನಾಥರನ್ನಾಗಿಸಿ ಶಾಶ್ವತ ಲೋಕದತ್ತ ಪಯಣಿಸುವಾಗ ಆ ಮುಖದಲ್ಲಿ ಮಂದಹಾಸ ಮಾತ್ರಾ ಎದ್ದು ಕಾಣುತ್ತಿತ್ತು. ಅಂತ್ಯ ಪ್ರವಾದಿ ಮುತ್ತು ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಪೌತ್ರ ಇಂತಹ ಹೃದಯ ವೈಶಾಲಿಯಾಗಿ ಜನಾನುರಾಗಿಯಾಗಿರುವಾಗ ಆ ಪ್ರವಾದಿಯವರು ಯಾವ ರೀತಿ ಅಂದಿನ ಕಾಲದ ಅಸಂಸ್ಕೃತಿ ಹಾಗೂ ಕ್ರೂರ ಸಮುದಾಯವನ್ನು ಪ್ರಪಂಚದ ಅತ್ಯಂತ ಸುಸಂಸ್ಕೃತ ಸಮುದಾಯವಾಗಿ ಮಾರ್ಪಡಿಸಲು ಅದೆಷ್ಟು ಭವಣೆಯನ್ನು ಮತ್ತು ತಾಳ್ಮೆಯನ್ನು ವಹಿಸಿರಬಹುದು ಎಂಬುವುದನ್ನು ನಮ್ಮಿಂದ ಊಹಿಸಲು ಸಾಧ್ಯವಾಗಬಹುದು . ತಂಗಳ್ ರವರ ಇತಿಹಾಸ ಬರೆಯಲು ನಮ್ಮಿಂದ ಸಾಧ್ಯವಿಲ್ಲ. ಆದರೂ ಒಂದಂತೂ ನಿಜ ತನ್ನ 74 ವರ್ಷಗಳ ಕಾಲ ಜನರ ಸೇವೆಯ ವಿನಃ ಸ್ವಾರ್ಥ ಲಾಭಕ್ಕಾಗಿ ತಂಗಳ್ ರವರು ಏನನ್ನೂ ಸಂಪಾದಿಸಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮ್ ರವರು ಹೇಳುತ್ತಾರೆ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಹತ್ತು ಬಾಯಿ ಅವನ ಗುಣಗಾನ ಮಾಡಿದರೆ ಸ್ವರ್ಗದ ಬಾಗಿಲು ಅವನ ಪಾಲಿಗೆ ತೆರೆದಂತೆ. ಅದೇ ರೀತಿ ಹತ್ತು ಬಾಯಿ ಅವನ ಕೊರತೆಯನ್ನು ಹೇಳಿ ದೂಷಿಸಲಾಂಭಿಸಿದರೆ ನರಕದ ಬಾಗಿಲು ಅವನ ಪಾಲಿಗೆ ತೆರೆದಂತೆ.
ಲಕ್ಷಾಂತರ ಜನರು ತನ್ನ ನೇತಾರನ ಮುಖಾರವಿಂದವನ್ನು ಒಂದು ಸಲ ನೋಡುವ ಸಲುವಾಗಿ ನೂರಾರು ಕಿಲೋಮೀಟರ್ ಪ್ರಯಾಣಿಸಿ , ನಿದ್ದೆಗೆಟ್ಟು ಹಸಿವು ನೀರಡಿಕೆಯನ್ನು ಲೆಕ್ಕಿಸದೆ ನೂಕು ನುಗ್ಗಲು ಮಾಡಿಯೂ ಸಾಧ್ಯವಾಗದೆ ನಿರಾಶೆಯೊಂದಿಗೆ, ಕಣ್ಣೀರಿನೊಂದಿಗೆ ವಿದಾಯವನ್ನು ದೂರದಿಂದಲೇ ನೀಡಿ ಆ ಒಳ್ಳೆಯ ಮನುಷ್ಯನಿಗಾಗಿ ಪ್ರಾರ್ಥಿಸಿ ಮ್ಲಾನ ವಾದನರಾಗಿ ಹಿಂತಿರುವಾಗ ಅಸ್ಸಯ್ಯದ್ ಹೈದರ್ ಅಲಿ ತಂಗಳ್ ಎಂಬ ವ್ಯಕ್ತಿತ್ವ ಕೊಡಪ್ಪನಕ್ಕಲ್ ತರವಾಡಿನ ಸತ್ಪುತ್ರ ಮಾತ್ರಾ ಆಗಿರದೆ ಮುಸ್ಲಿಂ ಸಮುದಾಯದ ಹೃದಯದಲ್ಲಿ ರಾರಾಜಿಸುವ ರಾಜಕುಮಾರನಾಗಿದ್ದರು ಎಂಬುವುದನ್ನು ಕಾಲವು ನಿರೂಪಿಸಿದೆ.
ಅಸ್ಸಯ್ಯದ್ ಹೈದರ್ ಅಲಿ ತಂಗಳ್ ರವರ ಆಗಳಿಕೆಯನ್ನು ದಾರುನ್ನೂರ್ ಅತ್ಯಂತ ನೋವಿನೊಂದಿಗೆ ಸ್ವೀಕರಿಸಿದ್ದು ಅತೀವ ಸಂತಾಪವನ್ನು ಸೂಚಿಸಿದೆ. ದಾರುನ್ನೂರ್ ಯು ಎ ಇ ಅದ್ಯಕ್ಷ ಜನಾಬ್ ಮಹಮ್ಮದ್ ಮಾಡಾವು , ನಿಕಟ ಪೂರ್ವ ಅದ್ಯಕ್ಷ ಮತ್ತು ಮುಖ್ಯ ಉಪದೇಶಕ ಜನಾಬ್ ಸಂಶುದ್ದೀನ್ ಸೂರಲ್ಪಾಡಿ, ಗೌರವಾದ್ಯಕ್ಷ ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಕೋಶಾಧಿಕಾರಿ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ಅಬುಧಾಬಿ ಸ್ಟೇಟ್ ಅದ್ಯಕ್ಷ ಜನಾಬ್ ಅಬ್ದುಲ್ ರವೂಫ್ ಕೈಕಂಬ, ದುಬೈ ಸ್ಟೇಟ್ ಅದ್ಯಕ್ಷ ಜನಾಬ್ ಇಲ್ಯಾಸ್ ಕಡಬ, ಶಾರ್ಜಾ ಸ್ಟೇಟ್ ಅದ್ಯಕ್ಷ ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್, ಮಜ್ಲಿಸುನ್ನೂರ್ ಚೇರ್ಮೇನ್ ಜನಾಬ್ ಮಹಮ್ಮದ್ ಸಾಜಿದ್ ಹಾಜಿ ಬಜ್ಪೆ ಹಾಗೂ ದಾರುನ್ನೂರಿನ ಉಪದೇಶಕ ಸಮಿತಿ ಪ್ರಮುಖರು , ದಾರುನ್ನೂರ್ ಯು ಎ ಇ ರಾಷ್ಟ್ರೀಯ ಮತ್ತು ಸ್ಟೇಟ್ ಮತ್ತು ಶಾಖಾ ಸಮಿತಿಗಳ ಪ್ರಮುಖರು ಅತೀವ ದುಃಖವನ್ನು ವ್ಯಕ್ತ ಪಡಿಸಿದ್ದು ತಂಗಳ್ ರವರ ಮೇಲೆ ಮಯ್ಯಿತ್ ನಮಾಝ್ ಮತ್ತು ತಹಲೀಲ್ ಸಮರ್ಪಣೆ ಮಾಸಿಕ ಮಜ್ಲಿಸುನ್ನೂರ್ ನೊಂದಿಗೆ ನಡೆಸುವುದಾಗಿ ತೀರ್ಮಾನಿಸಲಾಗಿದೆ. ತಂಗಳ್ ರವರ ಪಾರತ್ರಿಕ ಜೀವನವನ್ನುಸಂತುಷ್ಟಗೊಳಿಸಿ ಅಲ್ಲಾಹನು ಸ್ವರ್ಗದಲ್ಲಿ ಉನ್ನತ ಶ್ರೇಣಿಯನ್ನು ದಯಪಾಲಿಸಲಿ ಎಂದು ಈ ಸಂದಭದಲ್ಲಿ ಪ್ರಾರ್ಥಿಸುತ್ತೇವೆ.
ಬರಹ : ಬದ್ರುದ್ದೀನ್ ಹೆಂತಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.